ಭಾನುವಾರ, ಮೇ 23, 2021

ರವಿವಾರದ ರಗಳೆ : ಹೊಸ ಆವಿಷ್ಕಾರದ ಸಾಂಬಾರು.

ಮಗಳ ಬೇಸಿಗೆಯ ರಜೆಯ ನೆಪಮಾಡಿಕೊಂಡು ಮಡದಿ ಹೋಗಿಹಳು ತನ್ನ ತವರೂರಿಗೆ. ಅತ್ತ ತವರಿಗೆ ಕಳುಹಿಸಿದ ನಾಲ್ಕೆ ದಿನದಲ್ಲಿ ಇತ್ತ ಘೋಷಣೆಯಾಯಿತು ಕೋವಿಡ್ ಲಾಕ್ಡೌನ್. ವಾರ ಪೂರ್ತಿ ಕಂಪನಿಯ ಕ್ಯಾಂಟೀನು ಅನ್ನದಾತನಾದರು, ವಾರದ ಕೊನೆ ಮಾತ್ರ ನನಗೆ ನಾನೇ ಅನ್ನದಾತ. ಇಂದು ರವಿವಾರ, ಹೊರಗಡೆ ಲಾಕ್ಡೌನ್, ಅಡುಗೆ ಮಾಡದೆ ಬೇರೆ ದಾರಿ ಇಲ್ಲ. ವಿಧಿಯಿಲ್ಲದೆ ತಾಯಿ ಅನ್ನಪೂರ್ಣೇಶ್ವರಿಗೆ ನಮಿಸಿ, ಭೀಮಸೇನ-ನಳಮಹಾರಾಜರನ್ನು ನೆನೆಯುತ್ತ, ಹುಂಬು ಧೈರ್ಯದಿಂದ ನುಗ್ಗಿದೆ ಅಡುಗೆ ಮನೆಗೆ. ವೀರ ಯೋಧನಂತೆ ಕೈಯಲ್ಲಿ ಸೌಟನ್ನು ಹಿಡಿದು, ನನ್ನ ನಡುನೀರಲ್ಲಿ ಬಿಟ್ಟು ತವರಿಗೆ ಹೋದ ಮಡದಿ ಮೇಲೆ ಗೊಣಗುತ್ತಾ, ಶುರು ಹಚ್ಚಿಕೊಂಡೆ, ಈ ಕೆಳಗಿನಂತೆ ಸಾಂಬಾರು ಮಾಡಲು......


ನನ್ನ ಹೃದಯದ ಅಂಗಳದಲ್ಲಿ
ಅರಳಿನಿಂತ ಓ ಮಲ್ಲಿಗೆಯೇ
ಹೇಳದೆ ನೀ ಏಕೆ ಹೋದೆ
ಉಪ್ಪು ಖಾರ ಮಸಾಲೆ ಇಡುವ ಜಾಗವನ್ನು
ಅಲ್ಲಿ ನೀನು ಹಾಯಾಗಿರುವೆ
ನಿನ್ನ ತಾಯಿಯ ಮನೆಯಲಿ
ಇಲ್ಲಿ ಕೇಳುವರಾರು ನನ್ನ ಕಷ್ಟ-ಕಂತೆಗಳನ್ನ 
ಹುಡುಕಿ ಹುಡುಕಿ ಸೋತು ಹೋದೆ
ಉಪ್ಪು ಖಾರ ಮಸಾಲೆ ಡಬ್ಬಿಗಳನ್ನ
ಸಿಕ್ಕ ತರಕಾರಿಗಳನ್ನು ಕತ್ತರಿಸಿ ಹಾಕಿ
ಕುದಿಯಲಿಟ್ಟೆ ಬೇಳೆಯೊಂದಿಗೆ
ಫ್ರಿಡ್ಜಿನಲ್ಲಿ ಕಾಣಲಿಲ್ಲ
ಟೊಮೇಟೊ ಹುಣಸೆ ಹಣ್ಣುಗಳು
ಕೈಗೆ ಸಿಕ್ಕ ಟೊಮೇಟೊ ಸಾಸನ್ನು
ಸುರಿದು ಮಾಡಿದೆ ಹೊಸ ಪ್ರಯೋಗವನ್ನು
ಕೊನೆಗೆ ಸಿಕ್ಕಿತು ಮಸಾಲೆಗಳ ಉಗ್ರಾಣ
ಸಾಂಬಾರ್, ರಸಂ, ಬಿರಿಯಾನಿ ಮಸಾಲೆಗಳು
ಯಾವುದು ಹಾಕಲಿ ಯಾವುದು ಬಿಡಲಿ
ಸರ್ವರಿಗೂ ಕೊಡಲು ಸುವರ್ಣಾವಕಾಶ
ಹಾಕಿದೆ ಸ್ವಲ್ಪ ಸ್ವಲ್ಪ ಎಲ್ಲ ಮಸಾಲೆಗಳನ್ನು
ಕೊನೆಗೆ ಹಾಕಿದೆ ಚ್ಚೊರ್ರೆಂದು ವಗ್ಗರಣೆಯ
ಅಲಂಕಾರಗೊಳಿಸಿದೆ ಕೊತ್ತಂಬರಿ ಸೊಪ್ಪಿನ ಎಲೆಗಳಿಂದ
ಚೆನ್ನಾಗಿ ಕುದಿಯಿತು ಹೊಸ ಆವಿಷ್ಕಾರದ ಸಾಂಬಾರು
ಬಿಳಿ ಅನ್ನದ ಮೇಲೆ ಸುರಿದು ಕಲಸಿ
ರುಚಿಯ ಮೆಚ್ಚಿ ಚಪ್ಪರಿಸಿದೆ ನಾನೆ ನನ್ನ ಬೆನ್ನನ್ನು!

ಕಾಮೆಂಟ್‌ಗಳಿಲ್ಲ: