ಚಿಕ್ಕವರಿದ್ದಾಗ ಬಹಳ ಜನಕ್ಕೆ ನೆನಪಿರಬಹುದು, ಮನೇಲಿ ಹಿರಿಯರು, ಅಜ್ಜ - ಅಜ್ಜಿಯಂದಿರು, ಬರೋ ಹುಣ್ಣಿಮೆಗೆ ಉತ್ತರಾ ಮಳೆ ಪ್ರಾರಂಭ ಆಗತ್ತೆ. ಇನ್ನು ಎರಡು ದಿನದಲ್ಲಿ ಪುಷ್ಯ ಮಳೆ ಹೋಗತ್ತೆ ಅಥವಾ ಈ ವರ್ಷ ಮೃಘಶಿರಾ ಮಳೆ ಕೈಕೊಟ್ಟಿತು.... ಅಂತೆಲ್ಲ ಮಾತಾಡೋದು ಕೇಳಿರ್ತೀವಿ. ಏನಿದು, ಸುಮ್ಮನೆ ಧೋ ಅಂತ ಸುರಿಯೋ ಮಳೆಗೆ ಇವರು ಏನೆಲ್ಲಾ ಹೆಸರಿಟ್ಟು ಕರೀತಾರೆ! ಅಲ್ಲದೆ, ನಿಖರವಾಗಿ ಇಷ್ಟೇ ದಿನಕ್ಕೆ ಈ ಮಳೆ ಹೋಗಿ ಆ ಮಳೆ ಬರತ್ತೆ ಅಂತೆಲ್ಲ ಮಾತಾಡ್ತಾರೆ. ಇದರಲ್ಲೇನಾದ್ರು ಒಂದು ವ್ಯವಸ್ಥಿತವಾದ ನಾಮಕರಣ ಪದ್ಧತಿ ಇದೇಯಾ? ಅಂತೆಲ್ಲ ಪ್ರಶ್ನೆಗಳು ನಿಮ್ಮ ಮನಸಿನಲ್ಲಿ ಕೂಡ ಬಂದಿರಬಹುದು. ನನಗಂತೂ ಈ ಕುತೂಹಲ ಯಾವಾಗಲು ಇತ್ತು. ಅದಕ್ಕಾಗಿ ಮಳೆಗಳು ಮತ್ತು ಅವುಗಳ ನಾಮಕರಣ ಪದ್ಧತಿಯಬಗ್ಗೆ ಸ್ವಲ್ಪ ಸಂಶೋಧನೆ ಮಾಡೋಣ ಅಂತ ಕ್ಯಾಲೆಂಡರು, ಪಂಚಾಂಗ ಮತ್ತು ಅಂತರ್ಜಾಲದಲ್ಲಿ ಸಿಕ್ಕ ಕೆಲವು ಮಾಹಿತಿಗಳನ್ನೂ ಓದಿದೆ. ಈ ವಿಷಯದಬಗ್ಗೆ ನನಗೆ ತಿಳಿದ ವಿಚಾರಗಳನ್ನು ಈ ಲೇಖನದಲ್ಲಿ ಬರೆಯೋ ಪ್ರಯತ್ನ ಮಾಡಿದ್ದೀನಿ. ಆಮೇಲೆ ಇದು ಎಷ್ಟೋ ಜನಕ್ಕೆ ತಿಳಿಯದೆ ಇರುವ ನಮ್ಮದೇ ಆದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಪದ್ಧತಿ. ಕಾರಣ ಮುಂದಿನ ಪೀಳಿಗೆಗೂ ಈ ಮಾಹಿತಿ ಉಪಯೋಗವಾಗಬಹುದು.
ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಈಗಲೂ ಕೂಡ ರೈತರು ಮಳೆ ಆಧಾರಿತ ಕೃಷಿ ಪದ್ಧತಿಯನ್ನೇ ಅವಲಂಬಿಸಿರುವುದು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ನಮ್ಮ ದೇಶ ಭೂಮಧ್ಯರೇಖೆಗೆ ಹತ್ತಿರವಾಗಿರುವುದರಿಂದ (Tropical zone), ಮಾನ್ಸೂನ ಮಾರುತಗಳ ಪ್ರಭಾವದಿಂದ ವರ್ಷದ ಆರು ತಿಂಗಳು ಮಳೆಗಾಲ ಇರುವುದು. ಹಿಂದೂ ಪಂಚಾಗದ ಪ್ರಕಾರ ವರ್ಷದಲ್ಲಿ ಆರು ಋತುಗಳು ಬರುತ್ತವೆ (ವಸಂತ, ಗ್ರೀಷ್ಮ, ವರ್ಷ, ಶರತ, ಹೇಮಂತ ಮತ್ತು ಶಿಶರ), ಇದರಲ್ಲಿ ವರ್ಷ ಋತುವಿನಲ್ಲಿ ಮಳೆಗಾಲ ಬರುವದು. ಅಂದರೆ ಇದೆ ಸಮಯದಲ್ಲಿ ಮಾನ್ಸೂನ್ ಮಾರುತಗಳು ಬೀಸುವುದುಂಟು. ನಮ್ಮ ಪಂಚಾಂಗಳಲ್ಲಿ ಅಥವಾ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಿತ ಮಾಹಿತಿಯ ಪ್ರಕಾರ ಸೂರ್ಯ ಒಂದು ವರ್ಷದಲ್ಲಿ 27 ನಕ್ಷತ್ರಗಲ್ಲಿ ಪಯಣ ಬೆಳೆಸುತ್ತಾನೆ. ಹಾಗು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಪ್ರಯಾಣ ಮಾಡಲು 13-14 ದಿನಗಳು ಬೇಕಾಗುವುದರಿಂದ ಒಂದು ನಕ್ಷತ್ರದ ಅವಧಿ 13-14 ದಿನಗಳು ಆಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಬರುವ ಮಳೆಗೆ ಆ ನಕ್ಷತ್ರದ ಹೆಸರಿನಿಂದ ಕರೆಯುವುದು ಅನಾದಿಕಾಲದಿಂದ ಪಾಲಿಸಿಕೊಂಡು ಬಂದ ಸಂಪ್ರದಾಯ. ಒಂದು ಉದಾಹರಣೆ ನೋಡೋದಾದರೆ ಈ ವರ್ಷ ಮೇ 25 ರಿಂದ ಜೂನ್ 7 ವರೆಗೆ ರೋಹಿಣಿ ನಕ್ಷತ್ರದ ಅವಧಿ ಇದ್ದು ಈ ಸಮಯದಲ್ಲಿ ಸುರಿಯೋ ಮಳೆಗೆ ರೋಹಿಣಿ ಮಳೆ ಎಂದು ಹೇಳುವುದುಂಟು.
ನಮ್ಮ ಮನೇಲಿರೋ 2018 ಕ್ಯಾಲೆಂಡರನ್ನು ಕೂಲಂಕುಷವಾಗಿ ಓದು ಈ ವರ್ಷದ ಮಾನ್ಸೂನ ಮಳೆಗಳನ್ನ ಮತ್ತು ಅವುಗಳ ಪ್ರಾರಂಭದ ದಿನಾಂಕವನ್ನ ಈ ಕೆಳಗಿನಂತೆ ಪಟ್ಟಿ ಮಾಡಿದ್ದೇನೆ
ಮೇಲ್ಕಾಣಿಸಿದ ಪಟ್ಟಿಯನ್ನು ತಿಳಿಸಿದ ಇನ್ನೊಂದು ಅಂಶವೇನೆಂದ್ರೆ, ಮಾನ್ಸೂನ್ ಮಾರುತಗಳನ್ನು ಬೀಸುವ ದಿಕ್ಕನ್ನು ಆಧರಿಸಿ ಎರಡು ವಿಧವಾಗಿ, ಮುಂಗಾರು ಮಳೆಗಳು ಮತ್ತು ಹಿಂಗಾರು ಮಳೆಗಳು ಎಂದು ವಿಂಗಡಿಸಲಾಗಿದೆ. ನಾಮಾನ್ಯವಾಗಿ ನೈರುತ್ತ್ಯ ಮಾನ್ಸೂನ್ ಮಾರುತಗಳು ಅರಬ್ಬೀ ಸಮುದ್ರದ ಮೇಲಿಂದ ಮೋಡಗಳನ್ನು ಹೊತ್ತುತಂದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಸುರಿಯುತ್ತವೆ. ಈ ಮಳೆಗಳನ್ನು ಮುಂಗಾರು ಮಳೆಗಳೆಂದು ಕರೆಯುವುದು ವಾಡಿಕೆ. ಅದೇ ರೀತಿ ಈಶಾನ್ಯ ಮಾನ್ಸೂನ್ ಮಾರುತಗಳು ಈಶಾನ್ಯ ದಿಕ್ಕಿನಿಂದ ಮೋಡಗಳನ್ನು ಹೊತ್ತು ತಂದು (ಬಂಗಾಲ ಕೊಲ್ಲಿಯಿಂದ) ಉತ್ತರ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಸುರಿಯೋದು, ಮತ್ತು ಇವುಗಳನ್ನು ಹಿಂಗಾರು ಮಳೆಗಳೆಂದು ಕೆರೆಯುವುದು. ಆದರೆ ನಮ್ಮ ಕರ್ನಾಟಕದಲ್ಲಿ ಹಿಂಗಾರು ಮಳೆಗಳ ಪ್ರಭಾವ ಅಷ್ಟೊಂದು ಕಡಿಮೆ. ಇನ್ನೊಂದು ವಿಶಿಷ್ಟವೇನೆಂದರೆ, ಸಾಂಪ್ರದಾಯಿಕವಾಗಿ ನಮ್ಮ ರೈತರು ಮುಂಗಾರಿನಲ್ಲಿ ಬೆಳೆಯೋ ಬೆಳೆಗಳೇ ಬೇರೆ ಹಾಗು ಹಿಂಗಾರಿನಲ್ಲಿ ಬೆಳೆಯೋ ಬೆಳೆಗಳೇ ಬೇರೆ. ಬಹಳ ವರ್ಷಗಳ ಪ್ರಾಯೋಗಿಕ ಅನುಭಾವದಿಂದ ವಾತಾವರಣಕ್ಕನುಗುಣವಾಗಿ ಈ ರೀತಿ ಎರಡು (ಮುಂಗಾರು ಮತ್ತು ಹಿಂಗಾರು) ಬೆಳೆಗಳನ್ನು ಬೆಳೆಯುತ್ತ ಬಂದರು. ಅದೇನೇ ಇರಲಿ ಪ್ರಕೃತಿಯಲ್ಲಿ ಕಾಣುವ ಈ ವಿಷ್ಮಯಗಳನ್ನು ನಮ್ಮ ಜನ ತಮ್ಮ ಉಪಯೋಗಕ್ಕೆ ತಕ್ಕಂತೆ ಮಾಡಿಕೊಂಡಿರುವ ಈ ಒಂದು ವ್ಯವಸ್ಥಿತವಾದ ಪದ್ಧತಿ ನಿಜವಾಗ್ಲೂ ಶ್ಲಾಘನೀಯ.
ಕೊನೆಯದಾಗಿ, ಈ ವರ್ಷ ಭಯಂಕರವಾಗಿ ಸುರಿದ ಮುಂಗಾರು ಮಳೆ ಮತ್ತು ಅದರಿಂದ ಕೇರಳ ಹಾಗು ಕೊಡಗಿನಲ್ಲಾದ ಐತಿಹಾಸಿಕ ಪ್ರಕೃತಿ ವಿಕೋಪವನ್ನು ಯಾರು ಮರೆಯುವಂತಿಲ್ಲ. ಮನುಷ್ಯ ತನ್ನ ದುರಾಸೆಗಳಿಗಾಗಿ ದಿನೇ ದಿನೇ, ತನ್ನ ಒಳಿತಿಗಾಗಿಯೇ ಸೃಷ್ಟಿಯಾದ ಈ ಸುಂದರ ಪ್ರಕೃತಿಯನ್ನು ನಾಶಮಾಡುತ್ತ ಹೋಗುತ್ತಿದ್ದು, ಈ ತರಹದ ಪ್ರಕೃತಿ ವಿಕೋಪಗಳನ್ನು ಆವ್ಹಾನಿಸಿಕೊಳ್ಳುತಿದ್ದಾನೆ. ನಮಗೆ ಸುಂದರ, ಸ್ವಾಭಾವಿಕ ಮತ್ತು ಆರೋಗ್ಯಕರವಾದ ಬದುಕು ಬೇಕೆಂದರೆ ನಮ್ಮ ಸುತ್ತಲಿರುವ ಪ್ರಕೃತಿಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ, ಆಗಲೇ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಕಾಲಕಾಲಕ್ಕೆ ಸರಿಯಾಗಿ ಮಳೆಗಳನ್ನು ಕೊಡುತ್ತದೆ.
ಆದ್ದರಿಂದ ಗೆಳೆಯರೇ ಬನ್ನಿ ನಮ್ಮ ಸುತ್ತಲಿನ ಸುಂದರ ಪ್ರಕೃತಿಯನ್ನು ಕಾಪಾಡೋಣ.....ನಮ್ಮ ಮುಂದಿನ ಪೀಳಿಗೆಗೆ ಈ ಮಳೆಗಳಬಗ್ಗೆ ತಿಳಿಸೋಣ ......... ಅಲ್ಲವೇ!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ