ಭಾನುವಾರ, ನವೆಂಬರ್ 22, 2020

ಉತ್ತರ ಕರ್ನಾಟಕದ ಶೈಲಿಯಲ್ಲಿ ದೀಪಾವಳಿ ಹಬ್ಬ

ನಾನು ಈ ಬೆಂಗಳೂರಿನಲ್ಲಿ, ನನ್ನ ಮೊದಲ ಮತ್ತು ಎರಡನೇ ಇನ್ನಿಂಗ್ಸ್ ಸೇರಿಸಿ ಹೆಚ್ಚುಕಡಿಮೆ ಏಳು ವರ್ಷ ಕಳೆದಿದ್ದಿನಿ. ಆದರೆ ಹಬ್ಬ ಹರಿದಿನಗಳು ಅಂತ ಬಂದಾಗ, ಯಾಕೋ ಗೊತ್ತಿಲ್ಲ, ಬೇರೆ ಊರುಗಳಿಗೆ ಹೋಲಿಸಿದಾಗ ನನಗೆ ಅಷ್ಟೊಂದು ಸಂಭ್ರಮ ಅಥವಾ ಸಡಗರ ಕಂಡುಬರುವುದಿಲ್ಲ. ಕೇವಲ ವರಮಹಾಲಕ್ಷ್ಮಿ ಮತ್ತು ಆಯುಧಪೂಜೆಗೆ ಮಾತ್ರ ಇಲ್ಲಿ ಜನ ಅತ್ಯಂತ ಸಡಗರದಿಂದ ಆಚರಿಸುವುದನ್ನು ನೋಡಬಹುದು. ಅದೇ ರೀತಿ ಬೇರೆ ಹಬ್ಬಗಳು ಬಂದಾಗ ಬದುಕು ಸಾಮಾನ್ಯವಾಗಿಯೇ ಇರುತ್ತದೆ. ಇನ್ನು ವಿಶೇಷವಾಗಿ ಹೇಳಬೇಕಂದರೆ. ಮೊನ್ನೆ ತಾನೇ ಆಚರಿಸಲ್ಪಟ್ಟ ದೇಶದಲ್ಲೇ ಅತಿ ದೊಡ್ಡ ಹಬ್ಬ ದೀಪಾವಳಿ. ನನಗ ವಿಚಿತ್ರ ಅಂದರೆ ಇದು ಇಡೀ ದೇಶದಲ್ಲೇ ಅತಿ ವಿಜೃಂಭಣೆಯಿಂದ ಕುಟುಂಬ ಪರಿವಾರದವರೆಲ್ಲ ಸೇರಿ ಆಚರಿಸುವ ಹಬ್ಬ. ದೇಶದ ವಿವಿಧ ಬಾಗಗಳಲ್ಲಿ ಬೇರೆ ಬೇರೆ ರೀತಿ ರಿವಾಜುಗಳಿಂದ ಸಂಭ್ರಮಿಸುವ ಹಬ್ಬ. ಆದರೆ ಬೆಂಗಳೂರಿನಲ್ಲಿ ಮಾತ್ರ ಎಲ್ಲ ಅಷ್ಟಕಷ್ಟೆ. ಉದಾಹರಣೆಗಾಗಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಈ ದೀಪಾವಳಿಯಲ್ಲಿ ಮೂರು ದಿನಗಳ ಕಾಲ, ಬಹಳ ವಿಶೇಷವಾಗಿ ಆಚರಿಸುತ್ತೇವೆ. ಈ ದೀಪಾವಳಿ ಹಬ್ಬದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದ ಆ ವಿಶೇಷ ಪದ್ದತಿಗಳು, ಆಚರಣೆಗಳು ಹೇಗೆ ಇರುತ್ತವೆ, ಒಂದೊಂದು ಆಚರಣೆಯ ಹಿಂದಿನ ಮಹತ್ವ ಏನು, ತಿಳಿಸಿಕೊಡುವ ಉದ್ದೇಶದಿಂದ, ಈ ಲೇಖನವನ್ನು ಓದುಗರ ಮುಂದಿಡುತ್ತಿದ್ದೇನೆ. ನಾನು ಇಲ್ಲಿ ತಿಳಿಸಿದ ಮಾಹಿತಿಗಳೆಲ್ಲವೂ ಸರಿ ಇದೆ ಅಂತ ಹೇಳಲ್ಲ. ನನಗೆ ನನ್ನ ಹಿರಿಯರಿಂದ ತಿಳಿಯಲ್ಪಟ್ಟ ಮತ್ತು ನನ್ನ ಅನುಭವದಿಂದ ಬಂದ ಮಾಹಿತಿಯ ಆಧಾರದ ಮೇಲೆ ಈ ಲೇಖನವನ್ನು ಬರೆದಿದ್ದೇನೆ. 

ದೀಪಾವಳಿ ಹಬ್ಬ, ವಾಸ್ತವವಾಗಿ ಭರಮನ ಹಬ್ಬ, ನರಕ ಚತುರ್ದಶಿ, ಅಮವಾಸೆ ಮತ್ತು ಬಳಿ ಪಾಡ್ಯೇ ಅಂತ ನಾಲ್ಕು ದಿನಗಳ ಹಬ್ಬವಾದರೂ ಕೂಡ, ಬಹುಮುಖ್ಯವಾಗಿ ಮೂರು ದಿನಗಳ ಆಚರಣೆ ಬಹಳ ವಿಶೇಷವಾಗಿರುತ್ತದೆ. ಮೊದಲನೇ ದಿನ, ಅಂದರೆ ಭರಮನ ಹಬ್ಬ ಅಂತ ಕರೆಯುವ ಈ ದಿವಸವನ್ನು ನೀರು ತುಂಬುವ ಹಬ್ಬ ಅಂತ ಕೆರೆಯುವುದು. ಮನೆಯಲ್ಲಿ ಎಲ್ಲ ನೀರು ಶೇಖರಿಸುವ ಪಾತ್ರೆ ಕೊಳಾಯಿಗಳನ್ನು ತುಂಬಿಸಿ ಅವುಗಳಿಗೆ ಪೂಜೆ ಸಲ್ಲಿಸುವುದು. ಆಮೇಲೆ ಮನೆಯ ಹೊರಗಡೆ ಬಣ್ಣ ಬಣ್ಣದ ಕಾಗದಗಳಿಂದ ಮಾಡಿದ ಶಿವನ ಬುಟ್ಟಿಯನ್ನು ಕಟ್ಟಿ ಅದರ ಒಳಗಡೆ ಒಂದು ಚಿಕ್ಕ ವಿದ್ಯುತ್ ಬಲ್ಬನ್ನು ಇಳಿಬಿಟ್ಟು, ಸಂಜೆಯಾದಮೇಲೆ ನೋಡಲು ಈ ಶಿವನ ಬಿಟ್ಟು ಬಹುಸುಂದರವಾಗಿ ಕಾಣುವುದು. ಇದು ವಾರಪೂರ್ತಿ ಹೀಗೆ ಮನೆಯ ಮುಂಭಾಗದಲ್ಲಿ ನೇತಾಡುತ್ತಿರುತ್ತದೆ. ಇನ್ನು ಈ ದೀಪಾವಳಿ ದೀಪಗಳ ಹಬ್ಬವಾದ್ದರಿಂದ, ಮನೆಯ ಹೊರಗಡೆ ಈ ಭರಮಣ ಹಬ್ಬದಿಂದ ನಾಲ್ಕು ದಿನಗಳವರೆಗೆ ಮಣ್ಣಿನ ಹಣತೆಯಲ್ಲಿ ಅರಳಿಯ ಬತ್ತಿ, ಎಣ್ಣೆ ಹಾಕಿ ದೀಪಗಳನ್ನು ಹಚ್ಚುವುದುಂಟು. ಈ ನಾಲ್ಕು ದಿನಗಳು, ಬೀದಿ ಬೀದಿಗಳೆಲ್ಲ ದೀಪದ ಬೆಳಕಿನಿಂದ, ಬಣ್ಣ ಬಣ್ಣದ ಶಿವನ ಬುಟ್ಟಿಗಳಿಂದ ಕಂಗೊಳಿಸುವ ಆ ದೃಶ್ಯವನ್ನು ನೋಡುವುದೇ ಒಂದು ಚೆಂದ. ಆಯಾ ದಿನಕ್ಕನುಗುಣವಾದ, ಆ ಮೂರು ಪ್ರಮುಖ ದಿನಗಳ ಆಚರಣೆಗಳು ಮತ್ತು ಪದ್ಧತಿಗಳ ವಿವರ ಈ ಮುಂದೆ ವಿಸ್ತರಿಸಿದ್ದೇನೆ..... 

ಮೊದಲ ದಿನ: ನರಕ ಚತುರ್ದಸಿ. 
ನಮ್ಮ ಉತ್ತರ ಕರ್ನಾಟಕದಲ್ಲಿ ಹಬ್ಬದ ಸಡಗರವೇ ಬೇರೆ. ದೀಪಾವಳಿ ಮೂರು ದಿನದ ಹಬ್ಬವೆಂದರೆ ಪ್ರತಿ ದಿವಸಕ್ಕೂ ಒಂದು ವಿಶೇಷತೆ. ಮೊದಲನೇ ದಿನ ನರಕ ಚತುರ್ದಶಿ ಕೃಷ್ಣನು ನರಕಾಸುರನನ್ನು ವಧಿಸಿದ ದಿನ. ಅಂದು ಮನೆಯವರೆಲ್ಲ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಮಹಿಳೆಯರು ತಮ್ಮ ಅಣ್ಣಂದಿರಿಗೆ ತಿಲಕವಿಟ್ಟು ಆರತಿ ಬೆಳಗಿ; ಅಣ್ಣನಿಂದ ಹಬ್ಬಕ್ಕೆ ಕಾಣಿಕೆ ಪಡೆಯುವ ಪದ್ಧತಿ. ಮನೆಯ ಹೊರಗಡೆ ಆಕಳ ಸಗಣಿಯಿಂದ ಮಾಡಿದ ಗೊಂಬೆಗಳನ್ನು ಪಾಂಡವರ ಪ್ರತಿರೂಪವಾಗಿ ಪೂಜಿಸುವುದು. ಮನೆಯವರೆಲ್ಲ ಬೆಳಿಗ್ಗೆ ವಿವಿಧ ಉಂಡೆ ಮತ್ತು ಚುರುಮುರಿ ಖಾರ ತಿನ್ನಿವುದು. ಇದನ್ನ ಪರಾಳ ಅನ್ನುವುದು ವಾಡಿಕೆ. ಅಷ್ಟೇ ಅಲ್ಲದೆ ಸಂಬಂಧಿಗಳು ಮತ್ತು ಸ್ನೇಹಿತರಿಗೆಲ್ಲ ಶುಭಾಶಯಕೋರುವುದು ಮತ್ತು ಸಿಹಿ ಹಂಚುವುದು...... ಇವತ್ತಿನ ವಿಶೇಷ ಖಾದ್ಯ ಶ್ಯಾವಿಗೆ ಬಸೆದು, ಅದಕ್ಕೆ ಹಾಲು ಸಕ್ಕರೆ ತುಪ್ಪ ಹಾಕಿ ಮನೆಯವರೆಲ್ಲರೂ ಸೇವಿಸುವುದು....

ಎರಡನೇ ದಿನ: ಅಮಾವಾಸೆಯ ಲಕ್ಷ್ಮಿ ಪೂಜೆ. 
ದೀಪಾವಳಿ ಅಮಾವಾಸ್ಯೆ ಅಂದರೆ ಹಬ್ಬದ ಎರಡನೇ ದಿನ. ಆದರೆ ಅಮಾವಾಸ್ಯೆ ಅನ್ನೋದು ದೀಪಾವಳಿಯ ಪ್ರಮುಖ ದಿನ ಅನ್ನಬಹುದು. ಈ ದಿನದ ವಿಶೇಷ ಆಚರಣೆಯೆಂದರೆ ಲಕ್ಷ್ಮಿ ಪೂಜೆ. ಅದೃಷ್ಟ ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿರುವ ವಿಷ್ಣು ಸತಿ ಶ್ರೀ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಎಲ್ಲರಮೇಲೂ ಅನುಗ್ರಹಿಸಲಿ ಎಂದು ಭಕ್ತಿಯಿಂದ ವಿಜೃಂಭಣೆ ಪೂಜಿಸುವರು. ಮನೆಯನ್ನೆಲ್ಲ ತೊಳೆದು ಮಡಿಗೊಳಿಸಿ. ಬಾಗಿಲುಗಳಿಗೆ ತಳಿರು ತೋರಣಗಳನ್ನು ಕಟ್ಟಿ ಮನೆಯನ್ನೆಲ್ಲ ದೀಪಗಳನ್ನು ಹಚ್ಚುವುದರ ಮೂಲಕ ಅಲಂಕರಿಸುವರು. ಈ ಪೂಜೆಯನ್ನು ಕೆಲವರ ಮನೆಯಲ್ಲಿ ಬೆಳಗಿನ ಮಹೂರ್ತದಲ್ಲಿ ಮಾಡಿದರೆ ಹೆಚ್ಚಾಗಿ ಅನೇಕ ಮನೆಗಳಲ್ಲಿ ಸಂಜೆಯ ಶುಭ ಮಹೂರ್ತದಲ್ಲಿ ಮನೆಯವರೆಲ್ಲರೂ ಸೇರಿ ಭಕ್ತಿ ಭಾವದಿಂದ ಪೂಜಿಸುವರು. ಒಂದು ಮಂಚ ಅಥವಾ ಟೇಬಲ್ಲಿಗೆ ಕಬ್ಬು ಬಾಳೆಗಳನ್ನು ಕಟ್ಟಿ ಮಂಚದ ಮೇಲೆ ಹೊಸ ಬಟ್ಟೆ ಹಾಸಿ ಅದರ ಮೇಲೆ ಕಲಶ ರೂಪದಲ್ಲಿ ಲಕ್ಷ್ಮಿ ಪ್ರತಿಷ್ಠಾಪಿಸಿ ಅದಕ್ಕೆ ಹೊಸ ಸೀರೆ ಆಭರಣಗಳಿಂದ ಅಲಂಕರಿಸುವುದು. ಈ ಪೂಜೆಯ ಇನ್ನೊಂದು ವಿಶೇಷತೆ ಹಳದಿ ಮತ್ತು ಕೇಸರಿ ಬಣ್ಣದ ಚಂಡೂ ಹೂವುಗಳು ಹಾಗು ಅವುಗಳಿಂದ ಮಾಡಿದ ಮಾಲೆಗಳಿಂದ ದೇವರಿಗೆ ಅಲಂಕರಿಸುವುದು. ದೇವರಿಗೆ ಹೋಳಿಗೆ ಪಾಯಸ ಮತ್ತು ಹಣ್ಣು ಹಂಪಲುಗಳ ನೈವೇದ್ಯೆ ಮಾಡುವರು. ಮನೆಯಲ್ಲ ಘಮಘಮಿಸುವ ಪರಿಮಳ ಸೂಸುವ ಅಗರಬತ್ತಿಗಳನ್ನು ಕರ್ಪುರದ ಆರತಿಯನ್ನು ಮಂಗಳಾರತಿ ಮಾಡುವರು. ನೆರೆಹೊರೆಯವರನ್ನು ಸಂಬಂಧಿಗಳು ಸ್ನೇಹಿತರನ್ನು ಪರಸ್ಪರ ಪೂಜೆಗೆ ಆವ್ಹಾನಿಸುವುದು ವಾಡಿಕೆ.......

ಮೂರನೇ ದಿನ: ಬಲಿ ಪಾಡ್ಯೇ ಹಬ್ಬ. 
ಬಲಿ ಪಾಡ್ಯೇ, ಇದು ದೀಪಾವಳಿ ಹಬ್ಬದ ಮೂರನೆಯ ಹಾಗು ಕೊನೆಯ ದಿನ. ಜೊತೆಗೆ ಕಾರ್ತಿಕ ಮಾಸ ಪ್ರಾರಂಭವಾಗುವುದು ಇದೆ ಶುಭದಿನದಂದು. ಪುರಾಣದಲ್ಲಿ ಈ ದಿನಕ್ಕೆ ಒಂದು ವಿಶೇಷತೆ ಇದೆ. ಇದೆ ದಿನದಂದು ವಿಷ್ಣುವು ವಾಮನ ಅವತಾರದಲ್ಲಿ ಬಂದು, ಬಲಿ ಚಕ್ರವರ್ತಿ ಎಂಬ ಅಸುರನನ್ನು ಸಂಹರಿಸಿದ ದಿನ..... 

ಬಲಿ ಪಾಡ್ಯೇ ದಿನ ಅಂದರೆ ವ್ಯಾಪಾರಸ್ಥರು ಮತ್ತು ರೈತಾಪಿ ಮನೆತನಗಳಿಗೆ ಸಂಭ್ರಮದ ದಿನ ಅಂತ ಹೇಳಬಹುದು. ವ್ಯಾಪಾರಸ್ಥರಂತೂ ತಮ್ಮ ತಮ್ಮ ಅಂಗಡಿಗಳನ್ನು, ಕಾರ್ಖಾನೆಗಳನ್ನು ಸುಣ್ಣ ಬಣ್ಣಗಳಿಂದ ರಂಗುಗೊಳಿಸಿ, ತಳಿರು ತೋರಣ, ಹೂವುಗಳಿಂದ ಸಿಂಗರಿಸುವುದು. ವರ್ಷಪೂರ್ತಿ ವ್ಯಾಪಾರದಿಂದ ಬಂದ ಆದಾಯ ಮತ್ತು ಬರುವ ವರ್ಷವೂ ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯಲು ಆ ಲಕ್ಷ್ಮಿ ಮಾತೆಯ ಕೃಪಾಶೀರ್ವಾದ ಪಡೆಯಲು, ವಿಜೃಂಭಣೆಯಿಂದ ಮತ್ತು ಕೃತಜ್ಞತಾ ಭಾವದಿಂದ ಲಕ್ಷ್ಮಿ ಪೂಜೆಯನ್ನು ನೆರವೇಸುವರು. ರೈತಾಪಿ ಮನೆತನಗಳು ಕೂಡ ಹೊಲದಲ್ಲಿ, ಬಾವಿ-ಬೋರೆವೆಲ್ಲ್ ಪೂಜೆ, ದನಕರುಗಳು, ನೇಗಿಲು ಮುಂತಾದ ಕೃಷಿ ಉಪಕರಣಗಳು ಮತ್ತು ಕೃಷಿ ವಾಹನಗಳನ್ನು ಪೂಜಿಸುವರು. 

ಇನ್ನು ಸಾಮಾನ್ಯ ಮನೆಗಳಲ್ಲಿ, ಇಂದು ಕೂಡ ಎಣ್ಣೆ ಸ್ನಾನ, ಹೊಸ ಬಟ್ಟೆ ಧರಿಸುವುದು, ಸಹೋದರಿಯರು ಸಹೋದರರಿಗೆ ತಿಲಕವಿಟ್ಟು ಆರತಿ ಬೆಳಗುವುದು, ಮನೆ ತುಂಬಾ ದೀಪಗಳ ಹಚ್ಚಿ ಸಂತೋಷ ಪಡುವುದು, ಇವೆ ಈ ದಿನದ ವಿಶೇಷಗಳು. ಇನ್ನು ನೇಕಾರಿಕೆಗೆ ಪ್ರಖ್ಯಾತವಾಗಿರುವ ನನ್ನ ಊರಿನಲ್ಲಿ ಮಗ್ಗಗಳ ಪೂಜೆ ಮತ್ತು ಸೀರೆ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ನೆರವೇರುವುದು. ಜೊತೆಗೆ ಮಾಲೀಕರು ತಮ್ಮ ಕಾರ್ಖಾನೆಗಳಲ್ಲಿ ನೇಯುವ ನೇಕಾರರನ್ನೆಲ್ಲ ಮನೆಗೆ ಕರೆದು ಹೋಳಿಗೆ, ಪಾಯಸದ ಪಕ್ವಾನ ಭೋಜನ ಏರ್ಪಡಿಸಿ, ಅವರಿಗೆಲ್ಲ ಹಬ್ಬದ ಬೋನಸ್ ಕೊಟ್ಟು ಸಂತೋಷ ಪಡಿಸುತ್ತಾರೆ. ಇದೆ ರೀತಿ ಮೂರು ದಿನಗಳ ಈ ದೀಪಾವಳಿ ಹಬ್ಬವು ಅನೇಕ ಆಚರಣೆಗಳು, ಪೂಜೆ ಪುನಸ್ಕಾರಗಳೊಂದಿಗೆ ಮುಗಿದು ಹೋಗುತ್ತದೆ......

ಮನೆಮನೆಯಲ್ಲಿ ದೀಪಗಳನ್ನು ಹಚ್ಚುವುದರ ಮೂಲಕ, ಬಾಳಿನಲ್ಲಿ ಕತ್ತಲನ್ನು ದೂರ ಮಾಡಿ ಹೊಸ ಬೆಳಕನ್ನು ತರಲಿ ಅಂತ ಆಶಿಸುತ್ತಾ, ಮನೆಯವರೆಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಈ ಹಬ್ಬ, ದೇಶದ ವಿವಿಧ ಬಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲ್ಲ್ಪಟ್ಟರು, ನಮ್ಮ ಉತ್ತರಕರ್ನಾಟಕದಲ್ಲಿ ತನ್ನದೇ ವಿಶೇಷತೆ ಮತ್ತು ಪದ್ಧತಿಗಳಿಂದ ಆಚರಿಸಲ್ಪಡುತ್ತದೆ......

ನಮ್ಮ ಮಿತ್ರರೊಬ್ಬರು, ಕವಿ ಶಿರೋಮಣಿ, ಶ್ರೀ ಬೆನಕ ಶೃಂಗೇರಿ ಅವರು ತಮ್ಮ ಇತ್ತೀಚಿನ, ಹಂಚಿಕೊಂಡ ಕವನದಲ್ಲಿ ಹೇಳಿದಂತೆ ಒಂದೇ ಸೂರಿನಡಿ ಎಲ್ಲರ ಸೇರಿಸಿ, ಸಂಬಂಧಗಳ ಗಾಢಗೊಳಿಸಲು ಹಿರಿಯರಿತ್ತ ಬಳುವಳಿ ಈ ದೀಪಾವಳಿ, ಅನ್ನುವಂತೆ, ಈ ಆಧುನಿಕ ಯುಗದಲ್ಲಿ ಬದುಕ ಕಟ್ಟಿಕೊಳ್ಳಲು ಊರು ಕೇರಿ ಸ್ನೇಹ ಸಂಬಂಧಗಳಿಂದ ದೂರ, ಕಾಲಿಗೆ ಚಕ್ರಕಟ್ಟಿಕೊಂಡು ಎಲ್ಲೆಲ್ಲೋ ಸುತ್ತುತಿರುವಾಗ, ಈ ಹಬ್ಬ ಹರಿದಿನಗಳೇ ತಾನೇ ಎಲ್ಲರನ್ನು ಬೆಸೆದು ಒಂದಾಗಿಸುವ ಸ್ನೇಹ ಸೇತುಗಳು. ಈ ಹಬ್ಬ ಹರಿದಿನಗಳ ಆಚರಣೆಗಳ ಹಿಂದಿರುವ ಕಥೆ, ದಂತ ಕಥೆ, ಹಿನ್ನಿಲೆ ಏನೆ ಇರಲಿ ಆದರೆ ಒಂದು ಹಬ್ಬ ಅಂತ ಬಂದಾಗ ಅದು ಹಿರಿಯ ಕಿರಿಯರೆನ್ನದೆ ಎಲ್ಲರ ಮನಗಳಲ್ಲಿ ಸಂತಸ, ಉತ್ಸಾಹಗಳನ್ನು ತುಂಬುವುದಂತೂ ನಿಜ.......