ಭಾನುವಾರ, ಏಪ್ರಿಲ್ 25, 2021

ಕೊರೊನಾ ಎರಡನೇ ಅಲೆ: ರೆಮ್ಡೆಸಿವಿರ್ ಮತ್ತು ವಾಕ್ಸಿನುಗಳು.

"ರೆಮ್ಡೆಸಿವಿರ್", ಇದು ಮೊಟ್ಟ ಮೊದಲ ಬಾರಿಗೆ ಹೆಪಟೈಟಿಸ್-ಸಿ ಚಿಕಿತ್ಸೆಗೆ, ಗಿಲ್ಡ್ ಎಂಬ ಅಮೇರಿಕಾದ ಕಂಪನಿ ಅಭಿವೃದ್ಧಿಪಡಿಸಿದ ಔಷಧಿ. ನಂತರದ ದಿನಗಳಲ್ಲಿ ಕೆಲವು ದೇಶಗಳಲ್ಲಿ ತನ್ನ ಅಟ್ಟಹಾಸ ಮೆರೆದ ಎಬೋಲಾ ಎಂಬ ವೈರಾಣುವಿನಿಂದಾದ ಸಾಂಕ್ರಾಮಿಕ ರೋಗವನ್ನು ಚಿಕಿತ್ಸಿಸಲು ಪ್ರಯೋಗಿಸಲಾಯಿತು. ದುರದೃಷ್ಟವಶಾತ್ ಈ ಎರಡು ವೈರಸ್ಗಳ ಮೇಲೆ ರೆಮ್ಡೆಸಿವಿರ್ ತನ್ನ ಪರಿಣಾಮ ಬೀರಲಿಲ್ಲ. ಕಾರಣ ವಶಾತ್, ಅನೇಕ ವರ್ಷಗಳಕಾಲ ಈ ಔಷದಿ ಹೇಳಹೆಸರಿಲ್ಲದೆ ಒಂದು ಮೂಲೆ ಸೇರಿತ್ತು. ಆಮೇಲೆ, 2019 ರಲ್ಲಿ ವಕ್ಕರಿಸಿದ ಕೊರೊನ ವೈರಸ್ ಸೋಂಕಿನಿಂದ ಹರಡುತ್ತಿರುವ ಈ ಕೋವಿಡ್ ಮಹಾಮಾರಿಯನ್ನು ಹತ್ತಿಕ್ಕಲು, ಅನೇಕ ದಿನಗಳಿಂದ ಮೂಲೆ ಸೇರಿದ್ದ ರೆಮ್ಡೆಸಿವಿರ್ ಔಷಧಿಯನ್ನು ಮತ್ತೆ ಗಿಲ್ಡ್ ಕಂಪನಿ ಪ್ರಾಯೋಗಿಕ ಔಷಧಿಯಾಗಿ ಉಪಯೋಗಿಸಲು ನಿರ್ಧರಿಸಿತು. ಪ್ರಿಕ್ಲಿನಿಕಲ್ ಪ್ರಯೋಗಗಳಲ್ಲಿ ರೆಮ್ಡೆಸಿವಿರ್ ಉತ್ತಮ ಫಲಿತಾಂಶಗಳನ್ನು ನೀಡಿ, ಒಂದು ಆಶಾಕಿರಣವಾಗಿ ಹೊರಹೊಮ್ಮಿತು. ಆದರೆ, ನಂತರದ ಕ್ಲಿನಿಕಲ್ ಪ್ರಯೋಗಗಳಲ್ಲಿ (ಮಾನವನಮೇಲೆ ಪ್ರಯೋಗ) ಅಷ್ಟೊಂದು ಪರಿಣಾಮ ಬೀರದಿದ್ದರೂ, ಕೆಲವು ಸೋಂಕಿತ ವ್ಯಕ್ತಿಗಳ ಮೇಲೆ ಪ್ರಯೋಗಿಸಿದಾಗ ಇದು ಪರಿಣಾಮಕಾರಿಯಾಗಿ ಕಂಡುಬಂದಿತು. ಜಾಗತಿಕವಾಗಿ ಅನೇಕ ಸಾವಿರ ಸೋಂಕಿತ ವ್ಯಕ್ತಿಗಳ ಮೇಲೆ ಪ್ರಯೋಗಿಸಿದ ಫಲಿತಾಂಶಗಳ ಆಧಾರದ ಮೇಲೆ, ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿಗಳಿಗೆ ಈ ಔಷಧಿಯನ್ನು ಉಪಯೋಗಿಸಬಹುದೆಂದು ಪರವಾನಿಗೆ ಕೊಟ್ಟಿತು. ನಂತರ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದ ಮೇರೆಗೆ, ಗಿಲ್ಡ್ ಸಂಸ್ಥೆ ಭಾರತ ಮತ್ತು ಕೆಲವು ದೇಶಗಳ ಹತ್ತಾರು ಫಾರ್ಮಾಸುಟಿಕಲ್ ಕಂಪನಿಗಳಿಗೆ ಈ ಔಷಧಿಯನ್ನು ಭಾರಿ ಪ್ರಮಾಣದಲ್ಲಿ ಉತ್ಪಾದಿಸುವ ಮತ್ತು ಮಾರಾಟಮಾಡುವ ಹಕ್ಕನ್ನು ಕೊಟ್ಟಿತು. ಆದ್ದರಿಂದ, ಭಾರತದಂತಹ ದೇಶದಲ್ಲಿ ಕೂಡ ಈ ಔಷಧಿ ಎಲ್ಲರಿಗು ಸಿಗುವಂತಾಯಿತು. ಈ ಕೊರೊನ ವೈರಸನ ರೂಪಾಂತರಿಯ ಎರಡನೇ ಅಲೆ ಎಲ್ಲೆಮೀರಿ ತಾಂಡವವಾಡುತ್ತಿದೆ. ಇದಕ್ಕೆ ಜನರ ಬೇಜವಾಬ್ದಾರಿತನವೋ, ಸರಕಾರಗಳ ಪೂರ್ವ ತಯಾರಿಯ ವೈಫಲ್ಯವೋ, ಅದು ಬೇರೆ ಚರ್ಚೆಯ ವಿಷಯ. ನನ್ನ ಕೇಳಿದರೆ ಇಲ್ಲಿ ಇಬ್ಬರ ಪಾಲು ಇದೆ. ಮೊದಲನೇ ಅಲೆ ಇನ್ನೇನು ಮುಗಿದೇ ಹೋಯಿತು ಅಂತ ಮಾಸ್ಕ ಧರಿಸದೆ ಬೇಕಾಬಿಟ್ಟಿ ತಿರುಗುವುದು, ಮದುವೆ, ಮೆರವಣಿಗೆ, ಸಮಾರಂಭ ಹಾಗು ರಾಜಕೀಯ ಪ್ರಚಾರ ಸಭೆಗಳು ಎಲ್ಲೆಂದರಲ್ಲಿ, ನೀತಿನಿಯಮಗಳಲ್ಲೂ ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸಿದೆವು. ಎರಡನೇ ಅಲೆಯ ಬಗ್ಗೆ ಜಾಗತಿಕವಾಗಿ ಮುನ್ನೆಚ್ಚರಿಕೆ ಕೊಟ್ಟರು, ಯಾರು ಕ್ಯಾರೇ ಅನ್ನಲಿಲ್ಲ.

ಇದೆಲ್ಲದರ ಮಧ್ಯೆ, ರೋಗದ ವೈಪರಿತ್ತ್ಯ ಹೆಚ್ಚಾದಮೇಲೆ, ಆಸ್ಪತ್ರೆಗಳಿಗೆ ದಾಖಲಾದ ಅನೇಕ ರೋಗಿಗಳಿಗೆ, ಹೆಚ್ಚಿನ ವೈದ್ಯರು, ಈ ಸಮಯದಲ್ಲಿ ಸಂಜೀವಿನಿ ಎನಿಸಿಕೊಂಡಿರುವ ಈ "ರೆಮ್ಡೆಸಿವಿರ್" ಔಷಧಿಯನ್ನೇ ಪ್ರೇಸ್ಕ್ರೈಬ್ ಮಾಡುತ್ತಿರುವುದರಿದ, ರಾತ್ರೋರಾತ್ರಿ ಈ ಔಷಧೀಯ ಬೇಡಿಕೆ ಜಾಸ್ತಿ ಆಗಿದ್ದು ಸಹಜ. ಆದರೆ ಇದೆ ಪರಿಸ್ಥಿತಿಯನ್ನ ದುರುಪಯೋಗಪಡಿಸಿಕೊಂಡು ಅನೇಕ ದುರಾಸೆಯ ಕಿಡಿಗೇಡಿಗಳು, ಈ ಔಷಧಿಯನ್ನು ಅಕ್ರಮ ಸಂಗ್ರಹಣೆಮಾಡಿ, ದುಡ್ಡಿನ ಆಸೆಗಾಗಿ ಹೆಚ್ಚಿನ ಬೆಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟಮಾಡುತ್ತಿರುವ ವರದಿಗಳನ್ನು ಓದಿದರೆ, ಇದು ಹೆಂತಹ ದುರಂತ ಮತ್ತು ನಾಚಿಕೆಗೇಡು ಸಂಗತಿ ಎನಿಸುತ್ತದೆ.

ರೆಮ್ಡೆಸಿವಿರ್ ಔಷಧಿಯ ಜೊತೆಗೆ, ಈಗ ನಮ್ಮೆಲ್ಲರಿಗೆ ಆಶಾಕಿರಣವಾಗಿರುವ ಇನ್ನೊಂದು ಜೀವ ಉಳಿಸುವ ಅಸ್ತ್ರವೆಂದರೆ ವಾಕ್ಸಿನುಗಳು, ಬೇರೆ ಬೇರೆ ಫಾರ್ಮ ಕಂಪನಿಗಳು, ಬೇರೆ ಬೇರೆ ಜೈವಿಕ ತಂತ್ರಜ್ಞಾನ ಬಳಸಿ ಅನೇಕ ವ್ಯಾಕ್ಸೀನ್ಗಳನ್ನೂ (ಲಸಿಕೆ) ಅಭಿವೃದ್ಧಿಪಡಿಸಿವೆ. ನಮ್ಮ ದೇಶದಲ್ಲಿಯೂ ಕೂಡ ಎರಡು ಕಂಪನಿಗಳ ವಾಕ್ಸಿನುಗಳು ಹೊರಬಂದಿವೆ. ಈ ವೈರಸ್ಸಿಗಾಗಿಯೇ ವಾಕ್ಸಿನುಗಳು ಬಂದವೋ ಅಥವಾ ವಾಕ್ಸಿನುಗಳಿಗಾಗಿಯೇ ಈ ವೈರಸ್ಸು ಜನ್ಮತಾಳಿತೋ ಅದು ಕೂಡ ಬೇರೆ ಚರ್ಚೆಯ ವಿಷಯ. ಆದರೆ ಈಗ ಈ ವೈರಸ್ ಜೊತೆ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಕಣಗಳಾದ ಆಂಟಿಬಾಡೀಸ್ ಬೆಳೆಯಬೇಕೆಂದರೆ ಈ ವ್ಯಾಕ್ಸೀನ್ ತೆಗೆದುಕೊಳ್ಳುವುದು ಅವಶ್ಯವಾಗಿದೆ. ಬಹಳ ಜನ ಈ ವ್ಯಾಕ್ಸಿನುಗಳನ್ನು ತೆಗೆದುಕೊಳ್ಳಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ, ಬರಿಗೈಯಿಂದ ಯುದ್ಧಕ್ಕೆ ಹೊರಡುವುದಕ್ಕಿಂತ, ಸಿಕ್ಕ ಕೆಲವು ಅಸ್ತ್ರಗಳೊಂದಿಗೆ ಯುದ್ಧವನ್ನು ಎದುರಿಸಿ ಪ್ರಾಣವುಳಿಸಿಕೊಳ್ಳುವುದು ಅತೀ ಅವಶ್ಯವಾಗಿದೆ. ಈಗಾಗಲೇ ಬಹಳ ಜನ ಈ ಲಸಿಕೆಗಳನ್ನು ತೆಗೆದುಕೊಂಡಿದ್ದು, ಸುರಕ್ಷಿತವಾಗಿವೆ ಎಂಬ ವರದಿಗಳು ಕೇಳಿಬಂದಿವೆ. ರೆಮ್ಡೆಸಿವಿರ್ ಔಷಧಿಯು, ಈ ವೈರಸ್ಸು ನಮ್ಮ ದೇಹದಲ್ಲಿರುವ ಜೀವಕೋಶಗಳನ್ನು ಸೇರಿ ಇನ್ನೇನ್ನು ತನ್ನ ಮರಿಗಳನ್ನು ಉತ್ಪಾದಿಸುತ್ತದೆ ಅನ್ನುವಷ್ಟರಲ್ಲಿ, ಅದರ ಕೆಲವೊಂದು ಪ್ರೊಟೀನುಗಳಮೇಲೆ ತನ್ನ ಪ್ರಭಾವ ಬೀರಿ, ವೈರಸ್ ಅನ್ನು ಸರ್ವನಾಶಮಾಡುತ್ತದೆ. ಆದರೆ ವಾಕ್ಸಿನುಗಳು ಹಾಗಲ್ಲ, ಅಕಸ್ಮಾತ್ ಸೋಂಕು ತಗುಲಿ, ವೈರಸ್ ನಮ್ಮ ದೇಹ ಸೇರಿ, ಜೀವಕೋಶಗಳ ಒಳಗೆ ಹೋಗುವ ಮುಂಚೆಯೇ, ಅದನ್ನು ಹೊಡೆದುರುಳಿಸುತ್ತವೆ. ರೆಮ್ಡೆಸಿವಿರ್ ತೊಗೊಳ್ಳುವಷ್ಟು ದುಃಸ್ಥಿತಿಗೆ ಹೋಗುವುದು ಬೇಡ ಎನ್ನುವವರು, ವಾಕ್ಸಿನನ್ನು ತೆಗೆದುಕೊಂಡು ವೈರಸ್ ಜೊತೆ ಹೋರಾಡಲು ಸದೃಢರಾಗಬಹುದು.

ಇನ್ನು, ಯಾಕಪ್ಪ ಸುಮ್ನೆ ಈ ವ್ಯಾಕ್ಸೀನ್ ಅಥವಾ ರೆಮ್ಡೆಸಿವಿರ್ ಗೋಜಿಗೆ ಹೋಗೋದು ಅನ್ನುವವರು, ಒಳ್ಳೆಯ ಆಹಾರ, ಯೋಗ-ವ್ಯಾಯಾಮ, ಅಥವಾ ಆಯುರ್ವೇದ-ಮನೆ ಔಷಧಿಗಳನ್ನು ಸೇವಿಸುತ್ತಾ, ಎಲ್ಲ ರೀತಿಯ ವೈರಸ್ಗಳೊಂದಿಗೆ ಹೋರಾಡಬಲ್ಲ ಸದೃಢ ರೋಗನಿರೋಧಕ ಶಕ್ತಿಯನ್ನ ಬೆಳೆಸಿಕೊಳ್ಳುವುದರ ಜೊತೆಗೆ, ಕೊರೊನ ಮಾರ್ಗಸೂಚಿಗಳನ್ನು (ಮಾಸ್ಕ, ಸ್ಯಾನಿಟೈಸರ್, ಕೈ ತೊಳೆಯುವುದು, ಸುರಕ್ಷಿತ ಸಾಮಾಜಿಕ ಅಂತರ) ಕಟ್ಟುನಿಟ್ಟಾಗಿ, ಚಾಚೂತಪ್ಪದೆ ಪಾಲಿಸಿ, ನಿಮ್ಮ ಮತ್ತು ಇತರರ ಅರೋಗ್ಯ ಕಾಪಾಡುವ ಮಹದೋದ್ದೇಶ ಹೊಂದಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವತ್ತ ಚಿಂತಿಸಿರಿ. ಬನ್ನಿ! ಒಟ್ಟಾಗಿ ಹೋರಾಡಿ, ಈ ಕೊರೊನದ ಎಷ್ಟು ಅಲೆಗಳು ಬಂದರು, ಅವುಗಳನ್ನು ಹೊಡೆದೋಡಿಸಿ ಯಶಸ್ವಿಯಾಗೋಣ.......