ಭಾನುವಾರ, ಮೇ 23, 2021

ರವಿವಾರದ ರಗಳೆ : ಹೊಸ ಆವಿಷ್ಕಾರದ ಸಾಂಬಾರು.

ಮಗಳ ಬೇಸಿಗೆಯ ರಜೆಯ ನೆಪಮಾಡಿಕೊಂಡು ಮಡದಿ ಹೋಗಿಹಳು ತನ್ನ ತವರೂರಿಗೆ. ಅತ್ತ ತವರಿಗೆ ಕಳುಹಿಸಿದ ನಾಲ್ಕೆ ದಿನದಲ್ಲಿ ಇತ್ತ ಘೋಷಣೆಯಾಯಿತು ಕೋವಿಡ್ ಲಾಕ್ಡೌನ್. ವಾರ ಪೂರ್ತಿ ಕಂಪನಿಯ ಕ್ಯಾಂಟೀನು ಅನ್ನದಾತನಾದರು, ವಾರದ ಕೊನೆ ಮಾತ್ರ ನನಗೆ ನಾನೇ ಅನ್ನದಾತ. ಇಂದು ರವಿವಾರ, ಹೊರಗಡೆ ಲಾಕ್ಡೌನ್, ಅಡುಗೆ ಮಾಡದೆ ಬೇರೆ ದಾರಿ ಇಲ್ಲ. ವಿಧಿಯಿಲ್ಲದೆ ತಾಯಿ ಅನ್ನಪೂರ್ಣೇಶ್ವರಿಗೆ ನಮಿಸಿ, ಭೀಮಸೇನ-ನಳಮಹಾರಾಜರನ್ನು ನೆನೆಯುತ್ತ, ಹುಂಬು ಧೈರ್ಯದಿಂದ ನುಗ್ಗಿದೆ ಅಡುಗೆ ಮನೆಗೆ. ವೀರ ಯೋಧನಂತೆ ಕೈಯಲ್ಲಿ ಸೌಟನ್ನು ಹಿಡಿದು, ನನ್ನ ನಡುನೀರಲ್ಲಿ ಬಿಟ್ಟು ತವರಿಗೆ ಹೋದ ಮಡದಿ ಮೇಲೆ ಗೊಣಗುತ್ತಾ, ಶುರು ಹಚ್ಚಿಕೊಂಡೆ, ಈ ಕೆಳಗಿನಂತೆ ಸಾಂಬಾರು ಮಾಡಲು......


ನನ್ನ ಹೃದಯದ ಅಂಗಳದಲ್ಲಿ
ಅರಳಿನಿಂತ ಓ ಮಲ್ಲಿಗೆಯೇ
ಹೇಳದೆ ನೀ ಏಕೆ ಹೋದೆ
ಉಪ್ಪು ಖಾರ ಮಸಾಲೆ ಇಡುವ ಜಾಗವನ್ನು
ಅಲ್ಲಿ ನೀನು ಹಾಯಾಗಿರುವೆ
ನಿನ್ನ ತಾಯಿಯ ಮನೆಯಲಿ
ಇಲ್ಲಿ ಕೇಳುವರಾರು ನನ್ನ ಕಷ್ಟ-ಕಂತೆಗಳನ್ನ 
ಹುಡುಕಿ ಹುಡುಕಿ ಸೋತು ಹೋದೆ
ಉಪ್ಪು ಖಾರ ಮಸಾಲೆ ಡಬ್ಬಿಗಳನ್ನ
ಸಿಕ್ಕ ತರಕಾರಿಗಳನ್ನು ಕತ್ತರಿಸಿ ಹಾಕಿ
ಕುದಿಯಲಿಟ್ಟೆ ಬೇಳೆಯೊಂದಿಗೆ
ಫ್ರಿಡ್ಜಿನಲ್ಲಿ ಕಾಣಲಿಲ್ಲ
ಟೊಮೇಟೊ ಹುಣಸೆ ಹಣ್ಣುಗಳು
ಕೈಗೆ ಸಿಕ್ಕ ಟೊಮೇಟೊ ಸಾಸನ್ನು
ಸುರಿದು ಮಾಡಿದೆ ಹೊಸ ಪ್ರಯೋಗವನ್ನು
ಕೊನೆಗೆ ಸಿಕ್ಕಿತು ಮಸಾಲೆಗಳ ಉಗ್ರಾಣ
ಸಾಂಬಾರ್, ರಸಂ, ಬಿರಿಯಾನಿ ಮಸಾಲೆಗಳು
ಯಾವುದು ಹಾಕಲಿ ಯಾವುದು ಬಿಡಲಿ
ಸರ್ವರಿಗೂ ಕೊಡಲು ಸುವರ್ಣಾವಕಾಶ
ಹಾಕಿದೆ ಸ್ವಲ್ಪ ಸ್ವಲ್ಪ ಎಲ್ಲ ಮಸಾಲೆಗಳನ್ನು
ಕೊನೆಗೆ ಹಾಕಿದೆ ಚ್ಚೊರ್ರೆಂದು ವಗ್ಗರಣೆಯ
ಅಲಂಕಾರಗೊಳಿಸಿದೆ ಕೊತ್ತಂಬರಿ ಸೊಪ್ಪಿನ ಎಲೆಗಳಿಂದ
ಚೆನ್ನಾಗಿ ಕುದಿಯಿತು ಹೊಸ ಆವಿಷ್ಕಾರದ ಸಾಂಬಾರು
ಬಿಳಿ ಅನ್ನದ ಮೇಲೆ ಸುರಿದು ಕಲಸಿ
ರುಚಿಯ ಮೆಚ್ಚಿ ಚಪ್ಪರಿಸಿದೆ ನಾನೆ ನನ್ನ ಬೆನ್ನನ್ನು!

ಭಾನುವಾರ, ಮೇ 16, 2021

ನನ್ನ ಪೋಲೆಂಡ್ ದೇಶದ ಪ್ರಯಾಣದಲ್ಲಾದ ಆವಾಂತರ ಮತ್ತು ಅನುಭವಗಳು

ಅಂದು ಬೆಳಿಗ್ಗೆ 9-00 ಘಂಟೆ, ಅದೇ ತಾನೆ ವಿಶ್ವವಿದ್ಯಾಲಕ್ಕೆ ಬಂದು, ಇನ್ನೇನು ಸೀಟಿನಲ್ಲಿ ಕೂಡಬೇಕು ಅನ್ನುವಷ್ಟರಲ್ಲಿ ನನ್ನ ಪಿಎಚ್ ಡಿ ಸಹಪಾಠಿ ಹತ್ತಿರ ಬಂದು, ನಿನ್ನನ್ನು ಪ್ರೊಫೆಸರ್ (ನನ್ನ ಪಿಎಚ್ ಡಿ ಗೈಡ್) ಕರೀತಿದ್ದಾರೆ ಬೇಗ ಅವರ ಚೇಂಬರ್ಗೆ ಹೋಗು ಅಂದ. ಬೆಳಿಗ್ಗೆ ಬೆಳಿಗ್ಗೆ ಯಾಕಪ್ಪ ಕರೀತಿದ್ದಾರೆ, ನನ್ನ ಪ್ರಯೋಗ ಯಾವುದು ಫೇಲ್ ಆಗಿಲ್ಲ, ಮೇಲಾಗಿ ತಿಂಗಳ ರಿಪೋರ್ಟ್ ಕೂಡ ಕಳಿಸಿಯಾಗಿದೆ, ಮತ್ತೇನು ವಿಷಯ ಇರಬಹುದು ಎಂದು ಆತಂಕಕ್ಕೊಳಗಾದೆ. ಏನೇ ಇರಲಿ ವಿಚಾರಿಸೋಣ ಎಂದು ಹಗುರವಾಗಿ ಪ್ರೊಫೆಸರ್ ನಿಶಿನೊ ಅವರ ರೂಮಿನತ್ತ ಹೆಜ್ಜೆಹಾಕಿದೆ. ಪ್ರೊಫೆಸರ್ ನಿಶಿನೊ, ಇವರು ನನ್ನ ಪಿಎಚ್ ಡಿ ಗೈಡು, ತುಂಬಾ ಮುಂಗೋಪಿ, ಸ್ವಲ್ಪ ತಪ್ಪು ಏನಾದ್ರು ಆದರೆ ಸಿಕ್ಕಾಪಟ್ಟೆ ಬೈಯುತಿದ್ದರು, ಆದರೆ ತನ್ನ ವಿದ್ಯಾರ್ಥಿಗಳ ಮೇಲೆ ಅಷ್ಟೇ ಕಾಳಜಿ. ಏನೇ ಸಮಸ್ಯೆ ಬಂದರು ಸಹಾಯ ಮಾಡುತಿದ್ದರು. ಕೆಲಸದಲ್ಲಿ ಮಾತ್ರ ತುಂಬಾ ಸ್ಟ್ರಿಕ್ಟ್, ಶಿಸ್ತಿನ ಸಿಪಾಯಿ. ಬೆಳಿಗ್ಗೆ ಸರಿಯಾಗಿ 6-00 ಘಂಟೆಗೆ ತಮ್ಮ ಆಫೀಸಿನಲ್ಲಿ ಇರುತ್ತಿದ್ದರು, ಸಂಜೆ ಮನೆಗೆ ಹೋಗುವ ಸಮಯ ಮಾತ್ರ  ನಿಶ್ಚಿತವಾಗಿರುತ್ತಿರಲಿಲ್ಲ. ಏನೋ ಧೈರ್ಯಮಾಡಿ ಬಾಗಿಲಿನಿಂದ ಒಳಗೆ ಇಣುಕುತ್ತ ಒಳಗೆ ಬರಬಹುದೇ ಅಂತೆ ಕೇಳಿದೆ. ಯಾವಾಗಲು ಸಿಡಿಕು ಮುಖಹಾಕಿರುವ ನಿಶಿನೊ ಅಂದು ಮುಗುಳು ನಗುತ್ತ ಒಳಗೆ ಬರಮಾಡಿಕೊಂಡರು. ನನಗೆ ಎಲ್ಲಿಲ್ಲದ ಆಶ್ಚರ್ಯ. ಅಷ್ಟೋ ಇಷ್ಟೋ ಧೈರ್ಯ ಮಾಡಿಕೊಂಡು, ಏನ್ ಸರ್ ಕರೆದ್ರಂತೆ, ಏನು ವಿಷಯ ಅಂದೆ. ಆಗ ಹೇಳಿದ್ರು, ಪ್ರತಿವರ್ಷದಂತೆ ಈ ವರ್ಷ ಅಂತರಾಷ್ಟ್ರೀಯ ಪೆಪ್ಟೈಡ್ ಸಮಾವೇಶ ಪೋಲೆಂಡ್ ದೇಶದ ಗಡಂಸ್ಕ್ ಎಂಬ ಊರಿನಲ್ಲಿ ನಡೆಯುತ್ತಾ ಇದೆ. ನೀನಾಗಲೇ ಕಳೆದ ಎರಡು ವರ್ಷದಲ್ಲಿ ಪಿಎಚ್ ಡಿ ಕೆಲಸ ಸಾಕಷ್ಟು ಮಾಡಿದೀಯ. ಅಲ್ಲಿ ಹೋಗಿ ಮಂಡಣೆ ಮಾಡುವಷ್ಟು ನಿನ್ನ ಸಂಶೋಧನೆ ಕೆಲಸ ಆಗಿದ್ದು, ನೀನು ಅಲ್ಲಿ ಹೋಗಿ ನಿನ್ನ ಕೆಲಸವನ್ನು ಮಂಡಿಸಬಹುದು. ಅದಕ್ಕೆ ನಾನು ನಿನ್ನನ್ನು ಈ ಸಮಾವೇಶಕ್ಕೆ ಕಳಿಸುತ್ತಿದ್ದೇನೆ, ನಿನ್ನ ಜೊತೆಗೆ ನಿನ್ನ ಸಹಪಾಠಿ ಹಿರಾಶಿಮಾ ಕೂಡ ಬರುತ್ತಾನೆ, ವಿಶ್ವವಿದ್ಯಾಲಯ ಕಡೆಯಿಂದ ನಿನಗೆ 1000 ಡಾಲರ್ಸ್ ಧನಸಹಾಯ ಸಿಗುತ್ತದೆ ಅಂದ್ರು. ಅವರು ಹೇಳಿದ್ದೆಲ್ಲ ಕಿವಿಗೆ ಬೀಳ್ತಾಯಿದೆ, ಆದರೆ ಏನು ಉತ್ತರಿಸಬೇಕು ಅಂತ ಗೊತ್ತಾಗದ ಗೊಂದಲಮಯ ಸ್ಥಿತಿ. ಒಂದು ಕಡೆ ಖುಷಿ ಆಗ್ತಿದೆ, ಇನ್ನೊಂದು ಕಡೆ ವಾಸ್ತವ ನೆನೆದು ಎಲ್ಲಿ ಈ ಅವಕಾಶ ಕಳೆದುಕೊಳ್ಳುತ್ತೇನೆಯೋ ಎಂಬ ಆತಂಕ. ಮಾತು ಮುಂದುವರಿಸುತ್ತಾ, ನಿನ್ನ ಈವರೆಗಿನ ಸಂಶೋಧನಾ ಕೆಲಸದ ಸಾರಾಂಶವನ್ನು ಒಂದು ಪುಟದಷ್ಟು ಬರೆದು ನನಗೆ ಕಳುಹಿಸು, ನಾನು ಸಮಾವೇಶ ನಡೆಸುತ್ತಿರುವ ಕಮೀಟಿಗೆ ಕಳಿಸುತ್ತೇನೆ ಅಂದರು. ಅಯೀತು ಸರ್ ಅಂತ ತಲೆ ಅಲ್ಲಾಡಿಸಿ ರೂಮಿನಿಂದ ಹೊರಗೆ ಬಂದೆ. ತಲೆಯಲ್ಲಿ ಇನ್ನು ಹೋಗಬೇಕಾ ಬೇಡವಾ ಎನ್ನುವ ಯುದ್ಧ ನಡೀತಾನೇ ಇತ್ತು. ಯಾಕಂದ್ರೆ ಇದು ಉಹೆಯೇ ಮಾಡಿರದ ಅನಿರೀಕ್ಷಿತ ಅವಕಾಶ. ಮನಸ್ಸು ಹೇಳುತಿದೆ ಹೋಗು ಎಂದು, ಆದರೆ ವಾಸ್ತವ ಎಚ್ಚರಿಸುತ್ತದೆ ಇನ್ನಷ್ಟು ಯೋಚನೆ ಮಾಡು ಎಂದು. ವಾಸ್ತವದ ಹೆದರಿಕೆ ಏಕೆಂದ್ರೆ ಇವರು ಕೊಡೋದು 1000 ಡಾಲರ್ಸ್, ಆದರೆ ಅಲ್ಲಿಗೆ ಹೋಗಿಬರುವುದು ಮತ್ತು ಹತ್ತು ದಿನ ಅಲ್ಲಿ ಉಳಿದುಕೊಳ್ಳುವ ಖರ್ಚು, ಎಲ್ಲ ಈ ಕೊಟ್ಟ ಧನಸಹಾಯದಲ್ಲಿ ಸಾಕಾಗುವುದಿಲ್ಲ, ಮೇಲಾಗಿ ನನಗೆ ಬರುತ್ತಿರುವ ಫೆಲೋಶಿಪ್ ಕಡಿಮೆ, ಅದರಲ್ಲಿ ನನ್ನ ಜೀವನೋಪಾಯಕ್ಕಾಗುವ ಖರ್ಚೆಲ್ಲ ತಗೆದು, ಉಳಿದಿದ್ದರಲ್ಲಿ ಸ್ವಲ್ಪ ಮನೆಗೆ ಕಳಿಸಿ ಇನ್ನು ಸ್ವಲ್ಪ, ಆರು ತಿಂಗಳಿಗೊಮ್ಮೆ ಕಟ್ಟಬೇಕಾದ ಟ್ಯೂಷನ್ ಫಿ ಸಲುವಾಗಿ ಉಳಿಸಿಡುತ್ತಿದ್ದೆ. ಹೇಗಪ್ಪಾ ನಿರ್ವಹಿಸುವುದು ಎಂಬ ಚಿಂತೆ. ಈ ಗೊಂದಲಮಯ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ತೆಗೆದೊಕೊಳ್ಳಲು ಸೋತುಹೋದ ನನಗೆ ಆಗ ನೆನಪಾದವರು ಡಾ. ಶ್ಯಾಮ್ ಪಾಂಡೆ.

ನೇರವಾಗಿ ಶ್ಯಾಮ್ ಪಾಂಡೆ ಅವರ ಹತ್ತಿರ ಹೋಗಿ, ಸರ್ ನಿಮ್ಮ ಹತ್ರ ಒಂದು ವಿಷಯ ಮಾತನಾಡಬೇಕು ಕಾಫಿ ರೂಮಿಗೆ ಹೋಗಿ ಕಾಫಿ ಕುಡಿಯುತ್ತ ಅಲ್ಲೇ ಮಾತಾಡೋಣ ಎಂದೆ. ಏನ್ ವಿಷಯ, ನಡಿ ಹೋಗೋಣ ಎಂದು, ಕಾಫಿ ರೂಮಿನತ್ತ ಹೊರಟೆವು. ಡಾ. ಶ್ಯಾಮ್ ಪಾಂಡೆ, ಇವರು ಉತ್ತರ ಪ್ರದೇಶದವರು, ದೆಹಲಿಯ ರಾಷ್ಟ್ರೀಯ ಭೌತಿಕ ಸಂಸ್ಥೆಯಲ್ಲಿ ಪಿಎಚ್ ಡಿ ಪಡೆದು, ಜಪಾನಿನ ನಮ್ಮ ವಿಶ್ವವಿದ್ಯಾಲಯದಲ್ಲಿ ಪೋಸ್ಟ್-ಡಾಕ್ಟೋರಲ್ ಫೆಲೋ ಅಂತ ಕೆಲಸ ಮಾಡುತಿದ್ದರು. ನಂಗಿಂತ ಬಹಳ ಹಿರಿಯರು, ಅನುಭವಿ ಮಾರ್ಗದರ್ಶಕರಾಗಿದ್ದರಿಂದ ಅವರನ್ನು ಹಿರಿಯ ಅಣ್ಣನಂತೆ ತಿಳಿದಿದ್ದೆ. ಆಮೇಲೆ ನನಗಿಂತ 6-7 ವರ್ಷ ಮೊದಲೇ ಜಪಾನಿಗೆ ಕಾಲಿಟ್ಟಿದ್ದರು, ಹಾಗಾಗಿ ಜಪಾನೀ ಭಾಷೆಯಮೇಲೂ ಕೂಡ ಹಿಡಿತ ಇತ್ತು. ವಯಕ್ತಿಕವಾಗಿ ತುಂಬಾ ಸ್ನೇಹಜೀವಿ, ಏನೇ ಸಮಸ್ಯೆ ಬಂದರು ಪರಿಹರಿಸುವುದಕ್ಕೆ ಯಾವಾಗಲು ಎತ್ತಿದ ಕೈ. ಎರಡು ವರ್ಷದಲ್ಲಿ ಇವರ ಜೊತೆ ಒಡನಾಟ ಬೆಳೆದುಬಿಟ್ಟಿತ್ತು. ಅವರ ಪರಿವಾರದವರೆಲ್ಲರೂ ಪರಿಚಯ. ಅವಾಗವಾಗ ಮನೆಗೆ ಕೂಡ ಹೋಗಿಬಂದಿದ್ದುಂಟು. ನಮ್ಮ ಸ್ನೇಹ ಈಗಲೂ ಜೀವಂತವಾಗಿದೆ. ಈಗ ಅವರು ಅದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತಕ್ಕೆ ಬಂದಮೇಲೆ ನಾನು 2-3 ಹುಡುಗರನ್ನು ರೆಫರ್ ಮಾಡಿದಾಗ, ಅವರಿಗೆಲ್ಲ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡಲು ಬೇಕಾದ ಎಲ್ಲ ಸಹಯ ಮಾಡಿದರು. ಅಯೀತು, ಕಾಫಿ ರೂಮಿನಲ್ಲಿ ಕಾಫಿ ಕುಡಿಯುತ್ತ ಪ್ರೊಫೆಸರ್ ಹೇಳಿದ ವಿಷಯವನ್ನು ಅವರ ಮುಂದಿಟ್ಟೆ. ಗುರೂಜಿ (ಅವರು ನನ್ನ ಈಗಲೂ ಹೀಗೆ ಕರೆಯುವುದು) ಇದು ಅತ್ತ್ಯಂತ ಒಳ್ಳೆಯ ಅವಕಾಶ, ಯಾಕೆ ಯೋಚಿಸ್ತಾಇದ್ದೀರಿ ಅಂದ್ರು. ನಾನು, ಇಲ್ಲ ಸರ್ ನನ್ನ ಈಗಿನ ಆರ್ಥಿಕ ಸ್ಥಿತಿ ನಿಮಗೆ ಗೊತ್ತೇ ಇದೆ, ಏನ್ಮಾಡೋದು ಅಂದೆ. ಅದಕ್ಕವರು ದೇವರಿದ್ದಾನೆ, ಒಳ್ಳೆ ಕೆಲಸಕ್ಕೆ ಏನಾದ್ರು ಹಾದಿ ಸಿಕ್ಕೇ ಸಿಗುತ್ತದೆ, ಸುಮ್ನೆ ಪ್ರೊಫೆಸರ್ ಹತ್ತ್ರ ಹೋಗಿ ನಿಮ್ಮ ಒಪ್ಪಿಗೆ ತಿಳಿಸಿ ಅಂದ್ರು. ಅವರ ಮಾತಿನಿಂದ ಸ್ವಲ್ಪ ಧೈರ್ಯ ಬಂತು. ಅವತ್ತೇ ಕುಳಿತು ನನ್ನ ಸಂಶೋಧನಾ ಫಲಿತಾಂಶಗಳ ಒಂದು ಪುಟದಷ್ಟು ಸಾರಾಂಶವನ್ನು ಸಿದ್ದಪಡಿಸಿ, ಸಂಜೆ ಗೈಡ್ ರೂಮಿಗೆ ಹೋಗಿ ಒಪ್ಪಿಸಿದೆ. ಜೊತೆಗೆ ನನ್ನ ಸಮಸ್ಸ್ಯೆಯನ್ನು ಅವರ ಮುಂದೆ ತೋಡಿಕೊಳ್ಳುವ ಮುಂಚೆಯೇ, ಆ ವಿಷಯ ಪಾಂಡೆ ಅವರ ಮುಖಾಂತರ ಅವರ ಕಿವಿಗೆ ಬಿದ್ದಿತ್ತು. ನೀನೇನು ಯೋಚನೆ ಮಾಡಬೇಡ, ವಿಮಾನ ಟಿಕೆಟ್ ಬುಕ್ ಮಾಡು, ದುಡ್ಡು ಬೇಕೆನಿಸಿದರೆ ನಾನು ಕೊಡುತ್ತೇನೆ, ಆಮೇಲೆ ನಿನ್ನ ಅನುಕೂಲಕ್ಕೆ ತಕ್ಕಂತೆ ನನಗೆ ಹಿಂತಿರುಗಿಸು ಎಂದರು. ಆಗ ನನಗೆ ನಿರ್ಗಳವಾಯಿತು. ಅವತ್ತೇ ಸಂಜೆ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಎಲ್ಲರಿಗು ತುಂಬಾ ಸಂತೋಷವಾಯಿತು. ಹೋಗುವುದು ನಿಶ್ಚಿತವಾಯಿತು, ಇನ್ನು ಮುಂದಿನ ತಯಾರಿ ವೀಸಾ ಪಡೆಯುವುದು, ವಿಮಾನದ ಟಿಕೆಟ್ ಬುಕ್ ಮಾಡುವುದು ಹಾಗು ಅಲ್ಲಿ ಮಂಡಿಸಬೇಕಾದ ವಿಷಯದ ಮೇಲಿನ ಪೋಸ್ಟರ್ ಸಿದ್ದಪಡಿಸುವುದು.

ನಾನು ಕೊಟ್ಟ ಸಾರಾಂಶವನ್ನು, ಸ್ವಲ್ಪ ತಿದ್ದುಪಡಿಯ ನಂತರ ಪ್ರೊಫೆಸರ್, ಸಮಾವೇಶ ನಡೆಸುವ ಕಮೀಟಿಗೆ ಕಳುಹಿಸಿಕೊಟ್ಟರು. ಒಂದು ವಾರದ ನಂತರ ನನ್ನ ಮತ್ತು ಸಹಪಾಠಿ ಹಿರಾಶಿಮಾನ ಸಂಶೋಧನಾ ಸಾರಾಂಶಗಳು ಆಯ್ಕೆಯಾಗಿದ್ದು, ತಾವಿಬ್ಬರು ಸಮಾವೇಶಕ್ಕೆ ಬರಬಹುದೆಂದು ಆಮಂತ್ರಣ ಪತ್ರಿಕೆ ಕಳುಹಿಸಿದರು. ಆಗ ಎಲ್ಲಿಲ್ಲದ ಖುಷಿ. ಈಗಾಗಲೇ ಒಂದು ದೇಶಕ್ಕೆ ಬಂದಿದ್ದೇನೆ, ಈಗ ಈ ದೇಶದ ಪ್ರತಿನಿಧಿಯಾಗಿ ಅಂತರ್ರಾಷ್ಟ್ರೀಯ ಸಮಾವೇಶಕ್ಕೆ ಹೋಗುವುದೆಂದರೆ ಹೆಮ್ಮೆಯ ವಿಷಯ. ಅವರು ಕಳುಹಿಸಿಕೊಟ್ಟ ಆಮಂತ್ರಣ ಪತ್ರಿಕೆಯ ಜೊತೆಗೆ ಇನ್ನಷ್ಟು ಸಂಬಂಧಪಟ್ಟ ದಾಖಲೆಗಳು ಹಾಗು ನನ್ನ ಫಾಸ್ಸ್ಪೋರ್ಟನ್ನು ಟೋಕಿಯೋದಲ್ಲಿರುವ ಪೋಲಂಡ್ ವೀಸಾ ಆಫೀಸಿಗೆ ಕಳುಹಿಸಿಕೊಟ್ಟೆ. ಯಾವುದೇ ಸಮಸ್ಸ್ಯೆಯಿಲ್ಲದೆ ಒಂದೆ ವಾರದಲ್ಲೇ ವೀಸಾ ಬಂದು, ಆದರೆ ಅದರಲ್ಲಿ, ಆ ದೇಶದಲ್ಲಿರಲು ಕೇವಲ ಹತ್ತು ದಿನಗಳ ಅನುಮತಿ ಇತ್ತು. ಮಾರನೇ ದಿನ ಪಾಂಡೆ ಅವರ ಜೊತೆಗೂಡಿ ಟಿಕೆಟ್ ಬುಕ್ ಮಾಡಲು ಟ್ರಾವೆಲ್ ಏಜೆಂಟ್ಸ್ ಹತ್ತಿರ ಹೋದ್ವಿ, ಏಕೆಂದರೆ ಅವರಿಗೆ ಜಪಾನೀ ಭಾಷಾ ಪರಿಣಿತಿ ಇತ್ತು. ನಾನು ಕೊಟ್ಟ ತಾರೀಕಿನ ಪರಿಮಿತಿಯಲ್ಲಿ, ಅವರು ನಮಗೆ ಎರಡು ಆಯ್ಕೆಗಳನ್ನು ಕೊಟ್ಟರು. ಒಂದು ಟೋಕಿಯೋದಿಂದ ಜರ್ಮನಿ ಮೂಲಕ ಸೀದಾ ಸಮಾವೇಶ ನಡೆಯುವ ಗಡಂಸ್ಕ್ ನಗರಕ್ಕೆ ಹೋಗುತಿತ್ತು. ಇನ್ನೊಂದು, ಲಂಡನ್ ಮಾರ್ಗವಾಗಿ ಪೋಲಂಡಿನ ರಾಜಧಾನಿ ವಾರ್ಸಾವ ನಗರಕ್ಕೆ ಹೋಗಿತ್ತಿತ್ತು. ಒಂದನೇ ಆಯ್ಕೆ ದುಬಾರಿ ಅನಿಸಿತು, ನನ್ನ ಬಜೆಟ್ಟಿಗೆ ಹೊಂದಾಣಿಕೆ ಅಗಲಿಲ್ಲ, ಅದಕ್ಕೆ ಎರಡನೇ ಆಯ್ಕೆ ಮಾಡೋಣ ಬಿಡಿ ಸರ್ ಅಂದೇ. ಆದರೆ ಇಲ್ಲಿ ಒಂದು ಸಮಸ್ಸೆ, ವಾರ್ಸಾವ ನಗರದಿಂದ ಗಡಂಸ್ಕ್ ನಗರಕ್ಕೆ ಹೋಗಲು ರಾತ್ರಿಎಲ್ಲ ರೈಲು ಪ್ರಯಾಣಮಾಡಬೇಕಿತ್ತು. ಪೋಲಂಡ್, ಅಷ್ಟೊಂದು ಆರ್ಥಿಕವಾಗಿ ಮುಂದರಿದ ದೇಶವಲ್ಲದರಿಂದ, ಅಲ್ಲಿ ಅಪರಾಧಗಳು, ಕಳ್ಳ-ಕಾಕರ ಕಾಟ ಸ್ವಲ್ಪ ಜಾಸ್ತಿ ಅಂತ ಕೆಳಪಟ್ಟಿದ್ದೆ. ಅಪರಿಚಿತ ದೇಶದಲ್ಲಿ ರಾತ್ರಿಯೆಲ್ಲಾ ರೈಲು ಪ್ರಯಾಣ, ನಿದ್ದೆಯಲ್ಲಿರುವಾಗ ಯಾರಾದ್ರು ಹತ್ತಿರ ಇರುವ ಬ್ಯಾಗು, ದುಡ್ಡು ಕಸಿದುಕೊಂಡು ಹೋದ್ರೆ ಹೆಂಗೆ ಎಂಬ ಕೊರಗು. ಪಾಂಡೆ ಅವರು, ಗುರೂಜಿ ಹುತ್ತಿನಲ್ಲಿ ಕೈ ಹಾಕಿಯಾಗಿದೆ, ಈಗ ಹಾವಿಗೆ ಹೆದರಿದರೆ ಹೆಂಗೆ. ನಾವು ಮಾಧ್ಯಮ ವರ್ಗದವರು, ಈ ರೀತಿಯ ಸಮಸ್ಯೆಗಳನ್ನ ಸವಾಲಾಗಿ ಸ್ವೀಕರಿಸಲೇಬೇಕು ಅಂದರು. ಆಯಿತು ಸರ್ ಅಂದು, ಬೇರೆ ವಿಚಾರ ಎಲ್ಲ ಮರೆತು ಧೈರ್ಯದಿಂದ ಹೋಗಲೇಬೇಕೆಂಬ ದೃಢ ನಿರ್ಧಾರ ಮಾಡಿ ಎರಡನೇ ಆಯಿಕೆಯಂತೆ ಬ್ರಿಟಿಷ್ ಏರ್ವೇಸ್ ವಿಮಾನ ಬುಕಿಂಗ್ ಮಾಡಿಸಿದೆವು.

ಪೋಸ್ಟರ್ ರೆಡಿ ಆಯೀತು, ಬ್ಯಾಗ್ ಪ್ಯಾಕ್ ಆಯಿತು, ನೋಡು ನೋಡಿತ್ತಿದ್ದಂತೆ ಪೋಲೆಂಡ್ಗೆ ಹಾರುವ ದಿನ ಹತ್ತಿರ ಬಂದೇಬಿಟ್ಟಿತು. ಬೆಳಿಗ್ಗೆ 7-00 ಘಂಟೆಗೆ ನಾನಿದ್ದ ಊರಿನಿಂದ ಟೋಕಿಯೋಗೆ ಹೋಗಲು ವಿಮಾನ ಇದ್ದು, ಹೆಚ್ಚುಕಡಿಮೆ ಒಂದು ಘಂಟೆಯ ಪ್ರಯಾಣ. ಅಲ್ಲಿಂದ ಮಧ್ಯಾಹ್ನ 12-30 ಗೆ ಟೋಕ್ಯೋದಿಂದ ಲಂಡನ್ನಿಗೆ. ಲಂಡನ್ನಿನಲ್ಲಿ ನಾಲ್ಕು ಘಂಟೆಗಳ ಅಂತರದಲ್ಲಿ ಪೋಲೆಂಡಿನ ವಾರ್ಸಾವಗೆ ಹೋಗುವ ವಿಮಾನ. ಈ ರೀತಿ ಪ್ರಯಾಣದ ವಿವರ ಇದ್ದು, ಲಂಡನ್ನಿನಲ್ಲಿ ನಾಲ್ಕು ಘಂಟೆ ತಂಗಬೇಕಾಗಿತ್ತು. ಬೆಳಿಗ್ಗೆ ಸರಿಯಾಗಿ 5-30 ಘಂಟೆಗೆ ಡಾ. ಪಾಂಡೆ ಅವರು ನನ್ನನ್ನು ಮನೆಯಿಂದ ವಿಮಾನ ನಿಲ್ದಾಣಕ್ಕೆ ಬಿಟ್ಟು, ಬೆನ್ನು ಚಪ್ಪರಿಸಿ, ಒಳ್ಳೆಯದಾಗಲಿ ಎಂದು ಹಾರೈಸಿ, ಸಾಯೋನಾರಾ ಹೇಳಿ ಹೋದರು. ನಾನು ಚೆಕ್ ಇನ್, ಸೆಕ್ಯೂರಿಟಿ, ಎಲ್ಲ ಮುಗಿಸಿ, ಬೋರ್ಡಿಂಗ್ ಪಾಸಿನಲ್ಲಿ ತಿಳಿಸಿದಂತೆ, ವಿಮಾನ ಬಿಡುವ ಗೇಟ್ ಹತ್ತಿರ ಕುಳಿತು, ಮತ್ತೊಮ್ಮೆ ಮನೆಗೆ ಫೋನ್ ಮಾಡಿ ಎಲ್ಲರ ಆಶೀರ್ವಾದ ಪಡೆದೆ. ವಿಮಾನ ಸರಿಯಾದ ಸಮಯಕ್ಕೆ ಟೋಕ್ಯೋದತ್ತ ಹಾರಿತು. ದುಗುಡು, ದುಮ್ಮಾನ, ಆತಂಕಗಳ ಮಧ್ಯೆ ಚಿಮ್ಮುತ್ತಿರುವ ಸಂತೋಷದ ಒಂದು ಸಣ್ಣ ಚಿಲುಮೆಯ ಆಸರೆಯ ಮೇಲೆ ನನ್ನ ಪ್ರಯಾಣ ಶುರುವಾಯಿತು.

ಸರಿಯಾಗಿ ಒಂದು ಘಂಟೆ ಪ್ರಯಾಣದ ನಂತರ ಟೋಕ್ಯೋನ "ನರಿತಾ" ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದೆ. ಇನ್ನು ನಾಲ್ಕು ಘಂಟೆಗಳಕಾಲ ಕಾಯಬೇಕು. ಸ್ವಲ್ಪ ಉಪಹಾರ ಮಾಡಿ, ಮುಂದಿನ ವಿಮಾನ ಬಿಡುವ ಟರ್ಮಿನಲ್ಲಿಗೆ ಹೊರಟೆ. ಇದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಾರುವ ವಿಮಾನವಾದ್ದರಿಂದ, ಇಮಿಗ್ರೇಷನ್ ಕೌಂಟರ್ಗೆ ಹೋಗಿ, ಇಮಿಗ್ರೇಷನ್ ಆಫೀಸರ್ ಹತ್ತಿರ ನಮ್ಮ ವೀಸಾ, ಪಾಸ್ಪೋರ್ಟ್ ಮತ್ತು ಇತರೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ಮಾಡಿಸಬೇಕು. ಎಲ್ಲ ಸರಿಯಾಗಿದ್ದರೆ ಮಾತ್ರ ಇಮಿಗ್ರೇಷನ್ ಆಫೀಸರ್ ಮುಂದೆ ಹೋಗಲು ಪರವಾನಿಗೆ ಕೊಡುತ್ತಾನೆ. ಅದರಂತೆ, ಬ್ಯಾಗಿನಲ್ಲಿದ್ದ ಎಲ್ಲ ದಾಖಲೆಗಳನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡು ಸರದಿಯಲ್ಲಿ ನಿಂತೇ. ಸರದಿ ಬಹಳ ಉದ್ದವಾಗಿದ್ದು. ಅರ್ಧ ಘಂಟೆಯ ನಂತರ ನನ್ನ ನಂಬರ್ ಬಂತು. ಇಮಿಗ್ರೇಷನ್ ಆಫೀಸರ್ಗೆ ಎಲ್ಲ ದಾಖಲೆಗಳನ್ನು ಕೊಟ್ಟೆ. ದಾಖಲೆಗಳನ್ನೆಲ್ಲ ಪರಿಶೀಲಿಸಿದ ನಂತರ, ನೀನು ಭಾರತೀಯ ನಾಗರಿಕನಾ ಎಂದ. ಹೌದು ಸರ್ ಏನಾಯಿತು ಅಂದೇ. ಏನು ಹೇಳಲಿಲ್ಲ, ಬರಿ ದಾಖಲೆಗಳನ್ನು ನೋಡುವುದು ಮತ್ತು ನನ್ನ ಮುಖನೋಡುವುದು ಮಾಡುತ್ತ ಕುಳಿತುಬಿಟ್ಟ. ಹಿಂಗ್ಯಾಕೆ ಮಾಡ್ತಿದ್ದಾನೆ, ವೀಸಾ ಅಥವಾ ಪಾಸ್ಪೋರ್ಟ್ನಲ್ಲಿ ಏನಾದರು ದೋಷ ಇದೆಯಾ, ಇಲ್ಲ ಕಮಿಟಿ ಅವರು ಕಳುಹಿಸಿದ ಆವ್ಹಾನ ಪತ್ರಿಕೆಯಲ್ಲೇನಾದರೂ ದೋಷ ಇದೆಯಾ ಅಂತ ಯೋಚಿಸತೊಡಗಿದೆ. ಇದೆ ರೀತಿ ಐದಾರು ನಿಮಿಷ ಮಾಡಿ ಮೆಲ್ಲನೆ ಕೇಳಿದ, ನೀವು ಟಿಕೆಟ್ ಬುಕ್ ಮಡಿದ ಏಜೆಂಟ್ ಏನಾದ್ರು ಮುಚ್ಚಿಟ್ಟಿದ್ದಾರಾ, ಅಥವಾ ನೀನು ಭಾರತೀಯ ನಾಗಿದ್ದು ನಿನಗೆ ಮತ್ತು ಜಪಾನಿಯರಿಗೆ ಇಮಿಗ್ರೇಷನ್ ಕಾನೂನುಗಳು ಬೇರೆ ಎಂಬುದೇನಾದ್ರು ಗೊತ್ತಿದೆಯಾ ಎಂದ. ಏನ್ ಹೇಳೀತಿದಾನೆ ಅರ್ಥವಾಗ್ತಿಲ್ಲ. ಸರ್, ಸಮಸ್ಯೆ ಏನು, ವಿಸ್ತಾರವಾಗಿ ಹೇಳಿ ಎಂದೆ. ನಿನ್ನ ದಾಖಲೆಗಳ ಪ್ರಕಾರ ನೀನು ಮುಂದಿನ ವಿಮಾನಕ್ಕೆ ಹೋಗಲು ಅವಕಾಶವಿಲ್ಲ, ಈಗ ನಿನಗಿರುವ ಆಯ್ಕೆ ಅಂದರೆ ನೀನು ವಾಪಾಸ್ ನಿನ್ನ ಊರಿಗೆ ಹೋಗಬೇಕು ಅಂದ. ಏನ್ ಸರ್, ಹಿಂಗೇ ಹೇಳ್ತಿದಿರಿ, ಸ್ವಲ್ಪ ತಿಳಿಸಿ ಹೇಳಿ ಅಂದೇ. ವಿವರವಾಗಿ ಹೇಳ್ತೇನೆ, ನೀನು ಪಕ್ಕಕ್ಕೆ ಸರಿದು ನಿಲ್ಲು, ನಿನ್ನ ಹಿಂದೆ ಬಹಳ ಜನ ಕ್ಯೂನಲ್ಲಿದ್ದಾರೆ ಅವರಿಗೆ ಅವಕಾಶ ಮಾಡಿಕೊಡು ಎಂದ. ಆಕಾಶ ಕಳಚಿ ತಲೆಯಮೇಲೆ ಬಿದ್ದಂತಾಯಿತು. ಎಷ್ಟೆಲ್ಲ ಶ್ರಮಪಟ್ಟು ಇಲ್ಲಿಯವರೆಗೆ ಬಂದಿದ್ದೇನೆ, ಇವನೇನಪ್ಪಾ ಒಂದೇ ನಿಮಿಷಕ್ಕೆ ನನ್ನ ಪ್ರಯಾಣವನ್ನೇ ಮೊಟಕುಗೊಳಿಸಿದ ಅನಿಸಿತು. ಅಲ್ಲೇ ಪಕ್ಕಕ್ಕೆ ಸರಿದು ನಿಂತೆ, ಆದರೆ ಕ್ಯೂ ನಲ್ಲಿರುವವರೆಲ್ಲ ನನ್ನನ್ನೇ ವಿಚಿತ್ರವಾಗಿ ದುರುಗುಟ್ಟಿಕೊಂಡು ನೋಡುತಿದ್ದಾರೆ. ಮುಜುಗರ ಆಗ್ತಿದೆ, ಈ ಮಾನುಷ ಪೂರ್ತಿ ವಿಷಯ ತಿಳಿಸಿಲ್ಲ, ಏನ್ ನಡಿತಾಯಿದೆ ಒಂದು ಅರ್ಥವಾಗದ ಸ್ಥಿತಿ. ಸ್ವಲ್ಪ ಜನ ಕಡಿಮೆ ಆದಮೇಲೆ, ಮತ್ತೆ ಅವನ ಹತ್ತಿರ ಹೋಗಿ ಕೇಳಿದೆ. ಆಮೇಲೆ ವಿವರವಾಗಿ ಹೇಳಲು ಶುರು ಮಾಡಿದ. ನಾನು ಬುಕ್ ಮಾಡಿದ್ದೂ ಬ್ರಿಟಿಷ್ ಏರ್ಲೈನ್ಸ್, ಅದಕ್ಕೆ ಇಂಗ್ಲೆಂಡ್ ಮುಖೇನ ಹಾಯಿದು ಹೋಗಬೇಕು. ಆದರೆ, ಇಲ್ಲಿ ಸಮಸ್ಯೆ ಏನೆಂದರೆ, ಭಾರತೀಯರಿಗೆ ಇಂಗ್ಲೆಂಡ್ ಮೂಲಕ ಹಾಯಿದು ಹೋಗಬೇಕಾದರೆ, ಅಲ್ಲಿ ಒಂದು ಘಂಟೆ ಕೂಡ ತಂಗಿದರು, ಇಂಗ್ಲೆಂಡ್ ವೀಸಾ ಆಫೀಸಿನಿಂದ "ಟ್ರಾಂಜಿಟ್ ವೀಸಾ" ಎಂಬ ಇನ್ನೊಂದು ವೀಸಾ ಪಡೆಯಬೇಕಿತ್ತು. ಈ ವಿಷಯದ ಬಗ್ಗೆ ನನಗೆ ಕಿಂಚಿತ್ತೂ ಗೊತ್ತಿಲ್ಲ. ಇನ್ನು ಟ್ರಾವೆಲ್ ಏಜೆಂಟ್ಗು ಕೂಡ ಇದರ ಮಾಹಿತಿ ಇರಲಿಕ್ಕಿಲ್ಲ, ಏಕೆಂದರೆ ಜಪಾನಿಯರಿಗೆ ಅನೇಕ ದೇಶಗಳಿಗೆ ಪ್ರವಾಸ ಅಥವಾ ಬಿಸಿನೆಸ್ ಟ್ರಿಪ್ ಮಾಡಲು ವಿಸಾದ ಅವಶ್ಯಕತೆಯೇ ಇಲ್ಲ. ತುಂಬಾ ನಿರಾಸೆ ಅಯೀತು, ಇದೆಂತ ಅವಾಂತರ ಆಯೀತಲ್ಲ, ಪ್ರೊಫೆಸರ್ ಗೆ ಈ ವಿಷಯ ತಿಳಿಸಿದರೆ ಚೆನ್ನಾಗಿ ಉಗಿಸಿಕೊಳ್ಳುವುದು ನಿಶ್ಚಿತ. ಇಮಿಗ್ರೇಷನ್ ಆಫೀಸರ್ಗೆ ಧನ್ಯವಾದ ತಿಳಿಸಿ, ಬಂದ ದಾರಿಗೆ ಸುಂಕವಿಲ್ಲದಂತೆ, ಜೋತು ಮುಖಮಾಡಿಕೊಂಡು ಹೋಗಿ ಒಂದು ಕುರ್ಚಿಯಲ್ಲಿ ಕುಳಿತೆ. ಯಾಕೋ ಮತ್ತೆ ಪಾಂಡೆ ಅವರಿಗೆ ಫೋನ್ ಮಾಡಿ ತಿಳಿಸೋಣ ಅನಿಸಿ, ಅವರಿಗೆ ಫೋನ್ ಮಾಡಿ.....ಸರ್ ನನ್ನ ಪ್ರಯಾಣ ಇಲ್ಲಿಗೆ ಮೊಟಕುಗೊಂಡಿತು, ಸೋತು ಹೋದೆ ಅನಿಸ್ತಾಇದೆ ಅಂದೆ. ವಿಷಯ ಸಂಪೂರ್ಣವಾಗಿ ತಿಳಿಸಿದೆ. ಅವರಿಗೂ ಹಳಹಳಿ ಆಗಿ, ಪ್ರೊಫೆಸರ್ಗೆ ವಿಷಯ ತಿಳಿಸಿದ್ದಾರೆ. ಆದರೆ ಪ್ರೊಫೆಸರ್ ನಿಶಿನೊ ಮೊದಲೇ ಮುಂಗೋಪಿ, ಪಿತ್ತ ನೆತ್ತಿಗೇರಿಸಿ ಅಷ್ಟು ಸಮಸ್ಯೆ ಆಗಿದ್ದರೆ ವಾಪಾಸ್ ಬಂದುಬಿಡಲಿ ಎಂದು ಚೀರಾಡಿ ಕೈತೊಳೆದುಕೊಂಡರಂತೆ. ಯಾಕೊ ಪಾಂಡೆಯವರಿಗೆ ಮನಸ್ಸು ಒಪ್ಪಿಲ್ಲ, ಸೀದಾ ಟ್ರಾವೆಲ್ ಏಜೆಂಟ್ ಹತ್ರ ಹೋಗಿ, ವಿಷಯ ತಿಳಿಸಿದ್ದಾರೆ. ವಿಚಿತ್ರ ಏನೆಂದರೆ, ಈ ತಪ್ಪಿನಲ್ಲಿ ನಮ್ಮದು ಸಮಭಾಗವಿದ್ದರೂ ಕೂಡ, ಟ್ರಾವೆಲ್ ಏಜೆಂಟ್ ಈ ಅವಾಂತರದ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಮೇಲೆ ಹೊತ್ತುಕೊಂಡು, ನಿಮ್ಮ ಹುಡುಗನಿಗೆ ಫೋನ್ ಮಾಡಿ, ಇಮಿಗ್ರೇಷನ್ ಆಫೀಸರ್ಗೆ ಫೋನ್ ಕೊಡಲು ತಿಳಿಸಿರಿ, ನಾನು ನೇರವಾಗಿ ಮಾತನಾಡಿ ಸಮಸ್ಯೆ ಅರ್ಥಮಾಡಿಕೊಂಡು ಬೇರೆ ಮಾರ್ಗ ಹುಡುಕುತ್ತೇನೆಂದು ಹೇಳಿದ್ದಾರೆ. ಅದರಂತೆ ಆಕಡೆಯಿಂದ ಫೋನ್ ಬಂತು, ಅವರ ಆದೇಶದಂತೆ ಆಫೀಸರ್ಗೆ ಫೋನ್ ಕೊಟ್ಟು ವಿಷಯ ತಿಳಿಸಿದೆ. ಅವನು ಪಾಪ, ತುಂಬಾ ಕನಿಕರ ಭಾವದಿಂದ ನನ್ನ ಫೋನ್ ಮೂಲಕ ಟ್ರಾವೆಲ್ ಏಜೆಂಟ್ ಜೊತೆ ಜಪಾನೀ ಭಾಷೆಯಲ್ಲಿ ಮಾತನಾಡಿ, ನನಗೆ ಫೋನ್ ಕೊಡುತ್ತ, ಏನು ಚಿಂತಿಸಬೇಡ ನಿನಗೆ ಬೇರೆ ವ್ಯವಸ್ಥೆ ಮಾಡುವವರಿದ್ದಾರೆ, ಅವರ ಫೋನ್ ಬರುತ್ತೆ ಇಲ್ಲೇ ಕುಳಿತು ಕಾಯುತ್ತಿರು ಅಂದ. ಒಂದು ಘಂಟೆ ಕಾಯ್ದಮೇಲೆ ಪಾಂಡೆ ಸರ್ ಫೋನ್ ಬಂತು. ನಿಮ್ಮ ಪ್ರಯಾಣ ಮೊಟಕುಗೊಳ್ಳಲಿಲ್ಲ ಗುರುಜಿ, ಟ್ರಾವೆಲ್ ಏಜೆಂಟ್ ಆಪತ್ಭಾಂದವನಂತೆ ಈ ಅವಾಂತರದ ಸಂಪೂರ್ಣ ಜವಾಬ್ದಾರಿ ತನ್ನಮೇಲೆ ಹೊತ್ತು, ಈ ಟಿಕೆಟ್ ಅನ್ನು ರದ್ದುಪಡಿಸಿ, ಮಾರನೇ ದಿನ 12=00 ಘಂಟೆಗೇ ಹೊರಡುವ ಆಸ್ಟ್ರಿಯನ್ ಏರ್ವೇಸ್ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ, ಆದರೆ ನೀವು ಅಲ್ಲಿ ಒಂದು ದಿನ ಹೆಚ್ಚಿಗೆ ನಿಲ್ಲಬೇಕಾಗುತ್ತದೆ. ನಾಳೆಯವರೆಗೆ ಇಳಿದುಕೊಳ್ಳಲು ನಾರಿತಾ ಏರ್ಪೋರ್ಟಿನ ಬಿಸಿನೆಸ್ ಹೋಟೆಲಿನಲ್ಲಿ ರೂಮ್ ಕಾಯಿದಿರಿಸಿದ್ದು, ನೀವು ಅಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ ಅಂದರು. ಮತ್ತೆ ನನ್ನ ಆಸೆ ಚಿಗುರೊಡೆಯಿತು, ಜೊತೆಗೆ ಪಾಂಡೆ ಅವರಿಗೆ ಮತ್ತು ಟ್ರಾವೆಲ್ ಏಜೆಂಟ್ಗೆ ಅನಂತಾನಂತ ಕೃತಜ್ಞತೆಗಳನ್ನು ಸಲ್ಲಿಸಿದೆ. ಬ್ಯಾಗ ತೆಗೆದುಕೊಂಡು ಶಟಲ್ ಬಸ್ಸಿನಲ್ಲಿ ಹೋಟೆಲಿನತ್ತ ಪ್ರಯಾಣ ಬೆಳೆಸಿದೆ.

ಹೋಟೆಲ್ ತಲುಪಿದಮೇಲೆ ಫ್ರೆಶ್ ಆಗಿ, ಮನೆಗೆ ಫೋನ್ ಮಾಡಿ ಪಾಲಕರಿಗೆ ವಿಷಯ ತಿಳಿಸಿದೆ. ಅವರಿಗು ಹಳಹಳಿ ಆಯಿತು, ಪಾಂಡೆ ಅವರಿಗೆ ಧನ್ಯವಾದ ತಿಳಿಸಲು ಹೇಳಿದರು, ಜೊತೆಗೆ ಅಂದು ಜಪಾನಿಯರ ಪ್ರಾಮಾಣಿಕತೆ ಮತ್ತು ಸಹಾಯಗುಣಕ್ಕೆ ಉದಾಹರಣೆಯಾದ ಟ್ರಾವೆಲ್ ಏಜೆಂಟನನ್ನು ಪ್ರಶಂಶಿಸುವುದನ್ನು ಮರೆಯಲಿಲ್ಲ. ಬೆಳಗಿನಿಂದ ಓಡಾಡಿ, ದೈಹಿಕವಾಗಿ, ಮಾನಸಿಕವಾಗಿ ದಣಿದಿದ್ದೆ. ಹೋಟೆಲಿನವರು ಕಳುಹಿಸಿಕೊಟ್ಟ ಇಂಡಿಯನ್ ಕರಿ ಮತ್ತು ಅನ್ನವನ್ನು ತಿಂದು ನಿದ್ರೆಗೆ ಜಾರಿಬಿಟ್ಟೆ. ಬೆಳಿಗ್ಗೆ ಏಳುಘಂಟೆಗೆ ಯಾರೋ ಕದತಟ್ಟಿದಂತಾಗಿ, ತಟ್ಟನೆ ಎದ್ದು ಬಾಗಿಲು ತೆರೆದರೆ, ಹೋಟೆಲಿನ ರೂಮ್ ಬಾಯ್. ಕೈಯಲ್ಲಿ ಒಂದು ಕಾಗದ ಇದ್ದು, ಇದು ನಿಮಗೆ ಫ್ಯಾಕ್ಸ್ ಬಂದಿದೆ, ಇದರಲ್ಲಿ ನಿಮ್ಮ ವಿಮಾನದ ಟಿಕೆಟ್ ನಂಬರ ಮುಂತಾದ ಮಾಹಿತಿ ಇದೆ. 12-00 ಘಂಟೆಗೆ ವಿಮಾನ ಬಿಡುವುದು ಎಂದ. ಅವನಿಗೆ ಧನ್ಯವಾದ ತಿಳಿಸಿ, ಬೇಗ ಬೇಗ ತಯಾರಾಗಿ, ಬ್ಯಾಗ ಸರಿಮಾಡಿಕೊಂಡು, ಹತ್ತಿರವೇ ಇದ್ದ ವಿಮಾನ ನಿಲ್ದಾಣ ತಲುಪಿದೆ. ಆಸ್ಟ್ರಿಯನ್ ಏರ್ವೇಸ್ ಕೌಂಟರ್ಗೆ ಹೋಗಿ ಚೆಕ್ ಇನ್ ಮಾಡಿಸಿ, ಮತ್ತೆ ಇಮಿಗ್ರೇಷನ್ ಕೌಂಟರ್ಗೆ ಹೋದರೆ, ಅದೇ ನಿನ್ನೆಯ ಆಫೀಸರ್. ನನ್ನ ಸರದಿ ಬಂದಾಗ, ನನ್ನನು ನೋಡಿ ಗುರುತು ಹಿಡಿದು ಮುಗುಳು ನಕ್ಕ. ಈಗ ನೀನು ಆಸ್ಟ್ರಿಯಾ ದೇಶದ ಮೂಲಕ ಹೋಗುವುದರಿಂದ ಅಲ್ಲಿ ಯಾವುದೇ ಷರತ್ತುಗಳಿಲ್ಲ, ನಿನ್ನ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿ ಕಳುಹಿಸಿಕೊಟ್ಟ. ಸರಿಯಾದ ಸಮಯಕ್ಕೆ ವಿಮಾನ ಹಾರಿತು, ಅವಸರದಲ್ಲಿ ಸಸ್ಯಾಹಾರಿ ಊಟ ಆಯ್ಕೆ ಮಾಡುವುದು ಮರೆತುಹೋಗಿ, ಕೊಟ್ಟದ್ದರಲ್ಲೇ ಸಸ್ಯಾಹಾರಿ ಪದಾರ್ಥಗಳನ್ನು ಹೆಕ್ಕಿ ತಿಂದು ದಾರಿಕಳೆದೆ. 15 ಘಂಟೆಗಳ ಸುಧೀರ್ಘ ಪ್ರಯಾಣದ ನಂತರ ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ತಲುಪಿ, ಆಗ ಅಲ್ಲಿ ಮಧ್ಯಾಹ್ನ ೧-೦೦ ಘಂಟೆ. ಇಲ್ಲಿ ಇನ್ನು ಮೂರು ಘಂಟೆ ಕಳೆಯಬೆಕಾಗಿತ್ತು, ಅದಕ್ಕೆ ಸ್ವಲ್ಪ ವಿಮಾನ ನಿಲ್ದಾಣದ ಒಳಗಡೆ ಸುತ್ತಾಡುವುದರಲ್ಲಿ ಕೆಲವು ಭಾರತಿಯರು ಭೆಟ್ಟಿಯಾಗಿ, ಅವರೊಂದಿಗೆ ಮಾತಾಡುತ್ತ ಕಾಲ ಕಳೆದೆ. ಇಲ್ಲಿಂದ ಪೋಲೆಂಡಿಗೆ ಹೋಗುವ ವಿಮಾನ ಸಿದ್ಧವಾಗಿತ್ತು. ಇದು ಕೇವಲ 25 ಜನರನ್ನು ಹೊತ್ತೊಯ್ಯಬಲ್ಲ ಚಿಕ್ಕ ವಿಮಾನವಾಗಿದ್ದು, ಭೂಮಿಯಿಂದ ಸ್ವಲ್ಪ ಎತ್ತರದಲ್ಲಿ ಹಾರಾಡುತ್ತಾ ಸಂಜೆ ಆರೂವರೆಗೆ ಪೋಲೆಂಡ್ ದೇಶದ ರಾಜಧಾನಿ ವಾರ್ಸಾವ ತಲುಪಿತು. ಇಮಿಗ್ರೇಷನ್, ಸೆಕ್ಯೂರಿಟಿ ಚೆಕ್ ಆದಮೇಲೆ ಬ್ಯಾಗ ತೆಗೆದುಕೊಂಡು ಹೊರಗೆ ಬಂದು ರೈಲು ನಿಲ್ದಾಣಕ್ಕೆ ಹೋಗುವ ಬಗ್ಗೆ ವಿಚಾರಿಸಿದೆ. ಏರ್ಪೋರ್ಟ್ ಮುಖ್ಯದ್ವಾರದ ಪಕ್ಕ ಇರುವ ಬಸ್ಸ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಹೋಗುವ ಬಸ್ಸು ಬರುವುದೆಂಬ ವಿಷಯ ತಿಳಿಯಿತು. ಹೊರಗೆ ಬಂದು ಆ ಬಸ್ ಸ್ಟಾಪಿನಲ್ಲಿ ಕುಳಿತೆ. ಅಷ್ಟೋತ್ತಿಗೆ ಸೂರ್ಯ ಬಾನಿನಿಂದ ಜಾರಿ ಭೂತಾಯಿಯ ಮಡಿಲು ಸೇರಿ, ಎಲ್ಲೆಲ್ಲೂ ಕತ್ತಲಾಗಿತ್ತು. ಚಿಕ್ಕದಿದ್ದರೂ ಅಚ್ಚುಕಟ್ಟಾದ ದೇಶ. ರಸ್ತೆಗಳ ಉದ್ದಗಲಕ್ಕೂ ದೊಡ್ಡ ದೊಡ್ಡ ಬೀದಿ ದೀಪಗಳ ಮೆರುಗು. ಲೆಕ್ಕವಿಲ್ಲದಷ್ಟು ಕಾರುಗಳು ರಸ್ತೆಯಲ್ಲೆಲ್ಲ ಓಡಾಡುತ್ತಿದ್ದವು. ಜನರೆಲ್ಲಾ ಕೆಲಸ ಕಾರ್ಯ ಮುಗಿಸಿ ಮನೆಯಕಡೆಗೆ ಹೋರಡುತ್ತಿರುವಂತಿತ್ತು. ಅಷ್ಟರಲ್ಲೇ, ಸಮಯಕ್ಕೆ ಸರಿಯಾಗಿ ಬಂದ, ನಮ್ಮ ಬೆಂಗಳೂರಿನ ವಾಯು ವಜ್ರದಂತಿರುವ ಬಸ್ಸು ಹತ್ತಿ ರೈಲು ನಿಲ್ದಾಣದತ್ತ ಹೊರಟೆ.

ವಿಶಾಲವಾದ ರೈಲು ನಿಲ್ದಾಣದಲ್ಲಿ ಅನೇಕ ಪ್ಲಾಟಫಾರ್ಮ್ಗಳು, ಟಿಕೆಟ್ ಕೌಂಟರ್ಗರು. ತಮ್ಮ ಕೆಲಸ ಮುಗಿಸಿ ಬೇರೆ ಬೇರೆ ಊರಿಗೆ ಹೋಗಲು ಸೇರಿರುವ ಜನಗಂಗೂಳಿ. ಬಸ್ಸು ಇಳಿದು, ಟಿಕೆಟ್ ಕೌಂಟರ್ಗೆ ಹೋಗಿ, ಗಡಂಸ್ಕ್ ನಗರಕ್ಕೆ ಹೋಗಬೇಕು, ರೈಲು ಎಷ್ಟು ಘಂಟೆಗಿದೆ, ಹಾಗು ಒಂದು ಟಿಕೆಟ್ ಕೊಡಿ ಎಂದೆ. ಆ ಕೌಂಟರ್ನಲ್ಲಿರುವ ಮಹಿಳೆಗೆ ಸರಿಯಾಗಿ ಇಂಗ್ಲಿಷ್ ತಿಳಿತಾಯಿಲ್ಲ. ಬಹಳ ಪ್ರಯತ್ನದ ನಂತರ ಅರ್ಥವಾಗಿ, ಒಂದು ಟಿಕೆಟ್ ಕೊಟ್ಟು, ರೈಲು ರಾತ್ರಿ 11-30 ಕ್ಕೆ ಇದೆ ಎಂದಳು. ಈಗ ಸಮಯ ಸಂಜೆ ಎಂಟು ಘಂಟೆಯಾಗಿದೆ, ಇನ್ನು ಮೂರುವರೆ ಘಂಟೆ ಕಾಯಬೇಕಾ, ಅಪರಿಚಿತ ಸ್ಥಳದಲ್ಲಿ ಹೇಗೆ ಹೊತ್ತು ಕಳೆಯುವುದು ತಿಳಿತಾಯಿಲ್ಲ. ಒಂದು ಘಂಟೆ ಅಲ್ಲೇ ನಿಲ್ದಾಣದ ಒಳಗೆ ಸುತ್ತಾಡುತ್ತ ಕಾಲ ಕಳೆದೆ. ಇಲ್ಲಿ ವಿಶೇಷವೇನೆಂದರೆ ಯುರೋಪ ಖಂಡದ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವೀಸಾ ಇಲ್ಲದೆ ಪ್ರಯಾಣಿಸಬಹುದಾದ್ದರಿಂದ, ಪಕ್ಕದ ಜರ್ಮನ್, ಫ್ರಾನ್ಸ್ ದೇಶಗಳಿಂದ ರೈಲುಗಳು ಈ ನಿಲ್ದಾಣದ ಮುಖಾಂತರ ಹೋಗುತಿದ್ದು, ಆಯಾ ದೇಶಗಳಿಗೆ ಜನರು ಪ್ರಯಾಣಿಸುತ್ತಿದ್ದರು. ಈ ಎಲ್ಲ ದೃಶಗಳನ್ನು ನೋಡುತ್ತಾ ಒಂದು ಮೂಲೆಯಲ್ಲಿ ಕುಳಿತೆ, ಆದರೆ ಬ್ಯಾಗು, ಪರ್ಸ್ಗಳಲ್ಲೂ ಮಾತ್ರ ಬಹಳ ಜೋಪಾನವಾಗಿ ನೋಡಿಕೊಂಡಿದ್ದೆ. ವೇಳೆ ಕಳೆದ ಹಾಗೆ, ಜನಜಂಗುಳಿ ಕಡಿಮೆ ಆಗುತ್ತಾ, ನಿಲ್ದಾಣ ಖಾಲಿ ಖಾಲಿ ಆಗಿ, ಅಲ್ಲಿಗೊ ಇಲ್ಲಿಗೋ ಒಬ್ಬರೋ ಇಬ್ಬರೋ ಕಾಣುತ್ತಿದ್ದರು. ಟಿಕೆಟ್ ಕೌಂಟರ್ಗಳೆಲ್ಲ ಮುಚ್ಚಿಹೋದವು. ರಾತ್ರಿ ನಾನು ಹೋಗುವ ರೈಲಿಗೆ ಜನ ಕಡಿಮೆ ಇರಬಹುದೇನೋ, ಆದರೆ ಈ ಖಾಲಿ ನಿಲ್ದಾಣದಲ್ಲಿ ಒಬ್ಬನೇ ಅಪರಿಚಿತ ಕುಳಿತಿದ್ದೀನಿ. ಅಷ್ಟರಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಂತಿರುವ ಕೂಲಿಕಾರ್ಮಿಕರಂತಿದ್ದ 3-4 ಜನ, ಸುತ್ತಾಡುತ್ತ ಹತ್ತಿರ ಬಂದು ದುರುಗುಟ್ಟಿ, ಪೋಲೆಂಡ್ ಭಾಷೆಯಲ್ಲಿ ಏನೇನು ಮಾತನಾಡಿಕೊಳ್ಳುತ್ತ ನಗುತ್ತಿದ್ದಾರೆ, ನನಗೊ ಭಾಷೆ ಅರ್ಥವಾಗುತ್ತಿಲ್ಲ, ಏನು ಮಾತಾಡಿತ್ತಿದ್ದರೆ ಅನ್ನುವುದು ಅರ್ಥವಾಗುತ್ತಿಲ್ಲ. ಮುಂದೆ ಹೋದಂತೆ ಮಾಡಿ ಮತ್ತೆ ವಾಪಾಸ್ ಬಂದು ಏನೋ ಹೇಳಲು ಪ್ರಯತ್ನಿಸುತ್ತಿದ್ದಾರೆ, ಏನು ಅರ್ಥವಾಗ್ತಿಲ್ಲ. ಯಾಕೋ ಈ ಸ್ಥಳ ಸುರಕ್ಷಿತ ಅನಿಸಲಿಲ್ಲ, ಅಲ್ಲಿಂದ ಎದ್ದು ಹೋಗಬೇಕೆನಿಸಿ, ಜಾಗ ಖಾಲಿ ಮಾಡಿದೆ. ಅವರು ಒಳ್ಳೆಯವರೇ ಆಗಿರಬಹುದು, ಸುಮ್ಮನೆ ಮಾತಾಡಿಸಲು ಬಂದಿರಬಹುದು, ಆದರೆ ಸುಮ್ಮನೆ ಯಾಕೆ ರಿಸ್ಕ್ ಅಂತ ಅನಿಸಿತು. ಮುಂದೆ ಸ್ವಲ್ಪ ದೂರ ಹೋಗುವಷ್ಟರಲ್ಲಿ, ಮೂರೂ ಜನ ಚೈನಾ ದೇಶದವರು ಕಂಡರು. ಅವರೆಲ್ಲ ನನ್ನ ಹತ್ತಿರಾನೆ ಬರುತ್ತಿರಬಹುದೆನಿಸಿ, ನಾನೇ ಮುಂದೆ ಹೋಗಿ ಮಾತಾಡಿಸಿದೆ. ಪುಣ್ಯ, ಅವರಿಗೆ ಇಂಗ್ಲಿಷ್ ಬರುತಿತ್ತು, ಸ್ವಲ್ಪ ಮಾತಾಡಿದಮೇಲೆ ಅರ್ಥವಾಯಿತು, ಅವರು ಇದೆ ಸಮಾವೇಶಕ್ಕೆ ಹೋಗುತ್ತಿದ್ದು, ಚೈನೀಸ್ ಕಂಪನಿಯ ಪರವಾಗಿ ಬಂದಿದ್ದರು. ಮುಳುಗುವವನಿಗೆ ಕಡ್ಡಿಯ ಆಸರೆ ಸಿಕ್ಕಂತಾಯಿತು. ನಾಲ್ಕು ಜನ ಒಂದೇ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುವುದಾಗಿ ನಿರ್ಧಾರವಾಯಿತು. ಇಲ್ಲಿನ ಕಳ್ಳ-ಕಾಕರ ವಿಷಯ ಅವರಿಗೂ ಮುಂಚೆ ತಿಳಿದಿದ್ದರಿಂದ, ರಾತ್ರಿಯೆಲ್ಲ ಜಾಗ್ರತೆಯಿಂದ ಇರೋಣವೆಂದು ಮಾತಾಯಿತು. ರೈಲು ಸ್ವಲ್ಪ ಸಮಯ ತಡವಾಗಿ ಬಂತು. ರೈಲು ಹತ್ತಿ ಒಂದೇ ಕಂಪಾರ್ಟ್ಮೆಂಟ್ನಲ್ಲಿ ನಾಲ್ಕು ಜನ ಕುಳಿತೆವು. ಸೀಟುಗಳು ಅರಮಗಾಗಿದ್ದು ಹೊಟ್ಟೆ ಹಸಿದಿದೆ, ದೇಹ ದಣಿದಿದೆ, ನಿದ್ದೆಗೆ ಜಾರಬೇಕೆಂದರೆ ತಲೆ ತಿನ್ನುತ್ತಿರುವ ಆತಂಕದ ಹೂಳ ಮಲಗಿಸಿಕೊಡುತ್ತಿಲ್ಲ. ನಾಲ್ಕು ಜನ ಜಾಗರಣೆ ಮಾಡುತ್ತ, ಕಣ್ಣು ಕೆಂಪಗೆ ಮಾಡಿಕೊಂಡು, ಮಧ್ಯೆ ತೂಗಾಡಿಸುತ್ತ ದಾರಿ ಕಳೆದೆವು..

ಸೂರ್ಯ ಅದೇ ಪೂರ್ವದಲ್ಲಿ ಮೇಲೆದ್ದು, ಎಲ್ಲೆಲ್ಲೂ ಚುಮು ಚುಮು ಬೆಳಕು. ರೈಲು ಬೆಳಗಿನ 6-00 ಕ್ಕೆ ಗಡಂಸ್ಕ್ ನಗರವನ್ನು ತಲುಪಿತು. ನನ್ನ ಜೊತೆ ಬಂದಿದ್ದ ಚೈನೀಸ್ ಟ್ಯಾಕ್ಸಿಯಲ್ಲಿ ತಾವು ಬುಕ್ ಮಡಿದ ಹೋಟೆಲಿನತ್ತಾ ಹೋದರು. ನಾನು ಕೂಡ ನಮ್ಮಂತಹ ವಿದ್ಯಾರ್ಥಿಗಳಿಗೆ ಇಳಿದುಕೊಳ್ಳಲು ವ್ಯವಸ್ಥೆ ಮಾಡಿದ ಗಡಂಸ್ಕ್ ವಿಶ್ವವಿದ್ಯಾಲಯದ ಹಾಸ್ಟೆಲಿನತ್ತ ಟ್ಯಾಕ್ಸಿಯಲ್ಲಿ ಹೊರಟೆ. ಗಡಂಸ್ಕ್, ಇದು ಪೋಲೆಂಡ್ ದೇಶದ ನಾಲ್ಕು ಮಹಾನಗರಗಳಲ್ಲಿ ಒಂದು. ಬಾಲ್ಟಿಕ್ ಸಮುದ್ರ ತೀರದಲ್ಲಿರುವ ಐತಿಹಾಸಿಕ ನಗರಿ, 1939 ರಲ್ಲಿ ಎರಡನೇ ಮಹಾಯುದ್ಧದಲ್ಲಿ, ಜರ್ಮನ್ನರು ಪೋಲೆಂಡ್ ದೇಶದ ಇದೆ ನಗರದ ಮೇಲೆ ದಾಳಿಮಾಡಿದ್ದರಂತೆ. ಅದರ ನೆನಪಿಗಾಗಿ ಇದೆ ಊರಲ್ಲಿ ವೆಸ್ಟರಪ್ಲ್ಯಾಟ್ಟ್ ಎಂಬ ದೊಡ್ಡದಾದ ಕಲ್ಲಿನಿಂದ ಮಾಡಿದ ಸ್ಮಾರಕ ಒಂದಿದೆ. ನಗರದ ತುಂಬೆಲ್ಲ ಸುಂದರವಾದ ರೋಮನ್ ಶೈಲಿಯಲ್ಲಿ ಕಟ್ಟಿದ, ಕೆಂಪು ಬಣ್ಣದ ಕಟ್ಟಡಗಳು, ಈ ನಗರವನ್ನು ಮತ್ತಷ್ಟು ಸುಂದರಗೊಳಿಸಿದ್ದವು. ಈ ನಗರದ ಮಧ್ಯೆ ಮಾರ್ಟ್ವಾ ವಿಸ್ತಾ ಎಂಬ ನದಿ ಹರಿಯುತ್ತದೆ. ಇಲ್ಲಿನ ಇನ್ನೊಂದು ವಿಶೇಷವೇನೆಂದರೆ ನಾನು ಪುಸ್ತಕಗಳಲ್ಲೇ ಓದಿದ್ದ ಟ್ರಾಮ್ ರೈಲುಗಳನ್ನು ಮೊಟ್ಟಮೊದಲಬಾರಿಗೆ ಕಣ್ಣಾರೆ ನೋಡಿದೆ. ಸಾರಿಗೆ ವ್ಯವಸ್ಥೆಗಾಗಿ, ಟ್ರಾಮು, ಲೋಕಲ್ ರೈಲು ಮತ್ತು ಬಸ್ಸುಗಳಿವೆ. ಹಾಸ್ಟೆಲ ತಲುಪಿದಮೇಲೆ ಕಚೇರಿಯಲ್ಲಿ ವಿಚಾರಿಸಿ ನನ್ನ ರೂಮಿನ ನಂಬರ ಗೊತ್ತುಮಾಡಿಕೊಂಡೇ. ನನ್ನ ಜೊತೆ ಅದೆ ರೂಮಿನಲ್ಲಿ ಐರ್ಲೆಂಡ್ ದೇಶದ ಇನ್ನೊಬ್ಬ ವ್ಯಕ್ತಿಯನ್ನು ಹಾಕಿದ್ದು, ಅವನು ನಿನ್ನೆ ಸಂಜೆಯೇ ತಲುಪಿ ರೂಮಿನಲ್ಲಿದ್ದ. ಅವನ ಪರಿಚಯ ಮಾಡಿಕೊಂಡೆ. ಇದೆ ಹಾಸ್ಟೆಲಿನಲ್ಲಿ, ಈ ಸಮಾವೇಶದಲ್ಲಿ ಭಾಗವಹಿಸಲು, ಬೇರೆ ಬೇರೆ ದೇಶದಿಂದ ಬಂದಿದ್ದ ಸರಿ ಸುಮಾರು 30 ಜನ ತಂಗಿದ್ದರು. ಅದರಲ್ಲಿ ನಾನು ಭಾರತದವರು ಯಾರಾದರೂ ಇದ್ದಾರಾ ಎಂದು ಕಚೇರಿಯಲ್ಲಿ ವಿಚಾರಿಸಿದಾಗ ಆಂಧ್ರದಿಂದ ಬಂದಿದ್ದ ವೆಂಕಟೇಶ್ ಎಂಬ ಐಐಟಿ ಕಾನಪುರಿನ ಪಿಎಚ್ ಡಿ ವಿದ್ಯಾರ್ಥಿ ಒಬ್ಬ ಸಿಕ್ಕ. ಆಮೇಲೆ ಅವನ ರೂಮಿಗೆ ಹೋಗಿ ಪರಿಚಯ ಮಾಡಿಕೊಂಡೆ. ಬೆಳಗಿನ ಕರ್ಮಾಚರಗಳನ್ನು ಮುಗಿಸಿಕೊಂಡು, ಸೂಟು ಬೂಟು ಧರಿಸಿ ಸಮಾವೇಶಕ್ಕೆ ರೆಡಿ ಆದೆ. ಅಲ್ಲೇ ಉಪಹಾರದ ವ್ಯವಸ್ಥೆಯನ್ನು ತುಂಬಾ ಒಳ್ಳೆಯ ರೀತಿಯಲ್ಲಿ ಮಾಡಲಾಗಿತ್ತು. ಉಪಹಾರ ಮುಗಿಸಿಕೊಂಡು, ಎಲ್ಲರು ಸಮಾವೇಶ ನಡೆಯುಗ ಸಭಾಂಗಣಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿದ್ದ ಬಸ್ಸಿನಲ್ಲಿ ಪ್ರಯಾಣ ಹೊರಟೆವು. ಹೊಸ ಮುಖ ಪರಿಚಯಗಳು, ವಿವಿಧ ಭಾಷೆ, ಸಂಸ್ಕೃತಿಯ ಜನರೆಲ್ಲಾ ಒಂದೇ ಛತ್ರದಲ್ಲಿ ಸೇರುವ ಈ ತರಹದ ಅನುಭವ ನಿಜವಾಗಿಯೂ ಅವಿಸ್ಮರಣೀಯ.

ಸಮಾವೇಶ ನಡೆಯುವ ಸಭಾಂಗಣ ನಿಜವಾಗಿಯೂ ತುಂಬಾ ದೊಡ್ಡದಾಗಿತ್ತು. ಆಡಿಟೋರಿಯಂನಲ್ಲಿ ಹೆಚ್ಚುಕಡಿಮೆ ಸಾವಿರ ಜನಕ್ಕೆ ಕೂಡುವ ವ್ಯವಸ್ಥೆ ಮಾಡಲಾಗಿತ್ತು, ಮುಂದೆ ವಿಶಾಲವಾದ ವೇದಿಕೆ, ಅದರ ಹಿಂದೆ ದೊಡ್ಡ ಎಲ್ಸಿಡಿ ಪರದೆ, ಹಿಂದೆ ಕುಳಿತವರಿಗು ನಿಚ್ಚಳವಾಗಿ ಕಾಣುವಂತಿತ್ತು. ಮೊದಲು ಹೆಸರು ನೊಂದಣೆಮಾಡಿಸಿ, ಒಂದು ಹೆಗಲಿಗೆ ಹಾಕುವ ಬ್ಯಾಗು ಪಡೆದುಕೊಂಡೆ. ಆ ಬ್ಯಾಗಿನಲ್ಲಿ, ಸಮಾವೇಶದಲ್ಲಿ ಭಾಷಣ ಮಾಡುವವರ ಹೆಸರು, ಸಮಯ ಮತ್ತು ಭಾಷಣಗಳ ಸಾರಾಂಶಗಳ ವಿವರಣಗಳನ್ನೊಳಗೊಂಡ ಪುಸ್ತಕ, ನಮ್ಮ ಹೆಸರು ಮುದ್ರಿತ ಬ್ಯಾಡ್ಜ, ಇವಲ್ಲ ಇದ್ದವು. ಎಲ್ಲವು ನನಗೆ ಹೊಸ ಅನುಭವ, ಯಾಕೆಂದರೆ ಇಂದು ಜೀವನದಲ್ಲಿ ಮೊದಲ ವೈಜ್ಞಾನಿಕಸಮಾವೇಶ. ದೊಡ್ಡ ಆಡಿಟೋರಿಯಂ ಹಾಲ್ ಪ್ರವೇಶ ಮಾಡಿ ಮುಂದಿನ ನಾಲ್ಕೈದು ಸಾಲುಗಳನ್ನು ಬಿಟ್ಟು ಮಧ್ಯದಲ್ಲಿ ಕುಳಿತುಕೊಂಡೆ. ಉದ್ಘಾಟನಾ ಸಮಾರಂಭ ಇನ್ನೇನು ಪ್ರಾರಂಭವಾಯಿತು. ನನ್ನ ಸುತ್ತಲೂ ಜಗತ್ತಿನ ಮೂಲೆ ಮೂಲೆಗಳಿಂದ ಬಂದ ಅನೇಕ ವಿಷಯ ಪರಿಣಿತರು, ಹೆಸರುವಾಸಿ ವಿಜ್ಞಾನಿಗಳು, ಪ್ರಖ್ಯಾತ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳು ಹಾಗು ಅಸಂಖ್ಯಾತ ವಿದ್ಯಾರ್ಥಿಗಳು ಕಿಕ್ಕಿರಿದು ಕುಳಿತಿದ್ದಾರೆ. ಎದುರುಗಡೆ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪ್ರೊ. ಕರ್ತ್ ವುಥ್ರಿಚ್ (ಸ್ಟಾಕ್ಹೋಮ್ ವಿಶ್ವವಿದ್ಯಾಲಯ) ಅವರು ಉದ್ಘಾಟನಾ ಭಾಷಣ ಮಾಡುತ್ತ ಎನ್ಎಂಆರ್ ಸ್ಪೆಕ್ಟ್ರೋಸ್ಕೋಪಿಯ ಬಗ್ಗೆ ತಮ್ಮ ಅಪಾರ ಅನುಭವ ಮತ್ತು ಜ್ಞಾನದ ಸುರಿಮಳೆಯನ್ನೇ ಸುರಿಯುತ್ತಿದ್ದಾರೆ. ಆಹಾ! ಎಂತಹ ವಿಹಂಗಮ ನೋಟ. ಈ ಎಲ್ಲ ವಿದ್ವಾನರ ಗುಂಪಿನ ಮಧ್ಯೆ, ಕರ್ನಾಟಕದ ರಾಜ್ಯದ, ಬನಹಟ್ಟಿ ಎಂಬ ಒಂದು ಸಣ್ಣ ಊರಿನಲ್ಲಿ ಬೆಳೆದು ಬಂದ ಒಬ್ಬ ಸಾಮಾನ್ಯ ವ್ಯಕ್ತಿಯಾದ ನಾನು, ಇಲ್ಲಿಯವರೆಗೆ, ಹಠಬಿಡದ ತ್ರಿವಿಕ್ರಮನಂತೆ ಸಾಗಿ ಬಂದು ಕುಳಿತಿದ್ದೇನೆ, ನಿಜವಾಗಿಯೂ ಆ ಸಮಯದಲ್ಲಿ ಸಂತೋಷ ಮತ್ತು ಹೆಮ್ಮೆ ಅನಿಸಿತು. ಈ ಹಂತಕ್ಕೆ ತಲುಪಲು ಸಹಾಯಕರಾದ ಪಾಂಡೆ ಅವರನ್ನು. ಬೆನ್ನುತಟ್ಟಿ ಕಳುಹಿಸಿದ ತಂದೆ ತಾಯಿ, ಪ್ರೊಫೆಸರ್ ನಿಶಿನೊ, ಎಲ್ಲರನ್ನು ನೆನೆಸಿಕೊಂಡು ಮನದಲ್ಲೇ ಧನ್ಯವಾದ ಸಲ್ಲಿಸಿದೆ. ಹೀಗೆ ಮುಂದಿನ ಎಂಟು ದಿನಗಳ ಕಾಲ ಅನೇಕ ಗಣ್ಯರು ಮತ್ತು ಸಂಶೋಧಕರಿಂದ ಉಪನ್ಯಾಸಗಳು ನಡೆದವು. ಎಲ್ಲವನ್ನು ಕೇಳಬೇಕೆಂದಿಲ್ಲ, ನಮ್ಮ ವಿಷಯಕ್ಕೆ ಸಂಬಂಧಪಟ್ಟ ಉಪನ್ಯಾಸಗಳಿಗೆ ಮಾತ್ರ ಹಾಜರಾಗಬಹುದಿತ್ತು. ಉಳಿದ ಸಮಯದಲ್ಲಿ, ಎಕ್ಸಿಬಿಷನ್ ಪ್ರದೇಶದಲ್ಲಿ ವಿವಿಧ ಕಂಪನಿಗಳ ಪ್ರಾಡಕ್ಟ್ಸ್ ಪ್ರದರ್ಶನಕ್ಕಿಟ್ಟಿದ್ದರು, ಅಲ್ಲಿ ಸುತ್ತಾಡಿ ಹೊಸ ಹೊಸ ಪ್ರಾಡಕ್ಟ್ಸ್ಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವಿತ್ತು. ನಾನು ಮತ್ತು ವೆಂಕಟೇಶ್ ಎಕ್ಸಿಬಿಷನ್ ಏರಿಯಾದಲ್ಲಿ ಸುತ್ತಾಡುತ್ತಿರುವಾಗ, ಭಾರತ ಮತ್ತು ವಿವಿಧ ದೇಶಗಳಿಂದ ಬಂದಿದ್ದ 5-6 ಜನ ಭಾರತೀಯರು ಭೆಟ್ಟಿಯಾದರು. ಆಮೇಲೆ ನಮ್ಮೆಲ್ಲರದು ಒಂದು ಗುಂಪೇ ಅಯೀತು. ಅರ್ಥಾತ್, ಭಾರತೀಯತೆ ನಮ್ಮನ್ನೆಲ್ಲರನ್ನು ಒಂದುಗೂಡಿಸಿತ್ತು. ಹೀಗೆ ಒಟ್ಟಿಗೆ ಸುತ್ತಾಡುವುದು, ಒಂದು ದಿನ ಎಲ್ಲ ಸೇರಿ ಪಿಜ್ಜಾ ತಿನ್ನಲು ಹೋದರೆ, ಇನ್ನೊಂದು ದಿನ ಆ ಊರಲ್ಲಿದ್ದ ಒಂದೇ ಒಂದು ಇಂಡಿಯನ್ ರೆಸ್ಟೋರೆಂಟ್ಗೆ ಹೋಗುವುದು. ಯಾಕೋ ನನಗೆ ನಮ್ಮ ದೇಶದಲ್ಲಿದೇನೋ ಅನ್ನಿಸುವಷ್ಟು ಅನ್ನ್ಯೋನ್ಯತೆ ಬೆಳೆಯಿತು. ಅಷ್ಟರಲ್ಲಿ ನನ್ನ ಸಹಪಾಠಿ ಸಮಾವೇಶ ಸ್ಥಳಕ್ಕೆ ಬಂದಿದ್ದು, ಅವನಿಗೆ ಇಂಗ್ಲಿಷ್ ಅಷ್ಟು ಬರುತ್ತಿರಲಿಲ್ಲ, ಅದಕ್ಕಾಗಿ ನನ್ನ ಬಿಟ್ಟು ಅಗಲುತ್ತಿರಲಿಲ್ಲ. ಐದನೇ ದಿನ ನಮ್ಮ ಪೋಸ್ಟರ್ ಸೆಶನ್ ಇತ್ತು, ಬೆಳಿಗ್ಗೆ ಬೇಗನೆ ಎದ್ದು ಹೋಗಿ ನನಗೆ ಮೀಸಲಿಟ್ಟ ನಂಬರಿನ ಬೋರ್ಡಿನ ಮೇಲೆ ಪೋಸ್ಟರ್ ಅಂಟಿಸಿದೆ. ಪಕ್ಕದಲ್ಲಿ ನನ್ನ ಸಹಪಾಠಿ ಹಿರಾಶಿಮಾ ಪೋಸ್ಟರ್ ಅಂಟಿಸಿದ್ದ. ಇಬ್ಬರು ಎಲ್ಲ ತಯಾರಿಯೊಂದಿಗೆ ನಮ್ಮ ಪೋಸ್ಟರ್ ಹತ್ತಿರ ನಿಂತೆವು. ಪೋಸ್ಟರ್ ಸ್ಕ್ರೀನಿಂಗ್ ಕಮಿಟಿಯ ಸದಸ್ಯರು ಒಂದೊಂದಾಗಿ ಪೋಸ್ಟರ್ಗಳನ್ನು ನೋಡುತ್ತಾ ನನ್ನ ಹತ್ತಿರ ಬಂದು, ಪೋಸ್ಟರ್ನಲ್ಲಿದ್ದ ಎಲ್ಲ ವಿಷಯವನ್ನು ಓದಿ, ಅನೇಕ ಪ್ರಶ್ನೆ ಕೇಳಿದರು. ಸಾಧ್ಯವಾದಷ್ಟು ಎಲ್ಲವನ್ನು ಉತ್ತರಿಸಿದೆ. ನಂತರ ಬಹಳ ಜನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕೂಡ ನನ್ನ ಪೋಸ್ಟರ್ ಹತ್ತಿರ ಬಂದು, ವಿಷಯವನ್ನು ಅರ್ಥೈಸಿಕೊಂಡು, ಪ್ರಶ್ನೆಗಳನ್ನು ಕೇಳಿದರು. ಇದು ಒಂಥರಾ ಒಳ್ಳೆಯ ಅನುಭವ, ಏಕೆಂದರೆ ಅನೇಕ ಗೊತ್ತಿಲ್ಲದ ಹೊಸ ವಿಷಯಗಳನ್ನು ಈ ರೀತಿಯ ಚರ್ಚೆಗಳ ಮೂಲಕ ತಿಳಿದುಕೊಳ್ಳಬಹುದು. ಆಮೇಲೆ ನಾನು ಬೇರೆಯವರ ಪೋಸ್ಟರ್ಗಳತ್ತ ಹೋಗಿ, ಪ್ರಶ್ನೆಗಳ ಸುರಿಮಳೆಗೈದು, ಅನೇಕ ವಿಷಯ ತಿಳಿದುಕೊಂಡೆ. ಅಂತೂ ಪೋಸ್ಟರ್ ಸೆಶನ್ ಮುಗಿದು, ಇಲ್ಲಿಗೆ ನಾವು ಬಂದ 80% ಕೆಲಸ ಮುಗಿಯಿತು. ನಮ್ಮ ಗೈಡ್ ಅವರ ಸಹಾಯಕ ಪ್ರೊಫೆಸರ್ ಆದ ಡಾ. ತಮಾಕಿ ಕಾತೊ ಅವರು ಕೂಡ ಬರಬೇಕಾಗಿತ್ತು, ಏನೋ ಕಾರಣಗಳಿಂದ ಬರಲಿಲ್ಲ. ಆದರೆ ನಾನು ಬರುವಾಗ ಏನಾದರು ಸಮಸ್ಯೆ ಬಂದರೆ ಉಪಯೋಗ ಆಗಲಿ ಎಂದು, ನನ್ನ ಕೈಯಲ್ಲಿ 200 ಯುರೋ ದುಡ್ಡು ಮತ್ತು ಅಂತಾರಾಷ್ಟ್ರೀಯ ಕರೆ ಮಾಡಬಲ್ಲ ಮೊಬೈಲ್ ಫೋನ್ ಕೊಟ್ಟಿದ್ದರು. ಅವರು ಕೊಟ್ಟ ದುಡ್ಡು ಏನು ಬಳಸಲಿಲ್ಲ, ಊರು ಮುಟ್ಟಿದಮೇಲೆ ಹಾಗೆ ವಾಪಾಸ್ ಕೊಟ್ಟುಬಿಟ್ಟೆ. ಆಗ ಸ್ಟೇಟಸ್ ಹಾಕಲು ಇನ್ನು ಸ್ಮಾರ್ಟ್ ಫೋನುಗಳು ಇರಲಿಲ್ಲ, ಕಾರಣ ಅವರು ಕೊಟ್ಟ ಫೋನಿನಿಂದ ಮನೆಗೆ ಫೋನ್ ಮಾಡಿ, ಚಾರ್ಜ್ ಜಾಸ್ತಿ ಆಗಬಹುದೆಂದು, ತಂದೆಯವರೊಂದಿಗೆ ಸ್ವಲ್ಪವೇ ಮಾತನಾಡಿ, ಎಲ್ಲವು ಸುಲಲಿತವಾಗಿ ನಡಿತಾಯಿದೆ, ಚಿಂತಿಸಬೇಡಿ, ನಾನು ಜಪಾನ್ ತಲುಪಿದ ಮೇಲೆ ಮತ್ತೆ ಫೋನ್ ಮಾಡುತ್ತೇನೆ ಎಂದು ಹೇಳಿ ಮಾತು ಮುಗಿಸಿದೆ.

ಸಮಾವೇಷದ ಒಂಬತ್ತನೇ ದಿನ ಯಾವುದೇ ಉಪನ್ಯಾಸಗಳು ಮತ್ತು ಪೋಸ್ಟರ್ ಸೆಷನ್ಗಳು ಇರಲಿಲ್ಲ. ಆ ಒಂದು ದಿನ ಗಡಂಸ್ಕ್ ನಗರ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳನ್ನು ನೋಡಲು ಹೋಗಬಹುದಿತ್ತು. ನಮ್ಮ ಇಂಡಿಯನ್ ಗ್ಯಾಂಗ್ ಎಲ್ಲ ಸೇರಿ ಗಡಂಸ್ಕ್ ನಗರದ ನ್ಯಾಷನಲ್ ಮರಿಟೆಂ ಮ್ಯೂಸಿಯಂ, ನೆಪ್ಚುನ್ ಫೌಂಟೆನ್ ಮುಂತಾದವುಗಳನ್ನು ನೋಡಿಕೊಂಡು ಉಲಿಕಾ ಡ್ಲುಗಾ (ಉದ್ದನೆಯ ಬೀದಿ) ಎಂಬ ಪ್ರಮುಖ ಬೀದಿಯಲ್ಲಿ ಸುತ್ತಾಡಿದೆವು. ಅದೇ ಬೀದಿಯಲ್ಲಿ ಕೆಲವರು ಶಾಪಿಂಗ್ ಮಾಡಿದರು ಮತ್ತು ಅಲ್ಲೇ ಇರುವ ಇಟಾಲಿಯನ್ ರೆಸ್ಟೋರೆಂಟಿನಲ್ಲಿ ಎಲ್ಲರು ಸೇರಿ ಪಾಸ್ತಾ ತಿಂದೆವು. ಮಧ್ಯಾಹ್ನ ನಾನು ಮತ್ತು ವೆಂಕಟೇಶ್, ಬಾಲ್ಟಿಕ್ ಸಮುದ್ರ ತೀರಕ್ಕೆ ಹೋಗಿ, ವೆಸ್ಟರಪ್ಲ್ಯಾಟ್ಟ್ ಸ್ಮಾರಕ ನೋಡಿಕೊಂಡು ಬಂದೆವು. ಇದು ಐರೊಪ್ಯ ದೇಶವಾದರೂ ಇಲ್ಲಿ ಬಹಳ ಜನಕ್ಕೆ ಇಂಗ್ಲಿಷ್ ಬರುವುದಿಲ್ಲ. ಇವರು ಮಾತನಾಡುವ ಭಾಷೆ ಪೋಲಿಷ್ ಮತ್ತು ಇಲ್ಲಿ ಯುರೋ ಕರೆನ್ಸಿಗಿಂತ ಇವರದೇ ಆದ ಜ್ಲೋಟಿ ಎಂಬ ಕರೆನ್ಸಿಯಲ್ಲೇ ವ್ಯಾಪಾರ ವಹಿವಾಟು ಮಾಡುವುದು. ಹತ್ತನೆಯ ದಿನ ಮಧ್ಯಾಹ್ನದ ವರೆಗೆ ಸಮಾವೇಶದ ಸಮಾರೋಪ ಸಮಾರಂಭ ಮುಗಿದು, ಸಮಾವೇಶದ ಅಧ್ಯಕ್ಷರೊಂದಿಗೆ, ಭಾಗವಹಿಸಿದ ಎಲ್ಲ ಸದಸ್ಯರನ್ನು ಸೇರಿಸಿ ಒಂದು ಗ್ರೂಪ್ ಫೋಟೋ ತೆಗೆಯಲಾಯಿತು. ಅಲ್ಲಿಗೆ ಸಮಾವೇಶ ಸಂಪೂರ್ಣ ಮುಕ್ತಾಯ ಕಂಡಿತು. ಸಂಜೆ ಔತಣಕೂಟ ಮತ್ತು ಸಂಗೀತ ಕಚೇರಿ ಎಲ್ಲ ಏರ್ಪಡಿಸಿದ್ದರು, ಆದರೆ ನಾನದಕ್ಕೆ ಹೋಗಲಿಲ್ಲ. ಅರ್ಧ ಜನ ಅವತ್ತೇ ಜಾಗ ಕಾಲಿ ಮಾಡಿದರೆ ಇನ್ನರ್ಧ ಜನ ಮಾರನೆ ದಿನ ಬೆಳಿಗ್ಗೆ ತಮ್ಮ ಊರು/ದೇಶಗಳಿಗೆ ಹೋದರು. ಹೋಗುವವರಿಗೆಲ್ಲ ವಿಧಾಯ ಹೇಳಿ ನನ್ನ ರೂಮು ಸೇರಿದೆ. ಹತ್ತನೆ ದಿನ ಮರಳಿ ಜಪಾನಿಗೆ ಪ್ರಯಾಣಬೆಳೆಸಲು ಆಸ್ಟ್ರಿಯನ್ ಏರ್ಲೈನ್ಸ್ ನಲ್ಲಿ ವಿಮಾನ ಇಲ್ಲದ ಕಾರಣ ನಾನು ಒಂದು ದಿನ ಹೆಚ್ಚಿಗೆ ಇರಬೇಕಾಗಿತ್ತು. ಈಗ ಹನ್ನೊಂದನೆ ದಿನ, ಇಡೀ ಹಾಸ್ಟೆಲ್ಲಿನಲ್ಲಿ ಸೆಕ್ಯೂರಿಟಿ ಮತ್ತು ಕಚೇರಿಯ ವ್ಯಕ್ತಿಯನ್ನು ಬಿಟ್ಟರೆ ನಾನೊಬ್ಬನೆ. ಬೆಳಿಗ್ಗೆ ಉಪಹಾರ ಮಾಡಿ, ಟ್ರಾಮ್ ನಲ್ಲಿ ಕೇಂದ್ರ ರೈಲು ನಿಲ್ದಾಣಕ್ಕೆ ವಾರ್ಸಾವಿಗೆ ಟಿಕೆಟ್ ಖರೀದಿಸಲು ಹೋದೆ. ಅಲ್ಲಿ ವಿಚಾರಿಸಿದಾಗ, ಮತ್ತೆ ರಾತ್ರಿ 11-30 ಕ್ಕೆ ರೈಲು ಇತ್ತು, ಬಿಟ್ಟರೆ ಮಧ್ಯಾಹ್ನ 1-00 ಘಂಟೆಗೆ ಒಂದು ರೈಲು ಇದ್ದು, ಅದು ರಾತ್ರಿ 8-30 ಕ್ಕೆ ವಾರ್ಸಾವ ನಗರ ತಲುಪುತಿತ್ತು. ವಾಪಾಸ್ ಹೋಗುವಾಗ ಒಬ್ಬನೇ ಇದ್ದೀನಿ, ಅದಕ್ಕೆ ನನಗೆ ಈ ರಾತ್ರಿಯ ರೈಲು ಪ್ರಯಾಣ ಯಾಕೋ ಬೇಡ ಅನಿಸಿ, ಮಧ್ಯಾಹ್ನದ ರೈಲು ಟಿಕೆಟ್ ತೊಗೊಂಡೆ, ಏಕೆಂದರೆ ವಿಮಾನ ನಿಲ್ದಾಣದಲ್ಲೆ ರಾತ್ರಿ ಕಳೆದು ಬೆಳಗಿನ ವಿಮಾನವನ್ನು ಸರಾಗವಾಗಿ ಹತ್ತಬಹುದಿತ್ತು. ಟಿಕೆಟ್ ತೆಗೆದುಕೊಂಡು, ಸೀದಾ ಇಂಡಿಯನ್ ರೆಸ್ಟುರೆಂಟಿಗೆ ಹೋಗಿ ಊಟ ಪಾರ್ಸೆಲ್ ಕಟ್ಟಿಸಿಕೊಂಡು, ಅವರಿಗೆಲ್ಲ ಸಾಯೋನಾರಾ ಹೇಳಿ ರೂಮಿಗೆ ಹೋದೆ. ಬೇಗ ಬೇಗ ಬ್ಯಾಗು ಸಿದ್ಧಪಡಿಸಿಕೊಂಡು, ಪಾರ್ಸೆಲ್ ತಂದಿದ್ದ ಊಟಮಾಡಿ, ಹಾಸ್ಟೆಲ್ಲಿನವರಿಗೆಲ್ಲ ಧನ್ಯವಾದ ತಿಳಿಸಿ ರೈಲು ನಿಲ್ದಾಣದತ್ತ ಹೊರಟೆ. ಮಧ್ಯಾಹ್ನ ಸರಿಯಾಗಿ ವಾರ್ಸಾವಿಗೆ ಹೋಗುವ ರೈಲು ಬಂತು. ಇದೇನು ಬಂದ ಕೆಲಸ ಮುಗಿದೇ ಹೋಯಿತಲ್ಲ. ಇಲ್ಲಿಗೆ ಬರುವ ವರೆಗೆ ಏನೆಲ್ಲಾ ಅಡೆ ತಡೆಗಳು, ಎಷ್ಟೊಂದು ಸಮಸ್ಯೆಗಳು. ಈಗ ಎಲ್ಲವು ಮುಗಿದು ಹೋದ ಒಂದು ಕನಸಿನಂತೆ ಭಾಸವಾಗುತ್ತಿದೆ. ಹತ್ತು ದಿನಗಳ ಸ್ಮರಣೀಯ ನೆನಪುಗಳನ್ನು ಕೊಟ್ಟ ಗಡಂಸ್ಕ್ ನಗರಕ್ಕೆ ಬೈ  ಬೈ ಹೇಳುವಾಗ ಮನಸು ಭಾರವಾಯಿತು. ಆ ಸುಂದರ ನೆನಪುಗಳನ್ನ ಮೆಲುಕು ಹಾಕುತ್ತ ವಾರ್ಸಾವ ನಗರದತ್ತ ಪ್ರಯಾಣ ಬೆಳೆಸಿದೆ.

ವಾರ್ಸಾವ ರೈಲು ನಿಲ್ದಾಣ ತಲುಪಿ, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ ಹತ್ತಿ ನಿಲ್ದಾಣ ತಲುಪುವಷ್ಟರಲ್ಲಿ ರಾತ್ರಿ ಒಂಭತ್ತು ಘಂಟೆ ಆಗಿತ್ತು. ವಿಮಾನ ನಿಲ್ದಾಣದಲ್ಲಿ ಟಿಕೆಟ್ ತೋರಿಸಿ ಒಳಗೆ ಪ್ರವೇಶ ಮಾಡಿ ಸ್ವಾಗತ ಕೌಂಟರಿನಲ್ಲಿ ನನ್ನ ವಿಮಾನ ಬೆಳಿಗ್ಗೆ 7-00 ಘಂಟೆಗೆ ಇದ್ದು, ರಾತ್ರಿಯಲ್ಲ ಏರ್ಪೋರ್ಟ್ನಲ್ಲಿ ತಂಗಬಹುದಾ ಎಂದು ಕೇಳಿದೆ,  ಮೇಲಿನ ಮಹಡಿಯಲ್ಲಿ ಲಾಬಿ ಇದೆ ಅಲ್ಲಿ ತಂಗಬಹುದು ಎಂದರು. ಕೈಯಲ್ಲಿದ್ದ ಬ್ಯಾಗನ್ನೇ ತಲೆದಿಂಬುಮಾಡಿಕೊಂಡು ಒಂದು ಮೂಲೆಯಲ್ಲಿ ನಿದ್ರೆಗೆ ಜಾರಿದೆ. ಇನ್ನು ಬಹಳ ಜನ ರಾತ್ರಿಯೆಲ್ಲ ಇಲ್ಲೇ ಮಲಗಿದ್ದರು, ಬಹುಶ ಅವರದು ನನ್ನಂತಹ ಪರಿಸ್ತಿತಿ  ಇರಬಹುದು. ಬೆಳಿಗ್ಗೆ ವಾರ್ಸಾವ ನಿಂದ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾಗೆ ಬಂದು, ಅಲ್ಲಿ ಮೂರುಘಂಟೆ ಅಂತರದ ನಂತರ ಟೋಕ್ಯೋಗೆ ಹೋಗುವ ವಿಮಾನ ಸಿದ್ಧವಾಗಿತ್ತು. ಸಹ ಪ್ರಯಾಣಿಕರಲ್ಲಿ ಹೆಚ್ಚಿನವರೆಲ್ಲ ಜಪಾನಿಯರೇ ಆಗಿದ್ದರು. ಇಲ್ಲಿಂದ ವಿಮಾನ ಹತ್ತಿ ಹಾರುವಾಗ ಒಂದು ದೊಡ್ಡ ಯುದ್ಧ ಮುಗುಸಿ ಮನೆಗೆ ಹೋಗುವಷ್ಟು ನೆಮ್ಮದಿ, ನಿರಾಳವಾಗಿ ಮಲಗಿಬಿಟ್ಟೆ, ಹದಿನೈದು ಘಂಟೆ ಹೇಗೆ ಕಳೆಯಿತೋ ಗೊತ್ತೇ ಆಗಲಿಲ್ಲ.  

ಅಂತೂ ಇಂತೂ ಈ ಪೋಲೆಂಡ್ ದೇಶದ ಪ್ರಯಾಣ ಕೊನೆಗೊಂಡು, ಬೆಳಿಗ್ಗೆ ಟೋಕಿಯೋ ಏರ್ಪೋರ್ಟ್ ತಲುಪಿದೆ. ಪ್ರೆಶ್ ಆಗಿ ಏನೋ ಸ್ವಲ್ಪ ಉದರ ಸೇವೆ ಮಾಡಿಕೊಂಡು ಕೂತೆ. ಮನೆಗೆ ಫೋನ್ ಮಾಡಬೇಕೆನಿಸಿತು, ಫೋನ್ ಹಚ್ಚಿ ಇನ್ನೇನು ಹಲೋ ಎನ್ನುವಷ್ಟರಲ್ಲಿ ಆಕಡೆಯಿಂದ ಅಮ್ಮನ ಧ್ವನಿ, ಜಪಾನಿಗೆ ಬಂದು ಮುಟ್ಟಿದೆಯೇನಪ್ಪಾ, ಪ್ರಯಾಣ ಸುಖಕರವಾಯಿತೇ, ನಿನ್ನ ಕಾರ್ಯಕ್ರಮ ಎಲ್ಲ ಹೆಂಗಾಯಿತು.....ಪ್ರಶ್ನೆಗಳ ಸುರಿಮಳೆ. ಎಷ್ಟೋತ್ತಿನಿಂದ ನನ್ನ ಫೋನಿಗಾಗಿ ಕಾಯ್ದು ಕೂತಿದ್ದಳೋ ಏನೋ, ಫೋನ್ ರಿಂಗ್ ಆದಕೂಡಲೇ ಓಡೋಡಿ ಬಂದಿದ್ದಾಳೆ.....ಅವಳ ಧ್ವನಿ ಕಿವಿಗೆ ಬೀಳುತ್ತಿದ್ದಂತೆ ಹೃದಯ ಭಾರವಾಯಿತು. ಹೌದಮ್ಮ, ಬಂದೀದಿನಿ, ಎಲ್ಲ ಚೆನ್ನಾಗಿ ಆಯಿತು ಅಂದೆ. ಮಾತು ಮುಂದುವರಿಸಿ, ಒಳ್ಳೆದಾಯಿತು, ಇವತ್ತು ಕಾಡಸಿದ್ದೇಶ್ವರ ಜಾತ್ರೆ, ನಸುಕಿನಲ್ಲಿ ದೇವಸ್ಥಾನಕ್ಕೆ ಹೋಗಿ ನೀನು ಯಶಸ್ವಿಯಾಗಿ, ಸುರಕ್ಷಿತವಾಗಿ ಬರಲಿ ಎಂದು ಹರಕೆ ಹೊತ್ತಿದ್ದೆ, ದೇವರು ನನ್ನ ಮಾತು ನಡೆಸಿಕೊಟ್ಟ ಅಂದ್ಲು.....ಯಾವತ್ತೂ ಒಳಿತನ್ನೇ ಬಯಸುವ ಮುಗ್ದ ತಾಯಿಹೃದಯ, ಮಮತೆ ತುಂಬಿದ ಆ ಮಾತುಗಳನ್ನು ಕೇಳಿತ್ತ ನನಗರಿವಿಲ್ಲದೆ ಕಣ್ಣಾಲಿಗಳು ತುಂಬಿಕೊಂಡಿದ್ದವು. ನಂತರ ತಂದೆಯ ಜೊತೆಗೆ ಕೂಡ ಮಾತಾಡಿ ವಿಷಯ ತಿಳಿಸಿದೆ. ನಮ್ಮ ತಂದೆಗೆ ಎಲ್ಲವು ಸರಿಯಾಗಿ ಸಾಗುತ್ತದೆ ಎಂಬ ಧೈರ್ಯ ಇತ್ತು. ಎಲ್ಲರು ಖುಷಿ ಪಟ್ಟರು. ಅಷ್ಟು ಮಾತಾಡಿ ಇನ್ನು ನಾನಿರುವ ಊರಿಗೆ ಹೋಗಬೇಕೆಂದು ಹೇಳಿ ಫೋನ್ ಇಟ್ಟೆ.

ಈ ಒಟ್ಟು ಪ್ರಯಾಣ ಮತ್ತು ಅದಕ್ಕೆ ಹೊಂದಿಕೊಂಡ ಅನುಭವಗಳು ನನಗೆ ಕಲಿಸಿಕೊಟ್ಟ ಅತಿದೊಡ್ಡ ಪಾಠವೆನೆಂದರೆ, ಜೀವನದಲ್ಲಿ ಅನೇಕ ಅವಕಾಶಗಳು ಬರುತ್ತವೆ. ಆದರೆ ಜೊತೆಗೆ ಬೆಟ್ಟದಷ್ಟು ಸಮಸ್ಯೆಗಳನ್ನೂ ಹೊತ್ತು ತರುತ್ತವೆ. ಅವಕಾಶ ಎಷ್ಟು ದೊಡ್ಡದಿರುತ್ತೊ, ಅದರ ಹಿಂದೆ ಸಮಸ್ಯೆಗಳು ಅಷ್ಟೇ ದೊಡ್ಡವಾಗಿರುತ್ತವೆ. ದೇವರು ಇದ್ದಾನೊ ಇಲ್ಲವೋ ಗೊತ್ತಿಲ್ಲ, ಆದರೆ ಆ ಅಗೋಚರ ಶಕ್ತಿಯಮೇಲಿನ ನಂಬಿಕೆ ಮತ್ತು ತಂದೆ ತಾಯಿ, ಗುರುಹಿರಿಯರ ಆಶೀರ್ವಾದಗಳನ್ನು ಬೆನ್ನಿಗೆ ಕಟ್ಟಿಕೊಂಡು, ಎಂತಹ ಅಡೆ-ತಡೆಗಳು ಬಂದರು ಅಳುಕದೆ ಮುನ್ನುಗಿದಾಗ, ಆ ಅಗೋಚರ ಶಕ್ತಿಯು ಪ್ರೊ. ನಿಶಿನೊ ರೂಪದಲ್ಲೋ, ಡಾ. ಪಾಂಡೆ ರೂಪದಲ್ಲೋ, ಆ ಟ್ರಾವೆಲ್ ಏಜೆಂಟ್ ರೂಪದಲ್ಲೋ ಅಥವಾ ರೈಲಿನಲ್ಲಿ ಸಹಪ್ರಯಾಣಿಕರಾಗಿ ಬಂದ ಚೈನೀಸ್ ವ್ಯಕ್ತಿಗಳ ರೂಪದಲ್ಲೋ ಬಂದು ನಮ್ಮ ಸಹಾಯಕ್ಕೆ ನಿಲ್ಲುತ್ತದೆ. 

ಒಂದಂತು ಸತ್ಯ, ಎಲ್ಲಿಯವರೆಗೆ ನಾವು ಮುನ್ನುಗುವುದಿಲ್ಲವೊ, ಅಲ್ಲಿಯತನಕ ಏನು ಮುಂದುವರೆಯುವುದಿಲ್ಲ. ಶಾಸ್ತ್ರಗಳು ಹೇಳುವ ಹಾಗೆ "ಧೈರ್ಯಂ ಸರ್ವತ್ರ ಸಾಧನಂ"...ಅಲ್ಲವೇ!