ಭಾನುವಾರ, ಡಿಸೆಂಬರ್ 29, 2019

ನರನಾಡಿಗಳಲ್ಲೂ ಹರಿಯುತಿದೆ ಬೆಂಗಳೂರಿನ ರೇಡಿಯೋ ಸಿಟಿ....


ಇವತ್ತು ಭಾನುವಾರ ನೋಡಿ.... ತಿಂಗಳ ಕೊನೆ...... ಸಂಬಳ ಬೇರೆ ಬಂದಿತ್ತು....
ನನ್ನ  ಧರ್ಮಪತ್ನಿ ನಿನ್ನೆನೇ ವಾರ್ನಿಂಗ ಮಾಡಿದ್ಲು.... "ಮನೇಲಿ ತರಕಾರಿ ಖಾಲಿಯಾಗಿದೆ, ನಾಳೆ ಬೆಳಿಗ್ಗೆ ಜೆಪಿ ನಗರದ ಸಾರಕ್ಕಿ ಮಾರ್ಕೆಟಿಗೆ ಹೋಗಿ ತರಕಾರಿ ತರೋಣ" ಅಂತ.....
ಮನೆಯ ಯಜಮಾನಿ ಆರ್ಡರ್ ಅಂದ್ರೆ ಒಲ್ಲೆ ಅನ್ನೋಕಾಗುತ್ತಾ!!....ಎಲ್ಲ ಕೆಲಸಬಿಟ್ಟು ಬೆಳಿಗ್ಗೆ ಎದ್ದವರೇ ಕಾರಿನಲ್ಲಿ ತರಕಾರಿ ತರೋಕೆ ಪತಿ-ಪತ್ನಿ ಸಮೇತರಾಗಿ ಹೋದ್ವಿ......
ನಾನು ಬಾರ್ಗೇನು ಮಾಡೋದ್ರಲ್ಲಿ ಅವಳಿಗಿಂತ ಸ್ವಲ್ಪ ಅಲ್ಪ ಜ್ಞಾನಿ...... ಅದಕ್ಕೆ ತರಕಾರಿ ಮಾರೋನ ಹತ್ರ  ಲೆಕ್ಕ ತಪ್ಪಿ ಹತ್ತು ರೂಪಾಯಿ ಜಾಸ್ತಿ ಕೊಟ್ಟಬಿಟ್ಟೆ..... ಅಷ್ಟು ಸಾಕು ನೋಡಿ ಈ ಹೆಂಡ್ತೀರು ವಾದ ಮಾಡಿ ತಾವೇ ಬುದ್ಧಿವಂತರು ಅಂತ ಪ್ರೂವ್ ಮಾಡಕ್ಕೆ......
ವಾಪಸ್ ಮನೆಗೆ ಬರೋವಾಗ ಇದೆ ವಿಷಯಕ್ಕೆ ವಾದ ವಿವಾದ ನಡೀತಾಯಿತ್ತು......ಹೋಗ್ಲಿ ಬಿಡೆ ಏನು ಹತ್ತು ರೂಪಾಯಿ ತಾನೇ ಅಂದ್ರು ಕೇಳ್ತಾಯಿಲ್ಲ....ಆಗ ಈ ವಾದ ವಿವಾದ ದಿಂದ ಎಸ್ಕೇಪ್ ಆಗಕ್ಕೆ ಕಾರಿನ ಎಫ್ ಎಂ ರೇಡಿಯೋ ಮೊರೆಹೋದೆ.....ನೀನಾದ್ರೂ ವಿಷಯ ಚೇಂಜ್ ಮಾಡಿ ಪುಣ್ಣ್ಯಾ ಕಟ್ಕೋ ಮಾರಾಯ ಅಂತ.....

ಇನ್ನೇನು ಎಫ್ ಎಂ ರೇಡಿಯೋ ಆನ್ ಮಾಡಿದೆ.....ಆಗ ಬಂತು ನೋಡಿ ರೇಡಿಯೋ ಸಿಟಿ FM-91.1 ಅವರ ಆಂಥೆಮ್ಮ್ಯೂ .....

ನಮಸ್ಕಾರ ನೀವು ಕೇಳ್ತಾಯಿದ್ದೀರಿ ಎಫ್ ಎಂ ಅಂದ್ರೆ ರೇಡಿಯೋ ಸಿಟಿ 91.1 ಎಫ್ ಎಂ.....
 “ಒಂದು ಮಸಾಲೆ ಬೈ-ಟೂ ಕಾಫೀ ಬರ್ಲೆ....
ಹಲೋ ಎಕ್ಸ್ಕ್ಯೂಸ್ ಮೀ, ಇದು ಲೇಡೀಸ್ ಸೀಟು .....ಸ್ವಲ್ಪ ಅಡ್ಜಸ್ಟ್ ಮಾಡಿ.....
ಟಿಕೆಟ್.....ಟಿಕೆಟ್.....ಟಿಕೆಟ್......
ಬದ್ನೇಕಾಯಿ ಎಸ್ಟ್ರಿ ಕೆಜಿ....
ಹೇ! ವಾಟ್ ಡಾ ಮಚಾ....ಫುಲ್ ಮಿಂಚಿಂಗಾ....”
 ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ ಸಿಟಿ...
 “ಮೀಟರ್ ಮೇಲೆ ಇಪ್ಪತ್ತು.....ಬರ್ತೀರಾ....”
 ಕೆಂಪೇಗೌಡರ ಸಾಹಸ.....ಐನೂರು ವರ್ಷದ ಇತಿಹಾಸ.....
ನಮ್ಮೂರು ಬೆಂದಕಾಳೂರು......ಇದುವೇ ನಮ್ಮ ಬೆಂಗಳೂರು......
 “ಕನ್ನಡ್ ಗೊತ್ತಿಲ್ಲ.....ಕನ್ನಡ್ ಅಲ್ಲ.....ಅದು ಕನ್ನಡ...”
 ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ...
ಇಲ್ಲಿಗೆ ಎಲ್ಲಿದಲೋ ಬರ್ತಾರೆ.....ಕಷ್ಟದಲ್ಲೂ ನಗ್ತಾರೆ......
ತಳ್ಳು ಗಾಡಿ ಇಂದ ಹಿಡಿದು....ಫೈವ್ ಸ್ಟಾರ್ ವರೆಗೂ ನಮ್ಮವರೇ.....
 “ಇವರೇ ಛೋಟಾ....ಒಂದು ಚಾಯ್ ಹಾಕಿ....”
 ಐಟಿ-ಬಿಟಿ ಪಾರ್ಕಿನ ನಡುವೆ.....ಲಾಲ್ ಬಾಗು...ಕಬ್ಬನ್ ಪಾರ್ಕು....
ಬಸವನ ಗುಡಿಯ ದೋಸೆ....ಮಲ್ಲೇಶ್ವರದ ಇಡ್ಲಿ ಸಾಕು......
 “ಸಾರ್, ವಡೆ ಡಿಪ್ಪಾ.....ಸಪರೇಟಾ....”
 ಮೀಟರ್ ಇರೋ ಆಟೋದಲ್ಲಿ.....ಸ್ಪೀಡಾಗಿರೋ ಕ್ಯಾಬಿನಲ್ಲಿ....
ಬ್ರಿಗೇಡ್-ಎಂಜಿ ರೋಡಿನಕಡೆಗೆ......ಲೈಫ್ ಸೂಪರ್ ಇದೆ.....
ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ.....ಸಿಟಿ.....
ಎಫ್ ಎಂ ಅಂದ್ರೆ.....ರೇಡಿಯೋ ಸಿಟಿ....

ಅದ್ಯಾರು ಪುಣ್ಯಾತ್ಮ ಈ ಹಾಡು ಸೃಷ್ಟಿಮಾಡಿದನೋ ಗೊತ್ತಿಲ್ಲ, ಆದರೆ ಈ ಒಂದು ಚಿಕ್ಕ ಟೈಟಲ್ ಸಾಂಗು ನಮ್ಮ ಈಡಿ ಬೆಂಗಳೂರಿನ ಬದುಕಿನ ಚಿತ್ರಣವನ್ನೇ ನಮ್ಮ ಕಣ್ಮುಂದೆ ತಂದು ಬಿಡತ್ತೆ.....ಅದಕ್ಕೆ ಕಾರಣ ಈ ಸಾಂಗಿನ ಮಧ್ಯ ಬರುವ ಕೆಲವು ವಿಶೇಷ ಸಂಭಾಷಣೆಗಳು....
ನಾವು, ವಿಶೇಷವಾಗಿ ಬೆಂಗಳೂರಿನಲ್ಲಿ ಜೀವನ ಮಾಡವ್ರು ಆ ಸಂಭಾಷಣೆಗಳನ್ನ ದಿನಾ ಕೇಳಿರ್ತೀವಿ ಅಥವಾ ಮಾತಾಡಿರ್ತೀವಿ.... ಆದರೆ ಈ ಹಾಡನ್ನ ಎಮ್ಮೆ ಕೇಳಿದಾಗ ನಿಮಗ ಈ ಸಂಭಾಷಣೆಗಳು ಈ ಊರಿನ ವೈಶಿಷ್ಟತೆಯನ್ನು ಹೊರಹೊಮ್ಮುವ ಒಂದು ಗುರುತನ್ನೇ ನಿಮ್ಮ ಮನಸಿನಲ್ಲಿ ಛಾಪಿಸುತ್ತವೆ.....

ಯಾವ ಯಾವ ಸಂಧರ್ಭಗಳಲ್ಲಿ ಈ ಸಂಭಾಷಣೆಗಳ ಪರಿಚಯ ಅಥವಾ ಅನುಭವ ನಮಗೆ ಆಗಿರುತ್ತದೆ ಅನ್ನೋದನ್ನ ನೆನಪಿಸಲು, ಈ ಹಾಡಿನಲ್ಲಿ ಬರುವ ಸಂಭಾಷಣೆಗಳನ್ನು ಸಂಧರ್ಬೋಚಿತವಾಗಿ, ಈ  ಕೆಳಗಿನಂತೆ ಸ್ವಲ್ಪ ವಿಸ್ತಾರವಾಗಿ ಹೇಳುವ ಪ್ರಯತ್ನ ಮಾಡಬೇಕನಿಸಿತು.....ಬೆಂಗಳೂರಿನಲ್ಲಿರುವವರು ಇದನ್ನು ಓದಿದಮೇಲೆ ನನ್ನೊಂದಿಗೆ ಒಪ್ಪುತ್ತೀರಾ ಅಂದ್ಕೋತೀನಿ.

ಯಾವಾಗ್ಲಾದ್ರೂ ಸರ್ವಿಸ್ ಇರೋ ರೆಸ್ಟೋರೆಂಟಿಗೆ ಹೋದಾಗ ನಮ್ಮ ಆರ್ಡೆರಿಗಾಗಿ ಕಾಯಿತಾಇರ್ತಿವಿ, ಆಗ ಸರ್ವರೂ "ಒಂದು ಮಸಾಲೆ ಬೈ-ಟೂ ಕಾಫೀ ಬರ್ಲೆ.." ಅಂತ ಕೂಗೋದನ್ನ ಕೇಳಿರಬಹುದು.....ಇನ್ನು ಅಕಸ್ಮಾತ್ ಸೆಲ್ಫ್ ಸರ್ವಿಸ್ ರೀಫ್ರೆಶ್ಮೆಂಟ್ಗೆ ಹೋದಾಗ, ಇಡ್ಲಿ-ವಡ ಆರ್ಡರ್ ಮಾಡಿ, ಕೌಂಟರ್ನಲ್ಲಿ ಹೋಟೆಲಿನವನು ಒಳಕ್ಕ ಕೇಳ್ತಾನೆ, "ಸಾರ್, ಡಿಪ್ಪಾ.....ಸಪರೇಟಾ....”, ಇಲ್ಲಿ ಡಿಪ್ಪ ಅಂದ್ರೆ ಒಂದು ಆಳ ಜಾಸ್ತಿ ಇರೋ ಪ್ಲೇಟಿನಲ್ಲಿ ಇಡ್ಲಿ-ವಡ ಎರಡನ್ನು ಸಾಂಬಾರಿನಲ್ಲಿ ಚನ್ನಾಗಿ ಮುಳುಗಿಸಿ ಕೊಡ್ತಾನೆ.....ಬೆಂಗಳೂರುನಲ್ಲಿ ಕೆಲವಂದು ಜನಕ್ಕೆ ಕೇವಲ ಇಡ್ಲಿ-ವಡ ತಿನ್ನಕ್ಕೆ ಸಿಕ್ಕಾಪಟ್ಟೆ ಸಾಂಬಾರ್ ಬೇಕು, ಇದು ಅಂಥವರಿಗಾಗಿ ಮಾಡಿರೋ ಡಿಪ್ಪ ಸಿಸ್ಟಮ್........ಇನ್ನು ಸಪರೇಟ್ ಅಂದ್ರೆ ಮಾಮೂಲಾಗಿ ಕೊಡೊತರ ಎರಡು ಲೊಟುಗಳಲ್ಲಿ ಸಾಂಬಾರು ಚಟ್ನಿ ಸಪರೇಟಾಗಿ ಕೊಡ್ತಾನೆ....

ಬೆಂಗಳೂರಿನಲ್ಲಿ ಮೆಟ್ರೋ, ಕ್ಯಾಬು ಎಲ್ಲ ಇದ್ರು, ಬಸ್ಸಿನಲ್ಲಿ ಕೆಲಸಕ್ಕೆ, ಶಾಲಾ ಕಾಲೇಜಿಗೆ ಹೋಗೋ ಜನರ ಸಂಖ್ಯೆ ಏನು ಕಡಿಮೆ ಆಗಿಲ್ಲ....ಪಾಪ ಅವರ ಪ್ರತಿದಿನದ ಹೆಣಗಾಟ ಕೆಳಬಾರ್ದು...ಈ ರೀತಿ ಬಿಎಂಟಿಸಿ ಬಸ್ಸುನಲ್ಲಿ ಏನಾದ್ರು ಪ್ರಯಾಣ ಮಾಡಿದ ಅನುಭವ ಇದ್ರೆ (ನನಗು ಇದೆ).....ಅಲ್ಲಿನೂ ಕೆಲವು ವಿಶೇಷ ಸಂಭಾಷಣೆಗಳನ್ನ ಕೇಳಿರ್ತೀವಿ. ಅತೀ ಕಾಮನ್ ಅಂದ್ರೆ "ಟಿಕೆಟ್.....ಟಿಕೆಟ್.....ಟಿಕೆಟ್...". ಇದು ಬೇರಾರದು ಅಲ್ಲ, ನಮ್ಮ ಕಂಡಕ್ಟರ್ ಸಾಹೆಬ್ರುಗಳು ಹೇಳೋ  ಸಾಮಾನ್ಯ ಡೈಲಾಗು......ಅಕಸ್ಮಾತ್ ಅವತ್ತು ಬಸ್ಸಿನಲ್ಲಿ ರಶ್ ಜಾಸ್ತಿ ಇದ್ದು,  ಯಾರಾದ್ರೂ ತಪ್ಪಿ ಲೇಡೀಸ್ ಸೀಟಿನಲ್ಲೇನಾದ್ರು ಕೂತುಬಿಟ್ಟರೆ, ಆಕಡೆ ಇಂದ "ಹಲೋ ಎಕ್ಸ್ಕ್ಯೂಸ್ ಮೀ, ಇದು ಲೇಡೀಸ್ ಸೀಟು... ಎದ್ದೇಳ್ರಿ.." ಅಂತ ಮಹಿಳಾಮಣಿಗಳ ಧ್ವನಿ ನಿಮ್ಮ ಕಿವಿಗೆ ಅಪ್ಪಳಿಸಿರುತ್ತೆ. ನೀವೇನೋ  "ಸ್ವಲ್ಪ ಅಡ್ಜಸ್ಟ್ ಮಾಡಿ... ಕಾಲ್ ನೋಯಿತಾಇದೆ" ಅಂತ ಹೇಳ್ಬಹುದು. ಆದರೆ ಈ ಊರಲ್ಲಿ ನಮ್ಮ ಹೆಣ್ಮಕ್ಳು ತುಂಬಾ ಸ್ಟ್ರಾಂಗ್ ಕಂಣ್ರಿ...... ಸುಮ್ನೆ ವಾದಕ್ಕೀಳಿದ್ರೆ ಹಂಗೆ ಪೊಲೀಸರನ್ನ ಕರಿಸಿ ದಂಡ ಹಾಕಿಸಿಬಿಡ್ತಾರೆ. ಅದ್ಕೆ ಸೀಟ್ ಬಿಟ್ಟಕೊಡೋದೇ ಪುರುಷಾರ್ಥದ ಲಕ್ಷಣ....😏😜

ಆಯಿತು ಈ ಬಸ್ಸಿನ ಗೋಜಿಗೆ ಹೋಗೋದೇ ಬೇಡ ಅಂತ, ಬೆಂಗಳೂರಿನ ಸಾರಿಗೆ ಸಾಧನಗಳ ಜೀವನಾಡಿ ಆಗಿರುವ ಆಟೋದಲ್ಲಿ ಏನಾದ್ರು ಹೋಗೋ ಪ್ಲಾನ್ ಏನಾದ್ರು ಮಾಡಿದ್ರೆ ಅಲ್ಲಿನೂ ಅನೇಕ ವಿಶೇಷ ಅನುಭವಗಳು ಆಗೋದುಂಟು. ಸಾಮಾನ್ಯವಾಗಿ ನಾವು ಆಟೋದವರ ಜೊತೆ ಮೀಟರ್ ಗೋಜಿಗೆ ಬಾರ್ಗೇನ್  ಮಡೋಕೆ  ಇಳೀತೀವಿ, ಯಾಕಂದ್ರೆ ಎಲ್ಲೆಲ್ಲೋ ಸುತ್ತಾಡಿಸಿ ಇವರು ಮೀಟರ್ ಬಿಲ್ಲು ಜಾಸ್ತಿ ಮಾಡ್ಬಹುದೇನೋ ಎಂಬ ಹೆದರಿಕೆ. ಬಾರ್ಗೇನ್ ಕೆಲಸಮಾಡ್ಲಿಲ್ಲ ಅಂತ  ಗೊತ್ತಾದಾಗ, ಹೋಗ್ಲಿ ಬಿಡು ಮೀಟರ್ ಹಾಕಪ್ಪ, ಆದ್ರೆ ಕರೆಕ್ಟ್ ಅಡ್ದ್ರೆಸ್ಗೆ ಕರ್ಕೊಂಡು ಹೋಗ್ಬೇಕು ನೋಡು ಅಂದಾಗ ಅವನು ಇನ್ನೊಂದು ದಾಳ ಹಾಕ್ತಾನೆ ಅದೇ “ಮೀಟರ್ ಮೇಲೆ ಇಪ್ಪತ್ತು ರೂಪಾಯಿ ತೊಗೋತೀನಿ .....ಬರ್ತೀರಾ....” ಅಂತ. ಅನಿವಾರ್ಯ ಆದ್ರೆ ಅವನು ಹಾಕಿದ ದಾಳಕ್ಕೆ ಸೋತು ಹೋಗ್ಲೇಬೇಕು.....

ನಮ್ಮ ಬೆಂಗಳೂರನ್ನು ಕಾಡುತ್ತಿರುವ ಇನ್ನೊಂದು ಜಟಿಲವಾದ ಸಮಸ್ಸ್ಯೆ ಅಂದ್ರೆ, ಕೆಲಸಕ್ಕೆ ಅಂತ ವಲಸೆ ಬರುತ್ತಿರುವ ಈ ಉತ್ತರ ಭಾರತೀಯರು. ಇವರೋ ಇಲ್ಲಿ ಕೆಲಸ ಬೇಕು, ಜೀವನ ಮಾಡಕ್ಕೆ ಇದೆ ಊರು ಬೇಕು, ಆದರೆ ನಮ್ಮ ಕನ್ನಡ ಭಾಷೆ ಮಾತ್ರ ಬೇಡ. ಇವರನ್ನ ಏನಾದ್ರು ವಿಷಯ ಹಿಡ್ಕೊಂಡು ಕನ್ನಡದಲ್ಲಿ ಮಾತಾಡ್ಸಕ್ಕೆ ಹೋಗಿ ಆಗ ಸಾಮಾನ್ಯವಾಗಿ ಇವರ ಬಾಯಿಯಿಂದ ಉದುರೋ ಮೊದಲ ಡೈಲಾಗು "“ಕನ್ನಡ್ ಗೊತ್ತಿಲ್ಲ....". ಅಯ್ಯೋ ದೇವ್ರೇ ಇವರಿಗೆ ಸರಿಯಾಗಿ "ಕನ್ನಡ" ಅಂತ ಉಚ್ಚರಿಸಲು ಬರಲ್ಲವೇ, ಇನ್ನು ಕನ್ನಡ ಮಾತಾಡೋದು ದೂರದ ಮಾತು ಅನ್ಸತ್ತೆ....... ಎಲ್ಲರೂ ಹಾಗೆ ಅಂತ ಹೇಳಲ್ಲ, ಕೆಲವರು ಅಲ್ಪ ಸ್ವಲ್ಪ ಹೇಗೋ ಮಾತಾಡೋಕೆ ಪ್ರಯತ್ನಮಾಡೋದನ್ನ ಕಾಣುತೀವಿ...."“ಇವರೇ ಛೋಟಾ....ಒಂದು ಚಾಯ್ ಹಾಕಿ."...ಇದು ಇಂಥಹ ಅರ್ಧ ಕನ್ನಡ ಕಲಿತವರಿಂದ ಬರುವ ಡೈಲಾಗು.

ಅದೇ ರೀತಿ ಇನ್ನು ಅನೇಕ ಸಂಭಾಷಣೆಗಳು......ನಮ್ಮ ಮಾಡ್ರನ್ ಪೀಳಿಗೆಗಳ, ಈಕಡೆ ಕನ್ನಡವೂ ಅಲ್ಲದ ಆಕಡೆ ಇಂಗ್ಲೀಷು ಅಲ್ಲದ ವಿಚಿತ್ರ ಡೈಲಾಗುಗಳು.... "ಹೇ! ವಾಟ್....ಮಚಾ....ಮಗಾ.... ಫುಲ್ ಮಿಂಚಿಂಗಾ....” ಇತರೆ....ಆಮೇಲೆ ಈ ಕೆ ರ್ ಮಾರ್ಕೆಟು, ಸಾರಕ್ಕಿ, ಮಲ್ಲೇಶ್ವರಂ ಮಾರ್ಕೆಟುಗಳಿಗೆ ಹೋದಾಗ ನಮ್ಮ ಜನ "ಬದ್ನೇಕಾಯಿ ಎಸ್ಟ್ರಿ ಕೆಜಿ....ಈರುಳ್ಳಿ ಹೆಂಗೆ ಹೋಡ್ತಿದ್ದೀಯ, ಸೊಪ್ಪು ಹೆಂಗೆ.... " ಈ ಥರ ಚೌಕಾಸಿ ಮಾಡುವ ದೃಶ್ಯ ಸರ್ವೇಸಾಮಾನ್ಯ.

ಅದೇನೇ ಇರಲಿ....ಅತ್ತ ಬ್ರಿಗೇಡ್-ಎಂಜಿ ರೋಡಿನಕಡೆಗೆ ಸೂಪರ್ ಫಾಸ್ಟ್ ಆಗಿ ಸಾಗುತ್ತಿರುವ, ಅನೇಕ ಐಟಿ-ಬಿಟಿ ಪಾರ್ಕುಗಳ ಮಧ್ಯೆಯೂ ಕೂಡ ನಮ್ಮ ಲಾಲ್ ಬಾಗು...ಕಬ್ಬನ್ ಪಾರ್ಕುಗಳ ಸೊಬಗು ಇನ್ನು ಅಳಿಸಿಲ್ಲ. ಎಷ್ಟೇ ಬಗೆ ಬಗೆಯ ತಿನಿಸುಗಳ ದೇಶದ ವಿವಿದ ಭಾಗಗಳ ರೆಸ್ಟೋರೆಂಟುಗಳು ಬಂದರು , ನಮ್ಮ ಬೆಂಗಳೂರಿನ ಮೂಲ ಸೊಗಡನ್ನು, ಬೆಂಗಳೂರಿನೊಂದಿಗೆ ಬೆಸೆದುಕೊಂಡಿರುವ ಆ ಭಾವನಾತ್ಮಕ ಸಂಬಂಧವನ್ನು ಉಳಿಸಲು ಬಸವನಗುಡಿಯ ದೋಸೆ....ಮಲ್ಲೇಶ್ವರದ ಇಡ್ಲಿಯ ರುಚಿಯೇ ಸಾಕು....

ಎಷ್ಟಾದ್ರೂ ನಮ್ಮ ಬೆಂಗಳೂರಿನ ವಿಷಯ ಅಂದಮೇಲೆ ಹೆಮ್ಮೆಯ ವಿಷಯಾನೇ ಅಲ್ಲ್ವಾ.....

ಮುಂದಿನ ಸಲ ರೇಡಿಯೋ ಸಿಟಿ FM-91.1 ಅವರ ಈ ಟೈಟಲ್ ಸಾಂಗನ್ನು ಕೇಳಿದ್ರೆ...... ನಾನು ಮೇಲೆ ತಿಳಿಸಿದ ಈ ಹಾಡಿನಲ್ಲಿ ಬರುವ ಸಂಭಾಷಣೆಗಳನ್ನು, ಸಂಧರ್ಬಗಳನ್ನು ನೆನಪಿಸಿಕೊಂಡು ನೀವು ಖುಷಿ ಪಡಿ.....

ಕೊನೆಯದಾಗಿ.....ರೇಡಿಯೋ ಸಿಟಿ....ನಮ್ಮ ಹೆಮ್ಮೆಯ ಬೆಂಗಳೂರು......ನಮ್ಮ ಹೆಮ್ಮೆಯ FM-91.1 ರೇಡಿಯೋ.....💓😊

ಭಾನುವಾರ, ಜುಲೈ 28, 2019

ನಾಡು, ನುಡಿ ಮತ್ತು ಸಂಸ್ಕೃತಿಯೆಂಬ ಮಾಯೆಯ ಪಾಶದಲ್ಲಿ.....

ಹೆಚ್ಚಿನ ವಿದ್ಯಾಭ್ಯಾಸ ಮತ್ತು ಕೆಲಸದ ನಿಮಿತ್ತ್ಯ ನಾನು ಕೆಲವು ವರ್ಷ ಬೇರೆ ಬೇರೆ ದೇಶಗಳಲ್ಲಿ ಜೀವನಸಾಗಿಸಬೇಕಾದ ಅನಿವಾರ್ಯತೆ ಬಂತು. ಆ ಸಮಯದಲ್ಲಿ ನನಗೆ ನೆನಪಿಡಲೇಬೇಕಾದ ಅನೇಕ ವಿಶಿಷ್ಟ ಅನುಭವಗಳು ಆದದ್ದುಂಟು.  ಅಂತಹ ಅನುಭವಗಳನ್ನು ಕೆಲವೊಮ್ಮೆ ಎಲ್ಲರೊಂದಿಗೆ ಹಂಚಿಕೊಬೇಕೆನಿಸುತ್ತದೆ, ಜೊತೆಗೆ ಆ ತರಹದ ಗತಿಸಿದ ಅನುಭವಗಳೊಂದಿಗೆ, ಸಾಮಾನವಾದ ಪ್ರಸ್ತುತ ಘಟನೆಗಳನ್ನು ಪರಸ್ಪರ ಹೋಲಿಸಿದಾಗ ಏನಾದರು ಒಂದು ವಿಚಾರ ಹೇಳಬಹುದೇನೋ ಅಂತ ಅನಿಸಿತು.  ಹೊರದೇಶದಲ್ಲಿದ್ದಾಗ, ನಾನು ಬಿಡುವಿನ ವೇಳೆಯಲ್ಲಿ ಹೊರಗಡೆ ಎಲ್ಲಾದ್ರೂ ಹೋದ ಸಮಯದಲ್ಲಿ, ಅಥವಾ ಕೆಲಸಕ್ಕೋ...... ಇಲ್ಲ ವೀಕೆಂಡ್ನಲ್ಲಿ ಸಿನಿಮಾ, ಶಾಪಿಂಗ್ ಅಂತ ಹೋದಾಗ, ಅಲ್ಲಿ ಅಕಸ್ಮಾತ್ ನಮ್ಮ ದೇಶದವರನ್ನ ಯಾರನ್ನಾದ್ರೂ ನೋಡಿದ್ರೆ ಏನೋ ಒಂಥರಾ ಖುಷಿ ಅನಿಸಿಬಿಡೋದು. ಅಬ್ಬಾ ನಮ್ಮ ಕಡೆದವರು, ಹೋಗಿ ಮಾತಾಡಿಸಿಬಿಡ್ಲಾ...... ಮಾಮೂಲಾಗಿ, ಅವರು ಯಾವ ರಾಜ್ಯದವ್ರಿರ್ಬಹುದು, ಏನ್ ಭಾಷೆ ಮಾತಾಡ್ತಾರೋ, ಈ ದೇಶಕ್ಕೆ ಏನಕ್ಕೆ ಬಂದಿರಬಹುದು, ಈ ಥರ ಅನೇಕ ಪ್ರಶ್ನೆಗಳು ಹುಟ್ಟಿಬಿಡೋದು. ಭಾಷೆ ಯಾವುದಿದ್ದರೇನು, ಇದೆಯಲ್ಲ  ನಮ್ಮ ಹಿಂದಿ, ಅದು ಬರದಿದ್ರೆ, ಆಂಗ್ಲರು ಕೊಟ್ಟುಹೋದ ಬಳುವಳಿ, ಇಂಗ್ಲಿಷ್ನಲ್ಲಿ ಶುರುಹಚ್ಕೊಂಡರಾಯಿತು ಅಂತ ಅನ್ನಕೋತಿದ್ದೆ. ಇನ್ನು ವಿಶೇಷ ಅಂದ್ರೆ ಅವ್ರೇನಾದ್ರೂ ಕನ್ನಡದವರಾಗಿದ್ರೆ ಆಗೋ ಖುಷಿನೇ ಬೇರೆ. ಅದೇನೋ ಒಂಥರಾ ಸೆಳೆತ...... ನಮ್ಮವರು, ನಮ್ಮ ನಾಡಿನಿಂದ ಬಂದವರು, ಜಗತ್ತಿನ ಯಾವುದೋ ಮೂಲೇಲಿ ಮತ್ತೆ ಸಿಕ್ಕಾಗ ನಮ್ಮ ಊರಿಗೆ ಹೋದಷ್ಟು ಖುಷಿ. ವಿದೇಶದಲ್ಲಿರೋ ಬೇರೆ ಅನೇಕ ಭಾರತೀಯರಿಗೆ ಇದೇತರಹದ ಅನುಭವಗಳು ಆಗಿರಬಹುದು. ಆದರೂ ನಾನು ಜಪಾನಿನಲ್ಲಿದ್ದಾಗ ನನಗೆ ಈ ಥರ ಅನುಭವ ಆಗಿದ್ದು ಜಾಸ್ತಿ. ಏಕೆಂದ್ರೆ ಅಲ್ಲಿ ಭಾರತೀಯರ ಸಂಖ್ಯೆ ತುಂಬಾ ವಿರಳ, ಏನೋ ಅಪರೂಪಕ್ಕೆ ದೊಡ್ಡ ದೊಡ್ಡ ಊರುಗಳಲ್ಲಿ ಅಲ್ಲೋ ಇಲ್ಲೋ ಯಾರಾದ್ರೂ ದೇಶಿಗಳು ಸಿಗ್ಬಹುದು....ಒಂಥರಾ ಮರಭೂಮಿಯಲ್ಲಿ ಓಯಸಿಸ್ ಸಿಕ್ಕಂಗೆ ನೋಡಿ.....ಇತ್ತಿತ್ತಲಾಗಿ ಜಪಾನ ಮತ್ತು ಇನ್ನು ಅನೇಕ ಉತ್ತರದ ದೇಶಗಳಿಗೆ ಭಾರತೀಯರ ವಲಸೆ ಜಾಸ್ತಿ ಆಗಿದೆ....... ಆ ವಿಷಯ ಬೇರೆ.  

ಅದೇ ಅಮೇರಿಕಾದಲ್ಲಿ ಇದ್ದಾಗ ನನಗೆ ಅಷ್ಟೊಂದು ಅಪರೂಪ ಅನಿಸಲಿಲ್ಲ, ಕಾರಣ ಇಷ್ಟೇ, ಅಲ್ಲಿ ಪ್ರತಿ ಕಿಲೋಮೀಟರ್ಗೆ ಒಬ್ರು ದೇಸಿಗಳನ್ನ ಕಾಣಬಹುದು. ಇದು ಸಹಜವೂ ಕೂಡ, ಯಾಕೆಂದ್ರೆ ಜಗತ್ತಿನಲ್ಲೇ ಅತಿ ಹೆಚ್ಚು ಭಾರತೀಯರು ನೆಲೆಸಿರುವ ದೇಶ ಅಂದ್ರೆ ಅಮೇರಿಕಾ. ಯಾಕೋ ಗೊತ್ತಿಲ್ಲ, ಅಮೇರಿಕಾದಲ್ಲಿ ನಮ್ಮ ದೇಸಿಗಳು ಅಷ್ಟೊಂದು ಬೇಗನೆ ತಗಲಾಕೊಳ್ಳದೆ, ಕಂಡ್ರು ಕಾಣದವರಂಗೆ, ಒಂದು ಸಿಂಪೆಲ್ ಹಾಯ್ ಹೇಳಿ ದೂರವಾಗ್ತಾರೆ. ಆಗಲೇ ಹೇಳಿದ ಆಗೇ ದೇಸಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅಷ್ಟೊಂದು ಅಪರೂಪ ಅನಿಸೋದಿಲ್ಲ ನೋಡಿ. ಹಾಸ್ಸ್ಯವಾಗಿ ನಾನು ಅನ್ನಕೋತಿದ್ದುದು ಏನೆಂದ್ರೆ, ಎಲ್ಲಿ ಮಾತಿಗಿಳಿದ್ರೆ ನಾಳೆ ಮನೆಹುಡ್ಕೊಂಡು ಬಂದೆ ಬಿಡ್ತಾನೇನೋ ಮಹಾರಾಯ ಎಂಬ ಭಯದಿಂದ ಇರಬಹುದಲ್ಲ ಅಂತ .....😄😄. 

ಇದು ವಿದೇಶದ ಕಥೆಯಾದ್ರೆ, ಇನ್ನು ನಮ್ಮ ಬೆಂಗಳೂರಿಗೆ ಬರೋಣ. ಇಲ್ಲಿ ಬಂದು ಕೂಡ ಈಗ ಹೆಚ್ಚುಕಡಿಮೆ ಐದು ವರ್ಷ ಕಳಿತು. ಅಂದಮೇಲೆ ಇಲ್ಲಿನೂ ಹೇಳ್ಕೊಳ್ಳೋಕೆ ಅಂತ ಲೆಕ್ಕವಿಲ್ಲದಷ್ಟು ಅನುಭವಗಳ ಸರಮಾಲೆ ರೆಡಿ ಆಗಿಬಿಟ್ಟಿದೆ ಅನ್ನಬಹುದು. ಬೆಂಗಳೂರು ಅಂದ್ರೆ ಈಗ ಬರಿ ನಮ್ಮ ರಾಜ್ಯದ ರಾಜಧಾನಿ ಅಷ್ಟೇ ಆಗಿರದೆ, ಬರ್ತಾ ಬರ್ತಾ ಒಂದು ಕಾಸ್ಮೋಪಾಲಿಟನ್ ನಗರ ಆಗಿಬಿಟ್ಟಿದೆ. ಇಲ್ಲಿ ಈಗ ರಾಜ್ಯದ ವಿವಿಧ ಭಾಗಗಳಿಂದ (ಉಕ, ಹೈಕ, ಮಕ, ಕುಡ್ಲ ಮತ್ತು ಕೊಂಕಣ) ಅಷ್ಟೇ ಅಲ್ಲದೆ, ದೇಶದ ವಿವಿಧ ಭಾಗಗಳಿಂದ ವಿವಿಧ ಭಾಷೆ ಮಾತನಾಡೋ ಜನರೆಲ್ಲಾ ಕೆಲಸದ ನಿಮಿತ್ತ್ಯ ನೆಲೆಊರಿದ್ದಾರೆ. ಹಾಗಾಗಿ ಇಲ್ಲಿ ವಿವಿಧ ಭಾಷೆ, ಸಂಸ್ಕೃತಿ, ವೇಷಭೂಷಣಗಳಿಂದ ಕೂಡಿದ ಜನರಿಂದ ಕೂಡಿದ ಬಹುಸಾಂಸ್ಕೃತಿಕ ನಗರವಾಗಿರುವುದನ್ನು ಕಾಣಬಹುದು. ದಿನದಿಂದ ದಿನಕ್ಕೆ, ಜನದಟ್ಟಣೆ, ವಾಹನದಟ್ಟಣೆ, ಕಾಂಕ್ರೀಟ್ ಕಾಡಿನ ಬೀಡಾಗುತ್ತಿರುವ ಈ ಉದ್ಯಾನನಗರಿ ಮುಂದೆ ಯಾವ ದಿಕ್ಕಿನತ್ತ ಸಾಗುತಿದೆಯೋ ನಾಕಾಣೆ!. 

ಅದೇನೇ ಇರಲಿ, ಇಲ್ಲಿ ನಾನು ಹೇಳಬೇಕಾಗಿದ್ದು ಬೇರೇನೇ ಇದೆ. ಬೆಂಗಳೂರು ಮೊದಲಿನಿಂದಲೂ ಪುಸ್ತಕೀಯ ಅಥವಾ ಸಿನಿಮೀಯ ಕನ್ನಡ ಮಾತನಾಡುವ ನಗರ. ರಾಜ್ಯದ ಬೇರೆ ಭಾಗದ ಕನ್ನಡಕ್ಕೂ, ಮತ್ತೆ ಬೆಂಗಳೂರಿನ ಕನ್ನಡಕ್ಕೂ ಬಹಳ ವ್ಯತ್ತ್ಯಾಸ. ಉದಾರಣೆಗೆ ನಮ್ಮ ಉತ್ತರ ಕರ್ನಾಟಕದ ಜವಾರಿ ಕನ್ನಡ ಭಾಷೆಯೊಂದಿಗೆ ತುಲನೆ ಮಾಡಿದ್ರೆ......ಅಯ್ಯೋ, ಅದು ಊಹಿಸಲಾಗದಷ್ಟು ಘೋರ ವ್ಯತ್ತ್ಯಾಸ ಕಣ್ಣ್ರೀ.....  ವಿಷಯ ಹೀಗಿರುವಾಗ, ನನ್ನಂತಹ ಒಬ್ಬ ಉತ್ತರಕರ್ನಾಟಕದಿಂದ ಬಂದ ವ್ಯಕ್ತಿಗೆ ಅಕಸ್ಮಾತಾಗಿ ನಮ್ಮ ಉತ್ತರಕರ್ನಾಟಕದ ಜವಾರಿ ಭಾಷೆ ಮಾತನಾಡೋರು ಸಿಕ್ಕಾಬಿಟ್ಟರೆ, ವಿದೇಶದಲ್ಲಿ ಒಬ್ಬ ಭಾರತೀಯನಿಗೆ ಇನ್ನೊಬ್ಬ ಭಾರತೀಯ ಸಿಕ್ಕಷ್ಟೇ ಖುಷಿ ಆಗುತ್ತದೆ ಅಂತ ಹೇಳೋದ್ರಲ್ಲಿ ಎರಡು ಮಾತಿಲ್ಲ. ಆ ನಾಡು ನುಡಿ ಸಂಸ್ಕೃತಿಯ ಸೆಳೆತದಲ್ಲಿರೋ ಅದ್ಭುತ ಶಕ್ತಿನೇ ಹಂಗೇರಿ. ನಾನು ಬೆಂಗಳೂರಿಗೆ ಬಂದಾಗಿನಿಂದ ಈ ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಜೆಪಿ ನಗರದಲ್ಲಿನೇ ಐದುವರ್ಷ ಕಳೆದದ್ದು. ಆಮೇಲೆ ಬೆಂಗಳೂರಿನ ದಕ್ಷಿಣಬಾಗದ ಜಯನಗರ, ಜೆಪಿ ನಗರ, ಬನಶಂಕರಿ, ಅಥವಾ ಬಿಟಿಎಂ ಹೀಗೆ ಯಾವುದೇ ಬಡಾವಣೆ ಇರಲಿ, ಇಲ್ಲಿ ಉತ್ತರ ಕರ್ನಾಟಕದ ಜನರ ಸಂಖ್ಯೆ ಬಹಳ ಕಡಿಮೆ. ಅದೇ ನೀವು ರಾಜಾಜಿನಗರ, ವಿಜಯನಗರ ಅಥವಾ ನಾಗರಬಾವಿ ಮುಂತಾದ ಬಡಾವಣೆಗಳಿಗೆ ಹೋದ್ರೆ, ಅಮೇರಿಕಾದಲ್ಲಿ ದೇಸಿಯರು ಸಿಗೋಹಾಗೆ, ಪ್ರತಿಕಿಲೋಮೀಟರ್ಗೆ ಒಂದು ಉತ್ತರಕರ್ನಾಟಕದ ಹೋಟೆಲ್, ಅಥವಾ ದಿನಸಿ ಅಂಗಡಿ ಇಲ್ಲಾಂದ್ರೆ ಉತ್ತರಕರ್ನಾಟಕದ ಜನ ಸಿಗೋದು ಸರ್ವೇ ಸಾಮಾನ್ಯ. ಬಹುಪಾಲು ತುಮಕೂರು ರೋಡಿನಿಂದ ಬರೋ ಆ ಭಾಗದ ಎಲ್ಲ ಬಸ್ಸುಗಳು ಮೊದಲು ನಿಲ್ಲೋದು ರಾಜಾಜಿನಗರದ ನವರಂಗ ಥಿಯೇಟರ್ ಹತ್ರ ಇರೋದ್ರಿಂದ ನಮ್ಮ ಉತ್ತರಕರ್ನಾಟಕದ ಜನ ಸುಮ್ಮನೆ ಎಲ್ಲಿ ದೂರ ಹೋಗೋದು ಬಿಡ್ರಿ ಅಂತ ಅಲ್ಲೇ ಸುತ್ತಮುತ್ತ ಸೆಟ್ಲ್ ಆಗಿರ್ಬಹುದೇನೋ.......

ಬೆಂಗಳೂರಿನ ದಕ್ಷಿಣಭಾಗದ ನಿವಾಸಿಯಾದ ನನಗೆ, ಒಂದು ವಾರದ ಹಿಂದೆ, ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ, ಜೆಪಿ ನಗರದ 7ನೇ ಹಂತದಲ್ಲಿ, ರೊಟ್ಟಿ ಮನೆ ಅಂತ ಒಂದು ಉತ್ತರಕರ್ನಾಟಕದ ದಿನಸಿ ಅಂಗಡಿ ಕಣ್ಣಿಗೆಬಿತ್ತು. ಅಷ್ಟೇ ಅಲ್ಲ, ಅಂಗಡಿಯವನು ಸಂಜೆ ಮಳೆಬರುವ ಹೊತ್ತಿನಲ್ಲಿ ಉತ್ತರಕರ್ನಾಟಕದ ಪ್ರಸಿದ್ಧ, ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿಗಳನ್ನು (ಮಿರ್ಚಿ ಬಜ್ಜಿ) ಹಂಗೆ ಬಾಣಲಿಯಿಂದ ಇಳಿಸ್ತಾಯಿದ್ದ..... ನಾಲಿಗೆ ಚುರ್ರ್ ಎಂದಿತು. ನಮ್ಮ ಕ್ಯಾಬ್ ಡ್ರೈವರ್ಗೆ ನಿಲ್ಲಿಸೋಕೆ ಹೇಳಿ ಅಲ್ಲೇ ಇಳಿದುಬಿಟ್ಟೆ. ಅಂಗಡಿಯವನ ಹತ್ರ ಹೋಗಿ ಎಷ್ಟಪ್ಪಾ ಒಂದು ಪ್ಲೇಟಿಗೆ ಅಂತ ಕೇಳ್ತಾ......ಹಂಗೆ ಸ್ವಲ್ಪ ಮುಂದುವರಿದು ಯಾವ ಊರಿನವರು, ಇಲ್ಲಿಗೆ ಬಂದು ಎಷ್ಟು ದಿನ ಅಂತೆಲ್ಲ ಕೇಳ್ತಾ ಮಾತಿಗಿಳಿದೆ. ಅವನು "ನಾವು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರಿನವರ ರೀ ಸರ, ಅಂದಂಗ ನಿಮ್ಮದು ಯಾವ ಊರರಿಪ" ಅಂದಾ. ಆಲಾಇವನ, ಇವನು ನಮ್ಮ ಊರಿನ ಹತ್ತಿರದವನಲೇಪಾ ಅಂತ ಬಹಳ ಖುಷಿ ಆಯಿತು. ಆಮೇಲೆ ಇದ್ದೆ ಇದೆ, ಪಕ್ಕದ ಊರಿನವ ಅಂದಮೇಲೆ ಆಕಡೆ ವಿಷಯಗಳು, ಮಳೆ, ಬೆಳೆ, ಅಂತ ಮಾತನಾಡುತ್ತ ಮನೆಯವರಿಗೆಲ್ಲ ಸೇರಿಸಿ ನಾಲ್ಕು ಪ್ಲೇಟ್ ಬಜ್ಜಿ ಪಾರ್ಸಲ್ ತೊಗೊಂಡು ಹೋಗಿ ಎಲ್ಲರೊಂದಿಗೆ ಹಂಚಿಕೊಂಡು ತಿಂದು ಸಂತೋಷಪಟ್ಟಿವಿ. ಆ ಅನುಭವ ಹೇಗಿತ್ತೆಂದ್ರೆ ನಮ್ಮ ಊರಿನಲ್ಲೇ ಕುಂತು ತಿಂದಷ್ಟೇ ಖುಷಿಯಾಯಿತು.....

ಒಟ್ಟಿನಲ್ಲಿ ಹೇಳೋದಂದ್ರೆ, ನಾವು ಎಲ್ಲೇ ಹೋದರು, ಹೇಗೆ ಇದ್ದರೂ,  ನಮ್ಮ ನಾಡು, ನುಡಿ, ಸಂಸ್ಕೃತಿ ಅನ್ನುವ, ನಾವು ಮರೆತರು ನಮ್ಮನ್ನ ಬಿಡದಿ ಮಾಯೆ ಅನ್ನೋಥರ, ಆ ಒಂದು ವ್ಯಕ್ತಿ ಅಥವಾ ವಸ್ತುವಿನ ಆಕಸ್ಮಿಕ ಭೇಟಿಯ ಮೂಲಕ ನಮ್ಮ ಮೂಲ ನೆಲೆಗೆ ಕರೆದುಕೊಂಡು ಹೋಗುವದರಲ್ಲಿ ಎರಡುಮಾತಿಲ್ಲ.....ನಾವು ಬೇರೆ ದೇಶದಲ್ಲಿದ್ದಾಗ ನಮ್ಮ ದೇಶದವನ್ನು ಕಂಡಾಗ, ಬೇರೆ ರಾಜ್ಯದಲ್ಲಿದ್ದಾಗ ನಮ್ಮ ರಾಜ್ಯದವರನ್ನು ಕಂಡಾಗ ಅಥವಾ ನಮ್ಮ ರಾಜ್ಯದಲ್ಲೇ ಬೇರ ಊರಿನಲ್ಲಿದಾಗ ನಮ್ಮ ಊರು/ಭಾಗದವರು ಭೇಟಿಯಾದಾಗ ಆಗುವ ಅನಿಸಿಕೆಗಳು ಒಂದೇ ರೀತಿಯ ಅನುಭವಗಳನ್ನು ಕೊಡುತ್ತವೆ.... 

ನಿಮಗೂ ಈ ತರಹದ ಅನುಭವಗಳು ಆಗಿದ್ದರೆ ಕೆಳಗಿನ ಕಾಮೆಂಟ್ ಭಾಗದಲ್ಲಿ ಹಂಚಿಕೊಳ್ಳಬಹುದು...... 

ಭಾನುವಾರ, ಮಾರ್ಚ್ 17, 2019

ಉತ್ತರ ಕರ್ನಾಟಕದ ಪ್ರಸಿದ್ಧ ಮಸಾಲೆ ಖಾರದ ಕಥೆ

ಉತ್ತರ ಕರ್ನಾಟಕ ಎಂದ ಕೂಡಲೆ ಒಮ್ಮೆಲೇ ತಲೆಯಲ್ಲಿ ಬರೋದು ವಿಭಿನ್ನ ಶೈಲಿಯ ಕನ್ನಡ, ತನ್ನದೇ ಆದ ವಿಶಿಷ್ಟವಾದ ಖಾದ್ಯಗಳು, ಮಾತಿನಲ್ಲಿ ಹಾಸ್ಯ ಮತ್ತು ರಸಿಕತೆ ತುಂಬಿದ ಜನ, ಇತ್ತ್ಯಾದಿ. ದಾವಣಗೆರೆಇಂದ ಬೀದರ್ ವರೆಗಿನ ಕರ್ನಾಟಕದ ಉತ್ತರ ದಿಕ್ಕಿನೆಡೆಗೆ ಹಬ್ಬಿರುವ ಈ ಗಂಡು ಮೆಟ್ಟಿದ ನಾಡು ಎಂದೆನಿಸಿಕೊಳ್ಳುವ ಭಾಗವೇ ಉತ್ತರ ಕರ್ನಾಟಕ. ಒಂದು ಕಡೆ ಮಹಾರಾಷ್ಟ್ರ, ಇನ್ನೊಂದು ಕಡೆ ಆಂಧ್ರ (ಈಗಿನ ತೆಲಂಗಾಣ), ಈ ಎರಡು ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿಗಳ ಅಪಾರವಾದ ಪ್ರಭಾವಕ್ಕೊಳಪಟ್ಟು, ಇತ್ತ ಶುದ್ಧ ಕನ್ನಡವೂ ಅಲ್ಲದ ಅತ್ತ ಮರಾಠಿ ಅಥವಾ ತೆಲುಗು ಅಲ್ಲದ ಒಂದು ಮಿಶ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡುಬಂದ ಈ ರಾಜ್ಯದ ಭಾಗ ಎನ್ನಬಹುದು. ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವ ಉತ್ತರ ಕರ್ನಾಟಕದ ಖಾದ್ಯಗಳೆಂದರೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಕಾಳು ಪಲ್ಯ, ಎಣ್ಣೆಗಾಯಿ ಪಲ್ಯ, ಶೇಂಗಾ ಹೋಳಿಗೆ, ಇತ್ತ್ಯಾದಿ. ಇವುಗಳಂತೆ ಈ "ಮಸಾಲೆ ಖಾರ" ಕೂಡ ಒಂದು ಪ್ರಮುಖ ಖಾದ್ಯನು ಹೌದು ಹಾಗು ತರಕಾರಿ ಮಾಡಲು ಬೇಕಾದ ಬಹುಮುಖ್ಯ ಸಾಮಗ್ರಿನೂ ಹೌದು. ಈ ಮಸಾಲೆ ಖಾರದ ನಾಮಾರ್ಥ ವಿವರಣೆ, ಅದರ ಉಪಯೋಗ, ಮಾಡುವ ವಿಧಾನ ಹಾಗು ಇದರ ಜೊತೆಗೆ ಅಂಟಿಕೊಂಡಿರುವ ನನ್ನ ಬಾಲ್ಯದ ನೆನಪುಗಳ ನಂಟು, ಇವುಗಳ ಬಗ್ಗೆ ಹೇಳುವ ಪ್ರಯತ್ನವೇ ಈ ಲೇಖನದ ಉದ್ದೇಶ.  

ನಮ್ಮ ಉತ್ತರ ಕರ್ನಾಟಕದ ಯಾರದೇ ಅಡುಗೆ ಮನೆಯಲ್ಲಿ ನೀವು ಇಣುಕಿದರೆ ಅಲ್ಲಿ ನಿಮಗೆ ಎರಡು ಭರಣಿಗಳು ಕಂಡುಬರುವುದು ಸರ್ವೇ ಸಾಮಾನ್ಯ. ಆ ಎರಡರಲ್ಲಿ ಒಂದಂತೂ ಉಪ್ಪಿನಕಾಯಿಗೆ ಮೀಸಲು. ಹಾಗಾದ್ರೆ ಇನ್ನೊಂದು ಭರಣಿ ಏನು? ಅದು ಬೇರೇನೂ ಅಲ್ಲ, ಮಸಾಲೆ ಖಾರ ಎಂಬ ಅಡುಗೆಗೆ ಬೇಕಾಗುವೆ ಈ ಪದಾರ್ಥವನ್ನು ಶೇಖರಿಸುವ ಭರಣಿ. ಈ ಮಸಾಲೆ ಖಾರವನ್ನು ನಮ್ಮ ಜನ 6 ತಿಂಗಳಿನಿಂದ ಒಂದು ವರ್ಷದ ವರೆಗೆ ಬೇಕಾಗುವಷ್ಟು ಮಾಡಿ ಉಪ್ಪಿನಕಾಯಿಯಂತೆ, ಚೀನಿ ಮಣ್ಣಿನ ಭರಣಿಗಳಲ್ಲಿ ಶೇಖರಿಸುವುದು ವಾಡಿಕೆ. ಹಾಗಾದ್ರೆ ಏನಪ್ಪಾ ಇದು ಮಸಾಲೆ ಖಾರ ಅಂದ್ರೆ? ಈ ಪದಾರ್ಥದ ಹೆಸರೇ ಹೇಳುವಂತೆ ಇದು ಅಡುಗೆಗೆ ಬೇಕಾಗುವ ಎರಡು ಪ್ರಮುಖ ವಸ್ತುಗಳಾದ ಮಸಾಲೆ ಪುಡಿ ಮತ್ತು ಇನ್ನೊಂದು ಖಾರದ ಪುಡಿಗಳ ಸಮ್ಮಿಶ್ರಣ. ನಮ್ಮ ಉತ್ತರ ಕರ್ನಾಟಕದ ಪ್ರತಿಯೊಂದು ತರಕಾರಿ, ಸಾರು ಹಾಗು ಕಾಳು ಪಲ್ಯ ಮಾಡಲು ಬೇಕಾದ ಅತ್ತ್ಯಂತ ಮುಖ್ಯವಾದ ಸಾಮಗ್ರಿ ಅಂದರೆ ತಪ್ಪಾಗಲಿಕ್ಕಿಲ್ಲ. ಈ ಹಳೆ ಮೈಸೂರು ಅಧವಾ ಕರ್ನಾಟಕದ ದಕ್ಷಿಣ ಭಾಗಕ್ಕೆ ಬಂದ್ರೆ ಇಲ್ಲಿ ಜನ ಸಾಂಬಾರ್ ಪುಡಿ ಅಂತ ಮಾಡೋದುಂಟು. ಆದರೆ ಇದರಲ್ಲಿ ನೀವು ಮೆಣಸಿನಕಾಯಿ ಬೆರೆಸದೆ, ಖಾರದ ಪುಡಿ ಅಂತ ಬೇರೆಯಾಗಿ ಮಾಡ್ತೀರಿ. ಇಷ್ಟೇ ನೋಡಿ ಎರಡಕ್ಕೂ ಇರೋ ವ್ಯತ್ಯಾಸ ಮತ್ತು ಹೋಲಿಕೆ ಅಂದ್ರೆ. ಈ ಮಸಾಲೆ ಖಾರದ ಇನ್ನು ಕೆಲವು ವಿಶೇಷಗಳೇನೆಂದ್ರೆ, ನಮ್ಮ ಕಡೆ ಜನಕ್ಕೆ ಬೆಳಗಿನ ಉಪಹಾರಕ್ಕೆ ಇಡ್ಲಿ-ವಡೆ-ದೋಸೆ ಇರ್ಲೇಬೇಕಂತಿಲ್ಲ, ಖಡಕ್ ಅಥವಾ ಬಿಸಿ ರೊಟ್ಟಿ. ಅದರ ಜೊತೆಗೆ ಪಲ್ಯ, ಮೊಸರು, ಚಟ್ನಿಪುಡಿ ಇದ್ದರೆ ಅಷ್ಟೆ ಸಾಕು. ಅಕಸ್ಮಾತ್ ಅದು ಸಿಗಲಿಲ್ಲ ಅಂದ್ರೆ ರೊಟ್ಟಿ ಜೊತೆ ಗಟ್ಟಿ ಮೊಸರಿಗೆ ಅರ್ಧ ಚಮಚೆ ಮಸಾಲೆ ಖಾರ ಮಿಕ್ಸ್ ಮಾಡಿ ಹೊಡೀತಾರೆ. ಇಲ್ಲಿ ಅದು ಚಟ್ನಿಯ ಪಾತ್ರವಹಿಸುತ್ತದೆ. ಕುದಿಸಿದ ಬೆಳೆ ಇರಲಿ, ಮೆಂಥೆಪಲ್ಯ, ಇತ್ಯಾದಿ ಸಪ್ಪೆ ಪಲ್ಯದಲ್ಲಿ ಕೂಡ ಇದನ್ನು ಚಟ್ನಿಪುಡಿ ತರ ಬೆರೆಸಿ ತಿನ್ನೋದುಂಟು. ಅದೇನೇ ಇರಲಿ ಈ ಮಸಾಲೆ ಖಾರ ಬೆರೆಸಿ ತಿಂದಾಗ ಬರೋ ಸ್ವಾದ ಇದೆ ನೋಡಿ ಅದನ್ನ ಮಾತಿನಲ್ಲಿ ಹೇಳೋಕಾಗಲ್ಲ, ಕೇವಲ ಅನುಭವಿಸಬೇಕು. 

ಸಾಂಬಾರ್ ಪುಡಿ ತರಹ ಈ ಮಸಾಲೆ ಖಾರಕ್ಕೂ ಕೂಡ ತನ್ನದೇ ಆದ ಮಾಡುವ ವಿಧಿ ವಿಧಾನಗಳಿವೆ, ಹಾಗು ಈ ವಿಧಾನಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮೌಖಿಕವಾಗಿ ಸಾಗುತ್ತ ಬಂದಿವೆ. ಈಗೆಲ್ಲ ಖಾರ ಕುಟ್ಟುವ ಮಷೀನ್ಗಳು ಬಂದಿರೋದ್ರಿಂದ ಬೇಕಾದ ಸಾಮಗ್ರಿಗಳನ್ನ ಗಿರಾಣಿಯವನಿಗೆ ಕೊಟ್ಟರೆ ಒಂದು ಘಂಟೆನಲ್ಲಿ ಅರೆದು ಕೊಟ್ಟಬಿಡ್ತಾನೆ. ಅಷ್ಟೆ ಏಕೆ ಕೆಲವೊಂದು ದೀನಸಿ ಅಂಗಡಿಗಳಲ್ಲಿ ರೆಡಿಮೇಡ್ ಮಸಾಲೆ ಖಾರದ ಪ್ಯಾಕೆಟ್ಗಳು ಕೂಡ ಸಿಗೋದುಂಟು. ಯಾಕಂದ್ರೆ ಜನರ ಹತ್ರ ಇದನ್ನೆಲ್ಲಾ ಮಾಡೋಕೆ ಸಮಯ ಇಲ್ಲ ನೋಡಿ. ಹಿಂದೆ ನಾವೆಲ್ಲಾ ಚಿಕ್ಕವರಿದ್ದಾಗ ಮನೆಯಲ್ಲೆ ಈ ಖಾರ ಕುಟ್ಟೋದು ವಾಡಿಕೆ. ಆಮೇಲೆ ಆ ಖಾರ ಕುಟ್ಟೋ ದಿನ ಅಂದರೆ ಒಂದು ತರಹದ ಹಬ್ಬದ ಸಡಗರ ಇದ್ದಹಾಗೆ. ಅಂದ್ರೆ ಮನೆ ಮಂದಿಯೆಲ್ಲ ಒಂದಿಲ್ಲ ಒಂದು ರೀತಿ ಈ ಕೆಲಸಕ್ಕೆ ಕೈಜೋಡಿಸುತ್ತಿದರು. ಸಾಮಾನ್ಯವಾಗಿ ಮಸಾಲೆ ಖಾರ ತಯಾರಿಸೋದಕ್ಕೆ ವರ್ಷದಲ್ಲಿ ಒಂದು ದಿನ ಅಂತ ಮುಂಚೆನೇ ನಿಗದಿಪಡಿಸ್ತಾರೆ, ಆಮೇಲೆ ಆ ದಿನ ಬರೋಕೆ ಮುಂಚೆ, ಸಂತೆಯಲ್ಲಿ ಇದಕ್ಕೆ ಬೇಕಾದ ಒಣ ಮೆಣಸಿನಕಾಯಿ ಮತ್ತು ವಿವಿಧ ಮಸಾಲೆ ಪದಾರ್ಥಗಳನ್ನು ಖರೀದಿಮಾಡಿ ಚನ್ನಾಗಿ ಬಿಸಿಲಲ್ಲಿ ಒಣಗಿಸಿ ತಯಾರಿ ಮಾಡಿಟ್ಟುಕೊಳ್ಳೋದುಂಟು. ಮೆಣಸಿನಕಾಯಿ ಅಂತ ಬಂದ್ರೆ ಇದರಲ್ಲಿ ಖಾರದ ಮೆಣಸಿನಕಾಯಿ ಮತ್ತು ಸಪ್ಪೆ, ಅಂದ್ರೆ ನಮ್ಮ ಪ್ರಸಿದ್ಧ ಬ್ಯಾಡಗಿ ಒಣಮೆಣಸಿನಕಾಯಿ ಅಂತ ವಿವಿಧ ಬಗೆಯ ಮೆಣಸಿನಕಾಯಿಗಳನ್ನ ಉಪಯೋಗಿಸೋದು ವಾಡಿಕೆ. ಕೆಲವೊಂದು ಕುಟುಂಬಗಳು ಖಾರ ಜಾಸ್ತಿ ತಿನ್ನೋದ್ರಿಂದ ಕೇವಲ ಖಾರದ ಮೆಣಸಿನಕಾಯಿ ಉಪಯೋಗಿಸ್ತಾರೆ, ಇಲ್ಲ ಮೀಡಿಯಂ ಖಾರ ಬೇಕಿದ್ರೆ ಮೂರು ಭಾಗ ಸಪ್ಪೆ ಬ್ಯಾಡಗಿ ಮೆಣಸಿನಕಾಯಿ ಮತ್ತು ಒಂದು ಭಾಗ ಖಾರ ಮೆಣಸಿನಕಾಯಿ ಮಿಶ್ರಣ ಮಾಡೋದು ಪದ್ಧತಿ. ಆಮೇಲೆ ಇದಕ್ಕೆ ಬೇಕಾದ ಇತರ ಸಾಮಗ್ರಿ ಅಂದ್ರೆ ಏಲಕ್ಕಿ, ಲವಂಗ, ಜೀರಿಗೆ, ದಾಲಚಿನ್ನಿ, ಕಲ್ಲು ಹೂವು, ಕೇಸರಿ ಹೂವು, ಪತ್ರಿ ಎಲೆ (Bay leaf), ಹೀಗೆ 10-14 ಮಸಾಲೆ ಪದಾರ್ಥಗಳು. ಇಲ್ಲಿ ಜನ ಬಹಳ ತೊಂದರೆ ತೊಗೊಳ್ಳದೆ, ಸಂತೆಯಲ್ಲಿ ಈ ಮಸಾಲೆಗಳನ್ನು ಮಾರುವವನಿಗೆ 2 kg ಖಾರಕ್ಕೆ ಬೇಕಾಗುವ ಮಸಾಲೆಗಳನ್ನು ಕೊಡಪ್ಪ ಅಂದ್ರೆ ಸಾಕು, ಅವನು ಸರಿಯಾಗಿ ಲೆಕ್ಕಹಾಕಿ ಎಲ್ಲವನ್ನು 50 ಅಥವಾ 100 g ಪೊಟ್ಟಣಗಳಲ್ಲಿ ಕಟ್ಟಿಕೊಟ್ಟುಬಿಡ್ತಾನೆ. ಇದು ಅವನಿಗೆ ತಲೆತಲಾಂತರದಿಂದ ಬಂದ ಅನುಭವ ಅಂತ ಹೇಳ್ಬಹುದು. ಇವುಗಳ ಜೊತೆಗೆ ಬೇಕಾಗುವ ಉಳಿದ ಸಾಮಗ್ರಿಗಳೆಂದ್ರೆ ಅರಿಶಿನ, ಒಣ ಕೊಬ್ಬರಿ ಮತ್ತು ಈರುಳ್ಳಿ, ಆಮೇಲೆ ಕರಿಯಲು ಎಣ್ಣೆ. ಆವಾಗಲೆಲ್ಲ ನಮ್ಮ ಮನೇಲಿ ನಮ್ಮ ಅಜ್ಜಿ ಮತ್ತು ಅಮ್ಮ ಈ ಮಸಾಲೆ ಖಾರವನ್ನ ಮನೇಲೆ ಕುಟ್ಟುತ್ತಿದ್ದರು. ಆಗ ನಾವೆಲ್ಲ ಅವರಿಗೆ ಸಹಾಯ ಅಂದ್ರೆ, ಅರಿಶಿನ ಕೊಂಬುಗಳನ್ನು ಒಡೆಯೋದು, ಒಣ ಕೊಬ್ಬರಿಯನ್ನು ಚಿಕ್ಕ ಚಿಕ್ಕ ಭಾಗಗಳಾಗಿ ಮುರಿಯೋದು, ಅಥವಾ ಇನ್ನ್ಯಾವುದೋ ಚಿಕ್ಕ ಪುಟ್ಟ ಸಹಾಯ ಮಾಡಿದ ನೆನಪುಗಳು ಉಂಟು. ಖಾರ ಕುಟ್ಟಲು ನಿಗದಿಯಾದ ದಿನ ಬಂತೆಂದ್ರೆ, ಅವತ್ತು ಮುಂಚೇನೆ ಬಿಸಿಲಿನಲ್ಲಿ ಒಣಗಿಸಿದ ಎಲ್ಲ ಸಾಮಗ್ರಿಗಳನ್ನ (ಮೆಣಸಿನಕಾಯಿಯನ್ನು ಬಿಟ್ಟು) ಸ್ವಲ್ಪ ಪ್ರಮಾಣದ ಎಣ್ಣೆಯಲ್ಲಿ ಚೆನ್ನಾಗಿ ಕರಿದು, ಮೆಣಸಿನಕಾಯಿಜೋತೆ ಒರಳು ಕಲ್ಲಿನಲ್ಲಿ ಕಬ್ಬಿಣದ ಒನಕೆಯಿಂದ ಚೆನ್ನಾಗಿ ಕುಟ್ಟುತ್ತಿದ್ದರು. ಆ ದಿನದ ವಿಶೇಷ ಏನಂದ್ರೆ, ಅವತ್ತು ಮನೆತುಂಬೆಲ್ಲ ಮಸಾಲೆ ವಾಸನೆ ಘಮಘಮಿಸುತ್ತಿತ್ತು. ಸಂಜೆ ಎನ್ನುವಷ್ಟರಲ್ಲಿ ಮಸಾಲೆ ಖಾರ ರೆಡಿಆಗಿ, ಸಂಜೆಯ ಅಡುಗೆಗೆ ಈ ತಾಜಾ ಖಾರವನ್ನೇ ಬಳಸುತಿದ್ದರು, ಆಮೇಲೆ ಈ ತಾಜಾ ಖಾರವನ್ನು ಬಳಸಿ ಮಾಡಿದ ಪಲ್ಯ, ಸಾರು ಅಥವಾ ಕಾರುಬೇಳೆ ಇವುಗಳ ರುಚಿ ಸೂಪರ್ ಅಂದ್ರೆ ಸೂಪರ್. ಏಕೆಂದ್ರೆ ಈ ಮಸಾಲೆ ಖಾರದ ಮಹಿಮೆನೆ ಹಾಗೆ. ಈ ರೀತಿ ತಯಾರಿಸಿದ ಮಸಾಲೆ ಖಾರವನ್ನು ಒಂದು ಸ್ವಚ್ಛವಾದ ಒಂದು ಚೀನಿ ಮಣ್ಣಿನ ಭರಣಿಯಲ್ಲಿ ಹಾಕಿ, ಸರಿಯಾಗಿ ಮುಚ್ಚಿ, ವರ್ಷಗಟ್ಟಲೆ ಉಪಯೋಗಿಸುತ್ತಾರೆ. ಈ ಬೆಂಗಳೂರಿನಲ್ಲಿ, ಮನೇಲಿ ಅದನ್ನ ಮಾಡಕ್ಕೂ ಆಗಲ್ಲ ಮತ್ತೆ ಹೊರಗಡೆನೂ ಎಲ್ಲೂ ಸಿಗಲ್ಲ, ಅದಕ್ಕೆ ನಮ್ಮ ಊರಿಗೇ ಹೋದಾಗ ಒಂದು ಅರ್ಧ ಕೆಜಿ ಎತ್ತಾಕೊಂಡು ಬರ್ತೀವಿ.  

ಇಷ್ಟೆಲ್ಲ ಹೇಳಿದ ಮೇಲೆ ನಿಮಗೂ ಇದನ್ನ ಸವಿಯೋ ಆಸೆ ಹುಟ್ಟಿದ್ರೆ, ನಮ್ಮ ಉತ್ತರ ಕರ್ನಾಟಕದ ಸ್ನ್ಹೇಹಿತರಿದ್ರೆ, ಅವರ ಮನೆಗೆ ಹೋಗಿ, ವಿಶೇಷವಾಗಿ ಮಸಾಲೆ ಖಾರ ಸ್ವಲ್ಪ ಟೇಸ್ಟ್ ಮಾಡಿ ಬನ್ನಿ, ನಂತರ ರುಚಿ ಹೇಗನಿಸಿತು ತಿಳಿಸೋದನ್ನ ಮರೀಬೇಡಿ....   

ನಾವು ಯಾವುದೇ ಭಾಗದವರಾಗಿರಲಿ, ನಮ್ಮ ಭಾಗ ಅಥವಾ ನಾಡು ಅಂತ ಬಂದಮೇಲೆ ಅದರ ವೈವಿದ್ಯತೆಯನ್ನು ಸಾರಿ ಹೇಳುವ ಒಂದು ವಿಶಿಷ್ಟವಾದ ವಸ್ತು ಅಥವಾ ಖಾದ್ಯ ಅಥವಾ ಕಲೆ, ಪರಂಪರೆ, ಸಂಸ್ಕೃತಿ ಅಂತ ಏನಾದರು ಒಂದು ಇದ್ದೆ ಇರುತ್ತದೆ. ಆ ತರಹದ ಒಂದು ವಿಶಿಷ್ಟವಾದ ವಸ್ತುವೇ ಈ "ಮಸಾಲೆ ಖಾರ". ಜಾಗತೀಕರಣದ ತೊಟ್ಟಿಲಲ್ಲಿ ತೂಗುತಿರುವ ನಮ್ಮ ಇಂದಿನ ಓಡಾಟದ ಬದುಕಿನಲ್ಲಿ ಸ್ವಲ್ಪ ಬಿಡುವು ಸಿಕ್ಕಾಗ  ಇಂತಹ ಒಂದು ವಿಶಿಷ್ಟವಾದ ವಸ್ತು ಅಥವಾ ವಿಷಯದ ನೆನಪು ಬಂದಾಗ ಅದಕ್ಕೆ ಸಂಬಂದಿಸಿದ ಅನೇಕ ಗತಿಸಿದ ಸುಮಧುರವಾದ ನೆನಪುಗಳ ಸರಮಾಲೆ ನಮ್ಮ ಕಣ್ಣಮುಂದೆ ಬರುವುದು ಸರ್ವೇ ಸಾಮಾನ್ಯ. ಅದೇ ರೀತಿ ನನ್ನ ನೆನಪಿಗೆ ಬಂದಿದ್ದು ಈ "ಮಸಾಲೆ ಖಾರದ ಕಥೆ"......ಬಹಳದಿನಗಳಿಂದ ಇದರ ಬಗ್ಗೆ ಬರಿಯಬೇಕೆನ್ನುವ ಯೋಚನೆ ಇತ್ತು, ವೇಳೆಯ ಅಭಾವದಿಂದ ಆಗಿರಲಿಲ್ಲ... ಕೊನೆಗೂ ಆ ಸಮಯ ಕೂಡುಬಂದ ಕಾರಣ ಇಂದು ಈ ಲೇಖನ ಪ್ರಸ್ತುತ ಪಡಿಸುತ್ತಿದ್ದೇನೆ.......ಓದಿ ನಿನ್ನ ಅನಿಸಿಕೆ ತಿಳಿಸಿರಿ....  

ಗುರುವಾರ, ಜನವರಿ 3, 2019

84ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗು ಕಂಬಾರರ ಮೂಡಲ ಮನೆಯ ಹಾಡು.....

ನಮ್ಮ ಕರ್ನಾಟಕ ರಾಜ್ಯದ ಶಿಕ್ಷಣ ಕಾಶಿ ಎಂದೇ ಹೆಸರುವಾಸಿ ಆಗಿರುವ ಪೆಡನಾಗರಿ, ಧಾರವಾಡದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಕನ್ನಡ ನುಡಿ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಈ ಸಮಯದಲ್ಲಿ ಸದರಿ ೮೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ Dr. ಚಂದ್ರಶೇಖರ ಕಂಬಾರ ಅವರು ರಚಿಸಿರುವ ಪ್ರಸಿದ್ಧ ಮೂಡಲ ಮನೆ ಧಾರಾವಾಹಿಯ ಎಂದೂ ಮರೆಯದ ಶೀರ್ಷಿಕೆ ಹಾಡಿನ ಆ ಸುಂದರ ಜಾನಪದ ಶೈಲಿಯ ಸಾಲುಗಳ ನೆನಪು ಮರುಕಳಿಸಿತು….

ನಮ್ಮೂರ ಅಗಸ್ಯಾಗ ಆಲದ ಮರ ಬೆಳೆದು
ಹಾದಿ ಬೀದೆಲ್ಲ ತಂಪ ನೆರಳ….

ರೆಂಬೆ ಕೊಂಬೆ ಮ್ಯಾಲ ಗೂಡ ಕಟ್ಟಿದಾವ
ರೆಕ್ಕಿ ಬಲಿತ ಹಕ್ಕಿ... ಗೂಡಿನ್ಯಾಗ ಮಲಿಗ್ಯಾವ ಮರಿ ಹಕ್ಕಿ
ದೂರ ದೇಶದ ವಲಸಿಗ ಹಕ್ಕಿಗೂ ಐತ್ರಿ ಜಾಗ ಒಳಗ...
ಬನ್ನಿರಿ ನೀವು ನಮ್ಮ ಬಳಗ.
ಹಳೆಯ ಬಾವಿಯ ತಳದ ನೀರಿನ್ಯಾಗ
ಹಸಿರು ಚಿಗುರತಾವ... ಬೇರಿನ ಮೊಳಕೆ ಒಡಿಯತಾವ
ಬೂತ ಬೇತಾಳ.... ಜೋತ ಬಾವಲಿ ಮ್ಯಾಲ ತೂಗತಾವ
ಮರದಾಗ ಕರಗ ಕುಣಿಯತಾವ.
ಮರದ ಎಲಿ ನೆರಳು ಮನೆಯ ಗ್ವಾಡಿಮ್ಯಾಲ ಆಡತಾವ ಆಟ
ಮೂಡ್ಯಾವ ತೊಗಲ ಗೊಂಬಿ ಆಟ
ಕರುಳ ಬಳ್ಳಿಯ ಕಥೆಯ ಹೇಳತಾವ
ನೋಡ್ರಿ ಶಾಂತ ಚಿತ್ತ.... ನಾವು ನೀವು ಅದರ ಭಾಗ ಮಾತ್ರ..... 
ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡಿನಲ್ಲಿ ಮಗದೊಮ್ಮೆ ನಡೆಯುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಮತ್ತು ನಮ್ಮ ನಾಡು, ನುಡಿ, ನೆಲ, ಜಲ, ಹಾಗು ನಮ್ಮ ಪರಂಪರೆಯ ಪರಿಚಯ ಎಲ್ಲೆಡೆ ಹಬ್ಬಲಿ ಎಂದು ಹಾರೈಸೋಣ…..
।। ಸಿರಿಗನ್ನಡಂ ಗೆಲ್ಗೆ ।।