ಶನಿವಾರ, ಜೂನ್ 12, 2021

ಪದಗಳನ್ನು ಪೋಣಿಸಿ ಓಲೆಯೊಂದ ಬರೆಯುವೆನು....

ನಿನ್ನೆ ಟ್ವಿಟ್ಟರ್ ನಲ್ಲಿ ಸ್ನೇಹಿತರೊಬ್ಬರು ಅಂತರ್ದೇಶೀಯ ಪತ್ರದ (Inland Letter) ಫೋಟೋ ಒಂದನ್ನು ಹಂಚಿಕೊಂಡು, ಇದು ನಿಮಗೆ ನೆನಪಿದೆಯೇ? ಎಂಬ ಪ್ರಶ್ನೆ ಹಾಕಿದ್ದರು. ಈ ಫೋಟೋ ನೋಡಿದಮೇಲೆ ಗತಿಸಿಹೋದ ನೆನಪುಗಳ ದಿನಗಳತ್ತ ಗೊತ್ತಿಲ್ಲದೆ ಜಾರಿಕೊಂಡಿತು ಮನಸು.....

ಮೊಬೈಲ್, ಸ್ಮಾರ್ಟ್ ಫೋನ್, ಈ-ಮೇಲ್, ವಾಟ್ಸ್ಯಾಪ್ಪ್ಗಳೆಂಬ ಸಂಪರ್ಕ ಮಾಧ್ಯಮಗಳ ಮುಖಾಂತರ ಬಂದು-ಬಳಗ, ಸ್ನೇಹಿತರೊಂದಿಗೆ ಸಂಪರ್ಕದಲ್ಲಿಟ್ಟುಕೊಳ್ಳುವುದು ಇಂದಿನ ಆದುನಿಕ ಕಾಲದ ವಿಶೇಷತೆಯಾದರೆ, ಈ ಎಲ್ಲ ಮಾಧ್ಯಮಗಳ ಪರಿಚಯವೇ ಇಲ್ಲದ, ಕೇವಲ ಹದಿನೈದು ಪೈಸೆಗೆ ಬರುವ ಹಳದಿ ಬಣ್ಣದ ಅಂಚೆ ಕಾರ್ಡು ಅಥವಾ ಎಪ್ಪತೈದು ಪೈಸೆಯ ತಿಳಿ ನೀಲಿ ಬಣ್ಣದ ಅಂತರ್ದೇಶೀಯ ಪತ್ರ, ಇವುಗಳ ಮೂಲಕವೆ ಎಲ್ಲ ಸಂಪರ್ಕ, ವ್ಯವಹಾರಗಳು ನಡೆಯುತ್ತಿದ್ದುದು ಆ ಕಾಲದ ವೈಶಿಷ್ಟ್ಯವಾಗಿತ್ತು. ಹೆಚ್ಚು ಕಡಿಮೆ ತೊಂಬತ್ತರ ದಶಕದ ನಂತರದ ಯುವ ಪೀಳಿಗೆಗೆ ಈ ಸಂಪರ್ಕ ಮಾಧ್ಯಮದ ಬಳಕೆ ಕಡಿಮೆ ಆಗುತ್ತಾ ಹೋಯಿತು... 

ನಾನು ಮೊಟ್ಟಮೊದಲು ಪತ್ರ ಬರೆದದ್ದು ನನ್ನ ತಾತನಿಗೆ. ನಮ್ಮ ತಂದೆಯವರು ಮುಂದೆ ಕೂತು, ಹೇಗೆ ಬರೆಯುವುದೆಂದು ಹೇಳಿಕೊಟ್ಟು, ಬರೆಸಿದ್ದರು. ಅದು ದಸರಾ ಹಬ್ಬದ ಪ್ರಯುಕ್ತ, ಅಂತರ್ದೇಶೀಯ ಪತ್ರದ ಒಳಗೆ, ಎರಡು ಎಲೆ ಬನ್ನಿ ದಳಗಳನ್ನು ಇಟ್ಟು ಬರೆದ ದಸರಾ ಹಬ್ಬದ ಶುಭಾಶಯ ಪತ್ರ. ಆಗ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಪ್ರತಿ ರವಿವಾರ ನಡೆಯುವ "ಗಿಳಿವಿಂಡು" ಕಾರ್ಯಕ್ರಮಕ್ಕೆ ನಾನು, ತಮ್ಮ, ತಂಗಿ ಎಲ್ಲರು ಅಂಚೆ ಕಾರ್ಡಿನಲ್ಲಿ, ಚಿತ್ರಬರೆದು ಕಳುಹಿಸಿದ ನೆನಪು ಇನ್ನು ಹಸಿರಾಗಿದೆ.  ನಂತರ ಧಾರವಾಡದಲ್ಲಿ ನಾನು ಪಿಯುಸಿ ಕಲಿಯುತ್ತಿದ್ದಾಗ, ನನ್ನ ಊರಲ್ಲಿರುವ ಮನೆಯವರೊಂದಿಗೆ ಪತ್ರಗಳ ಮೂಲಕ ಸಂಪರ್ಕಿಸುತ್ತಿದ್ದೆ. ನಾನು ತಿಂಗಳಿಗೆ ಒಂದು ಸಲ, ನನ್ನ ಕಾಲೇಜು, ಧಾರವಾಡದಲ್ಲಿನ ಜೀವನದ, ಸಿಟಿ ಬಸ್ಸಿನಲ್ಲಿ ಪ್ರಯಾಣದ ಅನುಭವ, ಖಾನಾವಳಿಗಳಲ್ಲಿ ಊಟ, ಹೊಸ ವಿಷಯಗ ಅನುಭವ, ಹೀಗೆ ಅನೇಕ ವಿಷಯಗಳನ್ನು ಪತ್ರದಲ್ಲಿ ಹಂಚಿಕೊಳ್ಳುತಿದ್ದೆ. ಮನೆಯಲ್ಲಿ ಎಲ್ಲರು ನನ್ನ ಪತ್ರ ಬರುವಿಕೆಗಾಗಿ ಕಾಯುತಿದ್ದರಂತೆ. ಆಮೇಲೆ ದಿನಗಳು ಕಳೆದಂತೆ, ಎಸ್ಟಿಡಿ ಮತ್ತು ಮೊಬೈಲ್ ಫೋನುಗಳು ಬಂದವು, ಕಾರಣ ಈ ಪತ್ರಗಳನ್ನು ಬಿಟ್ಟು, ಫೋನಿನ ಮೂಲಕವೇ ಸಂಪರ್ಕ ಮುಂದುವರಿಯುತು......   
 
"ಪೂಜ್ಯ ....... ಅವರಿಗೆ,
ನಿಮ್ಮ ........ ಮಾಡುವ ಶಿ. ಸಾ. ನಮಸ್ಕಾರಗಳು.
ಇತ್ತಕಡೆ ಎಲ್ಲ ಕ್ಷೇಮ, ತಮ್ಮ ಕ್ಷೇಮದ ಬಗ್ಗೆ ತಿಳಿಸಿರಿ....
ತರುವಾಯ ಪತ್ರ ಬರೆಯಲು ಕಾರಣ.......................
............................................................................................
...........................................................................................
ಪತ್ರ ಮುಟ್ಟಿದ ತಕ್ಷಣ ಉತ್ತರ ಬರೆಯಿರಿ ಮತ್ತು ನಿಮ್ಮ ವಿಚಾರ ತಿಳಿಸಿರಿ.....
ಇಂತಿ ನಿಮ್ಮ ಆತ್ಮೀಯ,
............."

ಹೀಗೆ, ಪದಗಳನ್ನು ಸಾಲುಗಳಾಗಿ ಪೋಣಿಸುತ್ತಾ, ಮೇಲಿನ ಸಾಲುಗಳಲ್ಲಿ ಹಿರಿಯರಿಗೆ ವಂದಿಸುತ್ತಾ, ಕಿರಿಯರಿಗೆ ಆಶೀರ್ವದಿಸುತ್ತ, ಕ್ಷೇಮ ವಿಚಾರದಬಗ್ಗೆ ಕೇಳುತ್ತ, ನಂತರ ಪುಟಗಟ್ಟಲೆ ವಿಷಯಗಳನ್ನು ಬರೆದು, ಕೊನೆಗೆ ಕೆಳಗಿನ ಸಾಲುಗಳಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತ, ಒಂದು ನಿರ್ಧಿಷ್ಟ ಕ್ರಮದಲ್ಲಿ,  ಅಂಚೆಪತ್ರಗಳನ್ನು ಬರೆದು, ಕಳುಹಿಸಬೇಕಾದ ವಿಳಾಸವನ್ನು ಗೀಚಿ, ರಸ್ತೆಯ ಮೂಲೆಯಲ್ಲಿರುವ ಕೆಂಪು ಬಣ್ಣದ ಅಂಚೆ ಡಬ್ಬಿಯಲ್ಲಿ ಹಾಕಿದರಾಯಿತು. ಅದು ವಾರ ಅಥವಾ ಹತ್ತು ದಿನದಲ್ಲಿ ತಲುಪಬೇಕಾದ ವಿಳಾಸಕ್ಕೆ ಮುಟ್ಟಿಯೆ ತೀರುತ್ತದೆ ಎಂಬ ಆತ್ಮವಿಶ್ವಾಸವಿದ್ದ ಕಾಲವದು.


ದೂರದ ಊರಲ್ಲಿ ಓದುತ್ತಿರುವ ಮಗ ಖರ್ಚಿಗೆ ಹಣ ಬೇಕೆಂದು ಅಪ್ಪನಿಗೆ ಕೇಳುವ ಕೋರಿಕೆಯ ಪತ್ರ....
ಹಬ್ಬಕ್ಕೆ ಮಗಳನ್ನು ತವರಿಗೆ ಕಳುಹಿಸಿಕೊಡಿ ಎಂದು ಅಳಿಯನಿಗೆ ಮಾವ ಬರೆಯುವ ವಿನಂತಿ ಪತ್ರ.....  
ತವರಿಗೆ ಹೋದ ಹೆಂಡತಿ ಬೇಗ ಬರದಿದ್ದಾಗ ಗಂಡ ಬರೆದ ಸಿಟ್ಟಿನ ಪತ್ರ......  
ಮೊಮ್ಮಕ್ಕಳ ಕುಶಲೋಪರಿಯನ್ನು ವಿಚಾರಿಸಲು ತಾತ ಬರೆದ ಅಕ್ಕರೆಯ ಪತ್ರ......  
ಕೆಲಸದ ನಿಮಿತ್ತ್ಯ ಊರಿಗೆ ಹೋದ ಗಂಡ, ಹೆಂಡತಿ ಮಕ್ಕಳನ್ನು ನೆನೆದು ಬರೆದ ಭಾವಭರಿತ ಪತ್ರ...... ಪ್ರೇಯಸಿಗೆ ಪ್ರಿಯತಮನು ಬರೆದ ಪ್ರೇಮ ಪತ್ರ.....   
ನಿಮ್ಮ ಹುಡುಗಿ ನಮಗೆ ಇಷ್ಟವಾಗಿದೆ ಮಾತುಕತೆ ಮುಗಿಸೋಣ ಎಂದು ಹುಡುಗನ ಕಡೆಯವರು ಬರೆದ ಸ್ವೀಕಾರ ಪತ್ರ......  
ನಿಮ್ಮ ರಜೆಗಳು ಮುಗಿದಿವೆ, ಬೇಗ ಬಂದು ಕೆಲಸಕ್ಕೆ ಹಾಜರಾಗಿ ಎಂದು ಬಾಸ್ ಬರೆದ ಆಜ್ಞಾಪನಾ ಪತ್ರ.....
ಹೀಗೆ, ವಿಷಯದ ಆದಾರದ ಮೇಲೆ, ಸುದ್ದಿ, ವಿಚಾರ, ಭಾವನೆಗಳನ್ನೊಳಗೊಂಡ, ವಿವಿಧ ರೀತಿಯ ಪತ್ರ ವ್ಯವಹಾರಗಳು ನಡೆಯುತ್ತಿದ್ದವು. ಸಿಹಿ-ಕಹಿ, ಸುಖ-ದುಃಖ, ನೋವು-ನಲಿವು, ಸಿಟ್ಟು-ಆಜ್ಞೆ, ಎಲ್ಲ ತರಹದ ಭಾವನೆಗಳ ಸಾರವನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುವ ಮೇಘದೂತನ ಕೆಲಸವನ್ನು ಮಾಡುತ್ತಿದ್ದವು ಈ ಪತ್ರಗಳು.

ಖಾಕಿ ಯುನಿಫಾರ್ಮ್ ತೊಟ್ಟು, ಹೆಗಲಮೇಲಿನ ಚೀಲದಲ್ಲಿ ಪತ್ರಗಳು, ಮನಿ ಆರ್ಡರ್ಗಳು, ಪಾಕೀಟುಗಳು ಮತ್ತು ಪಾರ್ಸೆಲ್ಗಳನ್ನು ಹೊತ್ತು, ಸೈಕಲ್ ತುಳಿಯುತ್ತ ನಮ್ಮ ನಮ್ಮ ಬೀದಿಗೆ ಬರುವ ಅಂಚೆಯಣ್ಣನನ್ನು ನೋಡಿದ್ದೇ ತಡ, ಆ ಬೀದಿಯಲ್ಲಿರುವ ಮನೆಯವರೆಲ್ಲ, ನಮಗೇನಾದರು ಪತ್ರ ಬಂದಿದೆಯಾ, ಪಾರ್ಸೆಲ್ ಇದೆಯಾ, ಮನಿ ಆರ್ಡರ್ ಬಂತಾ ಅಂತ ಅವನನ್ನು ಸುತ್ತುವರಿದು ಪ್ರಶ್ನೆಗಳನ್ನು ಸುರಿದಾಗ, ಯಾರಿಗೆ ಏನು ಹೇಳಲಿ ಎಂಬ ಗೊದಲದಲ್ಲಿರುತ್ತಿದ್ದ ಅಂಚೆಯಣ್ಣ. ಅಷ್ಟೊಂದು ಕುತೂಹಲ ಮತ್ತು ಆಕರ್ಷಣೆಯನ್ನು ಸೃಸ್ಟಿಸುತಿತ್ತು ಆ ಅಂಚೆಯಣ್ಣನ ಆಗಮನ. ಪತ್ರಗಳನ್ನು ಹಂಚಿದ ಮೇಲೆ, ಓದು ಬಾರದವರಿಗೆ ಪತ್ರದಲ್ಲಿರುವ ವಿಷಯವನ್ನು ಕೆಲವೊಂದು ಸಲ ಓದಿ ಹೇಳುವ ಜವಾಬ್ದಾರಿಯು ಕೂಡ ಅಂಚೆಯಣ್ಣನ ಕೊರಳಿಗೆ ಬೀಳಿತಿತ್ತು. ಬಿಸಿಲು ಮಳೆ ಎನ್ನದೆ, ಕರ್ತವ್ಯ ನಿಷ್ಠೆಯಿಂದ, ತಲಿಪಿಸಬೇಕಾದ ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿಯೇ ತನ್ನ ಕೆಲಸ ಮುಗಿಸಿ ಜನರ ಕಣ್ಣಲ್ಲಿ ಕರ್ಮಯೋಗಿಯಾಗಿಬಿಡುತ್ತಿದ್ದ ಆ ಅಂಚೆಯಣ್ಣ. 
 
ಈ ಕಂಪ್ಯೂಟರ್ ಯುಗದಲ್ಲಿ, ನಮ್ಮ ಎಲ್ಲ ಮಾಹಿತಿಗಳು ಪಾಸ್ವರ್ಡ್ ಪ್ರೊಟೆಕ್ಟ್ ಆಗಿದ್ದರು ಕೂಡ, ಪ್ರೈವಸಿ ವಿಚಾರದ ಬಗ್ಗೆ ಇತ್ತೀಚಿಗೆ ಅನೇಕ ವಾದ-ವಿವಾದಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಆದರೆ, ಎಲ್ಲವು ಓಪನ್ ಸೀಕ್ರೆಟ್ ಆಗಿರುವ ಹದಿನೈದು ಪೈಸೆಯ ಅಂಚೆ ಕಾರ್ಡಿನಲ್ಲಿ ಪತ್ರ ಬರೆಯುವಾಗ, ಯಾರಿಗೂ ಆಗ ಈ ಪ್ರೈವಸಿ ಬಗ್ಗೆ ಆತಂಕ ಕಾಡಲಿಲ್ಲ. ಬರೆದವರ ಎಲ್ಲ ವಿಷಯಗಳನ್ನು ಅಕ್ಷರಸಹಿತ ಓದಬಲ್ಲ ಈ ಓಪನ್ ಸೀಕ್ರೆಟ್ ಅಂಚೆಕಾರ್ಡುಗಳನ್ನು, ಅದರಲ್ಲಿರುವ ಒಂದು ಅಕ್ಷರವನ್ನು ಕೂಡ ಓದದೆ, ಪ್ರಾಮಾಣಿಕತೆಯಿಂದ, ತಲುಪಬೇಕಾದ ವಿಳಾಸಕ್ಕೆ ತಲುಪಿಸುವ ಜಾಯಮಾನ ಇತ್ತು ಅಂಚೆ ಇಲಾಖೆಯ ಸಿಬ್ಬಂದಿಗಳಲ್ಲಿ.
 
ಕಾಲ ಕಳೆದಂತೆ, ತಂತ್ರಜ್ಞಾನದ ಪ್ರಗತಿಗನುಗುಣವಾಗಿ, ಮನುಷ್ಯನ ಜೀವನಶೈಲಿಯಲ್ಲಾದ ಹಠಾತ್ ಬದಲಾವಣೆಗಳಿಂದ, ಎಲ್ಲವು ವೇಗವಾಗಿ ಆಗಬೇಕು ಎನ್ನುವ ಮನೋಭಾವ ಹೆಚ್ಚಾದಮೇಲೆ. ಸಮಯಕ್ಕೆ ಸರಿಯಾಗಿ ತಲುಪದ ಪತ್ರವನ್ನು ಕಾಯುವ ನೋವಿನಲ್ಲು ಸಂತಸ ಕಾಣುವ, ಕಾಯಿಸಿ ಕಾಯಿಸಿ ಕೊನೆಗೊಂದು ದಿನ ಕೈಸೇರುವ ಪತ್ರಗಳನ್ನು ಒಡೆದು ಓದುವ ಕುತೂಹಲವನ್ನು ವಿಜೃಂಭಿಸಿದ ನಾವುಗಳೆ ಇಂದು ಕೆಲವೇ ನಿಮಿಷಗಳಲ್ಲಿ ಕೈಸೇರುವ, ಭಾವರಹಿತ ನಿರರ್ಥಕ ಈ-ಮೇಲು, ವಾಟ್ಸಾಪ್ಪ್ ಮೆಸೇಜುಗಳಿಗೆ ನಮ್ಮನ್ನು ನಾನು ಅಳವಡಿಸಿಕೊಂಡಿದ್ದೇವೆ. ಹೃದಯದ ಸೂಕ್ಷ್ಮ ಸಂವೇದನೆಗಳ ಚಿತ್ತಾರ ಬಿಡಿಸುವ ಈ ಪತ್ರ ಮಾಧ್ಯಮಗಳೆಂಬ ಸ್ಮರಣೀಯ ನೆನಪುಗಳು ಇನ್ನು ಮುಂದಿನ ಪೀಳಿಗೆಗೆ ಕೇವಲ ದಂತಕಥೆಗಳಾಗಿ ಉಳಿದು ಹೋಗುವುದರಲ್ಲಿ ಎರಡುಮಾತಿಲ್ಲ.

3 ಕಾಮೆಂಟ್‌ಗಳು:

Unknown ಹೇಳಿದರು...

ಗತಕಾಲದ ನೆನಪುಗಳು. ಇಂದಿನ ಪೀಳಿಗೆಗೆ ಅಂಚೆ ಪತ್ರಾನೆ ಗೊತ್ತಿಲ್ಲ😔🙄

KêêrThêsh ಹೇಳಿದರು...

There was a hobby too "stamps collection".. I used to have stamps from so many countries ..

Veerendra ಹೇಳಿದರು...

ಎಲ್ಲವು ಓಪನ್ ಸೀಕ್ರೆಟ್ ಆಗಿರುವ ಹದಿನೈದು ಪೈಸೆಯ ಅಂಚೆ ಕಾರ್ಡಿನಲ್ಲಿ ಪತ್ರ ಬರೆಯುವಾಗ, ಯಾರಿಗೂ ಆಗ ಈ ಪ್ರೈವಸಿ ಬಗ್ಗೆ ಆತಂಕ ಕಾಡಲಿಲ್ಲ ,🤓🤓