ಭಾನುವಾರ, ಸೆಪ್ಟೆಂಬರ್ 23, 2018

24ನೇ ಮೇನ್ ಬಸ್ ನಿಲ್ದಾಣದಲ್ಲಿ ಒಂದು ಮುಂಜಾನೆ.....

ಅಲರಾಮು ಕರ್ಕಶವಾಗಿ ಹೊಡ್ಕೋಳಕ್ಕ್ ಶುರುಮಾಡಿತು. ಎದ್ದು ನೋಡ್ತಿತಿ ಬೆಳಗಿನ ಜಾವ ಸರಿಯಾಗಿ 5-30 ಆಗಿದೆ. ಏಳೋಕ ಮಾನಸಾಗ್ತಿಲ್ಲ, ಆದ್ರು ಕರ್ಮ......ಏಳಲೇಬೇಕು. ಪಕ್ಕದಲ್ಲಿ ನನ್ನವಳು ಮತ್ತು ಮಗಳು ಇಬ್ರು ಇನ್ನು ನೀರಾಳವಾಗಿ ಮಲಗಿದ್ದಾರೆ....ಪಾಪ ಆರಾಮಾಗಿ ಮಲಗಿದ್ದಾವೆ ಯಾಕೆ ಎಬ್ಬಸೋದು, ಹೋಗ್ಲಿಬಿಡು ಅನ್ನಿಸ್ತು. ಈ ಅಲರಾಮ ಶಬ್ದ ಇದೆ ನೋಡಿ......ಇದೆಂಗಂದ್ರೆ ನೀವೇಲ್ಲಾದ್ರೂ ಟ್ರಿಪ್ಗೋ, ಫ್ಯಾಮಿಲಿ ಔಟಿಂಗೋ ಹೋಗೋದಿದ್ರೆ ಆಗ ಕರ್ಕಶ ಅನ್ಸಲ್ಲ. ಹೋಗ್ಲಿಬಿಡಿ, ಈಗ ನನ್ನ ವಿಷಯಕೆ ಬರೋಣ....ಈ ಬೃಹತ್ತ್ ಬೆಂದಕಾಳೂರಿನಲ್ಲಿ ನನ್ನ ಬೆಳೆ ಬೇಯಿಸ್ಕೊಳ್ಳೊದಕ್ಕ್ಕೆ ಬಂದಿರುವ, ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುವ ಕಾರ್ಪೊರೇಟ್ ನೌಕರ. ಇದು ನನಗೆ ಒಂತರ ಬಯಸದೆ ಬಂದ ಭಾಗ್ಯ, ಏಕೆಂದ್ರೆ ನಾನು ಇದೆ ಕೆಲ್ಸನೆ ಮಾಡ್ಬೇಕೆಂದು ಗುರಿಇಟ್ಟ್ಕೊಂಡು ಬಂದೋನಲ್ಲ. ಏನೋ...ಪರಿಸ್ಥಿತಿ ಎಲ್ಲೆಲ್ಲೋ ಸುತ್ತಾಡಿಸಿಕೊಂಡಬಂದು ಕೊನೆಗೆ ಇಲ್ಲ ತಗಲಾಕಿಸಿತು....😂.... ಈ ಜೀವನ ಅಂದ್ರೆನೇ ಹಂಗೆರೀ, ನಾವೇನೋ ಪ್ಲಾನ್ ಮಾಡಿರ್ತೀವಿ.....ಆದ್ರೆ ಅದು ನಮ್ಮ್ ಪ್ಲಾನ್ಗಳನ್ನೆಲ್ಲ ಹೊಲಸೆಲ್ಆಗಿ ಗಿರಗಿಟ್ಟೇಥರ ತಿರ್ಗಿಸಿ ಒಂದು ದಿನ ನಮ್ಮನೆಲ್ಲೋ ಒಗದಬಿಡತ್ತೆ. ಬದುಕೋ ಹಠಇದ್ರೆ ತೆವಲಕೊಂಡು ಮೇಲೇಳಲೇಬೇಕು. ನಾನು ಎಸೆಸೆಲ್ಸಿ ಆದ್ಮೇಲೆ ವಿಜ್ನ್ಯಾನ ಆರಿಸ್ಕೊಂಡಿದ್ದು ಡಾಕ್ಟರ್ ಆಗಕ್ಕೆ, ಆದ್ರೆ ದಾರಿತಪ್ಪಿ ಬೇಸಿಕ್ ಸೈನ್ಸ್ ಸೇರ್ಕೊಂಡು, ಸಂಶೋಧನೆಯ ಹಿಂದೆ ಬಿದ್ದು 2-3 ದೇಶಗಳನ್ನ ತಿರುಗಾಡಿ, ಎಂಎಸ್ಸಿ, ಪಿಎಚ್ಡಿ ಅಂತ ಏನೇನೋ ಮಾಡ್ಕಂಡು,   ಈಗ ಬೇರೆ ಡಾಕ್ಟರ್ ಆಗಿ, ಯಾವುದೊ ದೇಶದಲ್ಲಿ ಕುತ್ಕೊಂಡು ಇನ್ನ್ಯಾವನೋ ಕೊಡೋಕೆಲ್ಸನ ಮುಚ್ಚ್ಕೊಂಡ್ ಮಾಡ್ಕೊಂಡು ಹೋಗ್ತಾಯಿದ್ದೀನಿ.................
ಒಹ್! ಮರ್ತೆಹೋಯಿತು.....ಕಥೆ ಮುಂದುವರಿಸಬೇಕಲ್ಲ. ಬೆಳಗಿನ ಕರ್ಮಚಾರಗಳನ್ನ ಮುಗಿಸ್ಕೊಂಡು ಬರೋವಷ್ಟ್ರಲ್ಲಿ, ಕಿಚನ್ನಲ್ಲಿ ನನ್ನವಳು ಆಗ್ಲೇ ಎದ್ದು ಉಪಹಾರ ರೆಡಿಮಾಡ್ತಿದ್ಲು. ಈ ವೈವಾಹಿಕ ಜೀವನ ಅಂದ್ರೆ ಹಂಗೆ ನೋಡಿ, ಇಲ್ಲಿ ಪತಿ-ಪತ್ನಿ ಇಬ್ರು ಸಮನಾಗಿ ಹೆಣಗಾಡಲೇಬೇಕು......ಆಗ್ಲೇ ಬದುಕೆಂಬ ಜಟಕಾಬಂಡಿ ಚನ್ನಾಗೋಡೋದು. ಆಮೇಲೆ, ನಿಮ್ಮ ವೈವಾಹಿಕ ಜೀವನದಲ್ಲಿ ನೆಮ್ಮದಿ, ಸಂತೋಷ ಇರಬೇಕಂದ್ರೆ ಒಳ್ಳೆ ಹೆಂಡ್ತಿ ಸಿಗ್ಬೇಕಂತೆ......ಇಲ್ಲಾಂದ್ರೆ ಸಾಕ್ರೆಟಿಸ್ ಹೇಳೋಥರ ಗಂಡ ತತ್ವಜ್ನ್ಯಾನಿ ಆಗ್ಬಿಡ್ತಾನಂತೆ. ಅದೃಷ್ಟವಶಾತ್.....ನಂಗೆ ಚನ್ನಾಗಿ ಹೊಂದುಕೊಂಡು ಬದುಕೋ ಒಳ್ಳೆ ಹೆಂಡ್ತಿ ಸಿಕ್ಕಬಿಟ್ಟಳು. ಅಂಬಿಕಾತನಯದತ್ತರು ಹೇಳಿದ ಹಾಗೆ "ನಾನು ಬಡವಿ...ಆತ ಬಡವ.....ಒಲವೇ ನಮ್ಮ ಬದುಕು" ಅನ್ನೋಹಾಗೆ ಯಾವುದೇ ಅತೀಆಸೆ ಇಲ್ಲದೆ, ಇರೋ ಅವಕಾಶನ ಚನ್ನಾಗಿ ಉಪಯೋಗಿಸಿಕೊಂಡು ಜೀವನ ಮಾಡ್ಕೊಂಡು ಹೋಗ್ತಿದ್ದೀವಿ. ಹಾಗಂತ ಜಗಳನೇ ಆಡೋದಿಲ್ಲ ಅಂತೇನಿಲ್ಲ.....ಯಾವಾಗ್ಲೋ ಒಮ್ಮೆ ಸಣ್ಣಪುಟ್ಟ ವಿಷಯಕ್ಕೆ ಸ್ವಲ್ಪ ಕಿರಿಕ್ ಆದರು, ಬೇಗನೆ ಪರಿಹಾರ ಕಂಡ್ಕೊಂಡ್ ಬಿಡ್ತಿವಿ. ಉಪಹಾರ/ಚಹಾ ಆದ್ಮೇಲೆ ರೆಡಿಯಾಗಿ ಇನ್ನೇನ್ ಕೆಲ್ಸಕ್ಕೆ ಹೋಗೋಣ ಅನ್ನೋದ್ರಲ್ಲಿ ನನ್ನ ಮಗಳು ಎದ್ದ್ಬಿಟ್ಟಳು. ಅವಳಿಗೆ ಎದ್ದತಕ್ಷಣ ಅಪ್ಪನ ಮುಖ ನೋಡ್ಬೇಕು.....ಅಪ್ಪನ ಮಗಳು ನೋಡಿ. ಇವಳು ಹೆಂಗಂದ್ರೆ, ಚನ್ನಾಗಿ ತಾಯೀಹೊಟ್ಟೇಲಿ ಬೆಳೆದು ಬಾರಮ್ಮ ಅಂದ್ರೆ, ಅವಳಿಗದೇನು ಅರ್ಜೆಂಟ್ ಇತ್ತೋ ಗೊತ್ತಿಲ್ಲ, ಏಳುವರೆ ತಿಂಗಳಿಗೇನೇ ಭೂಮಿಗೆ ಬಂದಬಿಟ್ಲು. ಹುಟ್ಟಿದಾಗ ಕೇವಲ ಒಂದೂವರೆ ಕಿಲೋ ತೂಕದ ಕೂಸು, NICU ನಲ್ಲಿ ಎರಡೂವಾರ ಎಂಜಾಯಮಾಡಿ, ನಮ್ಮ ಕೈಸೇರಿದ್ಲು. ಅವಳನ್ನ ಒಂದೂವರೆ ಕೆಜಿ ಇಂದ ಹನ್ನೆರಡು ಕೆಜಿ ಮಾಡಕ್ಕೆ ನಾವಿಬ್ರು ಗಂಡ-ಹೆಂಡ್ತಿ ಪಟ್ಟ ಕಷ್ಟ ಆ ದೇವ್ರಿಗೆ ಗೊತ್ತು. ಇರಲಿ ಇದು ಒಂದು ಥರ ಹೊಸ ಅನುಭವ, ಏನ್ಮಾಡಕಾಗತ್ತೆ.......ಅನುಭವಿಸಲೇಬೇಕು. ಈಗ ಅವಳಿಗೆ ನಾಲ್ಕು ವರ್ಷ, ಮನೆ ಹತ್ತಿರದಲ್ಲೇ ಒಂದು ಸ್ಕೂಲ್ಗೆ ಹಾಕಿದ್ದೀವಿ. ಮಕ್ಕಳು ಆಡುತ್ತ, ನಲಿಯುತ್ತ ಬೆಳೆಯೋದು ನೋಡೋಕೆ ಚಂದ.......  ಆ ಫೆಸ್ನಲ್ಲಿ ಅವರು ಕೊಡೊ ಖುಷಿ ಇದೆ ನೋಡಿ ಅದನ್ನ ಮಾತಿನಲ್ಲಿ ವರ್ಣಿಸೋಕಾಗಲ್ಲ. ಅವಳು ಏನಾದ್ರಿ ಕಲಿಲಿ, ಏನಾದ್ರು ಮಾಡ್ಲಿ.......ಯಾವುದೇ ಒತ್ತಡ ಹೆರಲ್ಲ, ಅವಳ ಜೀವನ, ಅವಳ ಇಚ್ಛೆಯಂತೆ ಆಗ್ಲಿ ಅಂತ ನಿರ್ಧಾರ ಮಾಡಿದ್ದೀವಿ. ಅಯೀತು ಕಥೆಗೆ ಬರೋಣ......ರೆಡಿ ಆಗಿ ಅಮ್ಮ ಮಗಳಿಗೆ ಟಾಟಾ ಬೈ ಬೈ ಹೇಳಿ, ಈ ಲೇಖನದ ಶೀರ್ಷಿಕೆಯಲ್ಲಿ ಹೇಳಿದ 24ನೇ ಮೇನ್ ಬಸ್ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದೆ...... 

ಈ ಜಯನಗರ, ಜೆಪಿ ನಗರದಲ್ಲಿರೋರಿಗೆ 24ನೇ ಮೇನ್ ಬಸ್ ನಿಲ್ದಾಣ ಎಲ್ಲಿದೆ ಅಂತ ಗೊತ್ತಿರಬಹುದು. ಜಯನಗರ 5ನೇ ಬ್ಲಾಕ್ನಲ್ಲಿರೋ ರಾಯರ ಮಠದಿಂದ, ಜೆಪಿ ನಗರದ 7ನೇ ಹಂತದಲ್ಲಿರೋ ಬ್ರಿಗೇಡ್ ಮಿಲ್ಲೇನಿಯಂ ಮಧ್ಯಇರುವ 24ನೇ ಮೇನ್ ರಸ್ತೆಯಲ್ಲಿ, RV ದಂತಮಹಾವಿದ್ಯಾಲಯದ ಸಿಗ್ನಲ್ ನಂತರ ಬರುವ ಬಸ್ ನಿಲ್ದಾಣಕ್ಕೆ 24ನೇ ಮೇನ್ ಬಸ್ ನಿಲ್ದಾಣ ಅನ್ನೋದು. ನಮ್ಮ ಕಂಪನಿಯ ಕ್ಯಾಬು, ನನ್ನನ ಆಫಿಸಿಗೆ ಕರ್ಕೊಂಡ್ ಹೋಗೋಕೆ ಎತ್ತಾಕೊಂಡ್ ಹೋಗೋದು ಇದೆ ಪಾಯಿಂಟ್ನಿಂದ. ನನ್ನ ಬೆಳಗಿನ ಕೆಲವು ಜೀವನದ ಅನುಭವಗಳು ಶುರುವಾಗೋದೆ ಈ ಪಾಯಿಂಟ್ನಿಂದ.........
ಈ ಬೆಂಗಳೂರಿನಲ್ಲಿ ಹಿಂತಾ ಪಿಕಪ್-ಪಾಯಿಂಟ್ಗಳು ಬೇಜಾನ್ ಇದಾವೆ.....ಮತ್ತೆ ಅಲ್ಲಿ ಸಾಮಾನ್ಯವಾಗಿ, ಕತ್ತಲ್ಲಿ ಒಂದು ID-ಕಾರ್ಡು ನೇತಾಕೊಂಡು, ಬೆನ್ನಿಗೆ ಒಂದು backpack ತಗಲಾಕೊಂಡು, ತಂತಮ್ಮ ಕ್ಯಾಬಿಗೆ ಕಾಯಿತಿರೋ ನಮ್ಮಂತ ತಿಂಗಳಕೂಲಿಗಳನ್ನ ನೋಡಬಹುದು. ಇಲ್ಲಿ ನಾವೆಲ್ಲ ಸೇರೋದು ಐದೋ-ಹತ್ತೋ ನಿಮಿಷ ಅಷ್ಟೇ, ಆದ್ರೆ ಪ್ರತಿದಿನ ಅದೇ ಜಾಗದಲ್ಲಿ ಸೇರೋದ್ರಿಂದ, ಅದೇನೋ ಒಂದು ತರಹದ ಬಾಂಧವ್ಯ ಬೆಳೆದುಬಿಟ್ಟಿರುತ್ತದೆ. ಹಿಂಗೇ ನಂಗೆ ಪರಿಚಯ ಆದವರು  3-4 ಜನ ಇರಬಹುದು. ಒಬ್ರು ನನಷ್ಟೇ ವಯಸ್ಸಿರಬಹುದು, ಟೈಮಿಗೆ ಸರಿಯಾಗಿ ಬರ್ತಾರೆ, ಆದರು ಅವರ ಪ್ರತಿದಿನದ  ಮಾತು ಶುರು ಆಗೋದೆ ನನ್ನ ಕೇಳೋದು ಒಂದೇ ಪ್ರಶ್ನೆಇಂದ, "ಸರ್, ನನ್ನ ಕ್ಯಾಬ್ ಹೊಯೀತ" ಅಂತ....ಇಲ್ಲ ಅನ್ಸತ್ತೆ ಅಂದ್ರೆ "ಓಕೆ, ಥ್ಯಾಂಕ್ಸ್" ಅಷ್ಟೇ, ಮುಗಿತು. ಆಮೇಲೆ, ಒಬ್ರು ವಯಸ್ಸಲ್ಲಿ ಹಿರಿಯರು, ವಯಸ್ಸು 60 ದಾಟಿರಬಹುದು, ಪಾಪ ಏನ್ ತೊಂದ್ರೇನೋ ಏನೋ ನಿವೃತ್ತಿ ವಯಸ್ಸಲ್ಲಿ ಕೂಡ ಯಾವುದೊ ಕಂಪನಿಲಿ ಕೆಲ್ಸಮಾಡೋಕೆ ಹೋಗೋದು. ಅತಿಯಾದ ಸ್ವಾಭಿಮಾನ ಇರಬಹುದು, ಅಥವಾ ಮಕ್ಕಳು ಕೈಬಿಟ್ಟು ಹೋಗಿರಬಹುದು....ಕಾರಣ ಬೇರೆ ಇನ್ನೇನೋ ಇರಬಹುದು. ಆದರೆ ಒಳ್ಳೆ ಮನುಷ್ಯ, ಚೆನ್ನಾಗಿ ಮಾತಾಡ್ತಾರೆ. ಅಲ್ಲಿ ಸೇರಿರೋ ಎಲ್ಲರನು ಮಾತಾಡ್ಸಿ, ಹಾಯ್, ಹಲೋ ಹೇಳೋದು. ನಾನೂ ಕೂಡ ಅವರ ಜೊತೆ ರಾಜಕೀಯ, ವಿವಿಧ ಸುದ್ದಿ ಹೀಗೆ ಮಾತಾಡಿದ್ದುಂಟು. ಇದೆ ಥರ ಇನ್ನಿಬ್ರು ಬರ್ತಾರೆ, ಅವರುದು ಕೂಡ ಒಂದು ಮುಗುಳ್ನಗೆ....ಎರಡು ಮಾತು ಹೀಗೆ ನಮ್ಮೆಲ್ಲರ ದಿನ ಶುರು ಆಗತ್ತೆ. ಈ ಗುಂಪಿನಲ್ಲಿ ಒಬ್ಬ ವಯಸ್ಸಿನ ಹುಡ್ಗಿನು ಬರ್ತಾಳೆ....ಸ್ವಲ್ಪ ದೂರ ನಿಂತಿರ್ತಾಳೆ, ನೋಡೋಕ ಚಂದ ಇದಾಳೆ, ಕೆಲ್ಸಕ್ಕೆ ಸೇರಿ ಬಹಳ ದಿನ ಆಗಿರಲಿಕ್ಕಿಲ್ಲ. ಬೆಳಗಿನ ತಂಪಲ್ಲಿ ಒಂದು ಇಂಪಾದ ಮುಗುಳುನಗೆಯೊಂದಿಗೆ ಒಂದು ಓರೆನೋಟ ಬೀರ್ತಾಳೆ.....ಅಷ್ಟು ಸಾಕು ಅವತ್ತಿಗೆ ಎನರ್ಜಿ ಬೂಸ್ಟರ್. ನಾನು ಅಷ್ಟೇ ಒಂದು ಸಿಂಪಲ್ ಸ್ಟೈಲು. ನಾನು ಹುಡುಗೀರನ್ನ ದೂರದಿಂದ ನೋಡೋದಷ್ಟೇ, ಮಾತಾಡ್ಸೋದು ಬಹಳ ಕಡಿಮೆ. ಬಹಳ ಪರಿಚಯ ಇದ್ರೆ ಸ್ವಲ್ಪ ಓಪನ್ ಆಗಿ ಮಾತಿಗಿಳಿತಿನಿ. ಹುಟ್ಟುಗುಣನೋ ಅಥವಾ ಸಂಕೋಚನೋ ಆ ದೇವರಿಗೆ ಗೊತ್ತು. ಈ ಜಾಗದಲ್ಲಿ  ದಿನ ಸಿಗೋ ನಾವೆಲ್ಲ ಒಂದುರೀತಿ ಪರಿಚಯವಿಲ್ಲದ ವಿಭಿನ್ನ ಪರಿಚಿತರು. ಒಂದು ದಿನ ನಮ್ಮಲ್ಲಿ ಯಾರಾದ್ರೂ ಒಬ್ರು ಕಾಣಲಿಲ್ಲ ಅಂದ್ರೆ ಎಲ್ಲರಿಗೂ ಏನೋ ಕಳ್ಕೊಂಡಗೆ ಆಗೋದು......ಮಾರನೇ ದಿನ ಯಾಕ್ರೀ ನಿನ್ನೆ ಕಾಣಲಿಲ್ಲ ಅಂತ ಕೇಳೋದು....ಅಂತಹ ಒಂದು ಬಾಂಧವ್ಯ ಬೆಳೆದ್ಬಿಟ್ಟಿದೆ. ಹಂಗೆ ಅದೇ ದಾರಿಲಿ ದಿನ ವಾಕಿಂಗ್ ಹೋಗೋ ಒಂದಿಬ್ಬರು ಕೂಡ ಮುಖಪರಿಚಯ ಆಗಿದ್ದುಂಟು, ಅವರು ಕೂಡ ಕೈಬೀಸಿ ಹಾಯ್, ಹಲೋ ಹೇಳೋದು......ನೋಡಿ ಹೆಂಗಿದೆ ಈ ಪಿಕಪ್-ಪಾಯಿಂಟು......
ಒಂದ ದಿನ ನನ್ನ ಕ್ಯಾಬ್ ಬರೋದು ಲೇಟ್ ಆಗಿತ್ತು, ನಮ್ಮ ಗ್ರೂಪಿನವರೆಲ್ಲ ಹೋಗಿಬಿಟ್ಟಿದ್ರು. ಬೇರೆ ದಾರಿ ಇಲ್ಲದೆ ಒಬ್ಬನೇ ಕೂತ್ಕೊಂಡು ಹೋಗೋ-ಬರೋ ಕಾರುಗಳನ್ನೆಲ್ಲ ನೋಡ್ತಾ, ನಮ್ಮ ದೇಶ ಎಷ್ಟೊಂದು ಮುಂದುವರಿತಲ್ಲ, ಒಂದ ಕಾಲದಲ್ಲಿ ಬರಿ ಅಂಬಾಸಿಡರ್, ಫಿಯಟ್ ಕಾರುಗಳು ಓಡಾಡ್ತಾಇದ್ದವು, ಈಗ ಎಲ್ಲ ಫಾರಿನ್ ಬ್ರಾಂಡ ಕಾರುಗಳು, ಅಂತ ಯೋಚಿಸ್ತಾ ಕುಂತಿದ್ದೆ. ಅಷ್ಟ್ರಲ್ಲಿ ಎಲ್ಲಿಂದಲೋ ಒಂದು ಸೋತ ಧ್ವನಿ, "ಸಾಹೇಬ್ರ ನಮಗ ಸ್ವಲ್ಪ ಈ ಅಡ್ಡೆಸರ ಎಲ್ಲಿ ಬರತೈತಿ ಅಂತ ಹೇಳ್ರಿಪಾ ಪುಣ್ಯ ಬರತೈತಿ" ಅಂತ........ಅರೆ ನಮ್ಮ ಉತ್ತರ ಕರ್ನಾಟಕದ ಭಾಷೆ. ತಿರುಗಿ ನೋಡ್ತೀನಿ, ಆಗಷ್ಟೇ ಬಸ್ ಇಳಿದು ತನ್ನ ಕುಟುಂಬದ ಹೊರೆಯನ್ನೆಲ್ಲ ತಾನೆ ಹೊತ್ತಿರೋಥರ, ಒಂದು ಗೋಣಿಚೀಲ ಹೆಗಲಮೇಲೆ ಹೊತ್ತುಕೊಂಡು ನಿಂತಿದ್ದಾನೆ, ಸೋತು ಸುಣ್ಣಗಾಗಿದ್ದಾನೆ. ಜೊತೆಗೆ ಹೆಂಡತಿ ಮೂರು ಮಕ್ಳು. ಅವರೆಲ್ಲರ ಮುಖದಲ್ಲಿ ಭಯದ ಛಾಯೆ......ಮನೆ ಯಜಮಾನ ಬದುಕು ಕಟ್ಟಕೊಳ್ಳೋಕೆ ಗೊತ್ತಿಲ್ದೆಇರೋ ಊರಿಗೆ ಕರ್ಕೊಂಡ್ ಬಂದಾನೆ, ಮುಂದೆ ಹೆಂಗೆ.....ಮಕ್ಳುಮರಿ ಕಟ್ಕೊಂಡು ಈ ದೊಡ್ಡ ಊರಲ್ಲಿ ಎಲ್ಲಿಅಂತ ಜೀವನ ಮಾಡೋದು, ಅನ್ನೋ ಆತಂಕದ ಛಾಯೆ ಅವನ ಹೆಂಡತಿ ಕಣ್ಣಲ್ಲಿ.......ಮಕ್ಕಳಂತೂ ಏನು ತಿಳಿಯದ ವಿಷ್ಮಯ ಲೋಕಕ್ಕೆ ಬಂದವರಂತೆ, ಇಲ್ಲಿ ಏನು ನಡೀತಿದೆ ಅಂತ ಪ್ರಶ್ನಾರ್ಥಕವಾಗಿ ನೋಡೊಹಂಗಿತ್ತು.......ಅವರ ಪರಿಸ್ಥಿತಿ ನೋಡಿ ಕರುಳು ಚುರ್ರ್ ಅಂತೂ.......
             
ನಮ್ಮ ಉತ್ತರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳು ಕಾಲಕಾಲಕ್ಕೆ ಮಳೆ ಸುರಿಯದೆ, ದಿನೇ ದಿನೇ ಮರಭೂಮಿಥರ ಬದಲಾಗ್ತಾ ಇದಾವೆ. ಇನ್ನು ಮಳೆನೇ ನಂಬಿಕೊಂಡು ಕೃಷಿ ಮಾಡೋ ನಮ್ಮ ಜನ, ಮಳೆ ಇಲ್ಲದೆ ಹೀನಾಯ ಪರಿಸ್ಥಿಯಲ್ಲಿ ಇದ್ದಾರೆ. ಅವರ ಹತ್ತಿರ ಭೂಮಿ ಇದೆ, ಆದ್ರೆ ಏನು ಮಾಡೋದು ನೀರೇ ಇಲ್ಲ. ಸಾಲಗೀಲಾ ಮಾಡಿ ಮಳೆನೇ ನಂಬಿಕೊಂಡು ಬೆಳೆ ಬಿತ್ತಿ ಮಳೆ ಕೈಕೊಟ್ಟಮೇಲೆ ಆತ್ಮಹತ್ತೆ ಮಾಡ್ಕೊಂಡು ತಮ್ಮ ಕಥೇನ ಮುಗಿಸ್ತಿದ್ದಾರೆ. ವಿಪರ್ಯಾಸ ಅಂದ್ರೆ ಸರಕಾರಗಳು ಯಾವುದೇ ಉಪಯುಕ್ತ ಸಹಾಯ ಮಾಡ್ತಾಇಲ್ಲ. ನಮ್ಮ ಜನಕ್ಕೆ ಗೊತ್ತಿರೋದಂದ್ರೆ ಒಂದು ವ್ಯವಸಾಯ, ಇಲ್ಲಾಂದ್ರೆ ಕೂಲಿನಾಲಿ. ಹಾಗಾಗಿ, ಈ ಥರ ಕಷ್ಟದಲ್ಲಿ ಇರೋ ಎಷ್ಟೋ ಜನ, ಮಳೆ ಕೈಕೊಟ್ಟಮೇಲೆ, ಗಂಟು ಮೂಟೆ ಕಟಗೊಂಡು ಹೊಲ-ಮನೆ ಬಿಟ್ಟು, ಗುಳೇ ಅಂತ ದೊಡ್ಡ ದೊಡ್ಡ ಊರುಗಳಿಗೆ ಏನಾದ್ರು ಒಳ್ಳೆ ಕೂಲಿ ಕೆಲ್ಸನಾದ್ರು ಸಿಗಬಹುದಾ ಅಂತ ಆಸೆಇಟ್ಟ್ಕೊಂಡು ಬದುಕು ಕಟ್ಕೊಳ್ಳೋಕೆ ಬರ್ತಾರೆ. ಬೆಳಿಗ್ಗೆ ಮೆಜೆಸ್ಟಿಕ್, ರೈಲು ನಿಲ್ದಾಣದಲ್ಲಿ ಹೋಗ್ನೋಡಿ ಈ ಥರ ಗುಂಪು ಗುಂಪಲ್ಲಿ ಮಕ್ಳುಮರಿ ಕಟಗೊಂಡು ಬರೋ ಜನ್ರನ್ನ ಕಾಣ್ತಿರ. ಇಲ್ಲಿ ಯಾವನೋ ಕಾಂಟ್ರಾಕ್ಟರು ನಿಮಗೆ ಕೆಲಸ ಕೊಡಿಸ್ತೀನಿ ಬನ್ನಿ ಅಂತ ಕರದು, ಗಾರೆಕೆಲಸನೊ, ಇಲ್ಲ ಇನ್ನ್ಯಾವುದೇ ಕಟ್ಟಡ ಕಟ್ಟುವ ಕೆಲಸಮಾಡೋಕೆ ಸೇರಿಸ್ತಾನೇ. ಇವರು ಅದೇ ಕಟ್ಟಡದ ಕೆಳಗೆ ಒಂದು ಸಣ್ಣ ಮನೆ ಥರ ಮಾಡ್ಕೊಂಡು ಜೀವನ ಮಾಡ್ತವೆ......ಪಾಪ ಎಷ್ಟೋ ಸಲ ಕಟ್ಟಡ ಕುಸಿದು ಕೆಳ್ಗಡೆ ಎಷ್ಟೋಜನ ಸಿಕ್ಕಾಕೊಂಡು ಪ್ರಾಣಕಳ್ಕೊಡಿದ್ದು ಉಂಟು........ಈಗ ಅಡ್ರೆಸ್ ಕೇಳ್ಕೊಂಡು ನನ್ನ ಮುಂದೆ ನಿಂತಿರೋ ವ್ಯಕ್ತಿನೂ ಇದೆ ಥರ ಹೋರಾಟದ ಬದುಕು ಮಾಡ್ತಿರೊ ಜೀವಿ. ಆ ಚೀಟಿ ಇಸ್ಕೊಂಡು ನೋಡಿದೆ, ಪೆನ್ನಿನಿಂದ ಬರಿದಿರೋ ಅಡ್ದ್ರೆಸ್ಸು, ಕೆಳಗೆ ಒಂದು ಫೋನ್ ನಂಬರ್ ಇತ್ತು. ಫೋನ್ ಮಾಡ್ಬೇಕಾ ಅಂತ ಕೇಳಿದೆ ಬೇಡರೀ, ವಿಳಾಸ ಎಲ್ಲಿ ಬರತೈತಿ ಹೇಳ್ರಿ ಸಾಕು ಅಂದ.......ಆ ವಿಳಾಸ ಇರೋ ದಿಕ್ಕಿನ ಕಡೆಗೆ ಕೈಮಾಡಿ, ಹಿಂಗೇ ಹತ್ತು ನಿಮಿಷ ನಡೀತಾ ಹೋದ್ರೆ ಈ ವಿಳಾಸ ಬರತ್ತೆ ಅಂತೆ ಹೇಳಿ ಮತ್ತೆ ಯೋಚನಾಲಹರಿಯಲ್ಲಿ ಮುಳುಗಿದೆ.......
ನನ್ನಂಥಹ ಎಷ್ಟೋಜನ ಯುವಕರು, ಯಾವಾದ್ಯದೊ ದೇಶಗಳಿಗೋಗಿ, ಏನೆಲ್ಲಾ ಕಲಿತು, ಹೊಸ ಹೊಸ ಅನುಭವ ಪಡ್ಕೊಂಡು ನಮ್ಮ ದೇಶಕ್ಕೆ ಬರ್ತೀವಿ, ಆದ್ರೆ ವಾಪಾಸ್  ಬಂದಮೇಲೆ, ಒಂದು ಕೆಲಸ ಹಿಡ್ಕೊಂಡು ತಿಂಗಳ ಕೊನೆ ಸಂಬಳಕ್ಕೆ ಹೆಣಗಾಡೋದು ಬಿಟ್ಟು, ಈ ದೇಶಕ್ಕೆ, ಸಮಾಜಕ್ಕೆ ಏನು ಕೊಡುಗೆ ಕೊಡ್ತಾಇದ್ದೀವಿ?? ಈ ವ್ಯಕ್ತಿಥರ ಎಷ್ಟೋ ಜನ ಕಷ್ಟದಲ್ಲಿರೋರಿಗೆ ಬದುಕು ಕಟ್ಟಕೊಳ್ಳೋಕೆ ಏನಾದ್ರು ಉಪಯುಕ್ತವಾದ ವ್ಯವಸ್ಥೆ ಕಲ್ಪಿಸಿಕೊಡೋ ಪ್ರಯತ್ನಗಳು ಆಗ್ತಾ ಇಲ್ಲವಲ್ಲ, ಅನ್ನೋ ಅಸಹಾಯಕ ನೋಟ ಬೀರುತ್ತಾ, ಅವನು ಹೋದ ದಿಕ್ಕಿನ ಕಡೆಗೆನೇ ನೋಡ್ತಾ ಕೂತಬಿಟ್ಟೆ........
ಅಷ್ಟ್ರಲ್ಲಿ ಜೋರಾದ ಕ್ಯಾಬ್ ಹಾರ್ನ್ ಶಬ್ದ ಕೇಳಿತು....ನೋಡ್ತೀನಿ ನಮ್ಮ್ ಕಂಪನಿ ಕ್ಯಾಬು ಬಂದಿದೆ. ನಮ್ಮ ಡ್ರೈವರ್ ಚಂದ್ರು, ಯಾವಲೋಕದಲ್ಲಿ ಮುಳುಗಿದ್ದಿರಿ ಸರ್ ಬನ್ನಿ ಹೋಗೋಣ ಅಂತ ಕರೆದ. ಕರ್ತವ್ಯದ ಕರೆಬಂತು.....ಮುಗುಳುನಗುತ್ತಾ ಏನಿಲ್ಲಪಾ ಅಂತ ತಲೆಆಡಿಸಿ ಕ್ಯಾಬನಲ್ಲಿ ಕೂತಕೊಂಡೆ.......ಆಮೇಲೆ ನನಗೆ ನನ್ನ ವಾಸ್ತವದ ಅರಿವಾಗಿ ಬಸವಣ್ಣವರ ವಚನ "ಪರ ಚಿಂತೆ ಎಮಗೇಕಯ್ಯ... ಎಮ್ಮಯ್ಯ ಚಿಂತೆ ಎಮಗೆ ಸಾಲದೇ" ನೆನಪಿಗೆ ಬಂತು. ಬೇರೆ ದಾರಿ ಇಲ್ಲದೆ, ಮುಂಚೆ ನನ್ನ ತಲೇಲಿ ಬಂದ ಪ್ರಶ್ನೆಗಳು ಸತ್ಯನಾ ಅಥವಾ ವಾಸ್ತವಿಕತೆಗೆ ಹತ್ತಿರವಾದ ಬಸವಣ್ಣವರ ವಚನ ಸತ್ಯನಾ ಅನ್ನುವ ಗೊಂದಲಗಳ  ಮಧ್ಯೆ, ಕಿವಿಗೆ ಇಯರ್ ಫೋನ್ ಸಿಕ್ಕಿಸಿಗೊಂಡು ಯಾವುದೊ ಹಾಡುಕೇಳ್ಕೊಂಡು ಆಫೀಸಿನ ದಿಕ್ಕಿನೆಡೆಗೆ ಹೊರಟುಬಿಟ್ಟೆ........         


P. S.: ಲೇಖನ ಸ್ವಲ್ಪ ಉದ್ದವಾಗಿದ್ದಕ್ಕೆ ಕ್ಷಮಿಸಬೇಕು.......ಸಮಯ ಸಿಕ್ಕಾಗ ಓದಿ.......ನಿಮ್ಮ ಅನಿಸಿಕೆ ತಿಳಿಸಿ. ಏಕೆಂದ್ರೆ ನಿಮ್ಮ ಅನಿಸಿಕೆಗಳೇ ನನಗೆ ಸ್ಫೂರ್ತಿ. 

ಭಾನುವಾರ, ಸೆಪ್ಟೆಂಬರ್ 16, 2018

ಮಾನ್ಸೂನ ಮಳೆಗಳು ಮತ್ತು ಅವುಗಳ ನಾಮಕರಣ ಪದ್ಧತಿ..

ಚಿಕ್ಕವರಿದ್ದಾಗ ಬಹಳ ಜನಕ್ಕೆ ನೆನಪಿರಬಹುದು, ಮನೇಲಿ ಹಿರಿಯರು, ಅಜ್ಜ - ಅಜ್ಜಿಯಂದಿರು, ಬರೋ ಹುಣ್ಣಿಮೆಗೆ ಉತ್ತರಾ ಮಳೆ ಪ್ರಾರಂಭ ಆಗತ್ತೆ. ಇನ್ನು ಎರಡು ದಿನದಲ್ಲಿ ಪುಷ್ಯ ಮಳೆ ಹೋಗತ್ತೆ ಅಥವಾ ಈ ವರ್ಷ ಮೃಘಶಿರಾ ಮಳೆ ಕೈಕೊಟ್ಟಿತು.... ಅಂತೆಲ್ಲ ಮಾತಾಡೋದು ಕೇಳಿರ್ತೀವಿ. ಏನಿದು, ಸುಮ್ಮನೆ ಧೋ ಅಂತ ಸುರಿಯೋ ಮಳೆಗೆ ಇವರು ಏನೆಲ್ಲಾ ಹೆಸರಿಟ್ಟು ಕರೀತಾರೆ! ಅಲ್ಲದೆ, ನಿಖರವಾಗಿ ಇಷ್ಟೇ ದಿನಕ್ಕೆ ಈ ಮಳೆ ಹೋಗಿ ಆ ಮಳೆ ಬರತ್ತೆ ಅಂತೆಲ್ಲ ಮಾತಾಡ್ತಾರೆ. ಇದರಲ್ಲೇನಾದ್ರು ಒಂದು ವ್ಯವಸ್ಥಿತವಾದ ನಾಮಕರಣ ಪದ್ಧತಿ ಇದೇಯಾ? ಅಂತೆಲ್ಲ ಪ್ರಶ್ನೆಗಳು ನಿಮ್ಮ ಮನಸಿನಲ್ಲಿ ಕೂಡ ಬಂದಿರಬಹುದು. ನನಗಂತೂ ಈ ಕುತೂಹಲ ಯಾವಾಗಲು ಇತ್ತು. ಅದಕ್ಕಾಗಿ ಮಳೆಗಳು ಮತ್ತು ಅವುಗಳ ನಾಮಕರಣ ಪದ್ಧತಿಯಬಗ್ಗೆ ಸ್ವಲ್ಪ ಸಂಶೋಧನೆ ಮಾಡೋಣ ಅಂತ ಕ್ಯಾಲೆಂಡರು, ಪಂಚಾಂಗ ಮತ್ತು ಅಂತರ್ಜಾಲದಲ್ಲಿ ಸಿಕ್ಕ ಕೆಲವು ಮಾಹಿತಿಗಳನ್ನೂ ಓದಿದೆ. ಈ ವಿಷಯದಬಗ್ಗೆ ನನಗೆ ತಿಳಿದ ವಿಚಾರಗಳನ್ನು ಈ ಲೇಖನದಲ್ಲಿ ಬರೆಯೋ ಪ್ರಯತ್ನ ಮಾಡಿದ್ದೀನಿ. ಆಮೇಲೆ ಇದು ಎಷ್ಟೋ ಜನಕ್ಕೆ ತಿಳಿಯದೆ ಇರುವ ನಮ್ಮದೇ ಆದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಪದ್ಧತಿ. ಕಾರಣ ಮುಂದಿನ ಪೀಳಿಗೆಗೂ ಈ ಮಾಹಿತಿ ಉಪಯೋಗವಾಗಬಹುದು. 

ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಈಗಲೂ ಕೂಡ ರೈತರು ಮಳೆ ಆಧಾರಿತ ಕೃಷಿ ಪದ್ಧತಿಯನ್ನೇ ಅವಲಂಬಿಸಿರುವುದು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ನಮ್ಮ ದೇಶ ಭೂಮಧ್ಯರೇಖೆಗೆ ಹತ್ತಿರವಾಗಿರುವುದರಿಂದ (Tropical zone), ಮಾನ್ಸೂನ ಮಾರುತಗಳ ಪ್ರಭಾವದಿಂದ ವರ್ಷದ ಆರು ತಿಂಗಳು ಮಳೆಗಾಲ ಇರುವುದು. ಹಿಂದೂ ಪಂಚಾಗದ ಪ್ರಕಾರ ವರ್ಷದಲ್ಲಿ ಆರು ಋತುಗಳು ಬರುತ್ತವೆ (ವಸಂತ, ಗ್ರೀಷ್ಮ, ವರ್ಷ, ಶರತ, ಹೇಮಂತ ಮತ್ತು ಶಿಶರ), ಇದರಲ್ಲಿ ವರ್ಷ ಋತುವಿನಲ್ಲಿ ಮಳೆಗಾಲ ಬರುವದು. ಅಂದರೆ ಇದೆ ಸಮಯದಲ್ಲಿ ಮಾನ್ಸೂನ್ ಮಾರುತಗಳು ಬೀಸುವುದುಂಟು. ನಮ್ಮ ಪಂಚಾಂಗಳಲ್ಲಿ ಅಥವಾ ಜ್ಯೋತಿಷ್ಯಶಾಸ್ತ್ರದಲ್ಲಿ  ಉಲ್ಲೇಖಿತ ಮಾಹಿತಿಯ ಪ್ರಕಾರ ಸೂರ್ಯ ಒಂದು ವರ್ಷದಲ್ಲಿ 27 ನಕ್ಷತ್ರಗಲ್ಲಿ ಪಯಣ ಬೆಳೆಸುತ್ತಾನೆ. ಹಾಗು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಪ್ರಯಾಣ ಮಾಡಲು 13-14 ದಿನಗಳು ಬೇಕಾಗುವುದರಿಂದ ಒಂದು ನಕ್ಷತ್ರದ ಅವಧಿ 13-14 ದಿನಗಳು ಆಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಬರುವ ಮಳೆಗೆ ಆ ನಕ್ಷತ್ರದ ಹೆಸರಿನಿಂದ ಕರೆಯುವುದು ಅನಾದಿಕಾಲದಿಂದ ಪಾಲಿಸಿಕೊಂಡು ಬಂದ ಸಂಪ್ರದಾಯ. ಒಂದು ಉದಾಹರಣೆ ನೋಡೋದಾದರೆ ಈ ವರ್ಷ ಮೇ 25 ರಿಂದ ಜೂನ್ 7 ವರೆಗೆ ರೋಹಿಣಿ ನಕ್ಷತ್ರದ ಅವಧಿ ಇದ್ದು ಈ ಸಮಯದಲ್ಲಿ ಸುರಿಯೋ ಮಳೆಗೆ ರೋಹಿಣಿ ಮಳೆ ಎಂದು ಹೇಳುವುದುಂಟು.  

ನಮ್ಮ ಮನೇಲಿರೋ 2018 ಕ್ಯಾಲೆಂಡರನ್ನು ಕೂಲಂಕುಷವಾಗಿ ಓದು ಈ ವರ್ಷದ ಮಾನ್ಸೂನ ಮಳೆಗಳನ್ನ ಮತ್ತು ಅವುಗಳ ಪ್ರಾರಂಭದ ದಿನಾಂಕವನ್ನ ಈ ಕೆಳಗಿನಂತೆ ಪಟ್ಟಿ ಮಾಡಿದ್ದೇನೆ


ಮೇಲ್ಕಾಣಿಸಿದ ಪಟ್ಟಿಯನ್ನು ತಿಳಿಸಿದ ಇನ್ನೊಂದು ಅಂಶವೇನೆಂದ್ರೆ, ಮಾನ್ಸೂನ್ ಮಾರುತಗಳನ್ನು ಬೀಸುವ ದಿಕ್ಕನ್ನು ಆಧರಿಸಿ ಎರಡು ವಿಧವಾಗಿ, ಮುಂಗಾರು ಮಳೆಗಳು ಮತ್ತು ಹಿಂಗಾರು ಮಳೆಗಳು ಎಂದು ವಿಂಗಡಿಸಲಾಗಿದೆ. ನಾಮಾನ್ಯವಾಗಿ ನೈರುತ್ತ್ಯ ಮಾನ್ಸೂನ್ ಮಾರುತಗಳು ಅರಬ್ಬೀ ಸಮುದ್ರದ ಮೇಲಿಂದ ಮೋಡಗಳನ್ನು ಹೊತ್ತುತಂದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಸುರಿಯುತ್ತವೆ. ಈ ಮಳೆಗಳನ್ನು ಮುಂಗಾರು ಮಳೆಗಳೆಂದು ಕರೆಯುವುದು ವಾಡಿಕೆ. ಅದೇ ರೀತಿ ಈಶಾನ್ಯ ಮಾನ್ಸೂನ್ ಮಾರುತಗಳು ಈಶಾನ್ಯ ದಿಕ್ಕಿನಿಂದ ಮೋಡಗಳನ್ನು ಹೊತ್ತು ತಂದು (ಬಂಗಾಲ ಕೊಲ್ಲಿಯಿಂದ) ಉತ್ತರ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಸುರಿಯೋದು, ಮತ್ತು ಇವುಗಳನ್ನು ಹಿಂಗಾರು ಮಳೆಗಳೆಂದು ಕೆರೆಯುವುದು. ಆದರೆ ನಮ್ಮ ಕರ್ನಾಟಕದಲ್ಲಿ ಹಿಂಗಾರು ಮಳೆಗಳ ಪ್ರಭಾವ ಅಷ್ಟೊಂದು ಕಡಿಮೆ. ಇನ್ನೊಂದು ವಿಶಿಷ್ಟವೇನೆಂದರೆ, ಸಾಂಪ್ರದಾಯಿಕವಾಗಿ ನಮ್ಮ ರೈತರು ಮುಂಗಾರಿನಲ್ಲಿ ಬೆಳೆಯೋ ಬೆಳೆಗಳೇ ಬೇರೆ ಹಾಗು ಹಿಂಗಾರಿನಲ್ಲಿ ಬೆಳೆಯೋ ಬೆಳೆಗಳೇ ಬೇರೆ. ಬಹಳ ವರ್ಷಗಳ ಪ್ರಾಯೋಗಿಕ ಅನುಭಾವದಿಂದ ವಾತಾವರಣಕ್ಕನುಗುಣವಾಗಿ ಈ ರೀತಿ ಎರಡು (ಮುಂಗಾರು ಮತ್ತು ಹಿಂಗಾರು) ಬೆಳೆಗಳನ್ನು ಬೆಳೆಯುತ್ತ ಬಂದರು. ಅದೇನೇ ಇರಲಿ ಪ್ರಕೃತಿಯಲ್ಲಿ ಕಾಣುವ ಈ ವಿಷ್ಮಯಗಳನ್ನು ನಮ್ಮ ಜನ ತಮ್ಮ ಉಪಯೋಗಕ್ಕೆ ತಕ್ಕಂತೆ ಮಾಡಿಕೊಂಡಿರುವ ಈ ಒಂದು ವ್ಯವಸ್ಥಿತವಾದ ಪದ್ಧತಿ ನಿಜವಾಗ್ಲೂ ಶ್ಲಾಘನೀಯ. 

ಕೊನೆಯದಾಗಿ, ಈ ವರ್ಷ ಭಯಂಕರವಾಗಿ ಸುರಿದ ಮುಂಗಾರು ಮಳೆ ಮತ್ತು ಅದರಿಂದ ಕೇರಳ ಹಾಗು ಕೊಡಗಿನಲ್ಲಾದ ಐತಿಹಾಸಿಕ ಪ್ರಕೃತಿ ವಿಕೋಪವನ್ನು ಯಾರು ಮರೆಯುವಂತಿಲ್ಲ. ಮನುಷ್ಯ ತನ್ನ ದುರಾಸೆಗಳಿಗಾಗಿ ದಿನೇ ದಿನೇ, ತನ್ನ ಒಳಿತಿಗಾಗಿಯೇ ಸೃಷ್ಟಿಯಾದ ಈ ಸುಂದರ ಪ್ರಕೃತಿಯನ್ನು ನಾಶಮಾಡುತ್ತ ಹೋಗುತ್ತಿದ್ದು, ಈ ತರಹದ ಪ್ರಕೃತಿ ವಿಕೋಪಗಳನ್ನು ಆವ್ಹಾನಿಸಿಕೊಳ್ಳುತಿದ್ದಾನೆ. ನಮಗೆ ಸುಂದರ, ಸ್ವಾಭಾವಿಕ ಮತ್ತು ಆರೋಗ್ಯಕರವಾದ ಬದುಕು ಬೇಕೆಂದರೆ ನಮ್ಮ ಸುತ್ತಲಿರುವ ಪ್ರಕೃತಿಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ, ಆಗಲೇ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಕಾಲಕಾಲಕ್ಕೆ ಸರಿಯಾಗಿ ಮಳೆಗಳನ್ನು ಕೊಡುತ್ತದೆ.

ಆದ್ದರಿಂದ ಗೆಳೆಯರೇ ಬನ್ನಿ ನಮ್ಮ ಸುತ್ತಲಿನ ಸುಂದರ ಪ್ರಕೃತಿಯನ್ನು ಕಾಪಾಡೋಣ.....ನಮ್ಮ ಮುಂದಿನ ಪೀಳಿಗೆಗೆ ಈ ಮಳೆಗಳಬಗ್ಗೆ ತಿಳಿಸೋಣ ......... ಅಲ್ಲವೇ!