ಭಾನುವಾರ, ಏಪ್ರಿಲ್ 26, 2020

"ಲಾಕಡೌನ್" ಎಂಬ ಗೃಹಬಂಧನದಲ್ಲಿ.....

ಕೋವಿಡ್19 ಎಂಬ ಸಾಂಕ್ರಾಮಿಕ ರೋಗ ಮಹಾಮಾರಿಯಾಗಿ ಇಡೀ ಜಗತ್ತನ್ನೇ ಕಾರ್ಮೋಡದಂತೆ ಆವರಿಸಿಕೊಂಡಿದೆ. ಈಗಾಗಲೇ ಜಾಗತಿಕವಾಗಿ ಸರಾಸರಿ 60 ಲಕ್ಷಕ್ಕೂ ಮೇಲ್ಪಟ್ಟು ಜನರು ಈ ಕಾಯಿಲೆಯಿಂದ ಸೋಂಕಿತರಾದರೆ, ಮೂರು ಲಕ್ಷ ಎಪ್ಪತ್ತು ಸಾವಿರಕ್ಕೂ ಮೇಲ್ಪಟ್ಟು ಜನ ಪ್ರಾಣಕಳೆದುಕೊಂಡಿದ್ದಾರೆ. ಅದರ ಜೊತೆಗೆ ಇಪ್ಪತ್ತೇಳು ಲಕ್ಷಕ್ಕೂ ಮೇಲ್ಪಟ್ಟು ಜನ ಗುಣಮುಖರಾಗಿದ್ದಾರೆ ಅನ್ನುವ ಒಳ್ಳೆಯ ಸುದ್ದಿಯು ಇದೆ. ಈ ರೋಗದ ಭೀಕರತೆ ಇಡೀ ಭೂಮಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಹಿಂತಹ ಆಧುನಿಕ ಯುಗದಲ್ಲಿಯೂ ಕೂಡ ಸೂಕ್ತ ಚಿಕಿತ್ಸೆಯ ಅಭಾವದಿಂದ, ಒಂದು ಸೂಕ್ಷ್ಮಾಣು ಜೀವಿಯ ಹೊಡತಕ್ಕೆ, ಅಸಹಾಯಕನಾಗಿ ಕೈಚೆಲ್ಲಿ ಕುಳಿತಿದ್ದಾನೆ ಮನುಷ್ಯ.

ಈ ಸಾಂಕ್ರಾಮಿಕ ಕಾಯಿಲೆಗಳೇ ಹಾಗೆ. ನನಗೆ ನೆನಪಿದೆ, ಚಿಕ್ಕವನಿದ್ದಾಗ ನಮ್ಮ ಅಜ್ಜಿ ಹೇಳ್ತಿದ್ದು. ಬಹಳ ದಿನಗಳ ಹಿಂದೆ ಪ್ಲೇಗ್ ಎಂಬ ಮಹಾಮಾರಿ ಬರುತ್ತಿತ್ತಂತೆ. ಅದು ಬಂದರೆ ಅನೇಕ ಜನರ ಪ್ರಾಣಹಾನಿ ಆಗುತ್ತಿತ್ತಂತೆ. ಅವಾಗ ಅಷ್ಟೊಂದು ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ, ಒಂದು ಊರಲ್ಲಿ ಯಾರಿಗಾದರೂ ಪ್ಲೇಗ್ ಬಂದರೆ ಊರಿಗೆ ಊರೇ ಖಾಲಿಯಾಗಿ ಜನರೆಲ್ಲಾ ಬೇರೆಕಡೆ ವಲಸೆ ಹೋಗುತ್ತಿದ್ದರಂತೆ. ನಂತರ ಅದಕ್ಕೆ ಲಸಿಕೆ ಅಥವಾ ವ್ಯಾಕ್ಸಿನ್ ಬಂದಮೇಲೆ ಆ ಕಾಯಿಲೆ ನಿರ್ನಾಮವಾಯಿತು, ಆ ಮಾತು ಬೇರೆ. ಇದೆ ರೀತಿ ಕಾಲೆರಾ, ಮಲೇರಿಯಾ, ಸ್ವಾಯಿನ್ ಫ್ಲೂದಂತಹ ಸಾಂಕ್ರಾಮಿಕ ರೋಗಗಳು ಬಂದು ಹೋದ ಇತಿಹಾಸವಿದೆ.

ಕೊರೊನ ಎಂಬ ವೈರಸ್ ಸೋಂಕಿನಿಂದ ಬರುವ ಈ ಕಾಯಿಲೆ, ನೆವೆಂಬರ 2019 ರಲ್ಲಿ ಮೊದಲುಬಾರಿಗೆ ಚೀನಾದ ವುಹಾನ್ ಎಂಬ ನಗರದಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಮೊದಲು ಅಷ್ಟೊಂದು ತೀವ್ರವಾಗಿ ಯಾರೂ ಚಿಂತಿಸಲಿಲ್ಲ ಆದರೆ ನೋಡು ನೋಡುತ್ತಲೇ ಈ ಕಾಯಿಲೆ ಹರಡುತ್ತಲೇ ಹೋಗಿ ಚೀನಾದಲ್ಲಿ ಸಾವಿರಾರು ಜನರ ಜೀವ ತೆಗೆದುಕೊಂಡು, ನಂತರ ದಕ್ಷಿಣ ಕೊರಿಯಾ, ಜಪಾನ್, ಇಟಲಿ, ಇರಾನ್, ಫ್ರಾನ್ಸ್, ನಂತರ ದೊಡ್ಡಣ್ಣ ಅಮೆರಿಕಾ, ಹೀಗೆ ಸಂಪರ್ಕ, ಸಹವಾಸ ಮತ್ತು ಪ್ರಯಾಣದ ಮೂಲಕ ಒಬ್ಬರಿಂದೊಬ್ಬರಿಗೆ ಹಬ್ಬುತ್ತಹೋಯಿತು. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಣೆ ಮಾಡಿಯೇಬಿಟ್ಟಿತು.

ನಮ್ಮ ಭಾರತದಲ್ಲಿ ಇನ್ನು ಯಾವುದೇ ಕೇಸ್ ಇಲ್ಲ ಎಂದು ಎಂದು ನಿರಾಳವಾಗಿ ನಿಟ್ಟುಸಿರು ಬಿಡುತ್ತಿರುವಾಗ, ಜನೆವರಿ 30 ಕ್ಕೆ ವುಹಾನ್ ದಿಂದ ಬಂದಂತಹ ಒಬ್ಬ ಕೇರಳದ ವಿದ್ಯಾರ್ಥಿಗೆ ಸೋಂಕು ತಗುಲಿದ ಮೊದಲ ಕೇಸು ರಿಪೋರ್ಟ್ ಆಗಿಯೇಬಿಟ್ಟಿತು. ಅಯ್ಯೋ! ನಮ್ಮಲ್ಲಿಯೂ ಬಂದೇಬಿಟ್ಟಿತೇ ಈ ಕಾಯಿಲೆ ಅನ್ನುವಷ್ಟರಲ್ಲಿಯೇ, ಫೆಬ್ರುವರಿ 24 ಕೆಲಸದ ನಿಮಿತ್ತ್ಯವಿದೇಶಕ್ಕೆ ಹೋಗಿಬಂದ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿಗೆ ಕೊರೊನ ಸೋಂಕು ಕಾಣಿಸಿಕೊಳ್ಳುತ್ತದೆ. ಇದೆ ಕರ್ನಾಟಕಕ್ಕೆ ಮೊದಲ ಪ್ರವೇಶ. ಹೀಗೆ ನೋಡು ನೋಡುವಷ್ಟರಲ್ಲಿಯೇ ಬೇರೆ ಬೇರೆ ದೇಶಗಳಿಂದ ಬಂದವರಿಂದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಈ ಸೋಂಕಿನ ಪಾಸಿಟಿವ್ ಕೇಸುಗಳು ಹೊರಬರ್ತಾ ಹೋಗುತ್ತವೆ. ಸರ್ಕಾರಗಳು ಹೀಗೆ ಸ್ವದೇಶಕ್ಕೆ ಬಂದವರಲ್ಲಿ ಸೋಂಕಿನ ಲಕ್ಷಣ ಕಂಡುಬಂದವರನ್ನು ಆಸ್ಪತ್ರೆಗಳಿಗೆ ಸೇರಿಸಿ, ಉಳಿದವರನ್ನು ಮನೆಯಲ್ಲಿಯೇ 14-15 ದಿನ ಗೃಹಬಂಧನದಲ್ಲಿಡಲು ಆದೇಶ ಹೊರಡಿಸುತ್ತವೆ. ಮಾರ್ಚ 12ನೇ ತಾರೀಕು ಕರ್ನಾಟಕದ ಕಲಬುರ್ಗಿಯಲ್ಲಿ ಮೊದಲ ಕೊರೊನ ಸೋಂಕಿತ ವ್ಯಕ್ತಿಯ ಸಾವಿನ ಸುದ್ದಿಇಂದ ಎಚ್ಛೆತ್ತುಕೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚುವ ಆದ್ನೇ ಹೊರಡಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವತ್ತ ಚುರುಕಾದವು. ಆದರೂ ಯಾಕೋ ಈ ನಿರ್ಧಾರ ತಡವಾಯಿತೇನೋ ಅನಿಸುತ್ತದೆ.

ಮೊದಲೇ ಈ ಕಾಯಿಲೆಗೆ ಮದ್ದಿಲ್ಲ ಆ ಕಡೆ ಇಟಲಿ, ಇರಾನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಟಪಟಪನೆ ಹೆಣಗಳು ಬೀಳುತ್ತಿವೆ. ಅಕಸ್ಮಾತ್ ಅದೇರೀತಿ ನಮ್ಮ ದೇಶದಲ್ಲಿ ಈ ಕಾಯಿಲೆ ತೀವ್ರಗತಿಯಲ್ಲಿ ಹರಡುತ್ತಾ ಎರಡನೇ ಮತ್ತು ಮೂರನೇ ಹಂತಕ್ಕೆ ತಲುಪಿದರೆ, ಅಷ್ಟೊಂದು ರೋಗಿಗಳಿಗೆ ಶುಶ್ರುಷೆ ಮಾಡಲು ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಇಲ್ಲ, ವೆಂಟಿಲೇಟರ್ಗಳೊ ಸುಮಾರು ಒಂದು ಲಕ್ಷ ಇರಬಹುದು. ಹಿಂತಹ ತುರ್ತುಪರಿಸ್ಥಿತಿಯಲ್ಲಿ ಬೇರೆ ದೇಶಗಳಿಂದ ಆಮದುಮಾಡಿಕೊಳ್ಳೋದು ಅಸಾಧ್ಯ. ಸಾಧ್ಯವಾದಷ್ಟು ಹೆಚ್ಚು ಜನರನ್ನು ಪ್ರರೀಕ್ಷೆ ಮಾಡಲು ಟೆಸ್ಟ್ ಕಿಟ್ಟಗಳ ಸಂಖ್ಯೆ ಕೂಡ ಕಡಿಮೆ ಇತ್ತು. ಆಗ ಈ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟಲು ಮುಂದಿರುವ ಒಂದೇ ಮಾರ್ಗ, ಲಾಕಡೌನ್. ಅಂದರೆ ಅವಶ್ಯಕ ಸೇವೆಗಳನ್ನು (ವೈದ್ಯಕೀಯ ಮತ್ತು ದಿನಸಿ ಅಂಗಡಿ) ಹೊರತುಪಡಿಸಿ, ಸಾರಿಗೆ, ವ್ಯಾಪಾರ ವಹಿವಾಟು, ಶಾಲಾ-ಕಾಲೇಜು, ಸರ್ಕಾರೀ ಮತ್ತು ಖಾಸಗಿ ನೌಕರಿ ಎಲ್ಲವನ್ನು ನಿರ್ಧಿಷ್ಟ ದಿನಗಳ ಮಟ್ಟಿಗೆ ಸ್ತಬ್ದಗೊಳಿಸಿ, ಎಲ್ಲರನ್ನು ಮನೆಯಲ್ಲಿ ಇರಿಸುವ ಕಟ್ಟುನಿಟ್ಟಿನ ವ್ಯವಸ್ಥೆ. ಅದೇ ಪ್ರಕಾರ ಭಾರತದ ಪ್ರಧಾನ ಮಂತ್ರಿಗಳು ಮಾರ್ಚ್ 22ಕ್ಕೆ ಜನತಾ ಕರ್ಫ್ಯೂ ಎಂಬ ಒಂದುದಿನದ ಗೃಹಬಂಧನದ ಪ್ರಯೋಗಮಾಡಿ, ಮಾರ್ಚ್ 24ರ ಸಂಜೆ 21 ದಿನಗಳ ಮೊದಲ ಹಂತದ ಲಾಕಡೌನ್ ಘೋಷಣೆ ಮಾಡಿಯೇಬಿಟ್ಟರು......ಅಷ್ಟೇ ಸಾಕು ದೇಶಕ್ಕೆ ದೇಶವೇ ಸ್ತಬ್ಧವಾಗಿ, ಎಲ್ಲೆಲ್ಲೂ ನೀರವ ಮೌನ ಆವರಿಸಿಕೊಂಡಿತು. ಬಸ್, ರೈಲು, ವಿಮಾನಗಳೆಲ್ಲ ನಿಲ್ದಾಣ ಸೇರಿದವು. ರಸ್ತೆಗಳು ಖಾಲಿ ಖಾಲಿ. ವ್ಯಾಪಾರ-ವಹಿವಾಟುಗಳು ನಿಂತುಹೋಗಿ ಅಂಗಡಿಮುಗ್ಗಟ್ಟುಗಳೆಲ್ಲ ಮುಚ್ಚಿಹೋದವು. ದಿನದ 24 ಗಂಟೆ ಎಲ್ಲರು ತೆಪ್ಪಗೆ ತಮ್ಮ ತಮ್ಮ ಮನೆಯಲ್ಲೇ ಇರಬೇಕಾದ ಸ್ಥಿತಿ. ಆದರೆ ಹಿಂತಹ ತುರ್ತು ಪರಿಸ್ಥಿತಿಯಲ್ಲಿಯೂ ಹಗಲಿರುಳು ಶ್ರಮವಹಿಸುತ್ತಿರುವವರು, ಲಾಕಡೌನ್ ಅಚ್ಚುಕಟ್ಟಾಗಿ ನಡೆಸಲು ಸಕ್ರಿಯ ಪಾತ್ರವಹಿಸುತ್ತಿರುವ ಪೊಲೀಸರು, ತಮ್ಮ ಜೀವದ ಹಂಗನ್ನೇ ಮರೆತು ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನಮ್ಮ ವೈದ್ಯರು ಮತ್ತು ಅರೋಗ್ಯ ಇಲಾಖೆಯ ಕಾರ್ಯಕರ್ತರು ಹಾಗು ನಮ್ಮ ಊರು, ನಗರಗಳನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರು. ಈ ಸಮಯದಲ್ಲಿ ಇವರೆಲ್ಲರಿಗೂ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ. ಅವರ ಸೇವೆ ಮಾತ್ರ ಶ್ಲಾಘನೀಯ.

ಗೃಹಬಂಧನದ ಘೋಷಣೆ ಆಗಿ ದೇಶವೆಲ್ಲಾ ಸ್ತಬ್ಧವಾಯೀತು, ಆದರೆ ನಿಜವಾದ ಸಮಸ್ಯೆಗಳು ಶುರುವಾಗಿದ್ದು ಇಲ್ಲಿಂದ. ನಮ್ಮ ಭಾರತ ವಿವಿಧ ಭಾಷೆ, ಸಂಸ್ಕೃತಿ, ನಂಬಿಕೆ, ವಿಚಾರ, ಬಡ, ಮಧ್ಯಮ, ಸಿರಿಮಂತ ವರ್ಗಗಳನ್ನೊಳಗೊಂಡ ದೇಶ. ಇಂತಹ ವಿವಿಧತೆಯುಳ್ಳ ದೇಶದಲ್ಲಿ ಎಲ್ಲರನ್ನು ಇಷ್ಟು ದಿನಗಳ ಕಾಲ ಒಟ್ಟಿಗೆ ಹಿಡಿದಿತ್ತು ಏಕತೆಯನ್ನು ಸಾಧಿಸುವುದು ಕಷ್ಟಸಾಧ್ಯ. ಹೊರಗಡೆ ಪೊಲೀಸರ ಲಾಠಿ ಏಟಿಗೆ ಹೆದರಿ ಮಧ್ಯಮ ಮತ್ತು ಶ್ರೀಮಂತವರ್ಗ ತಮ್ಮ ಮನೆಸೇರಿದರು, ಆದರೆ ಈ ನಿರ್ಧಾರದಿಂದ ನಿಜವಾಗಿ ತೊಂದರೆಗೀಡಾದವರು ದಿನಗೂಲಿಯನ್ನೇ ನಂಬಿ ನಗರಗಳಿಗೆ ಹೊಟ್ಟೆತುಂಬಿಕೊಳ್ಳಲು ವಲಸೆಬಂದ ಬಡ ಕಾರ್ಮಿಕವರ್ಗ. ಲಾಕಡೌನ್ ಆದಮೇಲೆ ಬದುಕೇ ಸ್ತಬ್ಧವಾಗಿದೆ, ಕೈಗೆ ಕೆಲಸವಿಲ್ಲ ಅಂದಮೇಲೆ ಸಂಸಾರ ಹೇಗೆ ನಡೆಸೋದು, ಜೊತೆಗೆ ಈ ರೋಗದ ಭೀತಿ ಬೇರೆ. ಸರ್ಕಾರಗಳೇನೋ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಮೂರು ತಿಂಗಳ ತುರ್ತು ಪ್ಯಾಕೇಜ್ ಘೋಷಣೆ ಮಾಡಿದವು, ಆದರೆ ಅವೆಲ್ಲ ಅನುಷ್ಠಾನಕ್ಕೆ ಬರಲು ಸಮಯಬೇಕು. ಎಲ್ಲರು ಎಲ್ಲಿದ್ದೀರಿ ಅಲ್ಲೇ ಇರಿ, ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಕೇಳಿಕೊಂಡರು ಏನು ಮಾಡಬೇಕೆಂದು ತೋಚದ ಇಕ್ಕಟ್ಟಿನ ಮನಸ್ಥಿತಿಯಲ್ಲಿದ್ದ ಕಾರ್ಮಿಕವರ್ಗ ಗಂಟು ಮೂಟೆ ಕಟ್ಟಿಕೊಂಡು ತಮ್ಮ ಮಕ್ಕಳುಮರಿಗಳನ್ನು ಕರೆದುಕೊಂಡು ಗುಳೆ ಅಂತ ತಮ್ಮ ಊರುಸೇರಿಕೊಳ್ಳಲು ಹೊರಟೇಬಿಟ್ಟರು. 3-4 ದಿನಗಳ ಕಾಲ ಊಟ, ನಿದ್ರೆ ಇಲ್ಲದೆ ಕಂಕುಳಲ್ಲಿ ಮಕ್ಕಳನ್ನು ಹೊತ್ತುಕೊಂಡು ನೂರಾರು ಕಿಲೋಮೀಟರ್ಗಳಷ್ಟು ದೂರ ನಡೀತಾ ಹೋಗೋ ದೃಶ್ಯ ಹೆಂತವರ ಹೃದಯವನ್ನು ಕರಗಿಸುವಂತಿತ್ತು. ಹಸಿವು ದಣಿವಿನಿಂದ ಮಕ್ಕಳ ಮುಖ ಸೊರಗಿಹೋಗಿವೆ. ನೋಡಲಾಗದೆ ಎಷ್ಟೋ ಜನ ಅವರಿಗೆ ರಸ್ತೆಯಲ್ಲಿ ಅನ್ನ ನೀರಿನ ತಾತ್ಕಾಲಿಕ ವ್ಯವಸ್ಥೆ ಮಾಡಿ ಉದಾರತನ ಮೆರೆದರು. ಪರಿಸ್ಥಿತಿ ಅರಿತ ಕೆಲವು ರಾಜ್ಯಸರಕಾರಗಳು ಸಾರಿಗೆ ವ್ಯವಸ್ಥೆ ಮಾಡಿ ಕೆಲವು ಮಟ್ಟಿಗೆ ಸಹಾಯಮಾಡಿ ಈ ಮೂರೂ ನಾಲ್ಕು ದಿನಗಳ ಘೋರ ದೃಶ್ಯಗಳಿಗೆ ತೆರೆ ಎಳೆದವು. ಆದರೂ ಇನ್ನು ಪರಿಸ್ಥಿತಿ ಸುಧಾರಿಸಿಲ್ಲ, ಕೆಲವು ಭಾಗಗಳಲ್ಲಿ ಮತ್ತು ನಗರಗಳಲ್ಲಿ ಜನರ ಆರ್ಥಿಕ ಸ್ಥಿತಿ ಸುಧಾರಿಸಲು ತಿಂಗಳುಗಳೇ ಬೇಕು.

ಆದರೆ ನನ್ನ ಪ್ರಕಾರ ಹಿಂತಹ ಸಮಸ್ಯೆಗೆ ಮೂಲ ಕಾರಣ ನಮ್ಮ ವ್ಯವಸ್ಥೆ. ನಮ್ಮ ದೇಶದ ಪಿಡುಗೆಂದರೆ ಕೇವಲ ಕೆಲವೇ ಕೆಲವು ಆಯ್ದ ನಗರಗನ್ನಷ್ಟೇ ಉದ್ಯೋಗ ಕೇಂದ್ರಗಳನ್ನಾಗಿ ಮಾಡಿ, ಬೇರೆ ಎರಡನೇ ದರ್ಜೆಯ ನಗರಗಳನ್ನು ನಿರ್ಲಕ್ಷಿಸಿರುವುದು. ಬೆರಳೆಣಿಕೆಯಷ್ಟೇ ನಗರಗಳಲ್ಲಿ ಉದ್ಯೋಗಗಳು ಕೇಂದ್ರೀಕೃತವಾಗಿವೆ. ಹೇಳಿಕೊಳ್ಳಲು ಮಾತ್ರ ಕೃಷಿ ಪ್ರಧಾನ ದೇಶವಿದ್ದರೂ ಮಳೆ ಕೈಕೊಟ್ಟಾಗ, ಹಳ್ಳಿಯ ಜನ ಕೆಲವು ಸಾವಿರ ದುಡ್ಡಿಗೋಸ್ಕರ ನೂರಾರು ಕಿಲೋಮೀಟರ್ಗಳಷ್ಟು ಸಂಚರಿಸಿ ಹೊಟ್ಟೆಪಾಡಿಗಾಗಿ ನಗರಗಳತ್ತ ವಲಸೆಹೋಗುತ್ತಾರೆ. ಬದಲಾಗಿ, ದ್ವಿತೀಯ ದರ್ಜೆಯ ನಗರಗಳನ್ನು ಕೂಡ ಬೆಳೆಸುತ್ತ ಬಂದರೆ, ಜನರು ದೂರದ ಊರುಗಳಿಗೆ ವಲಸೆ ಹೋಗುವುದು ತಪ್ಪುತ್ತದೆ ಮತ್ತು ಹಿಂತಹ ತುರ್ತುಪರಿಸ್ಥಿತಿ ಎದುರಾದಾಗ ನೂರಾರು ಮೈಲು ದೂರ ನಡೆಯುಗ ದುರ್ಗತಿ ಬರುವುದಿಲ್ಲ.

ಇಲ್ಲಿ ಹೇಳಲೇಬೇಕಾದ ಒಂದು ಮುಖ್ಯ ವಿಷಯ, ಈ ಲಾಕ್ಡೌನ್ ಎಂಬ ಗೃಹಬಂಧನವು ಜೀವನದಲ್ಲಿ ನೆನಪಿಡಬೇಕಾದ ಅನೇಕ ಅನುಭವಗಳನ್ನು ಕೊಡುತ್ತ ಹೋಯಿತು. ಈ ಪರಿಸ್ಥಿತಿ ಮನುಷ್ಯನಿಗೆ ಬದುಕಲು ಏನು ಮುಖ್ಯ ಮತ್ತು ಯಾವುದು ಆಡಂಬರ ಅನ್ನುವ ಮನವರಿಕೆ ಮಾಡುವುದರ ಜೊತೆಗೆ ಅರೋಗ್ಯ ನೈರ್ಮಲ್ಯದ ಬಗ್ಗೆ ತಿಳುವಳಿಕೆ ಮೂಡಿಸುತ್ತ ಸ್ವಚ್ಛತಾ ನಿಯಮಗಳನ್ನ ಪಾಲಿಸುವ ಜವಾಬ್ದಾರಿಯನ್ನು ಕಲಿಸಿಕೊಡ್ತಾಯಿದೆ. ವಿಚಿತ್ರವೆಂದರೆ, ಮನುಷ್ಯ ತನ್ನ ವಾಸಕ್ಕಾಗಿಯೇ ಕಟ್ಟಿಸಿದ ಮನೆಯಲ್ಲಿ ಹೊತ್ತುಕಳೆಯಲಾಗದೆ ತಡಪಡಿಸುವ ಪರಿಸ್ಥಿತಿ. ಪ್ರಾಣಿಪಕ್ಷಿಗಳನ್ನು ಪಂಜರದಲ್ಲಿಟ್ಟು ನೋಡಿ ಸಂತೋಷಪಡುವ ಈ ಮಾನವ ಇಂದು ತನ್ನ ಮನೆಯಲ್ಲಿಯೇ ಬಂಧಿಯಾಗದಾಗ, ಪ್ರಾಣಿಪಕ್ಷಿಗಳು ಇದನ್ನು ನೋಡಿ ಅಣುಕಿಸುವಂತಾಯಿತು. ಮನೆಕೆಲಸದವರಿಲ್ಲದೆ ಜನ ತಮ್ಮ ತಮ್ಮ ಮನೆಗೆಲಸಗಳನ್ನು ತಾವೇ ಮಾಡಿಕೊಳ್ಳುತ್ತ ಸ್ವಾವಲಂಭಿಗಳಾಗಬೇಕಾಯಿತು. ಅದಕ್ಕೆ ಏನೋ ನಮ್ಮ ಮಹಿಳಾಮಣಿಗಳು ತಮ್ಮ ಕೈಯಾರೆ ಸ್ನಾಕ್ಸ್ ಮತ್ತು ಫಾಸ್ಟ್ ಫುಡ್ಗಳನ್ನೂ ಮನೆಯಲ್ಲೇ ಮಾಡುವ ಪಾಂಡಿತ್ಯವನ್ನು ಪಡೆದುಕೊಂಡುಬಿಟ್ಟರು. ಈ ಬದಲಾದ ಪರಿಸ್ಥಿತಿಯಿಂದ ತಿಳಿಯುವ ಸಂಗತಿಯೆಂದರೆ ಲಾಕ್ಡೌನ್ ಮುಗಿದಮೇಲೆ ಈ ಫಾಸ್ಟ್ ಫುಡ್ ವ್ಯಾಪಾರಕ್ಕಂತೂ ಹೊಡೆತ ಬೀಳುವುದು ಖಂಡಿತ.

ಅದೇರೀತಿ ಈ ಲಾಕ್ಡೌನ್ ಹಂತ ಕೆಲವಂದು ಹಾಸ್ಯಾಸ್ಪದ ಸಂಗತಿಗಳನ್ನು ಅನುಭವಕ್ಕೆ ತಂದದ್ದುಂಟು. ಈ ಸಮಯದಲ್ಲಿ ಗಂಡ ಹೆಂಡತಿಯರು ಅತೀ ದೀರ್ಘಕಾಲ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಬಂದು,ಕೆಲವು ಪತಿ ಪತ್ನಿಯರ ಮಧ್ಯೆ ಸಂಬಂಧಗಳು ಗಟ್ಟಿಯಾದರೆ, ಕೆಲವರ ಮಧ್ಯೆ ಜಗಳಗಳು ಆದ ಸುದ್ದಿಗಳು ಕೇಳಿಬಂದವು. ಬಹಳ ದಿನಗಳ ನಂತರ ಹೆಂಡತಿಯರ ಕೈಗೆ ಸಿಕ್ಕ ಗಂಡಂದಿರ ಪಾಡು ಗೊಳೋ ಗೋಳು. ಯಾವುದೊ ಹಳೆಯ ವೈಷಮ್ಯವನ್ನು ತೀರಿಸಿಕೊಳ್ಳುವ ರೀತಿಯಲ್ಲಿ ಗಂಡಂದಿರಿಂದ ಮನೆಗೆಲಸವನ್ನು ಮಾಡಿಸಿದ್ದೆ ಮಾಡಿಸಿದ್ದು. ಆಫೀಸುಗಳು ಶುರು ಆದಮೇಲೆ ಗಂಡಂದಿರು ತಮ್ಮ ಆಫೀಸ್ ಕೆಲಸಗಳನ್ನೂ ಮರೆಯದಿರಲಿ. ಇನ್ನು ಕೆಲವರಿಗೆ ಹೆಂಡತಿಯನ್ನು ತವರಿಗೆ ಕಳುಹಿಸಿ ಸಂಪೂರ್ಣ ಸ್ವತಂತ್ರವೇನೋ ಸಿಕ್ಕಿತು ಆದರೆ ಹೊರಗಡೆ ಹೋಟೆಲ್ಲುಗಳು ತೆರೆಯದಿರದ ಕಾರಣ ಅಡುಗೆ, ಮನೆಕೆಲಸ ಎಲ್ಲವು ತಮ್ಮ ತಲೆಯಮೇಲೆ ಬಿದ್ದು, ಹೆಂಡತಿಯ ಶಾಪ ತಟ್ಟಿದ ಬಡಪಾಯಿ ಗಂಡಂದಿರಾಗಿದ್ದುಂಟು

ಮನೆಯಿಂದ ಆಫೀಸ್ ಕೆಲಸ ಮಾಡುವವರಿಗೆ ಡಿಜಿಟಲ್ ತಂತ್ರಜ್ನ್ಯಾನದ ಸದುಪಯೋಗವಾಗಿ, ಐಟಿ-ಬಿಟಿ ಉದ್ಯಮಗಳ ಕೆಲಸದ ಪದ್ಧತಿಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು. ಯೋಗ, ವ್ಯಾಯಾಮ, ಮತ್ತು ಅನೇಕ ವಿಷಯಗಳ ಕ್ಲಾಸುಗಳು ಮನೆಯಿಂದಲೇ ಆನ್ಲೈನ್ ಮುಖಾಂತರ ನಡೆಸುವಂತ ವ್ಯವಸ್ಥೆಯ ಜಾರಿಬಂದು, ಆಧುನಿಕ ತಂತ್ರಜ್ನ್ಯಾನದ ಸದುಪಯೋಗವಾಯಿತು. ಅಷ್ಟೇ ಅಲ್ಲದೆ, ಈ-ಕಾಮರ್ಸ್ ವ್ಯಾಪಾರಗಳಿಗೆ ಇದು ಸುಗ್ಗಿಯಕಾಲವಾಗಿ ಮಾರ್ಪಟ್ಟಿತು

ಮುಂದುವರೆದಂತೆ ಸರ್ಕಾರವು ಹಂತ ಹಂತವಾಗಿ ಲಾಕ್ಡೌನ್ ಅನ್ನು ಸಡಿಲಗೊಳಿಸುತ್ತ ಕೆಲವು ಸೇವೆಗಳನ್ನು ಪುನರಾರಂಭಗೊಳಿಸಲು ಅನುವು ಮಾಡುತ್ತ ಹೋಯಿತು. ಮೊದಲು 21 ದಿನಗಳು, ನಂತರ 19 ದಿನ, ಆಮೇಲೆ ಎರಡು ಸಲ 14 ದಿನಗಳು, ಈಗ ಲೊಕ್ಡೌನ್-5 ನ್ನು ಜೂನ್ 30 ವರೆಗೆ ಮುಂದುವರೆಸಿದ್ದು, ಈ ಕಾಯಿಲೆಯ ಹರಡುವಿಕೆ ಇನ್ನು ನಿಯಂತ್ರಣಕ್ಕೆ ಬಾರದ ಕಾರಣ, ಕೇಸುಗಳು ಹೆಚ್ಚಾಗಿರುವ ವ್ಯಾಪ್ತಿಗಳಲ್ಲಿ ಹೆಚ್ಚಿನ ನಿಗವಸುತ್ತಿರುವುದು. ಸರಕಾರದ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ಆದೇಶ ಇರುವುದರಿಂದ ನಿಯಮಗಳನ್ನ ನಿಯತ್ತಾಗಿ ಪಾಲಿಸಲೇಬೇಕು. ಪ್ರಚಲಿತ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ಎಂಭತ್ತು ಸಾವಿರ ಗಡಿ ದಾಟಿದ್ದು, ಅದರಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಇನ್ನು ಕರ್ನಾಟಕಕ್ಕೆ ಬಂದರೆ, ಸೋಂಕಿತರ ಸಂಖ್ಯೆ ಇನ್ನೇನು ಮೂರು ಸಾವಿರ ಗಡಿ ತಲುಪುವ ಹಂತದಲ್ಲಿದ್ದೇವೆ ಮತ್ತು ಒಟ್ಟು ನಲವತ್ತೆಂಟು ಜನರ ಪ್ರಾಣಹಾನಿಯಾಗಿದೆ. ಈಗಾಗಲೇ ಹೇಳಿದಂತೆ ಈ ರೋಗಕ್ಕೆ ಇನ್ನು ಔಷದಿ ಬಂದಿಲ್ಲ. ಈ ಕಾಯಿಲೆಗೆ ಔಷಧಿ ಅಥವಾ ವ್ಯಾಕ್ಸಿನ್ ಕಂಡಿಹಿಡಿಯಲು ಜಗತ್ತಿನಾಧ್ಯಂತ ತೀವ್ರಗತಿಯಲ್ಲಿ ಸಂಶೋಧನೆಗಳು ನಡಿತಾ ಇದ್ದು, ಅವು ಈಗ ಬೇರೆ ಬೇರೆ ಹಂತಗಳಲ್ಲಿ ಇದ್ದಾವೆ. ಒಂದು ಹೊಸ ಔಷದ ಕಂಡುಹಿಡಿಬೇಕಾದ್ರೆ ಅನೇಕ ಹಂತಗಳಿವೆ. ಈ ರೋಗಕ್ಕೆ ಔಷದ ಮೆಡಿಕಲ್ ಶಾಪಿಗೆ ಸೇರಬೇಕಾದ್ರೆ ಇನ್ನು ವರ್ಷಗಳೇ ಬೇಕು. ಇನ್ನು ಲಸಿಕೆ ಬಗ್ಗೆ ಹೇಳ್ಬೇಕಾದ್ರು, ಅದರಲ್ಲಿನೂ ಸಂಶೋಧನೆಗಳು ನಡಿತಾ ಇದ್ದು ಮಾರ್ಕೆಟಿಗೆ ಬರಬೇಕಾದ್ರೆ ಒಂದು ವರ್ಷ ಮೇಲ್ಪಟ್ಟು ಸಮಯ ಬೇಕು. ಕೆಲವು ರಾಜ್ಯಗಳಲ್ಲಿ ಪ್ಲಾಸ್ಮಾ ಥೆರಫಿಯ ಸಹಾಯದೊಂದಿಗೆ ಚಿಕಿತ್ಸೆ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಒಬ್ಬ ವಿಜ್ಞಾನಿಯಾಗಿ ನನ್ನ ಅನಿಸಿಕೆ ಒಂದು ಸಧ್ಯದಲ್ಲೇ ಒಂದು ಪರಿಪೂರ್ಣವಾಗಿ ಗುಣಪಡಿಸಬಲ್ಲ ಔಷದಿ ಸಿಗುವುದು ಕಷ್ಟ ಸಾಧ್ಯ ಅಂತಲೆ ಹೇಳಬಹುದು. ಆದ್ದರಿಂದ ಈಗಿರುವ ಉತ್ತಮ ಔಷದಿ ಎಂದರೆ, ಈ ಸೋಂಕು ಹರಡದಂತೆ ತಡೆಗಟ್ಟುವುದು. ಅದಕ್ಕಿರುವ ಒಂದೇ ದಾರಿಯೆಂದರೆ ಪರಸ್ಪರ ಸುರಕ್ಷಿತ ಅಂತರ, ಅವಾಗವಾಗ ಕೈ ತೊಳೆದುಕೊಳ್ಳೋದು, ಕೈಗೆ ಸ್ಯಾನಿಟೈಜರ್ ಬಳಕೆ, ಹೊರಗೆ ಹೋದಾಗ ಮಾಸ್ಕ ಧರಿಸುವುದು ಮತ್ತು ಬಹುಮುಖ್ಯವಾಗಿ, ಅನಾವಶ್ಯಕವಾದ ತಿರುಗಾಟವನ್ನು ತಪ್ಪಿಸಿ, ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಈ ಲಕ್ಡೌನ್ ಅನ್ನೋ ಗೃಹಬಂಧನವನ್ನು ಯಶಸ್ವಿಗೊಳಿಸುವುದು. ಸರಕಾರ ಮತ್ತು ವೈದ್ಯರು ಹಾಕಿಕೊಟ್ಟ ನಿಯಮ ಪಾಲಿಸೋಣ ಹಾಗು ಈ ಕೊರೊನ ವಿರುದ್ಧದ ಯುದ್ಧದಲ್ಲಿ ಆದಷ್ಟು ಬೇಗನೆ ಜಯ ಸಾಧಿಸೋಣ.

ಸೊಜುಗದ ಸೂಜು ಮಲ್ಲಿಗೆ.........

ವಯಸ್ಸು ನಲವತ್ತು ದಾಟಿದೆ, ಎಲ್ಲರೂ ಹೇಳೋಹಾಗೆ ನಲವತ್ತು ದಾಟಿದರೆ ಎರಡನೇ ಇನ್ನಿಂಗ್ಸ್ ಶುರುಆಗತ್ತಂತೆ. ನಲವತ್ತರ ನಂತರದ ಬದುಕೇ ಬೇರೆ, ಆರೋಗ್ಯದ ಕಡೆಗೆ ಗಮನ ಜಾಸ್ತಿ ಹರಿಸಬೇಕಾಗುತ್ತೆ, ನಾನು ಮುಂಚೆಯಿಂದ ಆಟ, ವ್ಯಾಯಾಮದಂತಹ ಚಟುವಟಿಗಳಿಗೆ ಗಮನ ಕಡಿಮೆ. ಇತ್ತಿತ್ತಲಾಗಿ ತೂಕ ಜಾಸ್ತಿ ಆಗಿ ಸ್ವಲ್ಪ ವಾಕಿಂಗ್ ಎಲ್ಲ ಮಾಡ್ತಇರಿ ಅಂದ್ರೆ ಮುಂದೆ ತೊಂದ್ರೆ ಇರಲ್ಲ ಅಂತ ಡಾಕ್ಟರ್ ಸಲಹೆ ಮೇರೆಗೆ ವಾಕಿಂಗ್ ಶುರು ಹಚ್ಚಗೊಂಡಿದೀನಿ.
ನಾನು ಮಾಮೂಲಾಗಿ ಬೆಳಿಗ್ಗೆ ಮನೆ ಪಕ್ಕ ಇರುವ ಅಂಬರೀಷ್ ಗಾರ್ಡನ್ನಿನಲ್ಲಿ (ಜೆಪಿ ನಗರದ ಚಿತ್ರನಟ ದಿವಂಗತ ಅಂಬರೀಶ್ ಮನೆ ಪಕ್ಕ ಇರೋದ್ರಿಂದ ಅದು ಅಂಬರೀಷ್ ಗಾರ್ಡನ್ ಆಯಿತು) ವಾಕಿಂಗ್ ಮಾಡೋಕೆ ಹೋಗೋದು. ಒಂದು 30-40 ನಿಮಿಷ ವಾಕಿಂಗ್ ಮಾಡೋ ರೂಢಿ ಇಟಗೊಂಡಿದಿನಿ.
ಹಿಂಗೇ ಒಂದು ದಿನ ವಾಕಿಂಗ್ ಬೆಳಿಗ್ಗೆ ಮಾಡ್ತಾಯಿದ್ದೆ....ಹಿಂದ್ಗಡೆಯಿಂದ ಸುಶ್ರಾವ್ಯ ಕಂಠದಲ್ಲಿ “ಸೊಜುಗದ ಸೂಜು ಮಲ್ಲಿಗೆ.....” ಹಾಡು ಕೇಳಿಬರ್ತಾಇತ್ತು. ಕುತೂಹಲದಿಂದ ಇಷ್ಟು ಬೆಳಿಗ್ಗೆ ಯಾರಪ್ಪ ಈ ಗಾರ್ಡನಿನಲ್ಲಿ ಹಾಡ್ತಾಯಿರೋದು, ಎಲ್ಲಿಂದ ಬರ್ತಾಇದೇ ಈ ಹಾಡು ಅಂತ ಹಿಂತಿರುಗಿ ನೋಡಿದೆ...ಯಾರೋ ಒಬ್ರು ತಮ್ಮ ಮೊಬೈಲಿನಲ್ಲಿ, ಮೇಲುಧ್ವನಿಯಲ್ಲಿ ಈ ಹಾಡನ್ನ ಕೇಳ್ತಾ ವಾಕ್ ಮಾಡ್ತಾಯಿದ್ರು.
ಮೊನ್ನೆ ಈಶ ಫೌಂಡೇಷನ್ನಿನ, ಸದ್ಗುರು ಆಶ್ರಮದಲ್ಲಿ ಶಿವರಾತ್ರಿ ಆಚರಣೆ ಸಂದರ್ಭದಲ್ಲಿ, ನಮ್ಮ ಕನ್ನಡದ ಹುಡುಗಿ “ಅನನ್ಯ ಭಟ್” ಹಾಡಿದ ಹಾಡು ಇದಾಗಿತ್ತು. ಈ ಹುಡುಗಿ ಮುಂಚೆ ಅನೇಕ ಬಾರಿ ಬೇರೆ ಬೇರೆ ಸಮಾರಂಭಗಳಲ್ಲಿ ಇದೆ ಹಾಡನ್ನು ಹಾಡಿದ ವಿಡಿಯೋಗಳು ಯುಟ್ಯೂಬಿನಲ್ಲಿ ಲಭ್ಯವಿದ್ದರೂ, ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ಆದರೆ, ಆ ರಾತ್ರಿ ಅವಳಿಗೆ ಸಿಕ್ಕ ಆ ಒಂದು ವೇದಿಕೆ ಅಥವಾ ಅವಕಾಶ ಎಷ್ಟೊಂದು ಹೆಸರು ಮತ್ತು ಪ್ರಖ್ಯಾತಿ ತಂದುಕೊಟ್ಟಿತೆಂದರೆ, ಇವತ್ತು ಎಲ್ಲೆಲ್ಲೂ ಅವಳದೇ ಧ್ವನಿಯ “ಸೊಜುಗದ.....” ಹಾಡು ಕೇಳಿಬರ್ತಿದೆ.....ಎಷ್ಟೋ ಜನ ಅವಳು ಹಾಡಿದ ಬೇರೆ ಬೇರೆ ಹಾಡುಗಳನ್ನ ಹುಡುಕಿ ಕೇಳ್ತಿದ್ದಾರೆ...
ಒಂದು ಒಳ್ಳೆಯ ವೇದಿಕೆ ಒಬ್ಬರ ಜೀವನವನ್ನ ಹೇಗೆ ಬದಲಾಯಿಸುತ್ತದೆ ಎನ್ನೋದಕ್ಕೆ ಇದು ಒಳ್ಳೆ ಉದಾಹರಣೆ....ಏನಂತೀರಿ!!

ಶುಕ್ರವಾರ, ಫೆಬ್ರವರಿ 21, 2020

ಬಿಹಾರಿ ಆಲೂ ಗೋಬಿ: ನನ್ನ ಬ್ಯಾಚುಲರ್ ಲೈಫಿನ ಒಡನಾಡಿ.

ವಿದ್ಯಾರ್ಥಿ ಜೀವನ ಅಂತ ಬಂದಾಗ....... ಮನೇಲೆ ಇದ್ದ್ಕೊಂಡು ಶಾಲೆ ಕಾಲೇಜಿಗೆ ಹೋಗೋ ಸೌಲಭ್ಯ ಇದ್ದಾಗ ಅಮ್ಮ ಮಾಡಿದ ಮನೆ ಊಟ ಮಾಡ್ಕೊಂಡು ಆರಾಮಾಗಿ ಜೀವನ ನಡೀತಿರತ್ತೆ. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಥವಾ ಬೇಕಾದ ಕೋರ್ಸು ಊರಲ್ಲಿಲ್ಲದಿದ್ರೆ, ಮನೆ ಬಿಡ್ಲೇಬೇಕು. ಅವಾಗ ನೋಡಿ ಅಸಲಿ ಸಮಸ್ಸೆ ಶುರು ಆಗೋದು......ಅದೇ ರೀ  ಹೊಟ್ಟೆಪಾಡು......ನಮ್ಮ್ ದೇಶದಲ್ಲಿ  ಇರೋದಕ್ಕೆ ಯಾವುದೇ ತೊಂದ್ರೆ ಆಗಲ್ಲ ಯಾಕಂದ್ರೆ ಇಲ್ಲಿ ಪ್ರತಿ ಮೂಲೆಗೊಂದು ಮೆಸ್ಸುಗಳಿದ್ದವೇ, ನಮ್ಮ ಉತ್ತರಕರ್ನಾಟಕದಲ್ಲಿ ಬಂದ್ರೆ ಇದೆ ಮೇಸ್ಸ್ಗಳಿಗೆ ಖಾನಾವಳಿ ಅಂತೀವಿ. ಅಯ್ಯೋ ನಂಗೆ ಹೊರಗಡೆ ಊಟ ಆಗಲ್ಲರಿ, ಉದರ ಪೀಡಾ ಸಮಸ್ಸೆ ಶುರು ಆಗ್ಬಿಡತ್ತೆ ಅನ್ನೋರಿಗೆ, ಮನೆ ಊಟವನ್ನ ಮನೆ ಬಾಗಿಲಿಗೆ ಡೆಲಿವೆರಿ ಮಾಡವ್ರು ಇದ್ದಾರೆ.....ಆದರೆ, ಅಕಸ್ಮಾತ್ ಏನಾದ್ರು ಕಲೀಲಿಕ್ಕೆ ಹೊರದೇಶಕ್ಕೆ ಹೋದ್ರಿ, ಆಮೇಲೆ ನೀವು ಅಹಿಂಸಾವಾದಿ ಸಸ್ಯಾಹಾರಿಗಳಾಗಿದ್ದರೆ ನಿಮ್ಮನ್ನ ಆ ದೇವ್ರೇ ಕಾಪಾಡಬೇಕು....ಆಗ ನಿಮ್ಮನ್ನ ಕಾಪಾಡ್ಕೊಳ್ಳೋಕೆ ಒಂದೇ ಒಂದು ದಾರಿ ಅಂದ್ರೆ ಅಡುಗೆ ಮಾಡಕ್ಕೆ ಗೊತ್ತಿರಲೇಬೇಕು, ಅದಕ್ಕಾಗಿ extra added skill ಅಂತ ನೀವು ನಳಮಹಾರಾಜರು ಆಗ್ಲೇಬೇಕು ಕಣ್ಣ್ರೀ ....

ವಿದೇಶಕ್ಕೆ ಹೆಚ್ಚಿಗೆ ಓದ್ಕೊಂಡು ಬರೋಣ ಅಂತ ಹೋದ ನನಗೂ ಕೂಡ ಇದೆ ಸಮಸ್ಸ್ಯೆ ಎದುರಾಗಿದ್ದು. ನಮ್ಮ್ ದೇಶದಲ್ಲಿ ಇರುವಾಗ ಮೆಸ್ಸು/ಖಾನಾವಳಿಗಳನ್ನ ನಂಬಿಕೊಂಡು, ಚೆನ್ನಾಗಿ ಒಂದು ಕಪ್ ಟೀ ಕೂಡ ಮಾಡೋಕೆ ಗೊತ್ತಿರದ ಆಸಾಮಿ ನಾನು, ಅಂತಹದರಲ್ಲಿ ಜಪಾನ್ ದೇಶಕ್ಕೆ ಹೋಗ್ತಾಯಿದ್ದೀಯ ಅಲ್ಲಿ ಹೋದ್ಮೇಲೆ ಅದ್ಹೇಗೋ ನಿನ್ನ ಗತಿ ಅಂದ್ಲು ಅಮ್ಮ..... ಪರಿಸ್ಥಿತಿ ಮನುಷ್ಯನಿಗೆ ಎಲ್ಲ ಕಲ್ಸತ್ತೆ ಬಿಡಮ್ಮ ಯಾಕ ಚಿಂತೆ ಮಾಡ್ತಿಯಾ ಅಂದೇ.... ಅಮ್ಮನಿಗೆ ಹೇಳಿದಂಗೆ, ಅಲ್ಲಿ ಹೋದ್ಮೇಲೆ ಹಂಗೋ ಹಿಂಗೋ ವಿವಿಧ ದೇಶಗಳ ಮ್ಯಾಪ್ ಹೋಲೊತರ ಚಪಾತಿ ಮಾಡೋಕೆ ಕಲ್ತೆ.....ಸ್ವಲ್ಪ ಇಂಟರ್ನೆಟ್ನಲ್ಲಿ ಓದ್ಕೊಂಡು ತರಕಾರಿ, ಸಾಂಬಾರು ಮಾಡೋದು ಕಲ್ತು, ಅಷ್ಟರಲ್ಲೇ ಬದುಕಿನ ಜಟಕಾಬಂಡಿ ಓಡಿಸ್ತಾಯಿದ್ದೆ......

ಜಪಾನಿನಲ್ಲಿ ನಾನಿದ್ದ ಊರಿನಲ್ಲಿ ನನ್ನ ತರಹ ಇನ್ನು 3-4 ಜನ ಬ್ರಹ್ಮಚಾರಿಗಳಿದ್ರು......ಹೆಚ್ಚು ಕಡಿಮೆ ಎಲ್ಲರು ಉತ್ತರಭಾರತದ ಯುಪಿ ಮತ್ತು ಬಿಹಾರ್ ರಾಜ್ಯಗಳಿಂದ ಬಂದ ಹಿಂದಿ ಪಂಡಿತರು. ಅದಕೆ ಇರಬಹುದು, ಅವರೊಂದಿಗಿನ ಒಡನಾಟ ನನಗೆ ಹಿಂದಿ ಭಾಷಾ ಪ್ರಾವಿಣ್ಯತೆಯನ್ನ ಸ್ವಲ್ಪ ಜಾಸ್ತಿನೇ ಕೊಟ್ಟಿತು ಅನ್ಸತ್ತೆ. ಬರ್ತಾ ಬರ್ತಾ ಅವರಿಂದ ಉತ್ತರಭಾರತದ ಎಷ್ಟೋ ವಿಷಯಗಳನ್ನ ಅರ್ಥ ಮಾಡ್ಕೊಂಡೆ ಮತ್ತು ನಮ್ಮ ಕರುನಾಡಿನ ಮಣ್ಣಿನ ಸುವಾಸನೆಯನ್ನ ಅವರಿಗೂ ಉಣಬಡಿಸಿದೆ......ಭಾಷೆ, ಸಂಸ್ಕೃತಿ, ಜೀವನವಿಧಾನಗಳ ಪರಸ್ಪರ ವಿನಿಮಯ ಮಾಡ್ತಾ ಮಾಡ್ತಾ ನಾನು ಅವರಿಂದ ಕಲಿತದ್ದು "ಬಿಹಾರಿ ಆಲೂ ಗೋಬಿ" ಎಂಬ ವಿಶಿಷ್ಟ ಖಾದ್ಯ......
ಈಗಲೂ ಯಾವಾಗ್ಲಾದ್ರೂ ಕಿಚನ್ನಿನಲ್ಲಿ "ಬಿಹಾರಿ ಆಲೂ ಗೋಬಿ" ಮಾಡುವ ಸಂದರ್ಭ ಬಂದಾಗ ನನಗೆ ಇದನ್ನು ಹೇಳಿಕೊಟ್ಟ Dr. ಅನಿಲ್ ಥಾಕುರ್ ನೆನಪಿಗೆ ಬಂದುಬಿಡ್ತಾನೆ..... ಈಗ ಅವನು ಕೂಡ ಸ್ವದೇಶಕ್ಕೆ ಮರಳಿ, ಜಮ್ಮು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಫಿಸಿಕ್ಸ್ ಪಾಠಮಾಡ್ತನೆ..... ಆದರೆ ಹೆಂಡ್ತಿ ಮಕ್ಳು ಅಂತ ಆದ್ಮೇಲೆ ಅವನು ಈ  "ಬಿಹಾರಿ ಆಲೂ ಗೋಬಿ" ಮಾಡ್ತಾನೋ ಇಲ್ಲೋ ಗೊತ್ತಿಲ್ಲ ಆದ್ರೆ ನಾನು ಮಾತ್ರ ಇನ್ನು ಬಿಟ್ಟಿಲ್ಲಾ.....

ಯಾಕೋ ಗೊತ್ತಿಲ್ಲ, ನಮ್ಮ ರಸಾಯನ ಶಾಸ್ತ್ರದ ಭಾಷೆಯಂತೆ, ಈ  "ಬಿಹಾರಿ ಆಲೂ ಗೋಬಿ" experimental procedure ಅನ್ನು ಎಲ್ಲರಜೊತೆಗೆ ಹಂಚ್ಕೋಬೇಕೆನಿಸಿ ಈ ಬ್ಲಾಗ್ ಅಂಕಣ ಬರೀತಾಇದ್ದಿನಿ.

ಬಿಹಾರಿ ಆಲೂ ಗೋಬಿ ಬೇಕಾಗುವ ಸಾಮಗ್ರಿಗಳು:

  1. ಮಧ್ಯಮ ಗಾತ್ರದ 4 ಆಲೂಗಡ್ಡೆ.  
  2. ಅರ್ಧ ಹೂಕೋಸು.  
  3. ಮಧ್ಯಮ ಗಾತ್ರದ ಎರಡು ಈರುಳ್ಳಿ.  
  4. ಮಧ್ಯಮ ಗಾತ್ರದ ಎರಡು ಟೊಮೇಟೊ (ನಾಟಿ ಇದ್ರೆ ಇನ್ನು ಚೆನ್ನ). 
  5. ಹಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟು (ಒಂದು ಚಮಚ). 
  6. ಒಳ್ಳೆ ಗರಂ ಮಸಾಲಾ ಪುಡಿ (ಎರಡು ಚಮಚ). 
  7. ಅರಿಸಿನ ಪುಡಿ ಒಂದು ಚಮಚ.  
  8. ಕೆಂಪು ಖಾರದ ಪುಡಿ ಎರಡು ಚಮಚ (ಚಾಯ್ಸ್ ನಿಮ್ಮದು). 
  9. ಅಡುಗೆ ಎಣ್ಣೆ ಐದು ಚಮಚ (ನಾನು ಇನ್ನು ಸ್ವಲ್ಪ ಜಾಸ್ತಿನೇ ಹಾಕ್ತಿನಿ).
  10. ಕೊತಂಬರಿ ಸೊಪ್ಪು, ಗಾರ್ನಿಸಿಂಗ್ ಮಾಡಕ್ಕೆ. 
  11. ಉಪ್ಪು, ರುಚಿಗೆ ತಕ್ಕಂತೆ. 

ಬಿಹಾರಿ ಆಲೂ ಗೋಬಿ ಮಾಡುವ ವಿಧಾನ: 

ಮಾಡುವ ವಿಧಾನ ಬಹಳ ಸಿಂಪಲ್ ಕಣ್ಣ್ರೀ.....
ಮೊದಲು ಸಿಪ್ಪೆ ಸುಲಿದ ಆಲೂಗಡ್ಡೆ ಮತ್ತು ಹೂಕೋಸು ಎರಡನ್ನು ತೊಳೆದು ಸ್ವಚ್ಛ ಭಾರತೀಯರಾಗಿ, ನಂತರ ಸಣ್ಣ ಗಾತ್ರದಲ್ಲಿ ಕಟ್ ಮಾಡ್ಕೊಂಡು, ಒಂದು ಕಡಾಯಿಯಲ್ಲಿ ಸ್ವಲ್ಪ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ ಪಕ್ಕಕ್ಕಿಡಿ. ಅದೇರೀತಿ ಈರುಳ್ಳಿ (ಚಿಂತೆಬಿಡಿ, ಈಗ 25/- ಗೆ ಕೆಜಿ ಸಿಗ್ತಿದೆ) ಮತ್ತು ಟೊಮೇಟೊ ಕೂಡ ಸಣ್ಣದಾಗಿ ಕಟ್ ಮಾಡ್ಕೊಳ್ಳಿ......ಇಲ್ಲಿಗೆ ಅರ್ಧ ಕೆಲಸ ಮುಗಿದಂತೆ....

ಆಮೇಲೆ, ಅದೇ ಕಡಾಯಿಗೆ ಎರಡು ಚಮಚ ಇನ್ನು ಹಾಕಿ, ಅದಕ್ಕೆ ಕಟ್ಮಾಡಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟು ಎರಡನ್ನು ಚೆನ್ನಾಗಿ ಫ್ರೈ ಮಾಡಿ. ಬೇಕಿದ್ರೆ ಅರ್ಧ ಚಮಚ ಉಪ್ಪು ಹಾಕಿ.....ಈರುಳ್ಳಿ ಬೇಗನೆ ಬೆಂದು ಅದೇನೋ ಗೋಲ್ಡನ್ ಬ್ರೌನ್ ಆಗತ್ತಂತೆ. ಈಗ ಇದಕ್ಕೆ ಆಗಲೇ ಫ್ರೈ ಮಾಡಿದ ಆಲೂಗಡ್ಡೆ ಮತ್ತು ಹೂಕೋಸಿನ ತುಂಡುಗಳನ್ನ ಹಾಕಿ, ಇನ್ನು ಐದು ನಿಮಿಷ ಫ್ರೈ ಮಾಡಿ......ಆಗ ನಿಧಾನಕ್ಕೆ ನಿಮ್ಮ ಮೂಗಿಗೆ ಘಮ ಘಮ ವಾಸನೆ ಹೊಡಿಲಿಕ್ಕೆ ಶುರು ಮಾಡತ್ತೆ. ನಂತರ ಕಡಾಯಿಗೆ ಗರಂ ಮಸಾಲಾ ಪುಡಿ, ಅರಿಶಿನ ಪುಡಿ ಮತ್ತು ಖಾರದ ಪುಡಿ ಇವನ್ನೆಲ್ಲ ಹಾಕಿ ಚೆನ್ನಾಗಿ ಮಿಶ್ರಣ ಮಾಡ್ಕೊಳ್ಳಿ.......ಸ್ವಲ್ಪ ಕೈ ನೋವು ಅನಿಸಿದ್ರು, ಎದೆ ಗುಂದದೆ ಇನ್ನು ಐದು ನಿಮಿಷ ಹಂಗೆ ಫ್ರೈ ಮಾಡಿ....ಬೇಕಿದ್ರೆ ಮಧ್ಯ ಮಧ್ಯ ವಾಟ್ಸಪ್ಪ್, ಫೇಸ್ಬುಕ್ ಮೆಸ್ಸೆಜ್ಸ್ ನೋಡ್ಕೊಂಡು ಬರಬಹುದು........ ಆಹಾ! ಮಸಾಲೆ ವಾಸನೆ ಗಾಳಿಯಲ್ಲಿ ಇನ್ನು ಜೋರಾಗಿ ಹರಿಯುತ್ತ ಹರಿಯುತ್ತ ಪಕ್ಕದ ಮನೆಯವರ ಮೂಗಿಗೇನಾದ್ರು ಬಡಿದ್ರೆ, ಏನ್ರಿ ನಿಮ್ಮ ಮನೇಲಿ ಏನೋ ಸ್ಪೆಷಲ್ ಡಿಶ್ ಮಾಡಿದ್ರ ಹೆಂಗೆ.... ವಾಸನೆ ಜೋರಾಗಿತ್ತು ಅಂತ ಕೇಳಬಹುದು. 
ಅಮೇಲಿನ್ನೇನು,  ಕಡಾಯಿಯಲ್ಲಿ ಚೆನ್ನಾಗಿ ಫ್ರೈ  ಮಾಡಿದ  ಈ ಮಿಶ್ರಣಕ್ಕೆ ಎರಡು ಗ್ಲಾಸು ನೀರನ್ನ ಹಂಗೆ ಹುಯಿದು ರುಚಿಗೆ ತಕ್ಕಸ್ಟು ಉಪ್ಪು ಹಾಕಿ. ಕೊನೆಯದಾಗಿ ಅದಕ್ಕೆ ಸಣ್ಣದಾಗಿ ಕಟಮಾಡಿದ ಕೊತಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ, ಹತ್ತು ನಿಮಿಷ ಮಧ್ಯಮ ಫ್ಲೇಮ್ ನಲ್ಲಿ ಚೆನ್ನಾಗಿ ಕುದಿಸಿಬಿಡಿ ...... ಆಯಿತು, ಕಡಿಮೆ ಅಂದ್ರು ನಾಲ್ಕು ಜನಕ್ಕೆ ಬಡಿಸೋವಷ್ಟು "ಬಿಹಾರಿ ಆಲೂ ಗೋಬಿ" ರೆಡಿ ಅಯೀತು. ಈಗ ಇದನ್ನ ನೀವು ಚಪಾತಿ ಜೊತೆ ತಿಂತಿರೋ, ತಂದೂರಿ ರೋಟಿ ಜೊತೆ ತಿಂತಿರೋ ಅಥವಾ ವೈಟ್ ರೈಸ್, ಜೀರಾ ರೈಸ್ ಜೊತೆ ತಿಂತಿರೋ ಅದು ನಿಮಗೆ ಬಿಟ್ಟ ವಿಷಯ..... ಅಕಸ್ಮಾತ್ ನೀವೇನಾದ್ರು ಮೊಟ್ಟೆ ಪ್ರೀಯರಾಗಿದ್ದರೆ, ಕುದಿಸಿ ಫ್ರೈ ಮಾಡಿದ ಮೊಟ್ಟೆಗಳನ್ನ ಇದಕ್ಕೆ ಹಾಕಿ "ಬಿಹಾರಿ ಅಂಡಾ ಆಲೂ ಗೋಬಿ" ಅಂತ ಸ್ವಲ್ಪ ಉದ್ದನೆಯ ಹೆಸರಿನಿಂದ ಕರೆದು ತಿನ್ನಬಹುದು........

ಈ ಒಂದು ಖಾದ್ಯ ನನ್ನ ಬ್ಯಾಚುಲರ್ ಲೈಫ್ ನಲ್ಲಿ ಎಷ್ಟೊಂದು ಒಡನಾಡಿ ಆಯೀತೆಂದ್ರೆ, ವಾರದಲ್ಲಿ ಮೂರುಬಾರಿ ಆದರು ನಾನು ಇದನ್ನೇ ಮಾಡಿ ತಿಂತಾಯಿದ್ದೆ. ಕೆಲವೊಂದು ಸಲ ಈ ಕರೀಗೆ ಹೆಚ್ಚು ನೀರು ಹಾಕಿ ಅದಕ್ಕೆ ಒಂದು ಗ್ಲಾಸ್ ಅಕ್ಕಿ ಹಾಕಿ ಕುಕ್ಕರ್ ನಲ್ಲಿ ಕುದಿಸಿ ಅದನ್ನೇ ಕಿಚಡಿಯನ್ನಾಗಿ ತಿಂದ್ದಿದ್ದುಂಟು......ಆಮೇಲೆ ನಾನು ಅಮೆರಿಕಾಗೆ ಹೋದಮೇಲೆ, ಅಲ್ಲೂ ಕೂಡ ಇದು ನನ್ನ ಜೊತೆ ಬಂದ್ಬಿಡ್ಬೇಕಾ!....ಅಲ್ಲಿನೂ ನನ್ನ ಉದರ ಪಾಲನೆ ಪೋಷಣೆ ಮಾಡಿದ್ದೂ ಇದೆ ಕರಿನೇ....
ನಾನು ಮದುವೆ ಮಾಡ್ಕೊಂಡು, ಸಭ್ಯ ಗ್ರಹಸ್ಥನಾಗಿ ಎರಡನೇಸಲ ಜಪಾನಿಗೆ ಹೋದಾಗ, ನಾನು ನನ್ನ ಹೆಂಡ್ತಿ ಒಂದು ಫುಡ್ ಕಾಂಪಿಟಿಷನ್ ನಲ್ಲಿ ಭಾಗವಹಿಸಿದ್ವಿ, ಆಗ ನನಗೆ ಬಹುಮಾನ ತಂದುಕೊಟ್ಟ ಮಹಾನ್ ಪುಣ್ಯಾತ್ಮ ಕಣ್ಣ್ರೀ ಈ ಬಿಹಾರಿ ಆಲೂ ಗೋಬಿ..... 

ನಾನು ಬ್ಯಾಚುಲರ್ ಆಗಿದ್ದಾಗ, ಮದುವೆ ಅಂತ ಆದ್ಮೇಲೆ ಸುತರಾಂ ಅಡುಗೆಮನೆ ಒಳಗೆ ಕಾಲಿಡಲ್ಲ ಅಂತ ಭೀಷ್ಮ ಪ್ರತಿಜ್ಞೆ...... ಯಾವಜನ್ಮದ ಪುಣ್ಯಾನೂ ಏನೋ ನಮ್ಮ್ ಹೆಂಡ್ರು ಅಡುಗೆ ಪ್ರವೀಣೆ, ಸಾಕ್ಷಾತ್ ಅನ್ನಪೂರ್ಣೇಶ್ವರಿ ಅನ್ನಬಹುದು. ಅದಕೆ ನನ್ನ ಅಡುಗೆ ಮನೆಗೆ ಬರಿಸಿಕೊಡಲ್ಲ. ಆದರು ಒಂದೊಂದ್ಸಲ ಈ ಸಿಟ್ಟು ಎನ್ನುವ ಮಾಯೆ ಅವಳನ್ನ ಅವರಿಸಿಬಿಟ್ಟರೆ, ಇಲ್ಲ ತುಂಬಾ ಟಾಯರ್ಡ್ ಆಗಿದ್ರೆ, ಅವಳಿಗೆ ರೆಸ್ಟ್ ಕೊಡೋಕೆ ನಾನು ನಳಪಾಕನಾಗಿ ಇದನ್ನ ಕುಕ್ ಮಾಡಿ ತಿನ್ಬಡಿಸಿ ಹಂಗೆ ಇಂಪ್ರೆಸ್ ಮಾಡಿಬಿಡ್ತೀನಿ...😎......ಅವಳಿಗೂ ಸ್ವಲ್ಪ ಚೇಂಜ್ ಕೂಡ ಅನ್ಸತ್ತಲ್ಲವಾ.....
ಗಂಡಂದಿರನ್ನ ಒಲಿಸಿಕೊಳ್ಳೋಕೆ ಹೆಂಡ್ತೀರು ಗಂಡನಿಗಿಷ್ಟವಾದ ಅಡುಗೆ ಮಾಡಿ ಮರುಳು ಮಾಡ್ತಾರಂತೆ......ಇದು ಒಂದು ತರಹ ಅದಕ್ಕೆ ವಿರುದ್ಧವಾದ ತಂತ್ರ...... ಅಂದ್ರೆ ಹೆಂಡತಿನ ಓಲೈಸೋ ತಂತ್ರ........

ಅಣ್ಣತಮ್ಮಂದಿರ, ಈ ಅಂಕಣ ಮುಗಿಸೋಕೆ ಮುಂಚೆ ಇನ್ನೊಮ್ಮೆ ನೆನಪಿಸ್ತಿದ್ದೀನಿ..... ಮನೇಲಿ ನಿಮ್ಮ ಮನೆಯೊಡತಿಯನ್ನ ಇಂಪ್ರೆಸ್ ಮಾಡೋ ಅನಿವಾರ್ಯತೆ ಬಂದಾಗ ಉಪಯೋಗ ಆಗ್ಬಹುದು. 😋
ನಾನು ಹೇಳಿದ ವಿಧಾನದಂತೆ, ಸಮರ್ಪಣಾಭಾವದಿಂದ ಈ ಬಿಹಾರಿ ಆಲೂ ಗೋಬಿ ಮಾಡಿ ನಿಮ್ಮ್ ಹೆಂಡ್ರಿಗೆ ತಿನ್ನಾಕ್ ಕೊಡಿ...... ಬೊ ಸಂದಾಕಿರತ್ತೆ ಕಣ್ಣ್ರೀ..... ತಿಂದು ಎರಡೇ ನಿಮಿಷದಲ್ಲಿ ಹೆಂಡ್ತಿ ಇಂಪ್ರೆಸ್ ಆಗ್ತಾವಳೇ......😉


ಶನಿವಾರ, ಜನವರಿ 25, 2020

ತೊಣ್ಣೂರು ಕೆರೆಯ ದಂಡೆಯಲ್ಲಿ ಸಂಕ್ರಾಂತಿ ಆಚರಣೆ

ಐರೋಪ್ಯ ಖಂಡದ ರಾಜಮನೆತನಗಳ ಸರ್ವಾಧಿಕಾರದ ಸಾಮ್ರಾಜ್ಯಶಾಹಿ ಆಡಳಿತವನ್ನು ಬಹಿಸ್ಕರಿಸಿದ 105 ಜನ ಸಾಹಸಿ ಯಾತ್ರಾರ್ಥಿಗಳ (Pilgrims) ಗುಂಪೊಂದು ಯಾವುದೇ ಕಾನೂನು-ಕಟ್ಟಳೆ, ನೀತಿ-ನಿಯಮಗಳಿಲ್ಲದ, ಸುಖ, ಸಮೃದ್ಧಿ, ಶೇಚ್ಚಾಚಾರದಿಂದ ಬದುಕಬಲ್ಲ ಹೊಸದೇಶವೊಂದನ್ನು ಕಟ್ಟುವ ಮಹತ್ವಾಕಾಂಕ್ಷೆಯನ್ನು ಹೊತ್ತು, ಇಂಗ್ಲೆಂಡಿನ Plymouth ಎಂಬ ಪ್ರದೇಶದಿಂದ, ಕ್ರಿ ಶ 1620 ರಲ್ಲಿ Mayflower ಎಂಬ ಹಡಗಿನಲ್ಲಿ, ಅಮೇರಿಕಾ ಖಂಡದತ್ತ ಪ್ರಯಾಣ ಬೆಳೆಸಿ, ೬೨ ದಿವಸಗಳ ನಂತರ ಈಗಿನ Massachusetts ಹತ್ತಿರ ಬಂದು ಇಳಿಯುತ್ತಾರೆ. ವ್ಯವಸಾಯವೇ ಗೊತ್ತಿರದ, ಹಸಿವಿನಿಂದ ಕಂಗಾಲಾದ ಯಾತ್ರಿಕರಿಗೆ, ಅಲ್ಲಿನ ಕೆಂಪು ಇಂಡಿಯನ್ನರು ಎಂಬ ಮೂಲನಿವಾಸಿಗಳು ಭೂಮಿಯಲ್ಲಿ ವ್ಯವಸಾಯಮಾಡಿ ಬೆಳೆ ಬೆಳೆಯುವುದನ್ನು ಮತ್ತು ಮೀನು ಹಿಡಿಯುದನ್ನು ಕಲಿಸಿಕೊಟ್ಟಮೇಲೆ, ಬಂದ ಮೊದಲ ಫಸಲನ್ನು ರಾಶಿ ಮಾಡಿ, ಅದರಿಂದ ವಿವಿಧ ಖಾದ್ಯಗಳನ್ನು ತಯಾರಿಸಿ, ಸುಗ್ಗಿಯ ಸಂಭ್ರಮಾಚರಣೆಯ ಹಬ್ಬವನ್ನು ಆಯೋಜಿಸಿ, ಅದಕ್ಕೆ ಮೂಲನಿವಾಸಿಗಳನ್ನು ಆಹ್ವಾನಿಸಿ, ಅವರಿಗೆಲ್ಲ ಧನ್ಯವಾದ ಅರ್ಪಿಸುತ್ತಾರೆ. ಅದೇ ಮುಂದೆ ಅಮೇರಿಕಾ ದೇಶದಲ್ಲಿ "ಥ್ಯಾಂಕ್ಸ್ ಗಿವಿಂಗ್ ಡೇ" ಎಂಬ ಸುಗ್ಗಿಯ ಹಬ್ಬವಾಗಿ ಆಚರಿಸಲ್ಪಡುತ್ತದೆ. ಚೀನೀಯರು ಶರತ್ಕಾಲದ ಮಧ್ಯದಲ್ಲಿ, ಬತ್ತದ ಹೊಸ ಫಸಲು ಬಂದಮೇಲೆ ಸುಗ್ಗಿಯ ಹಬ್ಬವನ್ನು Zhōngqiū Jié ಎಂಬ ಹೆಸರಿನಿಂದ ಚಂದ್ರನನ್ನು ಪೂಜಿಸುವ ಮೂಲಕ ಆಚರಿಸಿದರೆ, ಜಪಾನೀಯರು ಶಿಂಥೋ ಧರ್ಮದ ಪ್ರಕಾರ ಜನೇವರಿಯಲ್ಲಿ Oshogatsu ಮತ್ತು ಚೀನಾ ಸಂಸ್ಕೃತಿಯ ಪ್ರಭಾವದಿಂದ ಶರತ್ಕಾಲದ ಮಧ್ಯದಲ್ಲಿ Tsukimi ಎಂದು ಎರಡು ಬಾರಿ ತಮ್ಮದೇ ರೀತಿಯ ವಿಶಿಷ್ಟ ಆಚಾರ ಪದ್ಧತಿಗಳ ಪ್ರಕಾರ ಸಂತೋಷದಿಂದ ಸುಗ್ಗಿಯ ಹಬ್ಬಗಳನ್ನು ಆಚರಿಸಿ ಸಂಭ್ರಮಿಸುತ್ತಾರೆ. ಅದೇ ರೀತಿ, ನಮ್ಮ ಭಾರತ ದೇಶದಲ್ಲಿ ಜನೆವರಿ ಮಧ್ಯದಲ್ಲಿ ಆಚರಿಸುವ ಮಕರ ಸಂಕ್ರಾಂತಿಯೆಂಬ ಹಬ್ಬವು ಕೂಡ ಒಂದು ಸುಗ್ಗಿಯ ಹಬ್ಬವಾಗಿದೆ. ದೇಶ ಯಾವುದೇ ಇರಲಿ, ನಾಗರಿಕತೆ ಎಲ್ಲಿಯದೇ ಇರಲಿ, ಸುಗ್ಗಿಯ ಹಬ್ಬವೆನ್ನುವುದು ಎಲ್ಲಕಡೆ ಆಚರಿಸಲ್ಪಡುವ ವಿಶೇಷ ಹಬ್ಬವಾಗಿದೆ. ಮಾನವ ವಿಕಾಸದ ಕೊನೆಯ ಘಟ್ಟವಾದ ಆಧುನಿಕ ಮಾನವನು, ತನ್ನ ಬದುಕು ಕಟ್ಟಿಕೊಳ್ಳಲು ಅವಲಂಬಿಸಿದ್ದು ವ್ಯವಸಾಯ (ಕೃಷಿ) ಪದ್ಧತಿ. ಕಾಲ ಗತಿಸಿದಂತೆ, ಋತುಮಾನ, ಮಳೆಗಳಿಗನುಗುಣವಾಗ ಮತ್ತು ಭೂಮಿಯ ಗುಣಕ್ಕನುಗುಣವಾಗಿ ಬೇರೆ ಬೇರೆ ಬೆಳೆಗಳನ್ನು ಕೃಷಿಮಾಡುವ ಕಲೆಯನ್ನು ಕಲಿಯುತ್ತ ಬಂದ. ತನ್ನ ವರ್ಷಪೂರ್ತಿ ಪರಿಶಮದ ಪ್ರತೀಕವಾಗಿ ಹಸನಾಗಿ ಬೆಳೆದು ನಿಂತ ಫಸಲನ್ನು ರಾಶಿ ಮಾಡಿ, ಧಾನ್ಯಗಳ ರಾಶಿಕಣಗಳನ್ನು ಕಟ್ಟಿ, ಅವಕ್ಕೆ ಪೂಜೆ ಸಲ್ಲಿಸಿ, ಪ್ರಕೃತಿಮಾತೆಗೆ ಕೃತಜ್ಞತಾಭಾವದಿಂದ ಧನ್ಯವಾದ ಅರ್ಪಿಸುತ್ತಾನೆ. ವಿವಿಧ ಸಿಹಿ ಖಾದ್ಯಗಳನ್ನು ಮಾಡಿ ಕುಟುಂಬ ಪರಿವಾರದವರೆಲ್ಲರೂ ಸೇವಿಸಿ, ಹಾಡಿ, ಕುಣಿದು ಸಂಭ್ರಮದಿಂದ ಸುಗ್ಗಿಯ ಹಬ್ಬವನ್ನು ಆಚರಿಸುತ್ತ ಬಂದಿದ್ದಾನೆ.

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಈ ಮಕರ ಸಂಕ್ರಾಂತಿಯು ವಾಡಿಕೆಯಂತೆ ಸುಗ್ಗಿ ಹಬ್ಬವೆಂದು ಕರೆಸಿಕೊಂಡರು ಕೂಡ, ಈ ಹಬ್ಬಕ್ಕೆ ಇನ್ನು ಅನೇಕ ವಿಶೇಷತೆಗಳಿವೆ. ವರ್ಷದ ಮೊದಲ ಹಬ್ಬವಾದ ಈ ಸಂಕ್ರಾಂತಿಯು ಸೌರಮಾನ ಪದ್ಧತಿಯಪ್ರಕಾರ ಜನೆವರಿ ೧೪ ರಂದು ಸೂರ್ಯ ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರಯಾಣಬೆಳೆಸುವ ಪುಣ್ಯಕಾಲ. ಜ್ಯೋತಿಷ್ಯ ಶಾಸ್ತ್ರದ ವಾದದಂತೆ, ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯ ಎಂದು ಕೂಡ ಹೇಳುವುದುಂಟು. ಇಂದಿನಿಂದ ರಾತ್ರಿಗಳು ಚಿಕ್ಕದಾಗಿ ಹಗಲುಗಳು ದೊಡ್ಡವಾಗುತ್ತವೆ. ಅಂದರೆ ಚಳಿಗಾಲ ಮುಗಿದು ಚೈತ್ರದ ಕಡೆ ವಾಲುವ ಸಮಯ ಇದಾಗಿದೆ. ಈ ಹಬ್ಬವನ್ನು ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿ ವಿವಿಧ ಹೆಸರು, ಪದ್ಧತಿ ಮತ್ತು ಆಚಾರ ವಿಚಾರಗಾಳಿಗನುಗುಣವಾಗಿ ಆಚರಿಸುವುದುಂಟು. ಕರ್ನಾಟಕದಲ್ಲಿ ನಾವು ಸಂಕ್ರಾಂತಿಯೆಂದೂ ಕರೆದರೆ, ತಮಿಳುನಾಡು ಮತ್ತು ಆಂಧ್ರದಲ್ಲಿ ಪೊಂಗಲ್ ಎಂದೂ, ಪಂಜಾಬಿನಲ್ಲಿ ಲೊಹ್ರಿ, ಗುಜರಾತ್‌ನಲ್ಲಿ ಉತ್ತರಾಯಣ, ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ಕರ್ನಾಟಕದಲ್ಲಿ, ಇನ್ನು ವಿಶೇಷವಾಗಿ ರೊಟ್ಟಿಯ ನಾಡೆಂದು ಹೆಸರುವಾಸಿಯಾದ ನಮ್ಮ ಉತ್ತರ ಕರ್ನಾಟಕದಲ್ಲಿ ಸಂಕ್ರಾಂತಿಯಾ ಆಚರಣೆಯ ವಿಶೇಷತೇನೆ ಬೇರೆ. ಇದು ನಮ್ಮಲ್ಲಿ ಬೋಗಿ, ಸಂಕ್ರಾಂತಿ ಮತ್ತು ಕರಿ ಎಂಬ ಮೂರು ದಿನಗಳ ಹಬ್ಬ. ಬೋಗಿಯ ದಿನ ಎಲ್ಲರು ಎಣ್ಣೆಸ್ನಾನ ಮಾಡಿದರೆ, ಸಂಕ್ರಾಂತಿಯ ದಿನ ಖಡಕ್ ಸಜ್ಜಿ ರೊಟ್ಟಿ, ಮೊಸರನ್ನ, ಜುಣುಕದ ವಡೆ (ಹಿಟ್ಟಿನ ಪಲ್ಯ), ಬದನೆಕಾಯಿ ಎಣ್ಣೆಗಾಯಿ ಪಲ್ಯ, ಹೆಸರು ಕಾಳು ಪಲ್ಯ, ಮಡಿಕೆ ಕಾಳು ಪಲ್ಯ, ಸಿಹಿ ತಿನಿಸುಗಳಾದ ಮಾದ್ಲಿ, ಹೋಳಿಗೆ, ಕರ್ಚಿಕಾಯಿ, ಹೀಗೆ ಉತ್ತರ ಕರ್ನಾಟಕದ ಅನೇಕ ವಿಶೇಷ ಖಾದ್ಯಗಳ ಬುತ್ತಿಯನ್ನು ಮಾಡಿಕೊಂಡು, ದೇವರಿಗೆ ಇವುಗಳದೇ ನೈವೇದ್ಯೆ ಅರ್ಪಿಸಿ, ಹಳ್ಳಿಗಳಾದರೆ ಮನೆಯ ಜನರೆಲ್ಲ ಕೂಡಿ ಎತ್ತಿನಬಂಡಿಯಲ್ಲಿ ತಮ್ಮ ಹೊಲಗದ್ದೆಗಳಿಗೆ ಹೋಗಿ, ಎಲ್ಲರು ಸೇರಿ ಬುತ್ತಿ ಊಟ ಮಾಡಿ, ಹಾಡಿ, ಕುಣಿದು ನಲಿಯುತ್ತಾರೆ. ಈ ಸಂಭ್ರಮವನ್ನ ಓದುವುದಕ್ಕಿಂತ ಅನುಭವಿಸಿದರೆ ಗೊತ್ತು ಅದರ ಗಮ್ಮತ್ತು. ಇದೆ ದಿನ ಸಂಜೆ ಪರಿವಾರದವರು ಸ್ನೇಹಿತರ, ಅಕ್ಕಪಕ್ಕದವರ ಮತ್ತು ಸಂಬಂದಿಕರ ಮನೆಗೆಲ್ಲ ಹೋಗಿ, ಎಳ್ಳು-ಬೆಲ್ಲ ಹಂಚಿ, ದ್ವೇಷಾಸೂಯೆಗಳನ್ನೆಲ್ಲ ಮರೆತು ಸಾಮರಸ್ಯದಿಂದ ಬದುಕೋಣ ಎನ್ನುವುದು ವಾಡಿಕೆ. ಇದನ್ನೇ ಉತ್ತರ ಕರ್ನಾಟಕ ಶೈಲಿಯಲ್ಲಿ ''ನಾವ್‌ ನೀವ್ ಎಳ್ಳು ಬೆಲ್ಲಾ ತೊಗೊಂಡ ಎಳ್ಳು ಬೆಲ್ಲದಾಂಗ್ ಇರೋನ್ರೀ'' ಅಂತ ಕೇಳ್ತಿವಿ ನೋಡ್ರಿ. ಕರಿ ಎಂದು ಕರೆಸಿಕೊಳ್ಳುವ ಮೂರನೇ ದಿನದಂದು ನಮ್ಮ ರೈತರು, ತಮ್ಮ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ ಮಿತ್ರರಾದ ಎತ್ತುಗಳನ್ನು, ಅವುಗಳ ಮೈಮೇಲೆಲ್ಲ ಬಣ್ಣ ಬಣ್ಣದ ಚಿತ್ರ ತೆಗೆದು, ಕೋಡುಗಳಿಗೆ ರಿಬ್ಬನ್, ಬಲೂನುಗಳನ್ನು ಕಟ್ಟಿ ಶೃಂಗಾರ ಮಾಡಿ, ನಂತರ ಅವುಗಳನ್ನು ಓಡಿಸುತ್ತಾ ಬಂದು ಬೆಂಕಿಯ ಕಿಚ್ಚಿನ ಮೇಲೆ ಹಾಯಿಸುವ ಆಚರಣೆಗೆ "ಕರಿ ಹರಿಯುವುದು ಅಥವಾ ಕಿಚ್ಚು ಹಾಯಿಸುವುದು" ಎನ್ನುವುದು.  


ಈಗ ಬೆಂಗಳೂರು ಎಂಬ ಕರ್ಮಭೂಮಿಯಲ್ಲಿ ಕೆಲಸಮಾಡುತ್ತಿರುವ ನಮ್ಮಂಥಹ ಉದ್ಯೋಗಿಗಳ ವಿಷಯಕ್ಕೆ ಬರೋಣ. ನಮ್ಮ ಬೆಂಗಳೂರು ಜನಕ್ಕೆ ಈ ವೀಕೆಂಡ್ ಎಂಬ ಪೆಡಂಭೂತ ಬಂತೆಂದರೆ ಸಾಕು, ವಾರಪೂರ್ತಿ ದುಡಿದ ಮನಕ್ಕೆ ಸ್ವಲ್ಪ ವಿಶ್ರಾಂತಿ ಸಿಗಲು, ಅದೇ ಶಾಪಿಂಗ್ ಮಾಲ್, ಸಿನೆಮಾ, ಮಲ್ಟಿಪ್ಲೆಕ್ಸ್ ಎಲ್ಲ ಬೋರ್ ಆದಾಗ, ಯಾವುದಾದರು ಹೊಸ ಪ್ರವಾಸಿ ಸ್ಥಳ, ದೇವಸ್ಥಾನ, ಕೆರೆ, ನದಿ, ಸರೋವರ ಹೀಗೆ ಎಲ್ಲಾದರೂ ಫ್ಯಾಮಿಲಿ ಜೊತೆ ಸುತ್ತಾಡಿಕೊಂಡು ಬರೋಣ ಅನಿಸಿಬಿಡುತ್ತದೆ. ಇತ್ತಿತ್ತಲಾಗಿ ಪ್ರತಿ ಮನೆಗೊಂದು ಕಾರುಗಳ ಹಾವಳಿಬೆರೆ ಜಾಸ್ತಿ ಆಗಿದೆ, ಸಾರ್ವಜನಿಕ ಸಾರಿಗೆ ಮೇಲೆ ಅವಲಂಬನೆ ಕಡಿಮೆ ಆಗಿ, ಚಿಕ್ಕ ಚಿಕ್ಕ ಟ್ರಿಪ್ ಮಾಡೋದು ಅಭ್ಯಾಸವಾಗಿಬಿಟ್ಟಿದೆ. ಬಹಳ ದಿನಗಳಿಂದ ಎಳ್ಳು ಸುತ್ತಾಡೋಕೆ ಹೋಗಿರಲಿಲ್ಲ, ಸಂಕ್ರಾಂತಿ ಹಬ್ಬ ಹತ್ತಿರ ಬರ್ತಾಇತ್ತು, ಅದಕ್ಕೆ ಮಿತ್ರರಾದ ಪ್ರಶಾಂತ್ ಅವರ ಫ್ಯಾಮಿಲಿ ಮತ್ತು ನಮ್ಮ ಫ್ಯಾಮಿಲಿ ಸೇರಿ ಸಂಕ್ರಾಂತಿ ಆಚರಣೆ ಮಾಡಲು ಯಾವುದಾದರು ಒಳ್ಳೆಯ ಸ್ಥಳ ಹುಡುಕೋಣ ಅಂತ ಪ್ಲಾನ್ ಮಾಡ್ತಾ ಇರೋವಾಗ ನನಗೆ ಅನಿಸಿದ ಅತ್ಯಂತ ಸೂಕ್ತವಾದ ಸ್ಥಳ, ನಮ್ಮ ಕಂಪನಿಯ ವ್ಯಾನ್ ಡ್ರೈವರ್ ಹಳಿದ "ತೊಣ್ಣೂರು ಕೆರೆ".  

**************

ಮಂಡ್ಯ ಜಿಲ್ಲೆ ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ಎಲ್ಲೆಲ್ಲೂ ಹಚ್ಚ ಹಸಿರಿನಿಂದ ಕಂಗೊಳಿಸುವ ಭೂಮಾತೆ, ರಸ್ತೆಗಳ ಎಡ-ಬಲಗಳಲ್ಲಿ ಕಬ್ಬು, ಬಾಳೆ, ತೆಂಗು, ಭತ್ತದ ಗದ್ದೆಗಳು, ಕೆರೆ-ಕಟ್ಟೆ ಕಾಲುವೆಗಳು. ಕನ್ನಡದ ನಾಡಿನ ದಕ್ಷಿಣ ಭಾಗದ ಜೀವನಾಡಿ ಎನಿಸಿರುವ ಕಾವೇರಮ್ಮನ ಕೃಪಾಕಟಾಕ್ಷವೋ, ಮೈಸೂರು ವೊಡೆಯರ ಮನೆತನದ ತ್ಯಾಗ ಮತ್ತು ಸಹಾಯವೋ ಅಥವಾ ಈ ದೇಶ ಕಂಡ ಮಹಾನ್ ಇಂಜಿನಿಯರ್ "ಶ್ರೀ ವಿಶ್ವೇಶ್ವರಯ್ಯನವರ" ಶ್ರಮದ ಪ್ರತೀಕವೋ, ಮೈಸೂರು-ಮಂಡ್ಯ ಜಿಲ್ಲೆಗಳ ಮಧ್ಯೆ ಎದ್ದು ನಿಂತಿರುವ  ಕೃಷ್ಣರಾಜ ಸಾಗರ ಅಣೆಕಟ್ಟಿನಿಂದ, ಈ ಭಾಗದ ಭೂಮಿಗೆ ನೀರಿನ ಬರವೇ ಇಲ್ಲದಂತಾಗಿ, ರೈತನ ಬಾಳು ಹಸನಾಗಿದೆ. ಈ ಜಿಲ್ಲೆಯಲ್ಲಿ ಕಂಡುಬರುವ ಅನೇಕ ಪ್ರಸಿದ್ಧ ಕೆರೆಗಳಲ್ಲಿ ಒಂದಾದದ್ದು ಈ "ತೊಣ್ಣೂರು ಕೆರೆ". ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲೂಕಿನ "ತೊಣ್ಣೂರು" ಎಂಬ ಹಳ್ಳಿಯಲ್ಲಿ ಈ ಕೆರೆ ಇದ್ದು, ಪಾಂಡವಪುರದಿಂದ 8 ಕಿಮಿ ದೂರದಲ್ಲಿದೆ. ಬೆಂಗಳೂರಿನಿಂದ ಬರುವವರಿಗೆ, ಮೈಸೂರು ಮಾರ್ಗವಾಗಿ ಬಂದರೆ ಸರಿಯಾಗಿ 136 ಕಿಮಿ ದೂರ ಸಾಗಬೇಕಾಗುತ್ತದೆ.

ಸುಮಾರಾಗಿ 1400 ಎಕರೆಗಳಷ್ಟು ವಿಸ್ತಾರವಾಗಿ ಹರಡಿಕೊಂಡಿರುವ ಈ ಕೆರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಒಂದು ಸಾವಿರ ವರ್ಷಗಳ ಹಿಂದೆ ವೈಷ್ಣವ ಸಂತರಾದ ಶ್ರೀ ರಾಮಾನುಜಾಚಾರ್ಯರು ಈ ಕೆರೆಯನ್ನು ಸ್ಥಾಪಿಸಿ, ಅದಕ್ಕೆ ತಿರುಮಲಸಗಾರ ಎಂದು ನಾಮಕರಣ ಮಾಡಿದ್ದರು ಎಂದು ಹೇಳಲಾಗುತ್ತದೆ. ರಾಮಾನುಜಾಚಾರ್ಯರು ಹತ್ತಿರದ ಮೇಲುಕೋಟೆ ಕ್ಷೇತ್ರಕ್ಕೆ ಹೋಗುವ ಮುಂಚೆ ಈ ಕೆರೆಯ ಹತ್ತಿರ ವಾಸವಾಗಿದ್ದರು ಎನ್ನಲಾಗುತ್ತದೆ. ಅದಕ್ಕೆ ಪ್ರತೀಕವಾಗಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ಮತ್ತು ಒಂದು ಚಿಕ್ಕ ದೇವಸ್ಥಾನವನ್ನು, ಕೆರೆಯ ಕೆಳಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಕಂಡುಬರುತ್ತದೆ. ಇಲ್ಲಿನ ಸುತ್ತಮುತ್ತಲ ಜನ ಹೇಳುವಪ್ರಕಾರ ಈ ಕೆರೆ ಬತ್ತಿದ್ದು ನೋಡಿಯೇ ಇಲ್ಲ ಎನ್ನುತ್ತಾರೆ. ಅಷ್ಟೇ ಅಲ್ಲ ಕೆರೆಗೆ ಬರುವ ನೀರಿನ ಮೂಲ ಕೂಡ ಇಂದಿಗೂ ತಿಳಿಯದ ಸಂಗತಿಯೆನ್ನುವುದು ಇಲ್ಲಿಯ ಜನರ ವಾದ. ಶುಭ್ರವಾದ ನೀಲವರ್ಣದ ಜಲರಾಶಿಯನ್ನು ಹೊಂದಿರುವ ಈ ಕೆರೆಯನ್ನು ನೋಡಿ "ಟಿಪ್ಪು ಸುಲ್ತಾನನು" ಇದಕ್ಕೆ "ಮೋತಿ ತಾಲಾಬ್" ಅಂತ ಹೆಸರಿಟ್ಟಿದ್ದನಂತೆ. ಅಷ್ಟೇ ಅಲ್ಲದೆ ಈ ತೊಣ್ಣೂರು ಕೆರೆಯ ನೀರಿನಲ್ಲಿ ಔಷದಿಯ ಗುಣಗಳಿದ್ದು, ಚರ್ಮರೋಗದಿಂದ ಬಳಲುವವರು ಈ ನೀರಿನಲ್ಲಿ ಸ್ನಾನ ಮಾಡಿದರೆ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆಇದೆ.


ಈ ಸ್ಥಳದ ಇನ್ನೊಂದು ವಿಶೇಷವೆಂದರೆ, ಕೆರೆಯ ಹತ್ತಿರ ಸಾವಿರಾರು ವರ್ಷಗಳ ಹಳೆಯದಾದ ವೆಂಕಟರಮಣ, ರಾಮಾನುಜಾಚಾರ್ಯ, ನಂಬಿನಾರಾಯಣ ಹಾಗು ಪಕ್ಕದ ಬೆಟ್ಟದ ಮೇಲಿರುವ ಯೋಗ ನರಷಿಂಹ ಎಂಬ ನಾಲ್ಕು ದೇವಸ್ಥಾನಗಳು. ಈ ನಾಲ್ಕೂ ದೇವಸ್ಥಾನಗಳಿಗೂ ತಮ್ಮದೇ ಇತಿಹಾಸವಿದ್ದು, ಈ ನಾಲ್ಕು ದೇವಸ್ಥಾನಗಳಲ್ಲಿ ವಿಶೇಷವಾದದ್ದು ನಂಬಿನಾರಾಯಣ ದೇವಸ್ಥಾನ. ಈ ದೇವಸ್ಥಾನದ ಮುಂದಿರುವ ಮಾಹಿತಿ ಪ್ರಲಕದ ಪ್ರಕಾರ ಇದು ಮೂಲತಃ ಹೊಯ್ಸಳರ ಕಾಲದ ಜೈನ ಬಸದಿಯಾಗಿದ್ದು ಇದನ್ನು ಬಿಟ್ಟಿದೇವರಾಯ ಎಂಬ ರಾಜ ನಿರ್ಮಿಸಿರುತ್ತಾನೆ. ಈ ಪ್ರಾಂತ್ಯಕ್ಕೆ ಶ್ರೀ ರಾಮಾನುಜಾಚಾರ್ಯರ ಆಗಮನವಾದನಂತರ, ಯಾವುದೊ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ  ಬಿಟ್ಟಿದೇವರಾಯಣ ಮಗಳನ್ನು ಆಚಾರ್ಯರ ಗಮನಕ್ಕೆ ತಂದಾಗ, ಅವರು ರಾಜನ ಮಗಳನ್ನು ಈ ತೊಣ್ಣೂರು ಕೆರೆಯಲ್ಲಿ ಸ್ನಾನಮಾಡಿಸಿ ಬೆಟ್ಟದ ಮೇಲಿರುವ ಯೋಗ ನರಷಿಂಹ ಸ್ವಾಮಿಗಳ ಆಶೀರ್ವಾದ ಪಡೆಸಿದಮೇಲೆ ಅವಳು ಗುಣಮುಖಳಾದಳೆಂದು, ಇದರಿಂದ ಪ್ರಭಾವಿತಗೊಂಡ ಬಿಟ್ಟಿದೇವರಾಯನು ಶ್ರೀ ರಾಮಾನುಜಾಚಾರ್ಯರ ಅಣತಿಯಂತೆ ಜೈನಧರ್ಮದಿಂದ ಪರಿವರ್ತನಗೊಂಡು ವೈಷ್ಣವ ಧರ್ಮವನ್ನು ಸ್ವೀಕಾರಮಾಡಿ, ಆಚಾರ್ಯರಿಗೆ ಇದೆ ಬಸದಿಯಲ್ಲಿ ಶ್ರೀಮನ್ನಾರಾಯಣನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಹೇಳಿದಮೇಲೆ ಈ  ಜೈನಬಸದಿಯು ನಂಬಿನಾರಾಯಣ ದೇವಸ್ಥಾನವಾಗಿ ಬದಲಾವಣೆಯಾಯಿತೆಂದು ಹೇಳಲಾಗುತ್ತದೆ. ನಿಜವಾಗಿಯೂ, ನಮ್ಮದೇಶದಲ್ಲಿನ ಇಂತಹ ಅದೆಷ್ಟೋ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನಗಳು, ಬಸದಿ, ಪಗೋಡಗಳಬಗ್ಗೆ, ಮತ್ತು ಅವುಗಳ ವಿಶೇಷತೆಗಳ ಬಗ್ಗೆ ಅಗೆಯುತ್ತಾ ಹೋದರೆ ಅದೆಷ್ಟೋ ಮಾಹಿತಿಗಳು, ಕಥೆಗಳು ಹೊರಮ್ಮುತ್ತವೆಯಲ್ಲವೇ.... 

*************

    ಈ ವರ್ಷ ಸಂಕ್ರಾಂತಿ ಹಬ್ಬವು ಜನೇವರಿ 15 ಕ್ಕೆ ಬಂದಿದ್ದರಿಂದ ನಮ್ಮ ಕಂಪನಿಗಳು ಮುಂಚೆನೇ ಒಂದು ದಿನದ ರಜೆ ಘೋಷಣೆ ಮಾಡಿದ್ದವು. ನಮ್ಮ ಪ್ಲಾನಿನಂತೆ, ನಮ್ಮ ಮಹಿಳಾಮಣಿಗಳ ಪರಿಶ್ರಮದಿಂದ ಸಿದ್ದವಾದ ಉತ್ತರಕರ್ನಾಟಕದ ವಿವಿಧ ಖಾದ್ಯಗಳ ಬುತ್ತಿಊಟವನ್ನು ಕಟ್ಟಿಕೊಂಡು, ಆಧುನಿಕ ಬಂಡಿ ಎನಿಸಿದ ನಮ್ಮ ನಮ್ಮ ಕಾರುಗಳಲ್ಲಿ, ಬೆಳಿಗ್ಗೆ ಸರಿಯಾಗಿ 8-00 ಘಂಟೆಗೆ, ಜೆ ಪಿ ನಗರದ ನಂದಿನಿ ಅಂಡರ್ಪಾಸನ್ನು ಸ್ಟಾರ್ಟಿಂಗ್ ಪಾಯಿಂಟ್ ಮಾಡಿಕೊಂಡು, ವಿಷ್ಣುವರ್ಧನ್ ರಸ್ತೆಯಮೂಲಕ ಮೈಸೂರು ರಸ್ತೆ ತಲುಪಿ ಅಲ್ಲಿಂದ ಕೆರೆ ತೊಣ್ಣೂರು ಕಡೆಗೆ ಪ್ರಯಾಣ ಬೆಳೆಸಿದೆವು. ಮಾರ್ಗದ ಮಧ್ಯದಲ್ಲಿ ರಾಮನಗರದ ಹತ್ತಿರ ಒಂದು ಉಡುಪಿ ರೆಸ್ಟೋರೆಂಟ್ ಕಣ್ಣಿಗೆ ಬಿತ್ತು. ಎಲ್ಲರೂ ಅಲ್ಲೇ ಬೆಳಗಿನ ಉಪಹಾರ ಮುಗಿಸಿದಮೇಲೆ ಅರ್ಧಗಂಟೆ ಅಲ್ಲೇ ವಿಶ್ರಾಂತಿಮಾಡಿ, ಮುಂದೆ ಮಂಡ್ಯದ ಕಡೆಗೆ ನಮ್ಮ ಕಾರುಗಳನ್ನು ಓಡಿಸಿದೆವು,. ಅದ್ಯಾಕೋ ಗೊತ್ತಿಲ್ಲ, ಯಾವಾಗಲು ವಾಹನಗಳಿಂದ ಗಿಜಿ ಗಿಜಿ ಅನ್ನುತಿದ್ದ ಮೈಸೂರು ರಸ್ತೆಯು ಅವತ್ತು ತುಂಬಾ ಖಾಲಿ ಖಾಲಿ ಇತ್ತು. ಈ ರಜೆ ವಾರದ ಮಧ್ಯೆ ಬಂದಿದ್ದರಿಂದ ಬಹಳ ಜನ ಮನೆಯಲ್ಲೇ ಹಬ್ಬವಾಚರಿಸುತ್ತಿದ್ದಾರೇನೋ, ಅದಕ್ಕೆ ರಸ್ತೆ ಖಾಲಿ ಇರಬಹುದು ಅನಿಸಿತು. ಮಂಡ್ಯ ದಾಟಿದಮೇಲೆ ರಸ್ತೆಯ ಬಲಗಡೆ ಪಾಂಡವಪುರಕ್ಕೆ ಹೋಗುವ ದಾರಿ ಎಂಬ ಫಲಕ ನೋಡಿದಮೇಲೆ ಅದೇ ಮಾರ್ಗವಾಗಿ ಮುಂದುವರಿದೆವು. ಚಿಕ್ಕದಾದರೂ ಚೊಕ್ಕದಾದ ಪಾಂಡವಪುರ ರಸ್ತೆಯ ಎಡ-ಬಲದಲ್ಲಿ ಹಚ್ಚಹಸುರಿನ ಹೊಲಗದ್ದೆಗಳ ನಯನಮನೋಹರ ದೃಶ್ಯ ಕಣ್ಣಿಗೆ ಮುದನೀಡುತಿತ್ತು. ಗೂಗಲ್ ಮ್ಯಾಪಿನ ಸಹಾಯ ಇದ್ದರು ರಸ್ತೆಯುದ್ದಕ್ಕೂ ಒಂದೆರಡು ಸಲ ದಾರಿಹೋಕರನ್ನ ವಿಚಾರಿಸುತ್ತಾ ಹೋದೆವು. ಪಾಂಡವಪುರ ತಲುಪಿದಮೇಲೆ, ಅಲ್ಲಿಂದ ಎರಡು ಕಿಲೋಮೀಟರು ದೂರದಲ್ಲಿ ಎಡತಿರುವು ಇದ್ದು, ಅಲ್ಲಿಂದ ನಾಲ್ಕು ಕಿಲೋಮೀಟರು ದೂರ ಸಾಗಿದರೆ ಕೆರೆ ಸಿಗುತ್ತದೆ ಎಂದು ಒಬ್ಬರಾರು ಹಿರಿಯರು ಹೇಳುದಂತೆ ಸಾಗಿದಮೇಲೆ ಸರಿಯಾಗಿ 12-00 ಘಂಟೆಗೆ ನಮ್ಮ ಈ ಪ್ರವಾಸದ ಕೊನೆಯ ಘಟ್ಟವಾದ ತೊಣ್ಣೂರು ಕೆರೆಯನ್ನು ತಲುಪಿದೆವು. ಕೆರೆಯ ಹತ್ತಿರ ಕಾರುಗಳ ಪಾರ್ಕಿಂಗ್ ಮಾಡಲು ಬೇಕಾದಷ್ಟು ಸ್ಥಳ ಇದ್ದು, ನಮ್ಮ ಕಾರುಗಳನ್ನು ಅಲ್ಲೇ ಪಾರ್ಕ್ ಮಾಡಿ ಎಲ್ಲರು ಸೇರಿ ಕೆರೆಯತ್ತ ದಾಪುಗಾಲು ಹಾಕಿದೆವು. 

ಆಹಾ! ಎಂಥಹ ರಮಣೀಯ ದೃಶ್ಯ......ದೃಷ್ಟಿ ಹರಿಸಿದಷ್ಟು ಶುಭ್ರವಾದ ನೀಲವರ್ಣದ ಜಲರಾಶಿ, ಸಾವಿರಾರು ಎಕರೆ ವಿಶಾಲಾಗಿದೆ. ನಾನು ಇಲ್ಲಿ ಬರುವುದಕ್ಕೆ ಮುಂಚೆ ಈ ಸ್ಥಳದ ಬಗ್ಗೆ ತಿಳಿದ ಮಾಹಿತಿಗಿಂತ ಜಾಸ್ತಿನೇ ಸುಂದರವಾಗಿತ್ತು ಈ ಕೆರೆಯ ದೃಶ್ಯ. ಕೆಳಗೆ ಇಳಿದು ನೀರಿನಲ್ಲಿ ಕೈ ಕಾಲು ಮುಖ ತೊಳೆದುಕೊಂಡಮೇಲೆ ಅದೆಂತಹದೋ ಉಲ್ಲಾಸ. ಅಲ್ಲೇ ದಂಡೆಯಮೇಲೆ ಕುಳಿತರೆ 3-4 ಘಂಟೆ ಡ್ರೈವ್ ಮಾಡಿದ  ದಣಿವೆಲ್ಲಾ ಎರಡೇ ನಿಮಿಷದಲ್ಲಿ ಹಾರಿಹೋಯಿತು. ಅಲ್ಲೇ ಎಲ್ಲರು ಕೆಲವು ಭಂಗಿಗಳಲ್ಲೂ ಫೋಟೋಗ್ರಫಿ ಪ್ರೋಗ್ರಾಮ್ ಮುಗಿಸುವಷ್ಟರಲ್ಲಿ ಘಂಟೆ 1-30 ಅಯೀತು. ಊಟದ ಸಮಯ, ಹೊಟ್ಟೆ ಚುರ್ರ ಎನ್ನುತಿತ್ತು, ಕಾರುಗಳಲ್ಲಿರುವ ಪದಾರ್ತಗಳನ್ನು ನೆನಪಿಸಿಕೊಂಡಮೇಲೆ ಹಸಿವು ಇನ್ನು ಜಾಸ್ತಿ ಆಯೀತು. ಕೆರೆಯ ದಂಡೆಯಮೇಲೆ ಜನ ಜಾಸ್ತಿ ಇದ್ದರಿಂದ, ಪಕ್ಕದ ನಂಬಿನಾರಾಯಣ ಸ್ವಾಮಿ ದೇವಸ್ಥಾನದ ಮುಂದಿರುವ ಹಸಿರು ಹುಲ್ಲಿನ ಹಾಸಿನಮೇಲೆ ಕುಂತಿ ಬುತ್ತಿ ಊಟಮಾಡೋಣ ಎಂದು ನಿರ್ಧಾರವಾಯಿತು. ಎಲ್ಲರು ಅತ್ತಕಡೆ ಹೊರಟೆವು. ಊಟ ಶುರುಮಾಡುವುದಕ್ಕಿಂತ ಮುಂಚೆ ದೇವರ ಧರ್ಶನ ಮಾಡಬೇಕೆನ್ನುವಷ್ಟರಲ್ಲಿ ದೇವಸ್ಥಾನದ ಬಾಗಿಲಿ ಹಾಕಿದ್ದರಿಂದ, ಮಧ್ಯಾಹ್ನ 3-30 ಕ್ಕೆ ಪೂಜಾರಿಗಳು ಬಾಗಿಲು ತೆರೆಯುವುದು ಎಂದು ಸ್ಥಳೀಯರು ಮಾಹಿತಿ ನೀಡಿದಮೇಲೆ, ಬುತ್ತಿ ಊಟದ ಕಡೆಗೆ ನಮ್ಮ ಗಮನ ಸೆಳೆಯಿತು. 

ಹುಲ್ಲು ಹಾಸಿನಮೇಲೆ ಎಲ್ಲರು ವರ್ತುಲಾಕಾರವಾಗಿ ಕುಳಿತು ಸಂಕ್ರಾಂತಿಯ ವಿಶೇಷ ಬುತ್ತಿ ಊಟವನ್ನು ಮಾಡಿದೇವು. ನಿಜವಾಗಿವು ಇದು ಅತ್ಯಂತ ವಿಶೇಷ ಮತ್ತು ಮರೆಯಲಾಗದ ಅನುಭವ ಅನಿಸಿತು. ನಂತರ ಅಲ್ಲೇ ಒಂದು ಘಂಟೆ ದಣಿವಾರಿಸಿಕೊಳ್ಳುವಷ್ಟರಲ್ಲಿ ದೇವಸ್ಥಾನದ ಬಾಗಿಲು ತೆರೆಯಿತು. ಸಂಪೂರ್ಣವಾಗಿ ಕಲ್ಲಿನಲ್ಲೇ ಕಟ್ಟಿಸಿದ ಬಹಳ ಹಳೆಯ ದೇವಸ್ಥಾನ, ಗರ್ಭಗುಡಿಯಲ್ಲಿ ನಂಬಿನಾರಾಯಣ ಸ್ವಾಮಿಗೆ ಶಿರ ನಮಿಸಿ, ಅಲ್ಲಿಯೂ ಕೂಡ ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿದೆವು. ಕೈಯಲ್ಲಿ ಸ್ಮಾರ್ಟ್ ಫೋನು ಒಂದಿದ್ದರೆ ಈಗಿನ ಕಾಲದಲ್ಲಿ ಫೋಟೋ ತೆಗೆಯುವುದು ಅತ್ಯಂತ ಸರಳ ಕೆಲಸ. ಅಲ್ಲೇ ದೇವಸ್ಥಾನದ ಮುಂದೆ ಒಬ್ಬರಿಗೊಬ್ಬರು ಎಳ್ಳು-ಬೆಲ್ಲ ಹಂಚಿ, ಉತ್ತರ ಕರ್ನಾಟಕ ಶೈಲಿಯಲ್ಲಿ ''ನಾವ್‌ ನೀವ್ ಎಳ್ಳು ಬೆಲ್ಲಾ ತೊಗೊಂಡ ಎಳ್ಳು ಬೆಲ್ಲದಾಂಗ್ ಇರೋನ್ರೀ'' ಅಂತ ಹೇಳಿ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿದೆವು. 

ಸರಿಯಾಗಿ ಸಂಜೆ 5-00 ಘಂಟೆಗೆ ಈ ಸುಂದರವಾದ ಪ್ರವಾಸಿತಾಣಕ್ಕೆ "ಸಾಯೋನಾರ" ಹೇಳಿ, ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಬರುವಾಗ ಮತ್ತೆ ಒಂದುಕಡೆ ಎಲ್ಲರು ಸೇರಿ ಮನಸಿಗ್ಗೆ ಉಲ್ಲಾಸನೀಡುವ ಚಹಾ ಸೇವನೆಮಾಡಿ, ಅಲ್ಲಿಂದ ನಮ್ಮ ನಮ್ಮ ಗೂಡುಗಳ ಕಡೆಗೆ, ಅದೇ ಮೈಸೂರು ರಸ್ತೆಯ ಮಾರ್ಗವಾಗಿ ಹೊರತು ನಿಂತೆವು. 

ಈ ಬೆಂಗಳೂರಿನ ಸುತ್ತ ಅನೇಕ ಆಕರ್ಷಣೀಯ ಪ್ರವಾಸಿ ಸ್ಥಳಗಳು ಇದ್ದು, ಬಹಳ ಸ್ಥಳಗಳಿಗೆ ನಾವೀಗಾಗಲೇ ಭೇಟಿಕೊಟ್ಟಾಗಿತ್ತು. ಆದರೆ ಅದ್ಹೇಗೆ ಈ ಒಂದು ಸ್ಥಳ ನನ್ನ ಗಮನಕ್ಕೆ ಬರಲಿಲ್ಲ ಅಂತ ಇಲ್ಲಿ ಬಂದಮೇಲೆ ನನಗೆ ಅನಿಸಿತು. ನನಗಷ್ಟೇ ಅಲ್ಲ, ಈ ಸ್ಥಳದ ಪರಿಚಯ ಬಹಳ ಕಡಿಮೆ ಜನಕ್ಕೆ ಇದೆ ಎಂದೆನಿಸಿ, ಈ ಸ್ಥಳದ ಮಾಹಿತಿಯಬಗ್ಗೆ ಹಾಗು ಸಂಕ್ರಾಂತಿ ಹಬ್ಬದ ಬಗ್ಗೆ ಒಂದು ವಿಸ್ತೃತ ಲೇಖನ ಅವಶ್ಯವಿದೆ ಅನಿಸಿ, ಈ ಲೇಖನವನ್ನು ಬರೆಯಲು ನಿರ್ಧರಿಸಿದೆ. ಇದನ್ನು ಓದಿದಮೇಲೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಈ "ತೊಣ್ಣೂರು ಕೆರೆಯನ್ನು" ನೋಡಲು ಹೋಗಬರಲಿ ಎಂದು ನನ್ನ ಆಶಯ......... ನಿಮಗೆ ವೀಕೆಂಡ್ ಪ್ರವಾಸದ ಹವ್ಯಾಸವೇನಾದರೂ ಇದ್ದಾರೆ ಈ ಸ್ಥಳವನ್ನು ಇಂದೇ ನಿಮ್ಮ ಲಿಸ್ಟಿಗೆ ಸೇರಿಸಿಕೊಳ್ಳಿ..... ನೋಡಿಬಂದಮೇಲೆ ಕಾಮೆಂಟ್ ಸೆಕ್ಷನ್ ನಲ್ಲಿ ನಿಮ್ಮ ಅನಿಸಿಕೆ ತಿಳಿಸುವುದನ್ನು ಮರೆಯಬೇಡಿ....... 😊               

ಭಾನುವಾರ, ಡಿಸೆಂಬರ್ 29, 2019

ನರನಾಡಿಗಳಲ್ಲೂ ಹರಿಯುತಿದೆ ಬೆಂಗಳೂರಿನ ರೇಡಿಯೋ ಸಿಟಿ....


ಇವತ್ತು ಭಾನುವಾರ ನೋಡಿ.... ತಿಂಗಳ ಕೊನೆ...... ಸಂಬಳ ಬೇರೆ ಬಂದಿತ್ತು....
ನನ್ನ  ಧರ್ಮಪತ್ನಿ ನಿನ್ನೆನೇ ವಾರ್ನಿಂಗ ಮಾಡಿದ್ಲು.... "ಮನೇಲಿ ತರಕಾರಿ ಖಾಲಿಯಾಗಿದೆ, ನಾಳೆ ಬೆಳಿಗ್ಗೆ ಜೆಪಿ ನಗರದ ಸಾರಕ್ಕಿ ಮಾರ್ಕೆಟಿಗೆ ಹೋಗಿ ತರಕಾರಿ ತರೋಣ" ಅಂತ.....
ಮನೆಯ ಯಜಮಾನಿ ಆರ್ಡರ್ ಅಂದ್ರೆ ಒಲ್ಲೆ ಅನ್ನೋಕಾಗುತ್ತಾ!!....ಎಲ್ಲ ಕೆಲಸಬಿಟ್ಟು ಬೆಳಿಗ್ಗೆ ಎದ್ದವರೇ ಕಾರಿನಲ್ಲಿ ತರಕಾರಿ ತರೋಕೆ ಪತಿ-ಪತ್ನಿ ಸಮೇತರಾಗಿ ಹೋದ್ವಿ......
ನಾನು ಬಾರ್ಗೇನು ಮಾಡೋದ್ರಲ್ಲಿ ಅವಳಿಗಿಂತ ಸ್ವಲ್ಪ ಅಲ್ಪ ಜ್ಞಾನಿ...... ಅದಕ್ಕೆ ತರಕಾರಿ ಮಾರೋನ ಹತ್ರ  ಲೆಕ್ಕ ತಪ್ಪಿ ಹತ್ತು ರೂಪಾಯಿ ಜಾಸ್ತಿ ಕೊಟ್ಟಬಿಟ್ಟೆ..... ಅಷ್ಟು ಸಾಕು ನೋಡಿ ಈ ಹೆಂಡ್ತೀರು ವಾದ ಮಾಡಿ ತಾವೇ ಬುದ್ಧಿವಂತರು ಅಂತ ಪ್ರೂವ್ ಮಾಡಕ್ಕೆ......
ವಾಪಸ್ ಮನೆಗೆ ಬರೋವಾಗ ಇದೆ ವಿಷಯಕ್ಕೆ ವಾದ ವಿವಾದ ನಡೀತಾಯಿತ್ತು......ಹೋಗ್ಲಿ ಬಿಡೆ ಏನು ಹತ್ತು ರೂಪಾಯಿ ತಾನೇ ಅಂದ್ರು ಕೇಳ್ತಾಯಿಲ್ಲ....ಆಗ ಈ ವಾದ ವಿವಾದ ದಿಂದ ಎಸ್ಕೇಪ್ ಆಗಕ್ಕೆ ಕಾರಿನ ಎಫ್ ಎಂ ರೇಡಿಯೋ ಮೊರೆಹೋದೆ.....ನೀನಾದ್ರೂ ವಿಷಯ ಚೇಂಜ್ ಮಾಡಿ ಪುಣ್ಣ್ಯಾ ಕಟ್ಕೋ ಮಾರಾಯ ಅಂತ.....

ಇನ್ನೇನು ಎಫ್ ಎಂ ರೇಡಿಯೋ ಆನ್ ಮಾಡಿದೆ.....ಆಗ ಬಂತು ನೋಡಿ ರೇಡಿಯೋ ಸಿಟಿ FM-91.1 ಅವರ ಆಂಥೆಮ್ಮ್ಯೂ .....

ನಮಸ್ಕಾರ ನೀವು ಕೇಳ್ತಾಯಿದ್ದೀರಿ ಎಫ್ ಎಂ ಅಂದ್ರೆ ರೇಡಿಯೋ ಸಿಟಿ 91.1 ಎಫ್ ಎಂ.....
 “ಒಂದು ಮಸಾಲೆ ಬೈ-ಟೂ ಕಾಫೀ ಬರ್ಲೆ....
ಹಲೋ ಎಕ್ಸ್ಕ್ಯೂಸ್ ಮೀ, ಇದು ಲೇಡೀಸ್ ಸೀಟು .....ಸ್ವಲ್ಪ ಅಡ್ಜಸ್ಟ್ ಮಾಡಿ.....
ಟಿಕೆಟ್.....ಟಿಕೆಟ್.....ಟಿಕೆಟ್......
ಬದ್ನೇಕಾಯಿ ಎಸ್ಟ್ರಿ ಕೆಜಿ....
ಹೇ! ವಾಟ್ ಡಾ ಮಚಾ....ಫುಲ್ ಮಿಂಚಿಂಗಾ....”
 ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ ಸಿಟಿ...
 “ಮೀಟರ್ ಮೇಲೆ ಇಪ್ಪತ್ತು.....ಬರ್ತೀರಾ....”
 ಕೆಂಪೇಗೌಡರ ಸಾಹಸ.....ಐನೂರು ವರ್ಷದ ಇತಿಹಾಸ.....
ನಮ್ಮೂರು ಬೆಂದಕಾಳೂರು......ಇದುವೇ ನಮ್ಮ ಬೆಂಗಳೂರು......
 “ಕನ್ನಡ್ ಗೊತ್ತಿಲ್ಲ.....ಕನ್ನಡ್ ಅಲ್ಲ.....ಅದು ಕನ್ನಡ...”
 ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ...
ಇಲ್ಲಿಗೆ ಎಲ್ಲಿದಲೋ ಬರ್ತಾರೆ.....ಕಷ್ಟದಲ್ಲೂ ನಗ್ತಾರೆ......
ತಳ್ಳು ಗಾಡಿ ಇಂದ ಹಿಡಿದು....ಫೈವ್ ಸ್ಟಾರ್ ವರೆಗೂ ನಮ್ಮವರೇ.....
 “ಇವರೇ ಛೋಟಾ....ಒಂದು ಚಾಯ್ ಹಾಕಿ....”
 ಐಟಿ-ಬಿಟಿ ಪಾರ್ಕಿನ ನಡುವೆ.....ಲಾಲ್ ಬಾಗು...ಕಬ್ಬನ್ ಪಾರ್ಕು....
ಬಸವನ ಗುಡಿಯ ದೋಸೆ....ಮಲ್ಲೇಶ್ವರದ ಇಡ್ಲಿ ಸಾಕು......
 “ಸಾರ್, ವಡೆ ಡಿಪ್ಪಾ.....ಸಪರೇಟಾ....”
 ಮೀಟರ್ ಇರೋ ಆಟೋದಲ್ಲಿ.....ಸ್ಪೀಡಾಗಿರೋ ಕ್ಯಾಬಿನಲ್ಲಿ....
ಬ್ರಿಗೇಡ್-ಎಂಜಿ ರೋಡಿನಕಡೆಗೆ......ಲೈಫ್ ಸೂಪರ್ ಇದೆ.....
ನರನಾಡಿಗಳಲ್ಲೂ ಹರಿಯುತಿದೆ ಸಿಟಿ....ಕಣ ಕಣದಲ್ಲೂ ಪ್ರತಿ ಉಸಿರಲ್ಲೂ.....ಸಿಟಿ.....
ಎಫ್ ಎಂ ಅಂದ್ರೆ.....ರೇಡಿಯೋ ಸಿಟಿ....

ಅದ್ಯಾರು ಪುಣ್ಯಾತ್ಮ ಈ ಹಾಡು ಸೃಷ್ಟಿಮಾಡಿದನೋ ಗೊತ್ತಿಲ್ಲ, ಆದರೆ ಈ ಒಂದು ಚಿಕ್ಕ ಟೈಟಲ್ ಸಾಂಗು ನಮ್ಮ ಈಡಿ ಬೆಂಗಳೂರಿನ ಬದುಕಿನ ಚಿತ್ರಣವನ್ನೇ ನಮ್ಮ ಕಣ್ಮುಂದೆ ತಂದು ಬಿಡತ್ತೆ.....ಅದಕ್ಕೆ ಕಾರಣ ಈ ಸಾಂಗಿನ ಮಧ್ಯ ಬರುವ ಕೆಲವು ವಿಶೇಷ ಸಂಭಾಷಣೆಗಳು....
ನಾವು, ವಿಶೇಷವಾಗಿ ಬೆಂಗಳೂರಿನಲ್ಲಿ ಜೀವನ ಮಾಡವ್ರು ಆ ಸಂಭಾಷಣೆಗಳನ್ನ ದಿನಾ ಕೇಳಿರ್ತೀವಿ ಅಥವಾ ಮಾತಾಡಿರ್ತೀವಿ.... ಆದರೆ ಈ ಹಾಡನ್ನ ಎಮ್ಮೆ ಕೇಳಿದಾಗ ನಿಮಗ ಈ ಸಂಭಾಷಣೆಗಳು ಈ ಊರಿನ ವೈಶಿಷ್ಟತೆಯನ್ನು ಹೊರಹೊಮ್ಮುವ ಒಂದು ಗುರುತನ್ನೇ ನಿಮ್ಮ ಮನಸಿನಲ್ಲಿ ಛಾಪಿಸುತ್ತವೆ.....

ಯಾವ ಯಾವ ಸಂಧರ್ಭಗಳಲ್ಲಿ ಈ ಸಂಭಾಷಣೆಗಳ ಪರಿಚಯ ಅಥವಾ ಅನುಭವ ನಮಗೆ ಆಗಿರುತ್ತದೆ ಅನ್ನೋದನ್ನ ನೆನಪಿಸಲು, ಈ ಹಾಡಿನಲ್ಲಿ ಬರುವ ಸಂಭಾಷಣೆಗಳನ್ನು ಸಂಧರ್ಬೋಚಿತವಾಗಿ, ಈ  ಕೆಳಗಿನಂತೆ ಸ್ವಲ್ಪ ವಿಸ್ತಾರವಾಗಿ ಹೇಳುವ ಪ್ರಯತ್ನ ಮಾಡಬೇಕನಿಸಿತು.....ಬೆಂಗಳೂರಿನಲ್ಲಿರುವವರು ಇದನ್ನು ಓದಿದಮೇಲೆ ನನ್ನೊಂದಿಗೆ ಒಪ್ಪುತ್ತೀರಾ ಅಂದ್ಕೋತೀನಿ.

ಯಾವಾಗ್ಲಾದ್ರೂ ಸರ್ವಿಸ್ ಇರೋ ರೆಸ್ಟೋರೆಂಟಿಗೆ ಹೋದಾಗ ನಮ್ಮ ಆರ್ಡೆರಿಗಾಗಿ ಕಾಯಿತಾಇರ್ತಿವಿ, ಆಗ ಸರ್ವರೂ "ಒಂದು ಮಸಾಲೆ ಬೈ-ಟೂ ಕಾಫೀ ಬರ್ಲೆ.." ಅಂತ ಕೂಗೋದನ್ನ ಕೇಳಿರಬಹುದು.....ಇನ್ನು ಅಕಸ್ಮಾತ್ ಸೆಲ್ಫ್ ಸರ್ವಿಸ್ ರೀಫ್ರೆಶ್ಮೆಂಟ್ಗೆ ಹೋದಾಗ, ಇಡ್ಲಿ-ವಡ ಆರ್ಡರ್ ಮಾಡಿ, ಕೌಂಟರ್ನಲ್ಲಿ ಹೋಟೆಲಿನವನು ಒಳಕ್ಕ ಕೇಳ್ತಾನೆ, "ಸಾರ್, ಡಿಪ್ಪಾ.....ಸಪರೇಟಾ....”, ಇಲ್ಲಿ ಡಿಪ್ಪ ಅಂದ್ರೆ ಒಂದು ಆಳ ಜಾಸ್ತಿ ಇರೋ ಪ್ಲೇಟಿನಲ್ಲಿ ಇಡ್ಲಿ-ವಡ ಎರಡನ್ನು ಸಾಂಬಾರಿನಲ್ಲಿ ಚನ್ನಾಗಿ ಮುಳುಗಿಸಿ ಕೊಡ್ತಾನೆ.....ಬೆಂಗಳೂರುನಲ್ಲಿ ಕೆಲವಂದು ಜನಕ್ಕೆ ಕೇವಲ ಇಡ್ಲಿ-ವಡ ತಿನ್ನಕ್ಕೆ ಸಿಕ್ಕಾಪಟ್ಟೆ ಸಾಂಬಾರ್ ಬೇಕು, ಇದು ಅಂಥವರಿಗಾಗಿ ಮಾಡಿರೋ ಡಿಪ್ಪ ಸಿಸ್ಟಮ್........ಇನ್ನು ಸಪರೇಟ್ ಅಂದ್ರೆ ಮಾಮೂಲಾಗಿ ಕೊಡೊತರ ಎರಡು ಲೊಟುಗಳಲ್ಲಿ ಸಾಂಬಾರು ಚಟ್ನಿ ಸಪರೇಟಾಗಿ ಕೊಡ್ತಾನೆ....

ಬೆಂಗಳೂರಿನಲ್ಲಿ ಮೆಟ್ರೋ, ಕ್ಯಾಬು ಎಲ್ಲ ಇದ್ರು, ಬಸ್ಸಿನಲ್ಲಿ ಕೆಲಸಕ್ಕೆ, ಶಾಲಾ ಕಾಲೇಜಿಗೆ ಹೋಗೋ ಜನರ ಸಂಖ್ಯೆ ಏನು ಕಡಿಮೆ ಆಗಿಲ್ಲ....ಪಾಪ ಅವರ ಪ್ರತಿದಿನದ ಹೆಣಗಾಟ ಕೆಳಬಾರ್ದು...ಈ ರೀತಿ ಬಿಎಂಟಿಸಿ ಬಸ್ಸುನಲ್ಲಿ ಏನಾದ್ರು ಪ್ರಯಾಣ ಮಾಡಿದ ಅನುಭವ ಇದ್ರೆ (ನನಗು ಇದೆ).....ಅಲ್ಲಿನೂ ಕೆಲವು ವಿಶೇಷ ಸಂಭಾಷಣೆಗಳನ್ನ ಕೇಳಿರ್ತೀವಿ. ಅತೀ ಕಾಮನ್ ಅಂದ್ರೆ "ಟಿಕೆಟ್.....ಟಿಕೆಟ್.....ಟಿಕೆಟ್...". ಇದು ಬೇರಾರದು ಅಲ್ಲ, ನಮ್ಮ ಕಂಡಕ್ಟರ್ ಸಾಹೆಬ್ರುಗಳು ಹೇಳೋ  ಸಾಮಾನ್ಯ ಡೈಲಾಗು......ಅಕಸ್ಮಾತ್ ಅವತ್ತು ಬಸ್ಸಿನಲ್ಲಿ ರಶ್ ಜಾಸ್ತಿ ಇದ್ದು,  ಯಾರಾದ್ರೂ ತಪ್ಪಿ ಲೇಡೀಸ್ ಸೀಟಿನಲ್ಲೇನಾದ್ರು ಕೂತುಬಿಟ್ಟರೆ, ಆಕಡೆ ಇಂದ "ಹಲೋ ಎಕ್ಸ್ಕ್ಯೂಸ್ ಮೀ, ಇದು ಲೇಡೀಸ್ ಸೀಟು... ಎದ್ದೇಳ್ರಿ.." ಅಂತ ಮಹಿಳಾಮಣಿಗಳ ಧ್ವನಿ ನಿಮ್ಮ ಕಿವಿಗೆ ಅಪ್ಪಳಿಸಿರುತ್ತೆ. ನೀವೇನೋ  "ಸ್ವಲ್ಪ ಅಡ್ಜಸ್ಟ್ ಮಾಡಿ... ಕಾಲ್ ನೋಯಿತಾಇದೆ" ಅಂತ ಹೇಳ್ಬಹುದು. ಆದರೆ ಈ ಊರಲ್ಲಿ ನಮ್ಮ ಹೆಣ್ಮಕ್ಳು ತುಂಬಾ ಸ್ಟ್ರಾಂಗ್ ಕಂಣ್ರಿ...... ಸುಮ್ನೆ ವಾದಕ್ಕೀಳಿದ್ರೆ ಹಂಗೆ ಪೊಲೀಸರನ್ನ ಕರಿಸಿ ದಂಡ ಹಾಕಿಸಿಬಿಡ್ತಾರೆ. ಅದ್ಕೆ ಸೀಟ್ ಬಿಟ್ಟಕೊಡೋದೇ ಪುರುಷಾರ್ಥದ ಲಕ್ಷಣ....😏😜

ಆಯಿತು ಈ ಬಸ್ಸಿನ ಗೋಜಿಗೆ ಹೋಗೋದೇ ಬೇಡ ಅಂತ, ಬೆಂಗಳೂರಿನ ಸಾರಿಗೆ ಸಾಧನಗಳ ಜೀವನಾಡಿ ಆಗಿರುವ ಆಟೋದಲ್ಲಿ ಏನಾದ್ರು ಹೋಗೋ ಪ್ಲಾನ್ ಏನಾದ್ರು ಮಾಡಿದ್ರೆ ಅಲ್ಲಿನೂ ಅನೇಕ ವಿಶೇಷ ಅನುಭವಗಳು ಆಗೋದುಂಟು. ಸಾಮಾನ್ಯವಾಗಿ ನಾವು ಆಟೋದವರ ಜೊತೆ ಮೀಟರ್ ಗೋಜಿಗೆ ಬಾರ್ಗೇನ್  ಮಡೋಕೆ  ಇಳೀತೀವಿ, ಯಾಕಂದ್ರೆ ಎಲ್ಲೆಲ್ಲೋ ಸುತ್ತಾಡಿಸಿ ಇವರು ಮೀಟರ್ ಬಿಲ್ಲು ಜಾಸ್ತಿ ಮಾಡ್ಬಹುದೇನೋ ಎಂಬ ಹೆದರಿಕೆ. ಬಾರ್ಗೇನ್ ಕೆಲಸಮಾಡ್ಲಿಲ್ಲ ಅಂತ  ಗೊತ್ತಾದಾಗ, ಹೋಗ್ಲಿ ಬಿಡು ಮೀಟರ್ ಹಾಕಪ್ಪ, ಆದ್ರೆ ಕರೆಕ್ಟ್ ಅಡ್ದ್ರೆಸ್ಗೆ ಕರ್ಕೊಂಡು ಹೋಗ್ಬೇಕು ನೋಡು ಅಂದಾಗ ಅವನು ಇನ್ನೊಂದು ದಾಳ ಹಾಕ್ತಾನೆ ಅದೇ “ಮೀಟರ್ ಮೇಲೆ ಇಪ್ಪತ್ತು ರೂಪಾಯಿ ತೊಗೋತೀನಿ .....ಬರ್ತೀರಾ....” ಅಂತ. ಅನಿವಾರ್ಯ ಆದ್ರೆ ಅವನು ಹಾಕಿದ ದಾಳಕ್ಕೆ ಸೋತು ಹೋಗ್ಲೇಬೇಕು.....

ನಮ್ಮ ಬೆಂಗಳೂರನ್ನು ಕಾಡುತ್ತಿರುವ ಇನ್ನೊಂದು ಜಟಿಲವಾದ ಸಮಸ್ಸ್ಯೆ ಅಂದ್ರೆ, ಕೆಲಸಕ್ಕೆ ಅಂತ ವಲಸೆ ಬರುತ್ತಿರುವ ಈ ಉತ್ತರ ಭಾರತೀಯರು. ಇವರೋ ಇಲ್ಲಿ ಕೆಲಸ ಬೇಕು, ಜೀವನ ಮಾಡಕ್ಕೆ ಇದೆ ಊರು ಬೇಕು, ಆದರೆ ನಮ್ಮ ಕನ್ನಡ ಭಾಷೆ ಮಾತ್ರ ಬೇಡ. ಇವರನ್ನ ಏನಾದ್ರು ವಿಷಯ ಹಿಡ್ಕೊಂಡು ಕನ್ನಡದಲ್ಲಿ ಮಾತಾಡ್ಸಕ್ಕೆ ಹೋಗಿ ಆಗ ಸಾಮಾನ್ಯವಾಗಿ ಇವರ ಬಾಯಿಯಿಂದ ಉದುರೋ ಮೊದಲ ಡೈಲಾಗು "“ಕನ್ನಡ್ ಗೊತ್ತಿಲ್ಲ....". ಅಯ್ಯೋ ದೇವ್ರೇ ಇವರಿಗೆ ಸರಿಯಾಗಿ "ಕನ್ನಡ" ಅಂತ ಉಚ್ಚರಿಸಲು ಬರಲ್ಲವೇ, ಇನ್ನು ಕನ್ನಡ ಮಾತಾಡೋದು ದೂರದ ಮಾತು ಅನ್ಸತ್ತೆ....... ಎಲ್ಲರೂ ಹಾಗೆ ಅಂತ ಹೇಳಲ್ಲ, ಕೆಲವರು ಅಲ್ಪ ಸ್ವಲ್ಪ ಹೇಗೋ ಮಾತಾಡೋಕೆ ಪ್ರಯತ್ನಮಾಡೋದನ್ನ ಕಾಣುತೀವಿ...."“ಇವರೇ ಛೋಟಾ....ಒಂದು ಚಾಯ್ ಹಾಕಿ."...ಇದು ಇಂಥಹ ಅರ್ಧ ಕನ್ನಡ ಕಲಿತವರಿಂದ ಬರುವ ಡೈಲಾಗು.

ಅದೇ ರೀತಿ ಇನ್ನು ಅನೇಕ ಸಂಭಾಷಣೆಗಳು......ನಮ್ಮ ಮಾಡ್ರನ್ ಪೀಳಿಗೆಗಳ, ಈಕಡೆ ಕನ್ನಡವೂ ಅಲ್ಲದ ಆಕಡೆ ಇಂಗ್ಲೀಷು ಅಲ್ಲದ ವಿಚಿತ್ರ ಡೈಲಾಗುಗಳು.... "ಹೇ! ವಾಟ್....ಮಚಾ....ಮಗಾ.... ಫುಲ್ ಮಿಂಚಿಂಗಾ....” ಇತರೆ....ಆಮೇಲೆ ಈ ಕೆ ರ್ ಮಾರ್ಕೆಟು, ಸಾರಕ್ಕಿ, ಮಲ್ಲೇಶ್ವರಂ ಮಾರ್ಕೆಟುಗಳಿಗೆ ಹೋದಾಗ ನಮ್ಮ ಜನ "ಬದ್ನೇಕಾಯಿ ಎಸ್ಟ್ರಿ ಕೆಜಿ....ಈರುಳ್ಳಿ ಹೆಂಗೆ ಹೋಡ್ತಿದ್ದೀಯ, ಸೊಪ್ಪು ಹೆಂಗೆ.... " ಈ ಥರ ಚೌಕಾಸಿ ಮಾಡುವ ದೃಶ್ಯ ಸರ್ವೇಸಾಮಾನ್ಯ.

ಅದೇನೇ ಇರಲಿ....ಅತ್ತ ಬ್ರಿಗೇಡ್-ಎಂಜಿ ರೋಡಿನಕಡೆಗೆ ಸೂಪರ್ ಫಾಸ್ಟ್ ಆಗಿ ಸಾಗುತ್ತಿರುವ, ಅನೇಕ ಐಟಿ-ಬಿಟಿ ಪಾರ್ಕುಗಳ ಮಧ್ಯೆಯೂ ಕೂಡ ನಮ್ಮ ಲಾಲ್ ಬಾಗು...ಕಬ್ಬನ್ ಪಾರ್ಕುಗಳ ಸೊಬಗು ಇನ್ನು ಅಳಿಸಿಲ್ಲ. ಎಷ್ಟೇ ಬಗೆ ಬಗೆಯ ತಿನಿಸುಗಳ ದೇಶದ ವಿವಿದ ಭಾಗಗಳ ರೆಸ್ಟೋರೆಂಟುಗಳು ಬಂದರು , ನಮ್ಮ ಬೆಂಗಳೂರಿನ ಮೂಲ ಸೊಗಡನ್ನು, ಬೆಂಗಳೂರಿನೊಂದಿಗೆ ಬೆಸೆದುಕೊಂಡಿರುವ ಆ ಭಾವನಾತ್ಮಕ ಸಂಬಂಧವನ್ನು ಉಳಿಸಲು ಬಸವನಗುಡಿಯ ದೋಸೆ....ಮಲ್ಲೇಶ್ವರದ ಇಡ್ಲಿಯ ರುಚಿಯೇ ಸಾಕು....

ಎಷ್ಟಾದ್ರೂ ನಮ್ಮ ಬೆಂಗಳೂರಿನ ವಿಷಯ ಅಂದಮೇಲೆ ಹೆಮ್ಮೆಯ ವಿಷಯಾನೇ ಅಲ್ಲ್ವಾ.....

ಮುಂದಿನ ಸಲ ರೇಡಿಯೋ ಸಿಟಿ FM-91.1 ಅವರ ಈ ಟೈಟಲ್ ಸಾಂಗನ್ನು ಕೇಳಿದ್ರೆ...... ನಾನು ಮೇಲೆ ತಿಳಿಸಿದ ಈ ಹಾಡಿನಲ್ಲಿ ಬರುವ ಸಂಭಾಷಣೆಗಳನ್ನು, ಸಂಧರ್ಬಗಳನ್ನು ನೆನಪಿಸಿಕೊಂಡು ನೀವು ಖುಷಿ ಪಡಿ.....

ಕೊನೆಯದಾಗಿ.....ರೇಡಿಯೋ ಸಿಟಿ....ನಮ್ಮ ಹೆಮ್ಮೆಯ ಬೆಂಗಳೂರು......ನಮ್ಮ ಹೆಮ್ಮೆಯ FM-91.1 ರೇಡಿಯೋ.....💓😊

ಭಾನುವಾರ, ಜುಲೈ 28, 2019

ನಾಡು, ನುಡಿ ಮತ್ತು ಸಂಸ್ಕೃತಿಯೆಂಬ ಮಾಯೆಯ ಪಾಶದಲ್ಲಿ.....

ಹೆಚ್ಚಿನ ವಿದ್ಯಾಭ್ಯಾಸ ಮತ್ತು ಕೆಲಸದ ನಿಮಿತ್ತ್ಯ ನಾನು ಕೆಲವು ವರ್ಷ ಬೇರೆ ಬೇರೆ ದೇಶಗಳಲ್ಲಿ ಜೀವನಸಾಗಿಸಬೇಕಾದ ಅನಿವಾರ್ಯತೆ ಬಂತು. ಆ ಸಮಯದಲ್ಲಿ ನನಗೆ ನೆನಪಿಡಲೇಬೇಕಾದ ಅನೇಕ ವಿಶಿಷ್ಟ ಅನುಭವಗಳು ಆದದ್ದುಂಟು.  ಅಂತಹ ಅನುಭವಗಳನ್ನು ಕೆಲವೊಮ್ಮೆ ಎಲ್ಲರೊಂದಿಗೆ ಹಂಚಿಕೊಬೇಕೆನಿಸುತ್ತದೆ, ಜೊತೆಗೆ ಆ ತರಹದ ಗತಿಸಿದ ಅನುಭವಗಳೊಂದಿಗೆ, ಸಾಮಾನವಾದ ಪ್ರಸ್ತುತ ಘಟನೆಗಳನ್ನು ಪರಸ್ಪರ ಹೋಲಿಸಿದಾಗ ಏನಾದರು ಒಂದು ವಿಚಾರ ಹೇಳಬಹುದೇನೋ ಅಂತ ಅನಿಸಿತು.  ಹೊರದೇಶದಲ್ಲಿದ್ದಾಗ, ನಾನು ಬಿಡುವಿನ ವೇಳೆಯಲ್ಲಿ ಹೊರಗಡೆ ಎಲ್ಲಾದ್ರೂ ಹೋದ ಸಮಯದಲ್ಲಿ, ಅಥವಾ ಕೆಲಸಕ್ಕೋ...... ಇಲ್ಲ ವೀಕೆಂಡ್ನಲ್ಲಿ ಸಿನಿಮಾ, ಶಾಪಿಂಗ್ ಅಂತ ಹೋದಾಗ, ಅಲ್ಲಿ ಅಕಸ್ಮಾತ್ ನಮ್ಮ ದೇಶದವರನ್ನ ಯಾರನ್ನಾದ್ರೂ ನೋಡಿದ್ರೆ ಏನೋ ಒಂಥರಾ ಖುಷಿ ಅನಿಸಿಬಿಡೋದು. ಅಬ್ಬಾ ನಮ್ಮ ಕಡೆದವರು, ಹೋಗಿ ಮಾತಾಡಿಸಿಬಿಡ್ಲಾ...... ಮಾಮೂಲಾಗಿ, ಅವರು ಯಾವ ರಾಜ್ಯದವ್ರಿರ್ಬಹುದು, ಏನ್ ಭಾಷೆ ಮಾತಾಡ್ತಾರೋ, ಈ ದೇಶಕ್ಕೆ ಏನಕ್ಕೆ ಬಂದಿರಬಹುದು, ಈ ಥರ ಅನೇಕ ಪ್ರಶ್ನೆಗಳು ಹುಟ್ಟಿಬಿಡೋದು. ಭಾಷೆ ಯಾವುದಿದ್ದರೇನು, ಇದೆಯಲ್ಲ  ನಮ್ಮ ಹಿಂದಿ, ಅದು ಬರದಿದ್ರೆ, ಆಂಗ್ಲರು ಕೊಟ್ಟುಹೋದ ಬಳುವಳಿ, ಇಂಗ್ಲಿಷ್ನಲ್ಲಿ ಶುರುಹಚ್ಕೊಂಡರಾಯಿತು ಅಂತ ಅನ್ನಕೋತಿದ್ದೆ. ಇನ್ನು ವಿಶೇಷ ಅಂದ್ರೆ ಅವ್ರೇನಾದ್ರೂ ಕನ್ನಡದವರಾಗಿದ್ರೆ ಆಗೋ ಖುಷಿನೇ ಬೇರೆ. ಅದೇನೋ ಒಂಥರಾ ಸೆಳೆತ...... ನಮ್ಮವರು, ನಮ್ಮ ನಾಡಿನಿಂದ ಬಂದವರು, ಜಗತ್ತಿನ ಯಾವುದೋ ಮೂಲೇಲಿ ಮತ್ತೆ ಸಿಕ್ಕಾಗ ನಮ್ಮ ಊರಿಗೆ ಹೋದಷ್ಟು ಖುಷಿ. ವಿದೇಶದಲ್ಲಿರೋ ಬೇರೆ ಅನೇಕ ಭಾರತೀಯರಿಗೆ ಇದೇತರಹದ ಅನುಭವಗಳು ಆಗಿರಬಹುದು. ಆದರೂ ನಾನು ಜಪಾನಿನಲ್ಲಿದ್ದಾಗ ನನಗೆ ಈ ಥರ ಅನುಭವ ಆಗಿದ್ದು ಜಾಸ್ತಿ. ಏಕೆಂದ್ರೆ ಅಲ್ಲಿ ಭಾರತೀಯರ ಸಂಖ್ಯೆ ತುಂಬಾ ವಿರಳ, ಏನೋ ಅಪರೂಪಕ್ಕೆ ದೊಡ್ಡ ದೊಡ್ಡ ಊರುಗಳಲ್ಲಿ ಅಲ್ಲೋ ಇಲ್ಲೋ ಯಾರಾದ್ರೂ ದೇಶಿಗಳು ಸಿಗ್ಬಹುದು....ಒಂಥರಾ ಮರಭೂಮಿಯಲ್ಲಿ ಓಯಸಿಸ್ ಸಿಕ್ಕಂಗೆ ನೋಡಿ.....ಇತ್ತಿತ್ತಲಾಗಿ ಜಪಾನ ಮತ್ತು ಇನ್ನು ಅನೇಕ ಉತ್ತರದ ದೇಶಗಳಿಗೆ ಭಾರತೀಯರ ವಲಸೆ ಜಾಸ್ತಿ ಆಗಿದೆ....... ಆ ವಿಷಯ ಬೇರೆ.  

ಅದೇ ಅಮೇರಿಕಾದಲ್ಲಿ ಇದ್ದಾಗ ನನಗೆ ಅಷ್ಟೊಂದು ಅಪರೂಪ ಅನಿಸಲಿಲ್ಲ, ಕಾರಣ ಇಷ್ಟೇ, ಅಲ್ಲಿ ಪ್ರತಿ ಕಿಲೋಮೀಟರ್ಗೆ ಒಬ್ರು ದೇಸಿಗಳನ್ನ ಕಾಣಬಹುದು. ಇದು ಸಹಜವೂ ಕೂಡ, ಯಾಕೆಂದ್ರೆ ಜಗತ್ತಿನಲ್ಲೇ ಅತಿ ಹೆಚ್ಚು ಭಾರತೀಯರು ನೆಲೆಸಿರುವ ದೇಶ ಅಂದ್ರೆ ಅಮೇರಿಕಾ. ಯಾಕೋ ಗೊತ್ತಿಲ್ಲ, ಅಮೇರಿಕಾದಲ್ಲಿ ನಮ್ಮ ದೇಸಿಗಳು ಅಷ್ಟೊಂದು ಬೇಗನೆ ತಗಲಾಕೊಳ್ಳದೆ, ಕಂಡ್ರು ಕಾಣದವರಂಗೆ, ಒಂದು ಸಿಂಪೆಲ್ ಹಾಯ್ ಹೇಳಿ ದೂರವಾಗ್ತಾರೆ. ಆಗಲೇ ಹೇಳಿದ ಆಗೇ ದೇಸಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅಷ್ಟೊಂದು ಅಪರೂಪ ಅನಿಸೋದಿಲ್ಲ ನೋಡಿ. ಹಾಸ್ಸ್ಯವಾಗಿ ನಾನು ಅನ್ನಕೋತಿದ್ದುದು ಏನೆಂದ್ರೆ, ಎಲ್ಲಿ ಮಾತಿಗಿಳಿದ್ರೆ ನಾಳೆ ಮನೆಹುಡ್ಕೊಂಡು ಬಂದೆ ಬಿಡ್ತಾನೇನೋ ಮಹಾರಾಯ ಎಂಬ ಭಯದಿಂದ ಇರಬಹುದಲ್ಲ ಅಂತ .....😄😄. 

ಇದು ವಿದೇಶದ ಕಥೆಯಾದ್ರೆ, ಇನ್ನು ನಮ್ಮ ಬೆಂಗಳೂರಿಗೆ ಬರೋಣ. ಇಲ್ಲಿ ಬಂದು ಕೂಡ ಈಗ ಹೆಚ್ಚುಕಡಿಮೆ ಐದು ವರ್ಷ ಕಳಿತು. ಅಂದಮೇಲೆ ಇಲ್ಲಿನೂ ಹೇಳ್ಕೊಳ್ಳೋಕೆ ಅಂತ ಲೆಕ್ಕವಿಲ್ಲದಷ್ಟು ಅನುಭವಗಳ ಸರಮಾಲೆ ರೆಡಿ ಆಗಿಬಿಟ್ಟಿದೆ ಅನ್ನಬಹುದು. ಬೆಂಗಳೂರು ಅಂದ್ರೆ ಈಗ ಬರಿ ನಮ್ಮ ರಾಜ್ಯದ ರಾಜಧಾನಿ ಅಷ್ಟೇ ಆಗಿರದೆ, ಬರ್ತಾ ಬರ್ತಾ ಒಂದು ಕಾಸ್ಮೋಪಾಲಿಟನ್ ನಗರ ಆಗಿಬಿಟ್ಟಿದೆ. ಇಲ್ಲಿ ಈಗ ರಾಜ್ಯದ ವಿವಿಧ ಭಾಗಗಳಿಂದ (ಉಕ, ಹೈಕ, ಮಕ, ಕುಡ್ಲ ಮತ್ತು ಕೊಂಕಣ) ಅಷ್ಟೇ ಅಲ್ಲದೆ, ದೇಶದ ವಿವಿಧ ಭಾಗಗಳಿಂದ ವಿವಿಧ ಭಾಷೆ ಮಾತನಾಡೋ ಜನರೆಲ್ಲಾ ಕೆಲಸದ ನಿಮಿತ್ತ್ಯ ನೆಲೆಊರಿದ್ದಾರೆ. ಹಾಗಾಗಿ ಇಲ್ಲಿ ವಿವಿಧ ಭಾಷೆ, ಸಂಸ್ಕೃತಿ, ವೇಷಭೂಷಣಗಳಿಂದ ಕೂಡಿದ ಜನರಿಂದ ಕೂಡಿದ ಬಹುಸಾಂಸ್ಕೃತಿಕ ನಗರವಾಗಿರುವುದನ್ನು ಕಾಣಬಹುದು. ದಿನದಿಂದ ದಿನಕ್ಕೆ, ಜನದಟ್ಟಣೆ, ವಾಹನದಟ್ಟಣೆ, ಕಾಂಕ್ರೀಟ್ ಕಾಡಿನ ಬೀಡಾಗುತ್ತಿರುವ ಈ ಉದ್ಯಾನನಗರಿ ಮುಂದೆ ಯಾವ ದಿಕ್ಕಿನತ್ತ ಸಾಗುತಿದೆಯೋ ನಾಕಾಣೆ!. 

ಅದೇನೇ ಇರಲಿ, ಇಲ್ಲಿ ನಾನು ಹೇಳಬೇಕಾಗಿದ್ದು ಬೇರೇನೇ ಇದೆ. ಬೆಂಗಳೂರು ಮೊದಲಿನಿಂದಲೂ ಪುಸ್ತಕೀಯ ಅಥವಾ ಸಿನಿಮೀಯ ಕನ್ನಡ ಮಾತನಾಡುವ ನಗರ. ರಾಜ್ಯದ ಬೇರೆ ಭಾಗದ ಕನ್ನಡಕ್ಕೂ, ಮತ್ತೆ ಬೆಂಗಳೂರಿನ ಕನ್ನಡಕ್ಕೂ ಬಹಳ ವ್ಯತ್ತ್ಯಾಸ. ಉದಾರಣೆಗೆ ನಮ್ಮ ಉತ್ತರ ಕರ್ನಾಟಕದ ಜವಾರಿ ಕನ್ನಡ ಭಾಷೆಯೊಂದಿಗೆ ತುಲನೆ ಮಾಡಿದ್ರೆ......ಅಯ್ಯೋ, ಅದು ಊಹಿಸಲಾಗದಷ್ಟು ಘೋರ ವ್ಯತ್ತ್ಯಾಸ ಕಣ್ಣ್ರೀ.....  ವಿಷಯ ಹೀಗಿರುವಾಗ, ನನ್ನಂತಹ ಒಬ್ಬ ಉತ್ತರಕರ್ನಾಟಕದಿಂದ ಬಂದ ವ್ಯಕ್ತಿಗೆ ಅಕಸ್ಮಾತಾಗಿ ನಮ್ಮ ಉತ್ತರಕರ್ನಾಟಕದ ಜವಾರಿ ಭಾಷೆ ಮಾತನಾಡೋರು ಸಿಕ್ಕಾಬಿಟ್ಟರೆ, ವಿದೇಶದಲ್ಲಿ ಒಬ್ಬ ಭಾರತೀಯನಿಗೆ ಇನ್ನೊಬ್ಬ ಭಾರತೀಯ ಸಿಕ್ಕಷ್ಟೇ ಖುಷಿ ಆಗುತ್ತದೆ ಅಂತ ಹೇಳೋದ್ರಲ್ಲಿ ಎರಡು ಮಾತಿಲ್ಲ. ಆ ನಾಡು ನುಡಿ ಸಂಸ್ಕೃತಿಯ ಸೆಳೆತದಲ್ಲಿರೋ ಅದ್ಭುತ ಶಕ್ತಿನೇ ಹಂಗೇರಿ. ನಾನು ಬೆಂಗಳೂರಿಗೆ ಬಂದಾಗಿನಿಂದ ಈ ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದಾದ ಜೆಪಿ ನಗರದಲ್ಲಿನೇ ಐದುವರ್ಷ ಕಳೆದದ್ದು. ಆಮೇಲೆ ಬೆಂಗಳೂರಿನ ದಕ್ಷಿಣಬಾಗದ ಜಯನಗರ, ಜೆಪಿ ನಗರ, ಬನಶಂಕರಿ, ಅಥವಾ ಬಿಟಿಎಂ ಹೀಗೆ ಯಾವುದೇ ಬಡಾವಣೆ ಇರಲಿ, ಇಲ್ಲಿ ಉತ್ತರ ಕರ್ನಾಟಕದ ಜನರ ಸಂಖ್ಯೆ ಬಹಳ ಕಡಿಮೆ. ಅದೇ ನೀವು ರಾಜಾಜಿನಗರ, ವಿಜಯನಗರ ಅಥವಾ ನಾಗರಬಾವಿ ಮುಂತಾದ ಬಡಾವಣೆಗಳಿಗೆ ಹೋದ್ರೆ, ಅಮೇರಿಕಾದಲ್ಲಿ ದೇಸಿಯರು ಸಿಗೋಹಾಗೆ, ಪ್ರತಿಕಿಲೋಮೀಟರ್ಗೆ ಒಂದು ಉತ್ತರಕರ್ನಾಟಕದ ಹೋಟೆಲ್, ಅಥವಾ ದಿನಸಿ ಅಂಗಡಿ ಇಲ್ಲಾಂದ್ರೆ ಉತ್ತರಕರ್ನಾಟಕದ ಜನ ಸಿಗೋದು ಸರ್ವೇ ಸಾಮಾನ್ಯ. ಬಹುಪಾಲು ತುಮಕೂರು ರೋಡಿನಿಂದ ಬರೋ ಆ ಭಾಗದ ಎಲ್ಲ ಬಸ್ಸುಗಳು ಮೊದಲು ನಿಲ್ಲೋದು ರಾಜಾಜಿನಗರದ ನವರಂಗ ಥಿಯೇಟರ್ ಹತ್ರ ಇರೋದ್ರಿಂದ ನಮ್ಮ ಉತ್ತರಕರ್ನಾಟಕದ ಜನ ಸುಮ್ಮನೆ ಎಲ್ಲಿ ದೂರ ಹೋಗೋದು ಬಿಡ್ರಿ ಅಂತ ಅಲ್ಲೇ ಸುತ್ತಮುತ್ತ ಸೆಟ್ಲ್ ಆಗಿರ್ಬಹುದೇನೋ.......

ಬೆಂಗಳೂರಿನ ದಕ್ಷಿಣಭಾಗದ ನಿವಾಸಿಯಾದ ನನಗೆ, ಒಂದು ವಾರದ ಹಿಂದೆ, ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ, ಜೆಪಿ ನಗರದ 7ನೇ ಹಂತದಲ್ಲಿ, ರೊಟ್ಟಿ ಮನೆ ಅಂತ ಒಂದು ಉತ್ತರಕರ್ನಾಟಕದ ದಿನಸಿ ಅಂಗಡಿ ಕಣ್ಣಿಗೆಬಿತ್ತು. ಅಷ್ಟೇ ಅಲ್ಲ, ಅಂಗಡಿಯವನು ಸಂಜೆ ಮಳೆಬರುವ ಹೊತ್ತಿನಲ್ಲಿ ಉತ್ತರಕರ್ನಾಟಕದ ಪ್ರಸಿದ್ಧ, ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿಗಳನ್ನು (ಮಿರ್ಚಿ ಬಜ್ಜಿ) ಹಂಗೆ ಬಾಣಲಿಯಿಂದ ಇಳಿಸ್ತಾಯಿದ್ದ..... ನಾಲಿಗೆ ಚುರ್ರ್ ಎಂದಿತು. ನಮ್ಮ ಕ್ಯಾಬ್ ಡ್ರೈವರ್ಗೆ ನಿಲ್ಲಿಸೋಕೆ ಹೇಳಿ ಅಲ್ಲೇ ಇಳಿದುಬಿಟ್ಟೆ. ಅಂಗಡಿಯವನ ಹತ್ರ ಹೋಗಿ ಎಷ್ಟಪ್ಪಾ ಒಂದು ಪ್ಲೇಟಿಗೆ ಅಂತ ಕೇಳ್ತಾ......ಹಂಗೆ ಸ್ವಲ್ಪ ಮುಂದುವರಿದು ಯಾವ ಊರಿನವರು, ಇಲ್ಲಿಗೆ ಬಂದು ಎಷ್ಟು ದಿನ ಅಂತೆಲ್ಲ ಕೇಳ್ತಾ ಮಾತಿಗಿಳಿದೆ. ಅವನು "ನಾವು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರಿನವರ ರೀ ಸರ, ಅಂದಂಗ ನಿಮ್ಮದು ಯಾವ ಊರರಿಪ" ಅಂದಾ. ಆಲಾಇವನ, ಇವನು ನಮ್ಮ ಊರಿನ ಹತ್ತಿರದವನಲೇಪಾ ಅಂತ ಬಹಳ ಖುಷಿ ಆಯಿತು. ಆಮೇಲೆ ಇದ್ದೆ ಇದೆ, ಪಕ್ಕದ ಊರಿನವ ಅಂದಮೇಲೆ ಆಕಡೆ ವಿಷಯಗಳು, ಮಳೆ, ಬೆಳೆ, ಅಂತ ಮಾತನಾಡುತ್ತ ಮನೆಯವರಿಗೆಲ್ಲ ಸೇರಿಸಿ ನಾಲ್ಕು ಪ್ಲೇಟ್ ಬಜ್ಜಿ ಪಾರ್ಸಲ್ ತೊಗೊಂಡು ಹೋಗಿ ಎಲ್ಲರೊಂದಿಗೆ ಹಂಚಿಕೊಂಡು ತಿಂದು ಸಂತೋಷಪಟ್ಟಿವಿ. ಆ ಅನುಭವ ಹೇಗಿತ್ತೆಂದ್ರೆ ನಮ್ಮ ಊರಿನಲ್ಲೇ ಕುಂತು ತಿಂದಷ್ಟೇ ಖುಷಿಯಾಯಿತು.....

ಒಟ್ಟಿನಲ್ಲಿ ಹೇಳೋದಂದ್ರೆ, ನಾವು ಎಲ್ಲೇ ಹೋದರು, ಹೇಗೆ ಇದ್ದರೂ,  ನಮ್ಮ ನಾಡು, ನುಡಿ, ಸಂಸ್ಕೃತಿ ಅನ್ನುವ, ನಾವು ಮರೆತರು ನಮ್ಮನ್ನ ಬಿಡದಿ ಮಾಯೆ ಅನ್ನೋಥರ, ಆ ಒಂದು ವ್ಯಕ್ತಿ ಅಥವಾ ವಸ್ತುವಿನ ಆಕಸ್ಮಿಕ ಭೇಟಿಯ ಮೂಲಕ ನಮ್ಮ ಮೂಲ ನೆಲೆಗೆ ಕರೆದುಕೊಂಡು ಹೋಗುವದರಲ್ಲಿ ಎರಡುಮಾತಿಲ್ಲ.....ನಾವು ಬೇರೆ ದೇಶದಲ್ಲಿದ್ದಾಗ ನಮ್ಮ ದೇಶದವನ್ನು ಕಂಡಾಗ, ಬೇರೆ ರಾಜ್ಯದಲ್ಲಿದ್ದಾಗ ನಮ್ಮ ರಾಜ್ಯದವರನ್ನು ಕಂಡಾಗ ಅಥವಾ ನಮ್ಮ ರಾಜ್ಯದಲ್ಲೇ ಬೇರ ಊರಿನಲ್ಲಿದಾಗ ನಮ್ಮ ಊರು/ಭಾಗದವರು ಭೇಟಿಯಾದಾಗ ಆಗುವ ಅನಿಸಿಕೆಗಳು ಒಂದೇ ರೀತಿಯ ಅನುಭವಗಳನ್ನು ಕೊಡುತ್ತವೆ.... 

ನಿಮಗೂ ಈ ತರಹದ ಅನುಭವಗಳು ಆಗಿದ್ದರೆ ಕೆಳಗಿನ ಕಾಮೆಂಟ್ ಭಾಗದಲ್ಲಿ ಹಂಚಿಕೊಳ್ಳಬಹುದು...... 

ಭಾನುವಾರ, ಮಾರ್ಚ್ 17, 2019

ಉತ್ತರ ಕರ್ನಾಟಕದ ಪ್ರಸಿದ್ಧ ಮಸಾಲೆ ಖಾರದ ಕಥೆ

ಉತ್ತರ ಕರ್ನಾಟಕ ಎಂದ ಕೂಡಲೆ ಒಮ್ಮೆಲೇ ತಲೆಯಲ್ಲಿ ಬರೋದು ವಿಭಿನ್ನ ಶೈಲಿಯ ಕನ್ನಡ, ತನ್ನದೇ ಆದ ವಿಶಿಷ್ಟವಾದ ಖಾದ್ಯಗಳು, ಮಾತಿನಲ್ಲಿ ಹಾಸ್ಯ ಮತ್ತು ರಸಿಕತೆ ತುಂಬಿದ ಜನ, ಇತ್ತ್ಯಾದಿ. ದಾವಣಗೆರೆಇಂದ ಬೀದರ್ ವರೆಗಿನ ಕರ್ನಾಟಕದ ಉತ್ತರ ದಿಕ್ಕಿನೆಡೆಗೆ ಹಬ್ಬಿರುವ ಈ ಗಂಡು ಮೆಟ್ಟಿದ ನಾಡು ಎಂದೆನಿಸಿಕೊಳ್ಳುವ ಭಾಗವೇ ಉತ್ತರ ಕರ್ನಾಟಕ. ಒಂದು ಕಡೆ ಮಹಾರಾಷ್ಟ್ರ, ಇನ್ನೊಂದು ಕಡೆ ಆಂಧ್ರ (ಈಗಿನ ತೆಲಂಗಾಣ), ಈ ಎರಡು ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿಗಳ ಅಪಾರವಾದ ಪ್ರಭಾವಕ್ಕೊಳಪಟ್ಟು, ಇತ್ತ ಶುದ್ಧ ಕನ್ನಡವೂ ಅಲ್ಲದ ಅತ್ತ ಮರಾಠಿ ಅಥವಾ ತೆಲುಗು ಅಲ್ಲದ ಒಂದು ಮಿಶ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡುಬಂದ ಈ ರಾಜ್ಯದ ಭಾಗ ಎನ್ನಬಹುದು. ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವ ಉತ್ತರ ಕರ್ನಾಟಕದ ಖಾದ್ಯಗಳೆಂದರೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಕಾಳು ಪಲ್ಯ, ಎಣ್ಣೆಗಾಯಿ ಪಲ್ಯ, ಶೇಂಗಾ ಹೋಳಿಗೆ, ಇತ್ತ್ಯಾದಿ. ಇವುಗಳಂತೆ ಈ "ಮಸಾಲೆ ಖಾರ" ಕೂಡ ಒಂದು ಪ್ರಮುಖ ಖಾದ್ಯನು ಹೌದು ಹಾಗು ತರಕಾರಿ ಮಾಡಲು ಬೇಕಾದ ಬಹುಮುಖ್ಯ ಸಾಮಗ್ರಿನೂ ಹೌದು. ಈ ಮಸಾಲೆ ಖಾರದ ನಾಮಾರ್ಥ ವಿವರಣೆ, ಅದರ ಉಪಯೋಗ, ಮಾಡುವ ವಿಧಾನ ಹಾಗು ಇದರ ಜೊತೆಗೆ ಅಂಟಿಕೊಂಡಿರುವ ನನ್ನ ಬಾಲ್ಯದ ನೆನಪುಗಳ ನಂಟು, ಇವುಗಳ ಬಗ್ಗೆ ಹೇಳುವ ಪ್ರಯತ್ನವೇ ಈ ಲೇಖನದ ಉದ್ದೇಶ.  

ನಮ್ಮ ಉತ್ತರ ಕರ್ನಾಟಕದ ಯಾರದೇ ಅಡುಗೆ ಮನೆಯಲ್ಲಿ ನೀವು ಇಣುಕಿದರೆ ಅಲ್ಲಿ ನಿಮಗೆ ಎರಡು ಭರಣಿಗಳು ಕಂಡುಬರುವುದು ಸರ್ವೇ ಸಾಮಾನ್ಯ. ಆ ಎರಡರಲ್ಲಿ ಒಂದಂತೂ ಉಪ್ಪಿನಕಾಯಿಗೆ ಮೀಸಲು. ಹಾಗಾದ್ರೆ ಇನ್ನೊಂದು ಭರಣಿ ಏನು? ಅದು ಬೇರೇನೂ ಅಲ್ಲ, ಮಸಾಲೆ ಖಾರ ಎಂಬ ಅಡುಗೆಗೆ ಬೇಕಾಗುವೆ ಈ ಪದಾರ್ಥವನ್ನು ಶೇಖರಿಸುವ ಭರಣಿ. ಈ ಮಸಾಲೆ ಖಾರವನ್ನು ನಮ್ಮ ಜನ 6 ತಿಂಗಳಿನಿಂದ ಒಂದು ವರ್ಷದ ವರೆಗೆ ಬೇಕಾಗುವಷ್ಟು ಮಾಡಿ ಉಪ್ಪಿನಕಾಯಿಯಂತೆ, ಚೀನಿ ಮಣ್ಣಿನ ಭರಣಿಗಳಲ್ಲಿ ಶೇಖರಿಸುವುದು ವಾಡಿಕೆ. ಹಾಗಾದ್ರೆ ಏನಪ್ಪಾ ಇದು ಮಸಾಲೆ ಖಾರ ಅಂದ್ರೆ? ಈ ಪದಾರ್ಥದ ಹೆಸರೇ ಹೇಳುವಂತೆ ಇದು ಅಡುಗೆಗೆ ಬೇಕಾಗುವ ಎರಡು ಪ್ರಮುಖ ವಸ್ತುಗಳಾದ ಮಸಾಲೆ ಪುಡಿ ಮತ್ತು ಇನ್ನೊಂದು ಖಾರದ ಪುಡಿಗಳ ಸಮ್ಮಿಶ್ರಣ. ನಮ್ಮ ಉತ್ತರ ಕರ್ನಾಟಕದ ಪ್ರತಿಯೊಂದು ತರಕಾರಿ, ಸಾರು ಹಾಗು ಕಾಳು ಪಲ್ಯ ಮಾಡಲು ಬೇಕಾದ ಅತ್ತ್ಯಂತ ಮುಖ್ಯವಾದ ಸಾಮಗ್ರಿ ಅಂದರೆ ತಪ್ಪಾಗಲಿಕ್ಕಿಲ್ಲ. ಈ ಹಳೆ ಮೈಸೂರು ಅಧವಾ ಕರ್ನಾಟಕದ ದಕ್ಷಿಣ ಭಾಗಕ್ಕೆ ಬಂದ್ರೆ ಇಲ್ಲಿ ಜನ ಸಾಂಬಾರ್ ಪುಡಿ ಅಂತ ಮಾಡೋದುಂಟು. ಆದರೆ ಇದರಲ್ಲಿ ನೀವು ಮೆಣಸಿನಕಾಯಿ ಬೆರೆಸದೆ, ಖಾರದ ಪುಡಿ ಅಂತ ಬೇರೆಯಾಗಿ ಮಾಡ್ತೀರಿ. ಇಷ್ಟೇ ನೋಡಿ ಎರಡಕ್ಕೂ ಇರೋ ವ್ಯತ್ಯಾಸ ಮತ್ತು ಹೋಲಿಕೆ ಅಂದ್ರೆ. ಈ ಮಸಾಲೆ ಖಾರದ ಇನ್ನು ಕೆಲವು ವಿಶೇಷಗಳೇನೆಂದ್ರೆ, ನಮ್ಮ ಕಡೆ ಜನಕ್ಕೆ ಬೆಳಗಿನ ಉಪಹಾರಕ್ಕೆ ಇಡ್ಲಿ-ವಡೆ-ದೋಸೆ ಇರ್ಲೇಬೇಕಂತಿಲ್ಲ, ಖಡಕ್ ಅಥವಾ ಬಿಸಿ ರೊಟ್ಟಿ. ಅದರ ಜೊತೆಗೆ ಪಲ್ಯ, ಮೊಸರು, ಚಟ್ನಿಪುಡಿ ಇದ್ದರೆ ಅಷ್ಟೆ ಸಾಕು. ಅಕಸ್ಮಾತ್ ಅದು ಸಿಗಲಿಲ್ಲ ಅಂದ್ರೆ ರೊಟ್ಟಿ ಜೊತೆ ಗಟ್ಟಿ ಮೊಸರಿಗೆ ಅರ್ಧ ಚಮಚೆ ಮಸಾಲೆ ಖಾರ ಮಿಕ್ಸ್ ಮಾಡಿ ಹೊಡೀತಾರೆ. ಇಲ್ಲಿ ಅದು ಚಟ್ನಿಯ ಪಾತ್ರವಹಿಸುತ್ತದೆ. ಕುದಿಸಿದ ಬೆಳೆ ಇರಲಿ, ಮೆಂಥೆಪಲ್ಯ, ಇತ್ಯಾದಿ ಸಪ್ಪೆ ಪಲ್ಯದಲ್ಲಿ ಕೂಡ ಇದನ್ನು ಚಟ್ನಿಪುಡಿ ತರ ಬೆರೆಸಿ ತಿನ್ನೋದುಂಟು. ಅದೇನೇ ಇರಲಿ ಈ ಮಸಾಲೆ ಖಾರ ಬೆರೆಸಿ ತಿಂದಾಗ ಬರೋ ಸ್ವಾದ ಇದೆ ನೋಡಿ ಅದನ್ನ ಮಾತಿನಲ್ಲಿ ಹೇಳೋಕಾಗಲ್ಲ, ಕೇವಲ ಅನುಭವಿಸಬೇಕು. 

ಸಾಂಬಾರ್ ಪುಡಿ ತರಹ ಈ ಮಸಾಲೆ ಖಾರಕ್ಕೂ ಕೂಡ ತನ್ನದೇ ಆದ ಮಾಡುವ ವಿಧಿ ವಿಧಾನಗಳಿವೆ, ಹಾಗು ಈ ವಿಧಾನಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮೌಖಿಕವಾಗಿ ಸಾಗುತ್ತ ಬಂದಿವೆ. ಈಗೆಲ್ಲ ಖಾರ ಕುಟ್ಟುವ ಮಷೀನ್ಗಳು ಬಂದಿರೋದ್ರಿಂದ ಬೇಕಾದ ಸಾಮಗ್ರಿಗಳನ್ನ ಗಿರಾಣಿಯವನಿಗೆ ಕೊಟ್ಟರೆ ಒಂದು ಘಂಟೆನಲ್ಲಿ ಅರೆದು ಕೊಟ್ಟಬಿಡ್ತಾನೆ. ಅಷ್ಟೆ ಏಕೆ ಕೆಲವೊಂದು ದೀನಸಿ ಅಂಗಡಿಗಳಲ್ಲಿ ರೆಡಿಮೇಡ್ ಮಸಾಲೆ ಖಾರದ ಪ್ಯಾಕೆಟ್ಗಳು ಕೂಡ ಸಿಗೋದುಂಟು. ಯಾಕಂದ್ರೆ ಜನರ ಹತ್ರ ಇದನ್ನೆಲ್ಲಾ ಮಾಡೋಕೆ ಸಮಯ ಇಲ್ಲ ನೋಡಿ. ಹಿಂದೆ ನಾವೆಲ್ಲಾ ಚಿಕ್ಕವರಿದ್ದಾಗ ಮನೆಯಲ್ಲೆ ಈ ಖಾರ ಕುಟ್ಟೋದು ವಾಡಿಕೆ. ಆಮೇಲೆ ಆ ಖಾರ ಕುಟ್ಟೋ ದಿನ ಅಂದರೆ ಒಂದು ತರಹದ ಹಬ್ಬದ ಸಡಗರ ಇದ್ದಹಾಗೆ. ಅಂದ್ರೆ ಮನೆ ಮಂದಿಯೆಲ್ಲ ಒಂದಿಲ್ಲ ಒಂದು ರೀತಿ ಈ ಕೆಲಸಕ್ಕೆ ಕೈಜೋಡಿಸುತ್ತಿದರು. ಸಾಮಾನ್ಯವಾಗಿ ಮಸಾಲೆ ಖಾರ ತಯಾರಿಸೋದಕ್ಕೆ ವರ್ಷದಲ್ಲಿ ಒಂದು ದಿನ ಅಂತ ಮುಂಚೆನೇ ನಿಗದಿಪಡಿಸ್ತಾರೆ, ಆಮೇಲೆ ಆ ದಿನ ಬರೋಕೆ ಮುಂಚೆ, ಸಂತೆಯಲ್ಲಿ ಇದಕ್ಕೆ ಬೇಕಾದ ಒಣ ಮೆಣಸಿನಕಾಯಿ ಮತ್ತು ವಿವಿಧ ಮಸಾಲೆ ಪದಾರ್ಥಗಳನ್ನು ಖರೀದಿಮಾಡಿ ಚನ್ನಾಗಿ ಬಿಸಿಲಲ್ಲಿ ಒಣಗಿಸಿ ತಯಾರಿ ಮಾಡಿಟ್ಟುಕೊಳ್ಳೋದುಂಟು. ಮೆಣಸಿನಕಾಯಿ ಅಂತ ಬಂದ್ರೆ ಇದರಲ್ಲಿ ಖಾರದ ಮೆಣಸಿನಕಾಯಿ ಮತ್ತು ಸಪ್ಪೆ, ಅಂದ್ರೆ ನಮ್ಮ ಪ್ರಸಿದ್ಧ ಬ್ಯಾಡಗಿ ಒಣಮೆಣಸಿನಕಾಯಿ ಅಂತ ವಿವಿಧ ಬಗೆಯ ಮೆಣಸಿನಕಾಯಿಗಳನ್ನ ಉಪಯೋಗಿಸೋದು ವಾಡಿಕೆ. ಕೆಲವೊಂದು ಕುಟುಂಬಗಳು ಖಾರ ಜಾಸ್ತಿ ತಿನ್ನೋದ್ರಿಂದ ಕೇವಲ ಖಾರದ ಮೆಣಸಿನಕಾಯಿ ಉಪಯೋಗಿಸ್ತಾರೆ, ಇಲ್ಲ ಮೀಡಿಯಂ ಖಾರ ಬೇಕಿದ್ರೆ ಮೂರು ಭಾಗ ಸಪ್ಪೆ ಬ್ಯಾಡಗಿ ಮೆಣಸಿನಕಾಯಿ ಮತ್ತು ಒಂದು ಭಾಗ ಖಾರ ಮೆಣಸಿನಕಾಯಿ ಮಿಶ್ರಣ ಮಾಡೋದು ಪದ್ಧತಿ. ಆಮೇಲೆ ಇದಕ್ಕೆ ಬೇಕಾದ ಇತರ ಸಾಮಗ್ರಿ ಅಂದ್ರೆ ಏಲಕ್ಕಿ, ಲವಂಗ, ಜೀರಿಗೆ, ದಾಲಚಿನ್ನಿ, ಕಲ್ಲು ಹೂವು, ಕೇಸರಿ ಹೂವು, ಪತ್ರಿ ಎಲೆ (Bay leaf), ಹೀಗೆ 10-14 ಮಸಾಲೆ ಪದಾರ್ಥಗಳು. ಇಲ್ಲಿ ಜನ ಬಹಳ ತೊಂದರೆ ತೊಗೊಳ್ಳದೆ, ಸಂತೆಯಲ್ಲಿ ಈ ಮಸಾಲೆಗಳನ್ನು ಮಾರುವವನಿಗೆ 2 kg ಖಾರಕ್ಕೆ ಬೇಕಾಗುವ ಮಸಾಲೆಗಳನ್ನು ಕೊಡಪ್ಪ ಅಂದ್ರೆ ಸಾಕು, ಅವನು ಸರಿಯಾಗಿ ಲೆಕ್ಕಹಾಕಿ ಎಲ್ಲವನ್ನು 50 ಅಥವಾ 100 g ಪೊಟ್ಟಣಗಳಲ್ಲಿ ಕಟ್ಟಿಕೊಟ್ಟುಬಿಡ್ತಾನೆ. ಇದು ಅವನಿಗೆ ತಲೆತಲಾಂತರದಿಂದ ಬಂದ ಅನುಭವ ಅಂತ ಹೇಳ್ಬಹುದು. ಇವುಗಳ ಜೊತೆಗೆ ಬೇಕಾಗುವ ಉಳಿದ ಸಾಮಗ್ರಿಗಳೆಂದ್ರೆ ಅರಿಶಿನ, ಒಣ ಕೊಬ್ಬರಿ ಮತ್ತು ಈರುಳ್ಳಿ, ಆಮೇಲೆ ಕರಿಯಲು ಎಣ್ಣೆ. ಆವಾಗಲೆಲ್ಲ ನಮ್ಮ ಮನೇಲಿ ನಮ್ಮ ಅಜ್ಜಿ ಮತ್ತು ಅಮ್ಮ ಈ ಮಸಾಲೆ ಖಾರವನ್ನ ಮನೇಲೆ ಕುಟ್ಟುತ್ತಿದ್ದರು. ಆಗ ನಾವೆಲ್ಲ ಅವರಿಗೆ ಸಹಾಯ ಅಂದ್ರೆ, ಅರಿಶಿನ ಕೊಂಬುಗಳನ್ನು ಒಡೆಯೋದು, ಒಣ ಕೊಬ್ಬರಿಯನ್ನು ಚಿಕ್ಕ ಚಿಕ್ಕ ಭಾಗಗಳಾಗಿ ಮುರಿಯೋದು, ಅಥವಾ ಇನ್ನ್ಯಾವುದೋ ಚಿಕ್ಕ ಪುಟ್ಟ ಸಹಾಯ ಮಾಡಿದ ನೆನಪುಗಳು ಉಂಟು. ಖಾರ ಕುಟ್ಟಲು ನಿಗದಿಯಾದ ದಿನ ಬಂತೆಂದ್ರೆ, ಅವತ್ತು ಮುಂಚೇನೆ ಬಿಸಿಲಿನಲ್ಲಿ ಒಣಗಿಸಿದ ಎಲ್ಲ ಸಾಮಗ್ರಿಗಳನ್ನ (ಮೆಣಸಿನಕಾಯಿಯನ್ನು ಬಿಟ್ಟು) ಸ್ವಲ್ಪ ಪ್ರಮಾಣದ ಎಣ್ಣೆಯಲ್ಲಿ ಚೆನ್ನಾಗಿ ಕರಿದು, ಮೆಣಸಿನಕಾಯಿಜೋತೆ ಒರಳು ಕಲ್ಲಿನಲ್ಲಿ ಕಬ್ಬಿಣದ ಒನಕೆಯಿಂದ ಚೆನ್ನಾಗಿ ಕುಟ್ಟುತ್ತಿದ್ದರು. ಆ ದಿನದ ವಿಶೇಷ ಏನಂದ್ರೆ, ಅವತ್ತು ಮನೆತುಂಬೆಲ್ಲ ಮಸಾಲೆ ವಾಸನೆ ಘಮಘಮಿಸುತ್ತಿತ್ತು. ಸಂಜೆ ಎನ್ನುವಷ್ಟರಲ್ಲಿ ಮಸಾಲೆ ಖಾರ ರೆಡಿಆಗಿ, ಸಂಜೆಯ ಅಡುಗೆಗೆ ಈ ತಾಜಾ ಖಾರವನ್ನೇ ಬಳಸುತಿದ್ದರು, ಆಮೇಲೆ ಈ ತಾಜಾ ಖಾರವನ್ನು ಬಳಸಿ ಮಾಡಿದ ಪಲ್ಯ, ಸಾರು ಅಥವಾ ಕಾರುಬೇಳೆ ಇವುಗಳ ರುಚಿ ಸೂಪರ್ ಅಂದ್ರೆ ಸೂಪರ್. ಏಕೆಂದ್ರೆ ಈ ಮಸಾಲೆ ಖಾರದ ಮಹಿಮೆನೆ ಹಾಗೆ. ಈ ರೀತಿ ತಯಾರಿಸಿದ ಮಸಾಲೆ ಖಾರವನ್ನು ಒಂದು ಸ್ವಚ್ಛವಾದ ಒಂದು ಚೀನಿ ಮಣ್ಣಿನ ಭರಣಿಯಲ್ಲಿ ಹಾಕಿ, ಸರಿಯಾಗಿ ಮುಚ್ಚಿ, ವರ್ಷಗಟ್ಟಲೆ ಉಪಯೋಗಿಸುತ್ತಾರೆ. ಈ ಬೆಂಗಳೂರಿನಲ್ಲಿ, ಮನೇಲಿ ಅದನ್ನ ಮಾಡಕ್ಕೂ ಆಗಲ್ಲ ಮತ್ತೆ ಹೊರಗಡೆನೂ ಎಲ್ಲೂ ಸಿಗಲ್ಲ, ಅದಕ್ಕೆ ನಮ್ಮ ಊರಿಗೇ ಹೋದಾಗ ಒಂದು ಅರ್ಧ ಕೆಜಿ ಎತ್ತಾಕೊಂಡು ಬರ್ತೀವಿ.  

ಇಷ್ಟೆಲ್ಲ ಹೇಳಿದ ಮೇಲೆ ನಿಮಗೂ ಇದನ್ನ ಸವಿಯೋ ಆಸೆ ಹುಟ್ಟಿದ್ರೆ, ನಮ್ಮ ಉತ್ತರ ಕರ್ನಾಟಕದ ಸ್ನ್ಹೇಹಿತರಿದ್ರೆ, ಅವರ ಮನೆಗೆ ಹೋಗಿ, ವಿಶೇಷವಾಗಿ ಮಸಾಲೆ ಖಾರ ಸ್ವಲ್ಪ ಟೇಸ್ಟ್ ಮಾಡಿ ಬನ್ನಿ, ನಂತರ ರುಚಿ ಹೇಗನಿಸಿತು ತಿಳಿಸೋದನ್ನ ಮರೀಬೇಡಿ....   

ನಾವು ಯಾವುದೇ ಭಾಗದವರಾಗಿರಲಿ, ನಮ್ಮ ಭಾಗ ಅಥವಾ ನಾಡು ಅಂತ ಬಂದಮೇಲೆ ಅದರ ವೈವಿದ್ಯತೆಯನ್ನು ಸಾರಿ ಹೇಳುವ ಒಂದು ವಿಶಿಷ್ಟವಾದ ವಸ್ತು ಅಥವಾ ಖಾದ್ಯ ಅಥವಾ ಕಲೆ, ಪರಂಪರೆ, ಸಂಸ್ಕೃತಿ ಅಂತ ಏನಾದರು ಒಂದು ಇದ್ದೆ ಇರುತ್ತದೆ. ಆ ತರಹದ ಒಂದು ವಿಶಿಷ್ಟವಾದ ವಸ್ತುವೇ ಈ "ಮಸಾಲೆ ಖಾರ". ಜಾಗತೀಕರಣದ ತೊಟ್ಟಿಲಲ್ಲಿ ತೂಗುತಿರುವ ನಮ್ಮ ಇಂದಿನ ಓಡಾಟದ ಬದುಕಿನಲ್ಲಿ ಸ್ವಲ್ಪ ಬಿಡುವು ಸಿಕ್ಕಾಗ  ಇಂತಹ ಒಂದು ವಿಶಿಷ್ಟವಾದ ವಸ್ತು ಅಥವಾ ವಿಷಯದ ನೆನಪು ಬಂದಾಗ ಅದಕ್ಕೆ ಸಂಬಂದಿಸಿದ ಅನೇಕ ಗತಿಸಿದ ಸುಮಧುರವಾದ ನೆನಪುಗಳ ಸರಮಾಲೆ ನಮ್ಮ ಕಣ್ಣಮುಂದೆ ಬರುವುದು ಸರ್ವೇ ಸಾಮಾನ್ಯ. ಅದೇ ರೀತಿ ನನ್ನ ನೆನಪಿಗೆ ಬಂದಿದ್ದು ಈ "ಮಸಾಲೆ ಖಾರದ ಕಥೆ"......ಬಹಳದಿನಗಳಿಂದ ಇದರ ಬಗ್ಗೆ ಬರಿಯಬೇಕೆನ್ನುವ ಯೋಚನೆ ಇತ್ತು, ವೇಳೆಯ ಅಭಾವದಿಂದ ಆಗಿರಲಿಲ್ಲ... ಕೊನೆಗೂ ಆ ಸಮಯ ಕೂಡುಬಂದ ಕಾರಣ ಇಂದು ಈ ಲೇಖನ ಪ್ರಸ್ತುತ ಪಡಿಸುತ್ತಿದ್ದೇನೆ.......ಓದಿ ನಿನ್ನ ಅನಿಸಿಕೆ ತಿಳಿಸಿರಿ....